Thursday, January 31, 2008

ಅಬ್ಬಲಿಗೆ ದಂಡೆ


ಸಂಧ್ಯಾಳಿಗೆ ಆವತ್ತು ಶಾಲೆಯಿಂದ ಮನೆ ತಲುಪಲು ಎಲ್ಲಿಲ್ಲದ ಅವಸರ. ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದ ತಮ್ಮನಿಗೆ ಬೈದು, ಅವನ ಕೈಹಿಡಿದುಕೊಂಡು ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿದಳು. ದಿನವೂ, ರಸ್ತೆ ಬದಿ ಇದ್ದ ಕೌಳಿ ಮಟ್ಟಿಗಳನೆಲ್ಲಾ ಹುಡುಕಿ ಇದ್ದ ಬದ್ದ ಹಣ್ಣುಗಳನೆಲ್ಲಾ ಕೊಯ್ದುತಿಂದು, ನಿಧಾನಕ್ಕೆ ಅಕ್ಕ-ತಮ್ಮ ಮನೆ ತಲುಪುತ್ತಿದ್ದರಿಂದ, ಇವತ್ತು ಅಕ್ಕ ಅವಸರ ಮಾಡಿದೊಡನೆಯೇ ಮನೆಯಲ್ಲಿ ಎನೋ ವಿಶೇಷವಿರಬೇಕೆಂದು ತಮ್ಮನಿಗೆ ಅನಿಸಿತು. ಆದರೂ ಅಕ್ಕನನ್ನು ಕೇಳಲು ಧೈರ್ಯ ಸಾಕಾಗದೇ, ಸುಮ್ಮನೇ ಅವಳ ಜೊತೆ ಕಾಲುಹಾಕಿದ.


ಈಗೊಂದು ೮ ವರ್ಷದ ಹಿಂದೆ ಸಂಧ್ಯಾಳ ತಂದೆ, ರಾಂಭಟ್ಟರ ತೋಟದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಲು ಘಟ್ಟದ ಕೆಳಗಿನಿಂದ ಸಂಸಾರ ಸಮೇತ ಬಂದಿದ್ದವನು, ವರುಷದ ಮೂರೂ ಕಾಲವೂ ಕೈತುಂಬ ಕೆಲಸವಿದ್ದರಿಂದ, ಭಟ್ಟರ ತೋಟದ ಮೂಲೆಯಲ್ಲಿರುವ ಪಂಪ್ ಹೌಸ್ ಪಕ್ಕದಲ್ಲೆ ಒಂದು ಸಣ್ಣ ಗುಡಿಸಲಿನಂತ ಮನೆ ಕಟ್ಟಿಕೊಂಡು ಅಲ್ಲೇ ಉಳಿದುಕೊಂಡಿದ್ದನು. ಸಂಧ್ಯಾಳ ಅಮ್ಮ, ರಾಂಭಟ್ಟರ ಮನೆಯಲ್ಲೇ ಖಾಯಂ ಕೆಲಸಕ್ಕೆ ಸೇರಿಕೊಂಡಿದ್ದಳು. ಭಟ್ಟರ ಮನೆ ಸದಾ ಮೂರು ಹೊತ್ತು ಆಳುಗಳಿಂದ ಗಿಜಿಗಿಜಿಗುಡುತ್ತಿತ್ತು. ಎಂಟು ಎಕರೆ ತೋಟ, ಸುಮಾರು ೨೫-೩೦ ದನಗಳಿದ್ದ ಕೊಟ್ಟಿಗೆ ಇದ್ದ ಮನೆಗೆ ಒಂದಷ್ಟು ಆಳುಗಳ ಅವಶ್ಯಕತೆ ಸದಾ ಇದ್ದೇ ಇರುತ್ತಿತ್ತು.


ತೋಟದ ಮೂಲೆಯಲ್ಲಿ, ಮನೆ ಪಕ್ಕ ಸಂಧ್ಯಾಳ ಅಮ್ಮ ಬೇಸಿಗೆಯಲ್ಲಿ ಒಂದಷ್ಟು ತರಕಾರಿ ಪಾತಿಗಳನ್ನೂ, ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಳು. ತೋಟದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನೀರು, ಗೊಬ್ಬರಗಳನ್ನು ಉಪಯೋಗಿಸಿಕೊಂಡು ತರಕಾರಿ, ಹೂಗಿಡಗಳು ಸೊಕ್ಕಿ ಬೆಳೆಯುತ್ತಿದ್ದವು. ಈ ವರ್ಷ, ಸಂಧ್ಯಾಳ ಅಮ್ಮ ಬೆಂಡೆ ಗಿಡಗಳ ಜೊತೆ ಒಂದಷ್ಟು ಅಬ್ಬಲಿಗೆ ಗಿಡಗಳನ್ನೂ ನೆಟ್ಟಿದ್ದರು. ಮೊದಲೊಂದಷ್ಟು ದಿನ ಬೆಳೆಯಲೋ ಬೇಡವೋ ಎಂಬಂತೆ ಪಿರಿಪಿರಿಯಾಗಿ ಎದ್ದು ನಿಂತಿದ್ದ ಅಬ್ಬಲಿಗೆ ಗಿಡಗಳು, ತಿಂಗಳು ಕಳೆಯುತ್ತಿದಂತೆಯೇ ಹಲವಾರು ಹೂಬಿಡಲು ಶುರು ಮಾಡಿದವು. ಸಂಧ್ಯಾಳಿಗೆ ಮೊದಲಿನಿಂದಲೂ ಅಬ್ಬಲಿಗೆ ಹೂಗಳೆಂದರೆ ಪಂಚಪ್ರಾಣ. ಇವತ್ತು ಸಂಜೆ ಅಮ್ಮ ಅಬ್ಬಲಿಗೆ ಹೂವಿನ ದಂಡೆ ಮಾಡಿಕೊಡುವುದಾಗಿ ಹೇಳಿದ್ದುದರಿಂದಲೇ, ಸಂಧ್ಯಾ ಮನೆ ಸೇರಲು ಅಷ್ಟು ತವಕಿಸುತ್ತಿದ್ದುದು.


