Saturday, February 9, 2008

ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ

ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು.

ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ.

ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ.

ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು.

ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು.

ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ.

ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ.

ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು.

ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು.

ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು.

ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.

ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು.

ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ.

ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು.

ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ.

ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ.

ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು.

9 comments:

chetana said...

AhAA! Urinadella nenapaaytu.
eega nimbe peppermint sigOlla :(

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ಯಾವುದೇ ಸಂಕಷ್ಟವಿಲ್ಲದೆಯೇ ಪುಟ್ಟ ಮುಂಡಗೋಡು ತಲುಪಿದ್ದು ಖುಷಿ ಕೊಡ್ತು ಕಣೋ, ಎಲ್ಲಿ ಪುಟ್ಟ ಬಸ್ಸಿಂದ ಇಳಿದು ಕಾಣೆಯಾಗಿಬಿಡ್ತಾನೋ ಅಂತ ಕಥೆ ಮುಗಿಯೋತನಕನೂ ತಳಮಳವಾಗ್ತಾ ಇತ್ತು. ಪಯಣದ ಪ್ರತಿ ನಿಲ್ದಾಣದ ಪ್ರವರ ಇಷ್ಟವಾಯ್ತು.

Unknown said...

ಚೇತನಾರವರೇ,
ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ನಿಜ. ಈಗೆಲ್ಲಾ ನಿಂಬು ಪೆಪ್ಪರ್ಮಿಂಟ್ ಸಿಗಲ್ಲಾ. ಈಗಿನ ಮಕ್ಕಳು ಏನಿದ್ರು ಡೈರಿ ಮಿಲ್ಕ್ ಚಾಕೊಲೇಟೇ ತಿನ್ನೋದು.

ಶಾಂತಲಕ್ಕಾ,
ಪ್ರತೀ ಪೋಸ್ಟ್ ಗೂ ಹೀಗೇ ಪ್ರತಿಕ್ರಿಯಿಸಿ, ಇನ್ನೂ ಬರೆಯುವ ಉತ್ಸಾಹವನ್ನು ಹೆಚ್ಚು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.

ರಾಜೇಶ್ ನಾಯ್ಕ said...

ಮಧು,
ಸೊಗಸಾಗಿತ್ತು ಪುಟ್ಟುವಿನ ಪ್ರಯಾಣ. ಪೆಪ್ಪರ್-ಮಿಂಟ್ ಬಹಳ ನೆನಪಾಯ್ತು. ನಿನ್ನೆ ಆದಿತ್ಯವಾರ ದಾಂಡೇಲಿ ಸಮೀಪದ ಪೊಟೋಲಿಯಲ್ಲಿ, ಮೊದಲು ಪೈಸೆಗೊಂದರಂತೆ ಸಿಗುತ್ತಿದ್ದ ಕಡ್ಲೆಕಾಯಿ ಆಕಾರದ ಪೆಪ್ಪರುಮಿಂಟುಗಳನ್ನು ಈಗ ೧೨.೫ ಪೈಸೆಗೊಂದರಂತೆ (ಅಂದರ ನಾಲ್ಕಾಣೆಗೆ ೨) ಖರೀದಿಸಿ ಮನಸಾರೆ ಆನಂದಿಸುತ್ತಾ ಸವಿದೆ. ಧನ್ಯವಾದಗಳು ಒಳ್ಳೆಯ ನೆನಪುಗಳನ್ನು ಮರುಕಳಿಸಿದ್ದಕ್ಕಾಗಿ.

Unknown said...

ರಾಜೇಶ್ ರವರೆ,
ಬ್ಲಾಗ್ ಗೆ ಭೇಟಿ ಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ಹೀಗೆ ಬರ್ತಾ ಇರಿ.
ನಿಮ್ಮ ಅಲೆಮಾರಿಯ ಅನುಭವಗಳನ್ನು ಓದ್ತಾ ಇರ್ತೇನೆ. ಚೆನ್ನಾಗಿ ಬರೀತೀರ. ಹೀಗೆ ಬರೀತಾ ಇರಿ.

ತೇಜಸ್ವಿನಿ ಹೆಗಡೆ said...

ನಿಂಬೂ ಪೆಪ್ಪರ್ ಮೆಂಟ್ ತಿಂದ್ಹಾಂಗಾತು. ಚೋಲೋ ಚಿತ್ರಣ ಕೊಟ್ಟಿದ್ದೆ. ನಾ ಇನ್ನೂ ಬಸ್ಸಲ್ಲೇ ಗಿರಕಿ ಹೊಡಿತಾ ಇದ್ಹಾಂಗೇ ಅನಸ್ತು.;-)

ನಾವಡ said...

ಮಧು ಅವರೇ,
ನಿಮ್ಮ ಎಲ್ಲ ಪೋಸ್ಟ್ ಗಳನ್ನು ಓದಿದೆ. ಬಹಳ ಖುಷಿಯೆನಿಸಿದ್ದು "ಅಬ್ಬಲಿಗೆ ದಂಡೆ’ ಮತ್ತು "ದಾಸವಾಳ ಶಲಾಕೆ’.
ನಿಮಗೆ ಕಥಾ ನಿರೂಪಣಾ ಶೈಲಿ ಒಲಿದಿದೆ.ಎಲ್ಲೂ ವೈಭವೀಕರಣವಿಲ್ಲದೇ, ಸನ್ನಿವೇಶಗಳನ್ನು ಅನಾವರಣಗೊಳಿಸುತ್ತಾ ಯಾವುದನ್ನೂ ಬಿಡದಿರುವುದು ವಿಶೇಷವೇ.
ನಿಮ್ಮ ಬರಹ ಮುದ ನೀಡಿತು.
ಅಂದ ಹಾಗೆ ನನ್ನ ಇಮೇಲ್
rituparna001@rediffmail.com

ಸಂಗೀತದ ಬಗ್ಗೆಯೂ ಬರೆಯಿರಿ. ಓದೋಣ.

ನಾವಡ

Unknown said...

ತೇಜಸ್ವಿನಿಯವರೇ,
ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ಹೀಗೆ ಬರ್ತಾ ಇರಿ.
ನಾವಡರವರೇ,
ನಿಮ್ಮ ಪ್ರೀತಿಗೆ ನಾನು ಆಭಾರಿ. ಸಮಯವಿದ್ದಾಗಲೆಲ್ಲ ಬರ್ತಾ ಇರಿ. ಇನ್ನೂ ವೈವಿಧ್ಯಮಯ ಪೋಸ್ಟ್ ಗಳನ್ನು ಹಾಕಬೇಕೆಂಬ ಆಸೆ ಇದೆ.
ಮತ್ತೊಮ್ಮೆ ಧನ್ಯವಾದಗಳು.

Seema S. Hegde said...

ಮಧು,
ಚೆನ್ನಾಗಿದ್ದು...ನಿಂಬು ಪೆಪರ್ಮಿಂಟ್ ತಿಂದು ಎಷ್ಟು ದಿನ ಆಗೋತು! ಮೊನ್ನೆ ಜನವರಿ 26ಕ್ಕೆ ನೆನಪು ಮಾಡಿದಿದ್ದಿ. ನಾನೂ ಧಾರವಾಡದಿಂದ ಬರಕರೆ ಬಸ್ಸಿನ ಈ ಎಲ್ಲಾ ಅನುಭವನೂ ಆಗ್ತಿತ್ತು. ಒಳ್ಳೆ ಬರವಣಿಗೆ.