ಆನುವಂಶೀಯವಾಗಿಯೋ ಏನೋ, ಸಂಧ್ಯಾಳ ತಲೆಕೂದಲು ರೇಷ್ಮೆಯ ತರ ನುಣುಪು ನುಣುಪಾಗಿದ್ದು, ಅಚ್ಚಕಪ್ಪು ಬಣ್ಣದಿಂದ ಕಂಗೊಳಿಸುತ್ತಿದ್ದವು. ದಪ್ಪಗೆ, ಮೊಳಕಾಲಿನ ತನಕ ಬರುತ್ತಿದ್ದ ಅವಳ ಕೂದಲುಗಳು, ಅವಳ ಸಹಪಾಠಿಗಳೆಲ್ಲರಲ್ಲೂ ಅಸೂಯೆ ಹುಟ್ಟಿಸುತ್ತಿದ್ದದು ಸಂಧ್ಯಾಳಿಗೆ ಎಷ್ಟೋ ಸಲ ಅನುಭವಕ್ಕೆ ಬಂದಿತ್ತು. ಸಂಧ್ಯಾಳ ಅಮ್ಮನಿಗೂ ಹಿಂದೆ ಇದೇ ತರಹ ಉದ್ದನೆಯ ಕೂದಲು ಇತ್ತಂತೆ. ಆದರೆ ಅವಳಮ್ಮ ಅದನ್ನು ಸರಿಯಾಗಿ ಆರೈಕೆ ಮಾಡದೇ ಬರ್ತಾ ಬರ್ತಾ ಕೂದಲೆಲ್ಲಾ ಉದುರಿ, ಈಗ ಮೋಟು ಜಡೆಯಾಗಿತ್ತು. ಸಂಧ್ಯಾಳಿಗೆ ಮಾತ್ರ ತನ್ನ ಉದ್ದನೆಯ ತಲೆಕೂದಲಿನ ಬಗ್ಗೆ ತುಂಬಾ ಹೆಮ್ಮೆ. ಪ್ರತೀ ೧೫ ದಿನಕ್ಕೊಮ್ಮೆ ಮತ್ತಿ ಗಿಡದ ಎಲೆಗಳನ್ನು ಕೊಯ್ದು ತಂದು, ನೀರಿನಲ್ಲಿ ನೆನೆಸಿ, ಆ ಎಲೆಗಳಿಂದ ಒಂದು ತರಹದ ಲೋಳೆ ಲೋಳೆಯಾದ ದ್ರಾವಣವನ್ನು ತಯಾರಿಸಿ ಅದನ್ನು ತಲೆಕೂದಲಿಗೆ ಹಾಕಿ ಸ್ನಾನ ಮಾಡುತ್ತಿದ್ದಳು. ಅವಳ ಕ್ಲಾಸ್ ಮೇಟ್ ಆದ ಮೇಷ್ಟ್ರ ಮಗಳು ನಯನಾ ವಾರಕ್ಕೊಮ್ಮೆ "ಸನ್ ಸಿಲ್ಕ್" ಶಾಂಪೂ ಹಾಕಿ ಸ್ನಾನ ಮಾಡುತ್ತಿದ್ದರೂ, ಅವಳ ಕೂದಲು ಸಂಧ್ಯಾಳಷ್ಟು ಹೊಳಪಿಲ್ಲದಕ್ಕೆ, ತಾನು ಬಳಸುವ ಮತ್ತಿ ಎಲೆಯ ನ್ಯಾಚುರಲ್ ಶಾಂಪುವೇ ಕಾರಣವೆಂದು ಸಂಧ್ಯಾ ಬಲವಾಗಿ ನಂಬಿದ್ದಳು. ತಲೆಸ್ನಾನ ಮಾಡಿದ ೧೫ ದಿನಕ್ಕೊಮ್ಮೆ ಮಾತ್ರ, ಸಂಧ್ಯಾ ಸ್ವಲ್ಪ ಕಿರಿಕಿರಿ ಅನುಭವಿಸಬೇಕಿತ್ತು. ಒದ್ದೆಯಾದ ತಲೆಕೂದಲನೆಲ್ಲಾ ಚೆನ್ನಾಗಿ ಉಜ್ಜಿ, ಸ್ವಲ್ಪ ಹೊತ್ತು ಬಿಸಿಲನಲ್ಲಿ ಹರಡಿ, ನಂತರ ತೆಳ್ಳನೆಯ ಟವೆಲ್ ಉಪಯೋಗಿಸಿ ಕೂದಲನೆಲ್ಲಾ ಮೇಲೆತ್ತಿ ತುರುಬು ಕಟ್ಟಿಕೊಂಡರೂ, ಕೆಲವೊಮ್ಮೆ ಸಂಜೆಯಾದರೂ ಕೂದಲು ಒಣಗುತ್ತಿರಲಿಲ್ಲ. ಆಗೆಲ್ಲ ಸಂಧ್ಯಾಳಿಗೆ ಸಂಜೆಯಾದಂತೆ ಅಸಾಧ್ಯ ತಲೆನೋವು ಬಂದುಬಿಡುತ್ತಿತ್ತು. ಹಾಗೆ ತಲೆನೋವಿನ ಶೂಲೆ ಅವಳನ್ನು ಬಾಧಿಸಿದಾಗಲೆಲ್ಲಾ, ತಲೆಕೂದಲನ್ನೆಲ್ಲ ಕತ್ತರಿಸಿ ಭಟ್ಟರ ಮನೆಯ ಸುಮಾಳಂತೆ "ಬಾಬ್ ಕಟ್" ಮಾಡಿಕೊಳ್ಳಬೇಕೆಂದು ಸಂಧ್ಯಾಗೆ ಅನ್ನಿಸುವುದಿತ್ತು.


ಇವತ್ತು ಶಾಲೆಯಲ್ಲಿ ಸಂಧ್ಯಾ ಅಬ್ಬಲಿಗೆ ಹೂವಿನ ವಿಷಯ ಎತ್ತಿದಾಗ, ಅವಳ ಬೆಂಚ್ ಮೇಟ್ ಆಗಿದ್ದ ಶಾಲಿನಿ ಕೂಡ, ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ದುಂಬಾಲು ಬಿದ್ದಳು. ಸಂಧ್ಯಾಳಿಗೆ ಮೊದಲು ಸ್ವಲ್ಪ ಕಸಿವಿಸಿಯಾಗಿ ನಿರಾಕರಿಸಿದರೂ, ಶಾಲಿನಿ ತಾನು ತಿಂಗಳ ಹಿಂದೆ ತಂದುಕೊಟ್ಟ, ಎರಡು ಸಂಪಿಗೆ ಹೂವುಗಳ ನೆನಪು ಮಾಡಿದ ಮೇಲೆ ವಿಧಿಯಲ್ಲದೆ ಒಪ್ಪಬೇಕಾಯಿತು. ಆದರೂ ಒಳಗೊಳಗೇ, ಎರಡು ಸಂಪಿಗೆ ಹೂವುಗಳಿಗೆ ಒಂದು ಅಬ್ಬಲಿಗೆ ದಂಡೆ ಯಾವುದರಲ್ಲೂ ಸಮವಲ್ಲವೆಂದು ಅವಳ ಮನಸ್ಸು ಒಂದೇಸಲ ರೋದಿಸುತ್ತಲೇ ಇತ್ತು. ಒಲ್ಲದ ಮನಸ್ಸಿನಿಂದಲೇ, ತನ್ನ ಎರಡು ಜಡೆಗಳಿಗೊಂದರಂತೆ ಎರಡು ದಂಡೆ, ಶಾಲಿನಿಗೊಂದು ಸೇರಿ ಮೂರು ದಂಡೆ ಮಟ್ಟಲು ಅಮ್ಮನಿಗೆ ಹೇಳಬೇಕೆಂದು ಸಂಧ್ಯಾ ನಿರ್ಧರಿಸಿಕೊಂಡಳು.


ಸಂಧ್ಯಾಳ ಕೂದಲು ದಪ್ಪಕ್ಕೆ, ಉದ್ದವಿದ್ದುದರಿಂದ, ಅವಳಮ್ಮ ಸದಾ ಎರಡು ಜಡೆಗಳನ್ನು ಹೆಣೆದು, ಅದನ್ನು ನಾಲ್ಕು ಮಡಿಕೆಗಳಾಗಿ ಮಡಿಸಿ, ತುದಿಯಲ್ಲಿ ರಿಬ್ಬನ್ ಕಟ್ಟುತ್ತಿದ್ದರು. ಶನಿವಾರದಂದು ಮಾತ್ರ ಯುನಿಫ಼ಾರ್ಮ ಇಲ್ಲವಾಗಿದ್ದರಿಂದ, ಅಮ್ಮ ಒಂದೇ ಜಡೆ ಹೆಣೆದು ಅವಳ ಶ್ರಮವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. ದಿನಾ ಬೆಳಿಗ್ಗೆ ೭.೪೫ ಕ್ಕೆ ಆಕಾಶವಾಣಿಯಲ್ಲಿ ಚಿತ್ರಗೀತೆಗಳು ಶುರು ಆಗುತ್ತಿದ್ದಂತೆಯೇ, ಸಂಧ್ಯಾ ರಿಬ್ಬನ್ ಮತ್ತು ಬಾಚಣಿಕೆ ಹಿಡಿದು ಅಮ್ಮನ ಮುಂದೆ ಪ್ರತ್ಯಕ್ಷವಾಗುತ್ತಿದ್ದಳು. ಎರಡನೇ ಚಿತ್ರಗೀತೆ ಮುಗಿದು "ಫಿನೊಲೆಕ್ಸ್" ಪೈಪಿನ ಜಾಹಿರಾತು ಬರುವಷ್ಟರಲ್ಲಿ, ಅಮ್ಮ ಜಡೆ ಹೆಣೆದು ಮುಗಿಸುತ್ತಿದ್ದರು. ಬೆಳಗ್ಗಿನ ಹೊತ್ತು, ಕೆಲಸದ ಒತ್ತಡದಲ್ಲಿ ಸ್ವಲ್ಪವೂ ಪುರುಸೊತ್ತಿರದ ಸಂಧ್ಯಾಳ ಅಮ್ಮ, ಮಗಳಿಗಾಗಿ ಹೇಗೋ ಒಂದು ೧೦ ನಿಮಿಷ ಹೊಂದಿಸಿಕೊಳ್ಳುತ್ತಿದ್ದಳು.

ದಿನಕ್ಕಿಂತಲೂ ಬೇಗ ಮನೆ ಮುಟ್ಟಿದ ಮೇಲೆ ಸಂಧ್ಯಾ, ಕೈಕಾಲು ತೊಳೆದದ್ದೇ, ತಮ್ಮನನ್ನು ಒಬ್ಬನೇ ಮನೆಯಲ್ಲೇ ಬಿಟ್ಟು, ಅಬ್ಬಲಿಗೆ ಗಿಡಗಳ ಬಳಿಗೆ ಹೂಬುಟ್ಟಿ ಹಿಡಿದುಕೊಂಡು ಓಡಿದಳು. ಅಮ್ಮ ಭಟ್ಟರ ಮನೆಯ ಕೊಟ್ಟಿಗೆ ಕೆಲಸ ಮುಗಿಸಿಬರುವುದರೊಳಗೆ, ಒಳ್ಳೆಯ ಅಬ್ಬಲಿಗೆ ಮೊಗ್ಗುಗಳನ್ನು ಕೊಯ್ದು ರಾಶಿ ಹಾಕಿಕೊಂಡು ಬಂದಳು. ದಂಡೆ ಕಟ್ಟಲು, ತೋಟದ ಬುಡದಲ್ಲಿದ್ದ ಕಾಡುಬಾಳೆ ಗಿಡದ ನಾರುಪಟ್ಟೆಯನ್ನು ಹಿಂದಿನ ದಿನವೇ, ಸಂಧ್ಯಾಳ ಅಮ್ಮ ತಂದು ನೀರಿನಲ್ಲಿ ನೆನೆಸಿ ಇಟ್ಟಿದ್ದಳು. ಅಮ್ಮ ಮನೆಗೆ ಬಂದ ಕೂಡಲೇ, ಅವಳಿಗೆ ದುಂಬಾಲು ಬಿದ್ದು ಎರಡು ಉದ್ದನೆಯ ಮತ್ತು ಒಂದು ಸ್ವಲ್ಪ ಗಿಡ್ಡನೆಯ ದಂಡೆ ಕಟ್ಟಿಸಿಕೊಂಡಳು. ಚಕ ಚಕನೆ ಹೂವುಗಳನ್ನು ಪೋಣಿಸುತ್ತಿದ್ದ ಅಮ್ಮನ ಕೈಗಳನ್ನೇ ಸಂಧ್ಯಾ ಬೆರಗಿನಿಂದ ನೋಡುತ್ತಿದ್ದಂತೆಯೇ, ಅಮ್ಮ ಮೂರೂ ದಂಡೆಗಳನ್ನು ಕಟ್ಟಿಮುಗಿಸಿಬಿಟ್ಟಿದ್ದಳು. ಒಂದು ಸಲ ದಂಡೆಗಳನ್ನು ಮನತೃಪ್ತಿಯಾಗುವಂತೆ ನೋಡಿ, ತಾನು ಆ ದಂಡೆಗಳನ್ನು ಮುಡಿದುಕೊಂಡರೆ ಹೇಗೆ ಕಾಣಿಸಬಹುದೆಂದು ಕಲ್ಪಿಸಿಕೊಂಡು ಸಂಧ್ಯಾ ರೋಮಾಂಚನಗೊಂಡಳು. ನಂತರ ಮೆಲ್ಲಗೆ ದಂಡೆಗಳನ್ನು ಎತ್ತಿಕೊಂಡು, ಬಾವಿಕಟ್ಟೆಯ ಪಕ್ಕದಲ್ಲಿ ಕಟ್ಟಿಹಾಕಿದ್ದ ಬಿದಿರಿನ ಗಳಕ್ಕೆ ನೇತುಹಾಕಿದಳು. ಬೆಳಿಗ್ಗೆ ಮುಂಚೆ ಬೀಳುವ ಇಬ್ಬನಿಗೆ ಅಬ್ಬಲಿಗೆ ಹೂವುಗಳು ಸರಿಯಾಗಿ ಅರಳಿ, ಫ಼್ರೆಶ್ ಆಗಿ ಕಾಣಲಿ ಅಂತಲೇ ಅವಳು ಹಾಗೆ ಮಾಡಿದ್ದು.


ರಾತ್ರಿಯಾದರೂ ಇನ್ನೂ ಸಂಧ್ಯಾಳ ಅಪ್ಪ ಮನೆಗೆ ಬಂದಿರಲಿಲ್ಲ. ಸಂಧ್ಯಾ ಮತ್ತು ಅವಳ ತಮ್ಮ ಊಟ ಮುಗಿಸಿ, ಬೇಗನೇ ಮಲಗಿಕೊಂಡರು. ಅಮ್ಮ ಊಟ ಮಾಡದೇ, ಬಾಗಿಲ ಬಳಿಯೇ ಚಾಪೆ ಹಾಸಿಕೊಂಡು ಕಾಯುತ್ತಿದ್ದಳು. ಸಂಧ್ಯಾಳಿಗೆ ಹಾಸಿಗೆಗೆ ತಲೆ ಕೊಟ್ಟ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು. ರಾತ್ರಿ ನಿದ್ದೆಯಲ್ಲಿ ಸಂಧ್ಯಾಳಿಗೆ, ತಾನು ಅಬ್ಬಲಿಗೆ ದಂಡೆ ಮುಡಿದುಕೊಂಡು ಇಡೀ ಶಾಲೆಯಲ್ಲೆಲ್ಲಾ ಮೆರೆದಂತೆಯೂ, ಅವಳ ಸಹಪಾಠಿಗಳೆಲ್ಲಾ ಅವಳನ್ನು ನೋಡೀ ಕರುಬಿದಂತೆಯೂ, ಶಾಲಿನಿ ಕೂಡ ತನ್ನ ಮೋಟು ಜಡೆಗೆ ಸಂಧ್ಯಾ ತಂದು ಕೊಟ್ಟ ಅಬ್ಬಲಿಗೆ ದಂಡೆಯನ್ನು ಮುಡಿದುಕೊಂಡು ಹೆಮ್ಮೆ ಪಡುತ್ತಿರುವಂತೆಯೂ ಕನಸುಬಿತ್ತು. ಪಾಠ ಮಾಡುತ್ತಿದ್ದ ಸುಶೀಲಾ ಟೀಚರ್ ಕೂಡ ಸಂಧ್ಯಾಳನ್ನು ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ಕೇಳಿಕೊಂಡಾಗ, ನಿದ್ದೆಯಲ್ಲಿಯೇ ಸಂಧ್ಯಾಳಿಗೆ ತುಟಿಯ ಮೇಲೊಂದು ಕಿರುನಗೆ ಅಪ್ರಯತ್ನಪೂರ್ವಕವಾಗಿ ಸುಳಿಯಿತು. ಇದ್ದಕಿದ್ದ ಹಾಗೆ, ಯಾರೋ ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ತಟ್ಟನೇ ಅವಳಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ನೋಡಿದರೆ, ಅಮ್ಮ ಚಾಪೆಯ ಮೇಲೆ ಕುಳಿತಿಕೊಂಡು ದೊಡ್ಡ ಸ್ವರದಲ್ಲಿ ಅಳುತ್ತಿದ್ದಳು. ಅವಳ ಕೈಯಲ್ಲಿದ್ದ ಕೆಲವು ಕೆಂಪು ಗಾಜಿನ ಬಳೆಗಳು ಬಾಗಿಲಿನ ಬುಡದಲ್ಲಿ ಚೂರುಚೂರಾಗಿ ಬಿದ್ದಿರುವುದು ಸಂಧ್ಯಾಳ ಕಣ್ಣಿಗೆ ದೀಪದ ಬೆಳಕಿನಲ್ಲಿ ಗೋಚರವಾಯಿತು. ತೂರಾಡುತ್ತಾ ಮಂಚದ ಮೇಲೆ ಕುಳಿತಿಕೊಂಡು ಅಪ್ಪ, ಅವಾಚ್ಯ ಶಬ್ದಗಳಿಂದ ಅಮ್ಮನನ್ನು ನಿಂದಿಸುತ್ತಿದ್ದರು. ಅಪರೂಪಕೊಮ್ಮೆ ಹೀಗೆ ಕುಡಿದುಕೊಂಡು ಬಂದಾಗ ಸಂಧ್ಯಾಳ ಅಪ್ಪ, ವಿನಾಕಾರಣ ಅಮ್ಮನ ಮೇಲೆ ಕೈಮಾಡಿ ಯಾವುದೋ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಸಂಧ್ಯಾಳಿಗೆ ತುಂಬಾ ಬಾಯಾರಿಕೆಯಾಗುತ್ತಿತ್ತು. ಎದ್ದು ಅಡುಗೆಮನೆಗೆ ಹೋಗಬೇಕಂದವಳು ಪಕ್ಕದಲ್ಲೇ ಅಪ್ಪ ಕುಳಿತಿರುವುದನ್ನು ನೋಡಿ ಧೈರ್ಯ ಸಾಲದೇ ಮಗ್ಗಲು ಬದಲಿಸಿದಳು. ತಮ್ಮ, ಪಕ್ಕದಲ್ಲಿ ಕೈಕಾಲುಗಳನ್ನು ಎರಡೂ ದಿಕ್ಕಿಗೆ ಬೀಸಾಡಿ ಮಲಗಿದ್ದುದು ಕಂಡಿತು. ಸ್ವಲ್ಪ ಹೊತ್ತಿನಲ್ಲೇ ಅಪ್ಪ, ಮಂಚದ ಮೇಲೆಯೇ ಮಲಗಿ ಗೊರಕೆ ಹೊಡೆಯಲು ಶುರು ಮಾಡಿದರು.


ಸಂಧ್ಯಾಳ ಕನಸೆಲ್ಲಾ ಹಾರಿಹೋಗಿತ್ತು . ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಲು ಪ್ರಯತ್ನಿಸಿದರೂ, ಒಂದೇ ಶ್ರುತಿಯಲ್ಲಿ ಬಿಕ್ಕಳಿಸುತ್ತಿದ್ದ ಅಮ್ಮನ ಧ್ವನಿ ಆ ನಡುರಾತ್ರಿಯಲ್ಲಿ ಕಿವಿಯನ್ನು ಕೊರೆಯುತ್ತಿತ್ತು. ತನ್ನ ಮತ್ತು ಅಮ್ಮನ ನಿದ್ದೆ ಹಾಳು ಮಾಡಿ, ತಣ್ಣಗೆ ಮಲಗಿ ಗೊರಕೆ ಹೊಡೆಯುತ್ತಿದ್ದ ಅಪ್ಪನ ಮೇಲೆ ಅವಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅಳುತ್ತಿದ್ದ ಅಮ್ಮನನ್ನು ಸಮಾಧಾನ ಪಡಿಸಬೇಕೆಂದು ಒಂದು ಕ್ಷಣ ಅನ್ನಿಸಿದರೂ, ಅವಳ ಪಾಡಿಗೆ ಅವಳನ್ನು ಬಿಡುವುದು ಲೇಸೆನಿಸಿ ಸುಮ್ಮನಾದಳು. ಇದೇ ಗುಂಗಿನಲ್ಲೇ ಇದ್ದವಳಿಗೆ ನಿದ್ದೆ ಬಂದು ಆವರಿಸಿಕೊಂಡಿದ್ದು ಗೊತ್ತೇ ಆಗಲಿಲ್ಲ.


ಬೆಳಿಗ್ಗೆ ಸ್ವಲ್ಪ ತಡವಾಗಿಯೇ ಎದ್ದ ಸಂಧ್ಯಾಳಿಗೆ, ಅಮ್ಮ ನೀರೊಲೆಗೆ ಬೆಂಕಿಯೊಡ್ಡುವುದರಲ್ಲಿದ್ದುದು ಕಾಣಿಸಿತು. ಚಳಿ ಕಾಯಿಸಿಕೊಳ್ಳಲು ಒಲೆಯ ಬುಡದ ಬಳಿಗೆ ಹೋಗಿ ಕುಳಿತುಕೊಂಡಾಗ ಮೆಲ್ಲಗೆ ತಲೆಸವರಿದ ಅಮ್ಮನ ಕೈ ಮೇಲೆ, ಗಾಜಿನ ಬಳೆಗಳಿಂದಾದ ಸಣ್ಣ ಗೀರು ಕಂಡಿತು. ಬೆಂಕಿ ಕಾಯಿಸುತ್ತಾ, ಅಮ್ಮನ ಮೊಗದ ಮೇಲೆ ನಿನ್ನೆಯ ದುಃಖದ ಛಾಯೆಯೇನಾದರೂ ಕಾಣಿಸಬಹುದೇ ಎಂದು ಹುಡುಕಿದವಳಿಗೆ ನಿರಾಶೆಯಾಯಿತು. ಅಮ್ಮ ಎಂದಿನಂತೆ ನಗುನಗುತ್ತಾ ಲವಲವಿಕೆಯಿಂದ ಇದ್ದ ಹಾಗೆ ಕಾಣಿಸಿತು. ಎಂಥಾ ನೋವನ್ನೂ ನುಂಗಿ ಸದಾ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದ ಅಮ್ಮನ್ನನ್ನು ನೋಡಿ ಸಂಧ್ಯಾಳಿಗೆ ಬಹಳ ಹೆಮ್ಮೆಯೆನಿಸಿತು.


ಮರುಕ್ಷಣವೇ, ಬಾವಿಕಟ್ಟೆಯ ಪಕ್ಕ ನೇತುಹಾಕಿದ್ದ ಅಬ್ಬಲಿಗೆ ದಂಡೆಗಳ ನೆನಪಾಗಿ, ಹಿಂಬಾಗಿಲಿನ ಕಡೆ ಓಡಿದಳು. ಅವಳ ಆಶ್ಚರ್ಯಕ್ಕೆ, ಅಬ್ಬಲಿಗೆ ದಂಡೆಗಳು ಅಲ್ಲಿಂದ ಕಣ್ಮರೆಯಾಗಿದ್ದವು. ಸಂಧ್ಯಾಳಿಗೆ ಒಮ್ಮೆ ಹೃದಯವೇ ಬಾಯಿಗೆ ಬಂದಂತಾಯಿತು. ಗಾಳಿಗೇನಾದರೂ ಹಾರಿ ಅತ್ತಿತ್ತ ಬಿದ್ದಿರಬಹುದೇ ಎಂದು ಸುತ್ತಮುತ್ತಲೆಲ್ಲಾ ಹುಡುಕಿದಳು. ಎಲ್ಲಿಯೂ ದಂಡೆಗಳ ಪತ್ತೆ ಇರಲಿಲ್ಲ. ತಕ್ಷಣ ಅಮ್ಮನ ಬಳಿ ಒಡಿ, ಅವಳನ್ನು ಕೇಳಿದಳು. ಅಮ್ಮನಿಂದ ಯಾವುದೇ ಉತ್ತರ ಬರಲಿಲ್ಲ. ಇನ್ನೂ ಎರಡು ಸಲ ಜೋರಾಗಿ ಕೂಗಿ ಕೇಳಿದಾಗ, ಅಮ್ಮನಿಂದ ಶುಷ್ಕ ನೋಟವೊಂದನ್ನು ಬಿಟ್ಟರೆ ಇನ್ಯಾವುದೇ ಪ್ರತಿಕ್ರಿಯೆ ಬರದ್ದರಿಂದ, ಸಂಧ್ಯಾಳಿಗೆ ದುಃಖ ತಡೆಯಲಾರದೇ ಅಳುವೇ ಬಂದುಬಿಟ್ಟಿತು. ಅಳುತ್ತಿದ್ದ ಸಂಧ್ಯಾಳನ್ನು ಸಮಾಧಾನ ಪಡಿಸಲಾಗದೇ, ಅವಳಮ್ಮ ಹಿಂಬಾಗಿಲಿಗೆ ಕರೆದುಕೊಂಡು ಬಂದು, ಬಾವಿಯಲ್ಲಿ ತೇಲುತ್ತಿರುವ, ಚೂರುಚೂರಾಗಿದ್ದ ಅಬ್ಬಲಿಗೆ ದಂಡೆಗಳನ್ನು ತೋರಿಸಿದಳು. ರಾತ್ರಿ ಕುಡಿದುಬಂದ ಅಪ್ಪನ ದೃಷ್ಟಿಗೆ ಬಿದ್ದ ಅಬ್ಬಲಿಗೆ ದಂಡೆಗಳು, ಅವನ ಆವೇಶಕ್ಕೆ ಸಿಕ್ಕಿ, ನಲುಗಿಹೋಗಿದ್ದವು. ಸಂಧ್ಯಾಳ ಅಮ್ಮನ ಅಸಹಾಯಕತೆಯನ್ನು ಸಾಂಕೇತಿಕವಾಗಿ ಬಿಂಬಿಸುತ್ತಿವೆಯೋ ಎಂಬಂತೆ, ಶುಭ್ರ ಸ್ಪಟಿಕದಂತಿದ್ದ ಬಾವಿನೀರಿನಲ್ಲಿ ನಿರ್ವಿಣ್ಣವಾಗಿ ತೇಲುತ್ತಿದ್ದ ದಂಡೆಗಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಸಂಧ್ಯಾಳಿಗೆ, ಅಮ್ಮ "ಅಳಬೇಡ ಮರಿ, ಮುಂದಿನ ವಾರ ಮತ್ತೆ ದಂಡೆಕಟ್ಟಿದರಾಯಿತು ಬಿಡು" ಎಂದಿದ್ದು, ಕಿವಿಗೆ ಬೀಳಲೇ ಇಲ್ಲ.


ಅಬ್ಬಲಿಗೆ ಹೂವು - ಕನಕಾಂಬರ ಹೂವು

ದಂಡೆ - ಒತ್ತೊತ್ತಾಗಿ ಪೋಣಿಸಿದ ಸಣ್ಣ ಹೂವಿನ ಮಾಲೆ

Tuesday, January 29, 2008

ಶ್ವಾನಪುರಾಣ

ದೇರಾಜೆಯವರ ಬ್ಲಾಗಲ್ಲಿ "ಮುಮ್ಮಡಿ ಟಾಮಿಯ ಸ್ಮರಣೆ’ ಲೇಖನ ನೋಡಿದಾಗ ಯಾಕೋ ನಮ್ಮನೆ "ಗ್ರೇಸಿ" ಯ ಬಗ್ಗೆ ಬರೆಯದೇ ಇರಲು ಆಗಲಿಲ್ಲ ನನಗೆ.

ಪೂರ್ಣಚಂದ್ರ ತೇಜಸ್ವಿಯವರು ಎಲ್ಲೋ ಹೇಳಿದ್ದ ನೆನಪು " ಮಲೆನಾಡಿನ ಗಂಡಸರಿಗೆಲ್ಲಾ ನಾಯಿ ಸಾಕೋದು ಒಂದು ತರ ತೆವಲು" ಅಂತ. ಬಹಳಷ್ಟು ಸಲ ಅದು ನಿಜ ಅನ್ನಿಸಿದ್ದಿದೆ. ಆದರೆ ನಾನು ಇದ್ದ ಪರಿಸರದಲ್ಲಿ, ಅರ್ಧ ಕಿಲೋಮೀಟರ್ ಸುತ್ತಳತೆಯಲ್ಲಿ ಒಂಟಿಭೂತದ ತರ ನಿಂತ ನಮ್ಮನೆಗೆ ನಾಯಿ ಅತ್ಯವಶ್ಯಕವಾಗಿತ್ತು. ದೊಡ್ಡ ಮನೆಯ ಯಾವುದೋ ಕೋಣೆಯಲ್ಲೋ, ಹಿತ್ತಿಲಿನ ತುದಿಯಲ್ಲೋ ಇರುತ್ತಿದ್ದ ನಮ್ಮನ್ನು, ಮನೆಗೆ ಯಾರು ಬಂದರೂ ಎಚ್ಚರಿಸಲು, ಅಗಾಗ ತೆಂಗಿನಕಾಯಿ ಕದಿಯಲು ಬರುತ್ತಿದ್ದ ಕಳ್ಳರನ್ನು ಓಡಿಸಲು ನಾಯಿಗಳು ತುಂಬಾ ಸಹಾಯಕವಾಗಿದ್ದವು. ಈ ಹಲವಾರು ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಇದ್ದು ಸತ್ತುಹೋದ ನಾಯಿಗಳನ್ನು ನೆನಪಿಸಿಕೊಂಡರೆ, ಬರೆದಷ್ಟೂ ಸಾಲುವುದಿಲ್ಲ.

ಹೊಸ ಜಾಗದಲ್ಲಿ ಮನೆ ಕಟ್ಟಿ ವರುಷವಾಗುವುದರೊಳಗೇ, ಮುಂಡಿಗೇಸರದವರ ಗದ್ದೆ ಕಾಯಲು ಬರುತ್ತಿದ್ದ ಗೌಡ ಎಲ್ಲಿಂದಲೋ ತಂದುಕೊಂಡಿದ್ದ ಕೆಂಪು ನಾಯಿ, ನಾವು ಕೊಡುವ ದೋಸೆಯ ಆಸೆಗೆ ಮೊದ ಮೊದಲು ಬಂದು ಹೋಗಿ ಮಾಡುತ್ತಿದ್ದದ್ದು, ಕ್ರಮಕ್ರಮೇಣ ಪೂರ್ತಿಯಾಗಿ ನಮ್ಮ ಮನೆಯಲ್ಲೇ ಠಿಕಾಣಿ ಹೂಡಿ ಬಿಡ್ತು. ಅಪ್ಪ ಅದಕ್ಕೆ ಹೆಸರೇನಂದು ಇಡಲು ತೋಚದೇ "ಶ್ವಾನಪ್ಪಾ" ಅಂತ ಕರೀತಿದ್ರು. ನಮ್ಮ ಮನೆಯ ಕಾವಲು ಕಾಯ್ದ ಮೊದಲ ನಾಯಿ ಅದು. ಆಗ ನಾನು, ಅಕ್ಕ ತುಂಬ ಚಿಕ್ಕವರಿದ್ದೆವು. ಅಮ್ಮ ನಮಗೆ ಕೊಟ್ಟ ದೋಸೆಯಲ್ಲಿ ಅರ್ಧ ಶ್ವಾನಪ್ಪನಿಗೆ ಕೊಟ್ಟು ನಾವು ಕೃತಾರ್ಥರಾಗುತ್ತಿದ್ದೆವು. ವರ್ಷಗಟ್ಟಳೇ ಅಲ್ಲೇ ಒಡಾಡಿಕೊಂಡು ಇದ್ದ ಶ್ವಾನಪ್ಪ ಒಂದು ದಿನ ಮಾತ್ರ ನಾಪತ್ತೆ. ಅದಕ್ಕೆ ಏನು ಆಯಿತೆಂಬುದು ನಮಗೆ ಗೊತ್ತೇ ಆಗಲಿಲ್ಲ. ನನಗೆ, ಅಕ್ಕನಿಗೆ ಸ್ವಲ್ಪ ನಿರಾಶೆಯಾದರೂ, ಅಪ್ಪ ಇನ್ನೊಂದು ನಾಯಿಮರಿ ತಗೊಂಡುಬಂದರಾಯ್ತು ಅಂತ ಸಮಾಧಾನ ಮಾಡಿದಾಗ ಖುಶಿಯಾಗಿತ್ತು.

ವಾರದೊಳಗೇ ಅಪ್ಪ ಹೀಪನಳ್ಳಿ ಈರನ ಮನೆಯಿಂದ ೨ ತಿಂಗಳ ಕಪ್ಪು ಮೈಯ, ಬಿಳಿ ಬಿಳಿ ಚುಕ್ಕಿಯಿದ್ದ ನಾಯಿಮರಿಯನ್ನು ತಂದರು. ನಾವು ಅಧಿಕೃತವಾಗಿ "ರಾಜು" ಅಂತ ನಾಯಿಮರಿಗೆ ನಾಮಕರಣ ಮಾಡಿದೆವು. ಕಂತ್ರಿನಾಯಿಯಾಗಿದ್ದರೂ ರಾಜು ಬಹಳ ಚುರುಕಾಗಿತ್ತು. ಆದರೆ ಬೆಳೆದಂತೆಲ್ಲಾ ಅದರ ನಿಯತ್ತು ಸ್ವಲ್ಪ ಕಮ್ಮಿ ಎಂದು ತಿಳಿದುಕೊಳ್ಳಲು ಅಪ್ಪ ಅಮ್ಮನಿಗೆ ಬಹಳ ದಿನ ಬೇಕಾಗಲಿಲ್ಲ. ಕಟ್ಟಿ ಹಾಕಿದ ಸರಪಳಿಯನ್ನು ಎಳೆದೂ ಎಳೆದು ಗಂಟು ಮಾಡಿ ಸಿಕ್ಕಾಪಟ್ಟೆ ಗಲಾಟೆ ಎಬ್ಬಿಸುತ್ತಿದ್ದ ಅದು, ಅದರ ಕಾಟ ತಡೆಯಲಾಗದೇ ಅಮ್ಮ ಸರಪಳಿ ಬಿಚ್ಚಿದ ಕೂಡಲೇ, ನಾಗಾಲೋಟದಲ್ಲಿ ಒಡಿ ಪರಾರಿಯಾಗುತ್ತಿತ್ತು. ಅಗಾಗ ಸಿಗುತ್ತಿದ್ದ ದೋಸೆಯ ಆಸೆಗೆ ಅದು ಶಂಕರಣ್ಣನ ಮನೆಗೆ ಹೋಗುತ್ತಿದೆ ಅಂದು ತಿಳಿದುಕೊಳ್ಳಲು ಬಹಳ ಕಷ್ಟವಾಗಲಿಲ್ಲ . ನಾವು ಶಾಲೆಗೆ ಹೋಗುವ ದಾರಿಯಲ್ಲೇ ಶಂಕರಣ್ಣನ ಮನೆ ಇರುತ್ತಿದ್ದರಿಂದ, ನಮ್ಮನ್ನು ಕಂಡ ಕೂಡಲೆ ರಾಜು, ಬಾಲ ಆಡಿಸಿಕೊಂಡು ಬರುತ್ತಿತ್ತು. ರಾತ್ರಿಯೇನಾದರೂ ಕಟ್ಟಿ ಹಾಕಿದರೆ, ಇಡೀ ರಾತ್ರಿ ತಾರಕ ಸ್ವರದಲ್ಲಿ ಊಳಿಟ್ಟು, ನಮ್ಮ ನಿದ್ದೆಯನ್ನೆಲ್ಲ ಹಾಳುಮಾಡುತ್ತಿದ್ದ ರಾಜುವಿನ ಬಗ್ಗೆ ನಮಗೆ ಅಷ್ಟೊಂದೇನೂ ಪ್ರೀತಿ ಉಳಿದಿರಲಿಲ್ಲ. ಎರಡು ಹೊತ್ತಿನ ಊಟದ ಹೊತ್ತಿಗೆ ಮಾತ್ರ, ಮನೆಗೆ ತಪ್ಪದೇ ಹಾಜರಾಗಿ ಎನಾದ್ರೂ ತಿನ್ನಲು ಸಿಗುತ್ತದೆಯೋ ಎಂದು ಕಾಯುತ್ತಿದ್ದ ರಾಜುವನ್ನು ನಂಬಿ ಒಂಟಿ ಮನೆಯಲ್ಲಿ ಇರಲು ಅಮ್ಮ ಸುತಾರಂ ಒಪ್ಪಲಿಲ್ಲ. ಇದೇ ಸಮಯದಲ್ಲಿ ಊರಲ್ಲಿ ಒಂದೆರಡು ಕಳ್ಳತನದ ಘಟನೆಗಳೂ ಹೆಚ್ಚಿದ್ದರಿಂದ, ಅಮ್ಮ ಸಹಜವಾಗಿ ಇನ್ನೊಂದು ನಾಯಿ ತರಲು ಅಪ್ಪನ ಮೇಲೆ ಒತ್ತಡ ತರತೊಡಗಿದರು.

ಮುಂದೆ ಸುಮಾರು ೪ ವರ್ಷಗಳ ಕಾಲ, ನಮ್ಮ ಮನೆಯಲ್ಲಿ ತಂದ ಯಾವುದೇ ನಾಯಿಗಳು ಬಹಳ ದಿನ ಬಾಳಲಿಲ್ಲ. ಒಂದೆರಡು ಒಳ್ಳೇ ಜಾತಿಯ ನಾಯಿಮರಿಗಳನ್ನು ಅಪ್ಪ ಕಷ್ಟಪಟ್ಟು ಹುಡುಕಿ ತಂದರೂ, ಆಗಾಗ ಮನೆಗೆ ಬರುತ್ತಿದ್ದ ರಾಜು ಅವುಗಳನ್ನ ಕಚ್ಚಿ ಸಾಯಿಸಿಬಿಡುತ್ತಿತ್ತು. ಕೆಲವು ನಾಯಿಗಳು ಮನೆಯ ಹತ್ತಿರವೇ ಇದ್ದ ರಸ್ತೆಯಲ್ಲಿ, ಬಸ್ಸುಗಳ ಅಡಿಗೆ ಸಿಲುಕಿ ಸತ್ತು ಹೋದವು. ಇನ್ನೂ ಕೆಲವು ಉಣುಗುಗಳ ಕಾಟ ತಡೆಯಲಾರದೇ ಸತ್ತು ಹೋದವು. ನನಗಂತೂ ಹೀಗೆ ಸತ್ತ ನಾಯಿಮರಿಗಳ ಲೆಕ್ಕವೇ ಈಗ ಸಿಗುತ್ತಿಲ್ಲ. ಟಾಮಿ, ಜೂಲಿ, ಪಿಂಕಿ, ಪಾಂಡು, ಟೈಗರ್‍, ಪಕ್ಕಿ, ಅಬ್ಬಬ್ಬಾ ಎಷ್ಟೊಂದಿವೆ!.

ಚಿಕ್ಕವನಿದ್ದಾಗ ನಮ್ಮ ಆಟದ ಬಹಳಷ್ಟು ಭಾಗ ಈ ನಾಯಿಗಳೊಂದಿಗೇ ಕಳೆಯುತ್ತಿತ್ತು. ಸ್ವಲ್ಪ ತುಂಟನಾಗಿದ್ದ ನಾನು ಅವುಗಳ ಕಿವಿ ಹಿಡಿದು ಎಳೆದೋ, ಬಾಲ ಹಿಡಿದು ಎಳೆದೋ ತೊಂದರೆ ಕೊಡುತ್ತಿದ್ದೆ. ಹಾಗಾಗಿ ಬಹಳಷ್ಟು ಸಲ ಅವುಗಳಿಂದ ಕಚ್ಚಿಸಿಕೊಂಡಿದ್ದೂ ಇದೆ. ಅವು ಕಚ್ಚಿದನ್ನು ಅಮ್ಮನಿಂದ ಸಾಧ್ಯವಾದಷ್ಟು ಮುಚ್ಚಿಡುತ್ತಿದ್ದೆ. ಆದರೂ ಸ್ನಾನ ಮಾಡಿಸುವಾಗ, ತಲೆ ಬಾಚುತ್ತಿರುವಾಗ ಅಮ್ಮನ ಕಣ್ಣಿಗೆ ಗಾಯಗಳು ಬಿದ್ದೇ ಬೀಳುತ್ತಿದ್ದವು. ನಾಯಿಗಳ ತಂಟೆಗೇ ಹೋಗಬೇಡ ಎಂದು ಪದೇ ಪದೇ ಎಚ್ಚರಿಸುತ್ತಿದ ಅಮ್ಮ, ಅವಾಗೆಲ್ಲ ಮಾತು ಕೇಳದ ನನಗೇ ಚೆನ್ನಾಗಿ ಬೈಯುತ್ತಿದ್ದರು. ನಾಯಿ ಕಚ್ಚಿದ್ದ ಗಾಯದ ಜೊತೆ, ಅಮ್ಮನ ಬೈಗುಳದ ಅವಮಾನವೂ ಸೇರಿ ನನ್ನ ದುಃಖವನ್ನು ಹೆಚ್ಚು ಮಾಡುತ್ತಿದ್ದವು. ಸರಿ, ಅಮ್ಮ ಸಂಜೆಗೆ ವಿನಾಯಕ ಡಾಕ್ಟರ್‍ ಮನೆಗೆ ಕರೆದುಕೊಂಡು ಹೋಗಿ ಒಂದು ಟೆಟಾನಸ್ ಇಂಜೆಕ್ಶನ್ ಹಾಕಿಸಿಕೊಂಡು ಬಂದರೆ, ಅಲ್ಲಿಗೆ ಒಂದು ಅಧ್ಯಾಯ ಸಮಾಪ್ತಿ. ಹೀಗೆ ಸುಮಾರು ೭ ರಿಂದ ೮ ಇಂಜೆಕ್ಶನ್ ತೆಗೆದುಕೊಂಡಿರಬಹುದು ಅಂತ ನೆನಪು ನನಗೆ. ಇಷ್ಟೆಲ್ಲಾ ಆದರೂ, ಅವುಗಳ ಜೊತೆ ಆಡುವುದನ್ನು ಮಾತ್ರಾ ನಾನು ನಿಲ್ಲಿಸುತ್ತಿರಲಿಲ್ಲ. ನಾಯಿ ಮರಿಗಳ ಜೊತೆ ಒಡನಾಡಿದ ಯಾರಿಗೂ, ಅವುಗಳ ಈ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ನಾನು ಐದನೇ ತರಗತಿಯಲ್ಲಿದ್ದಾಗ, ಅಪರೂಪಕ್ಕೆ ಮನೆಯಲ್ಲೇ ನಿದ್ರಿಸುತ್ತಿದ್ದ ರಾಜುವನ್ನು, ಕಿರುಬ ಕಚ್ಚಿಕೊಂಡು ಹೋದಮೇಲೆ ಎರಡು ವರುಷ ನಮ್ಮನೆಯಲ್ಲಿ ನಾಯಿಗಳೇ ಇರಲಿಲ್ಲ. ಎರಡು ವರ್ಷಗಳ ನಂತರ, "ಊರತೋಟ"ಕ್ಕೆ ಹೋಗಿದ್ದ ಅಪ್ಪ, ಹುಟ್ಟಿ ಇನ್ನೂ ೨೦ ದಿನಗಳಾಗಿದ್ದ ಜರ್ಮನ್ ಶೆಪರ್ಡ್ ಜಾತಿಯ ಹೆಣ್ಣು ಮರಿಯೊಂದನ್ನು ಮೆಚ್ಚಿ ತೆಗೆದುಕೊಂಡು ಬಂದಿದ್ದರು. ಅದೇ "ಗ್ರೇಸಿ".

"ಗ್ರೇಸಿ"ಗೆ ಆ ಹೆಸರು ಹೇಗೆ ಬಂತೆನ್ನುವುದೇ ಒಂದು ಸಣ್ಣ ಕಥೆ. ಬಹುಷಃ ೧೯೯೬-೧೯೯೭ ನೇ ವರ್ಷವಿರಬೇಕು (ಯಾವ ವರ್ಷ ಅಂತ ಈಗ ಸರಿಯಾಗಿ ನೆನಪಿಲ್ಲ), ಈ ಪುಟ್ಟ ನಾಯಿ ನಮ್ಮ ಮನೆಗೆ ಬಂದಾಗ. ಆ ವರ್ಷ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೀತಿತ್ತು. ಮಾಧ್ಯಮಗಳಲ್ಲಿ ಅದು ಆಗ ಪ್ರಮುಖ ಸುದ್ದಿಯಾಗಿತ್ತು. ಆ ಸ್ಪರ್ಧೆಯಲ್ಲಿ "ಮಿಸ್ ಗ್ರೀಸ್" ವಿಶ್ವಸುಂದರಿಯಾಗಿದ್ದಳು. ಜೂಲಿ, ಪಿಂಕಿ ಮುಂತಾದ ಹಳೇ ಹೆಸರುಗಳಿಂದ ಬೇಸತ್ತಿದ್ದ ನಮ್ಮಿಬ್ಬರಿಗೆ ಅಪ್ಪ "ಮಿಸ್ ಗ್ರೀಸ್" ಳ ನೆನಪಿಗೂ, ನಾಯಿ ಮರಿಯ ಕಲರ್ "ಗ್ರೇ" ಆದ್ದರಿಂದಲೂ, ಮರಿ "ಅಗ್ರೇಸ್ಸಿವ್" ಆಗಿ ಬೆಳೆಯಲೆಂದೂ "ಗ್ರೇಸಿ" ಎಂಬ ಹೆಸರನ್ನು ಸೂಚಿಸಿದ ಕೂಡಲೇ ಒಪ್ಪಿಗೆಯಾಯಿತು. ಅಮ್ಮನಿಗೆ ಯಾಕೋ ಆ ಹೆಸರು ಇಷ್ಟವಾದ ಹಾಗೆ ಕಾಣಲಿಲ್ಲ. ಆದರೂ ಬಹುಮತ ನಮ್ಮದೇ ಇದ್ದದ್ದರಿಂದ ಅಮ್ಮ ಸುಮ್ಮನಾಗಬೇಕಾಯಿತು.

ಈ ಹೊತ್ತಿಗೆ ಸುಮಾರು ನಾಯಿ ಸಾಕಿದ ಅನುಭವವಿದ್ದ ನಾವು, ಗ್ರೇಸಿ ಯನ್ನು ಬಹಳ ಜೋಪಾನವಾಗಿ ಸಾಕಿದೆವು. ಅಪ್ಪ ಅದಕ್ಕೆಂದೇ ಸ್ಪೆಶಲ್ ಆಗಿ ಕಬ್ಬಿಣದ ಪಂಜರವನ್ನು ಮಾಡಿಸಿದರು. ವಾರಕ್ಕೊಮ್ಮೆ ನಿಲೇಕಣಿ ಸದೂನ ಅಂಗಡಿಯಿಂದ ಮೊಟ್ಟೆ ಕೂಡ ತರುತ್ತಿದ್ದರು. ವರ್ಷದೊಳಗೆ ಗ್ರೇಸಿ ನಮ್ಮ ಅಳತೆ ಮೀರಿ ಬೆಳೆದು ನಿಂತುಬಿಟ್ಟಿತ್ತು. ನಾವೆಲ್ಲ ಹೊರಗಿನಿಂದ ಮನೆಗೆ ಬಂದ ಕೂಡಲೇ ನಮ್ಮ ಎದೆಗೆ ಕಾಲು ಕೊಟ್ಟು ನಿಂತು ಪ್ರೀತಿ ತೋರಿಸುತ್ತಿತ್ತು. ಕಂತ್ರಿ ನಾಯಿಗಳಿಗೆ ಹೋಲಿಸಿದರೆ ಗ್ರೇಸಿಗೆ ಧೈರ್ಯ ಸ್ವಲ್ಪ ಕಮ್ಮಿನೆ ಇದ್ದರೂ, ನಾವು ಹೇಳಿದ ಮಾತುಗಳೆಲ್ಲವೂ ಅದಕ್ಕೆ ಅರ್ಥವಾಗುತ್ತಿದ್ದವು. ಒಂಟಿ ಮನೆಯಾಗಿದ್ದರಿಂದ ಹತ್ತಿರದಲ್ಲಿ ನನಗೆ ಯಾರೂ ಆಡಲು ಗೆಳೆಯರು ಇರುತ್ತಿರಲಿಲ್ಲ. ಆದರೆ ಅದರ ಕೊರತೆ ನನಗೆ ಗ್ರೇಸಿ ಇದ್ದಷ್ಟು ದಿನವೂ ಅನ್ನಿಸಲಿಲ್ಲ. ದಿನವೂ ಸಂಜೆ ಗ್ರೇಸಿಯ ಜೊತೆ ಒಂದು ತಾಸಿನಷ್ಟು ಕುಣಿದು, ಕುಪ್ಪಳಿಸಿ, ಅದರ ಗೋಳು ಹೊಯ್ದುಕೊಳ್ಳದೇ ಇದ್ದರೆ ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದ್ಯಾಕೋ ಗೊತ್ತಿಲ್ಲ, ಗ್ರೇಸಿಗೆ ನನ್ನ ಮೇಲೆ ಬಹಳ ನಂಬಿಕೆಯಿತ್ತು. ಅದಕ್ಕೆ ಗಾಯ ಆದಾಗ, ಅಥವಾ ಇನ್ಯಾವುದೇ ಉಪಚಾರ ಮಾಡಿಸಿಕೊಳ್ಳಬೇಕಾದಾಗ ಮನೆಯ ಯಾರಿಗೂ ಅವಕಾಶ ಕೊಡದಿದ್ದ ಅದು, ಕೇವಲ ನಾನು ಹೋದರೆ ಮಾತ್ರಾ ಸುಮ್ಮನೆ ಕುಳಿತು, ಮಾತು ಕೇಳುತ್ತಿತ್ತು. ಎಷ್ಟೋ ಸಲ ಅದಕ್ಕೆ ಸಿಟ್ಟು ಬಂದಾಗ ಮೆಲ್ಲಗೆ ಕೈಯನ್ನು ಕಚ್ಚುತ್ತಿತ್ತೇ ವಿನಹ ಒಂದು ದಿನವೂ ರಕ್ತ ಬರುವಷ್ಟು, ನೋವಾಗುವಂತೆ ಕಚ್ಚುತ್ತಿರಲಿಲ್ಲ. ಪಂಜರದಿಂದ ಹೊರಗೆ ಬಂದಾಗಲೂ ಕೂಡ ಮನೆ ಸುತ್ತ ತಿರುಗುತ್ತಾ ಇರುತ್ತಿತ್ತೇ ಹೊರತು ಮನೆ ಆಚೆ ಕಾಲಿಡುತ್ತಿರಲ್ಲಿಲ್ಲ.

ಜಾತಿ ನಾಯಿಗಳನ್ನು ಸಾಕುವುದು, ಸಾಮಾನ್ಯ ನಾಯಿಗಳನ್ನು ಸಾಕುವುದಕ್ಕಿಂತ ಸ್ವಲ್ಪ ಕಷ್ಟ. ಅವು ಸ್ವಲ್ಪ ’ಡೆಲಿಕೇಟ್’ ಪ್ರಾಣಿಗಳು. ಆಹಾರದಲ್ಲಿ ಸ್ವಲ್ಪವೇ ಹೆಚ್ಚು ಕಮ್ಮಿಯಾದರೂ ಮಾರನೆಯ ದಿನ ಅವುಗಳ ಆರೋಗ್ಯ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ಆಶ್ಚರ್ಯವೆಂಬಂತೆ ಗ್ರೇಸಿ ಏನು ಕೊಟ್ಟರೂ ತಿಂದುಕೊಂಡು ಗಟ್ಟಿಮುಟ್ಟಾಗಿತ್ತು. ನಾನು ನೋಡಿರೋ ಪ್ರಕಾರ ನಾಯಿಗಳು ಬಾಳೆಹಣ್ಣು, ದ್ರಾಕ್ಷಿ ಹಣ್ಣು ಮುಂತಾದ ಜಾಸ್ತಿ ಸುವಾಸನೆ ಬರದ ತಿಂಡಿಗಳನ್ನು ತಿನ್ನುವುದಿಲ್ಲ (ನನ್ನ ಅನುಭವದ ಪ್ರಕಾರ). ಆದರೆ ಗ್ರೇಸಿ ಮಾತ್ರ ಯಾವುದೇ ಭೇದಭಾವ ತೋರದೆ, ಏನು ಸಿಕ್ಕಿದರೂ ತಿಂದು ಅರಗಿಸಿಕೊಂಡಿತ್ತು. ಮನೆಯ ಹಿಂಭಾಗದಲ್ಲಿರುವ ಗೇರು ಗಿಡಗಳಲ್ಲಿ ಹಣ್ಣು ಬಿಟ್ಟಾಗ, ಮರವನ್ನೇ ಹತ್ತಿ ಹಣ್ಣು ತಿನ್ನುವಷ್ಟು ಧಾರ್ಷ್ಯವನ್ನೂ ತೋರಿಸುತ್ತಿತ್ತು.

ಇಂಜಿನೀಯರಿಂಗ್ ಮಾಡಲು ಬೆಳಗಾವಿಗೆ ಹೋದ ಮೇಲೆ, ನನಗೆ ಗ್ರೇಸಿಯ ಸಹವಾಸ ತಪ್ಪಿಹೋಯಿತು. ಆದ್ರೂ ಸೆಮೆಸ್ಟರ್ ರಜೆಯಲ್ಲಿ ಊರಿಗೆ ಬಂದಾಗ ಸಾಧ್ಯವಾದಷ್ಟು ದಿನ ಅದರ ಜೊತೆ ಆಡಿಕೊಂಡಿರುತ್ತಿದ್ದೆ. ಗ್ರೇಸಿಗೆ ಈಗ ಮೊದಲಿನಷ್ಟು ಲವಲವಿಕೆಯಿಂದ ಒಡಾಡಿಕೊಂಡಿರಲು ಆಗುತ್ತಿರಲಿಲ್ಲ. ಯಾಕೋ ಕೆಲವೊಮ್ಮೆ ಇಡೀ ದಿನ ಮಂಕಾಗಿ ಕುಳಿತುಬಿಡುತ್ತಿತ್ತು.ಆರನೇ ಸೆಮೆಸ್ಟರಲ್ಲಿ ಇದ್ದಾಗ, ಒಂದು ರವಿವಾರ ಮನೆಗೆ ಫೋನ್ ಮಾಡಿದಾಗ ಅಮ್ಮ "ಗ್ರೇಸಿ ಸತ್ತು ಹೋತು ತಮ್ಮಾ" ಅಂದಾಗ ಇಷ್ಟು ಬೇಗ, ಅದರ ಸಾವಿನ ನಿರೀಕ್ಷೆ ಇರದಿದ್ದ ನನಗೆ, ಒಂದು ಸಲ ಶಾಕ್ ಆಯಿತು. ಅಮ್ಮ " ಅದಕೆ ಈ ಮನೆ ಋಣ ಇಷ್ಟೇ ಇತ್ತು ಕಾಣ್ತು ಬಿಡು" ಅಂದು ಸಮಾಧಾನ ಪಡಿಸಲು ಪ್ರಯತ್ನಿಸಿದಳು. ಆ ಇಡೀ ದಿನ, ಮನೆಯ ಸದಸ್ಯನನ್ನೇ ಕಳೆದುಕೊಂಡಂತೆ ಅನ್ನಿಸುತ್ತಿತ್ತು. ಆ ಸಲ ರಜೆಗೆ ಹೋದಾಗ, ಮನೆ ಖಾಲಿ ಖಾಲಿ ಅನ್ನಿಸಿತು. ಮನೆಯ ಮುಂದಿನ ಸಿಮೆಂಟ್ ಕಟ್ಟೆಯ ಪಕ್ಕದಲ್ಲಿ ಇನ್ನೂ ಇಟ್ಟಿದ್ದ ಖಾಲಿ ಕಬ್ಬಿಣದ ಪಂಜರ, ನನ್ನನ್ನು ನೋಡಿ ಅಣಕಿಸಿದಂತಾಯಿತು.

ಅದಾಗಿ ಈಗ ಸುಮಾರು ಆರು ವರ್ಷಗಳು ಉರುಳಿವೆ. ಅಮ್ಮನ ಹತ್ರ ಇನ್ನೊಂದು ನಾಯಿ ಸಾಕಿ ಅಂದಾಗೆಲ್ಲ ಅಮ್ಮ, "ಗ್ರೇಸಿ ಸತ್ತ ಮೇಲೆ ಮತ್ತ್ಯಾವುದೇ ನಾಯಿ ಸಾಕವು ಹೇಳೇ ಅನ್ನಿಸ್ತಿಲ್ಲೆ" ಅಂದು ನನ್ನ ಸಲಹೆಯನ್ನು ಸಾರಾಸಗಟವಾಗಿ ತಳ್ಳಿಹಾಕಿಬಿಡುತ್ತಾಳೆ. ಈಗಲೂ ಯಾವುದಾದರೂ ವೆಬ್ ಸೈಟ್ ಗಳಿಗೆ ರೆಜಿಸ್ಟರ್ ಮಾಡಿಸಿಕೊಳ್ಳುವಾಗ, ಅದು "ನಿಮ್ಮ ಫೇವರಿಟ್ ಪೆಟ್ ನ ಹೆಸರೇನು" ಎಂದು ಸೀಕ್ರೆಟ್ ಪ್ರಶ್ನೆ ಕೇಳುವಾಗ, ಗ್ರೇಸಿಯ ನೆನಪು ಬಂದು, ಅದರ ಜೊತೆ ಕಳೆದಿದ್ದ ಆ ಅಮೂಲ್ಯವಾದ ಕ್ಷಣಗಳು ಕಣ್ಣ ಮುಂದೆ ಹಾದುಹೋಗುತ್ತವೆ.

Saturday, January 26, 2008

ಅಂತರ್ಜಾತೀ ವಿವಾಹ.........

ಅಜ್ಜಿಯ ಕೈಯಲ್ಲಿದ್ದ ಜಪಸರದ ಮಣಿಗಳು ಇವತ್ತ್ಯಾಕೋ ವೇಗವಾಗಿ ತಿರುಗುತ್ತಿದ್ದವು. ಅದರರ್ಥ ಒಂದೇ ಅಜ್ಜಿಗೆ ತುಂಬ ಬೇಜಾರಾಗಿದೆ, ಅಥವಾ ಯಾವುದೋ ವಿಷಯದ ಬಗ್ಗೆ ಅಜ್ಜಿ ಗಹನವಾಗಿ ಯೋಚಿಸುತ್ತಿದ್ದಾರೆ ಅಂತಲೇ .ಅಮ್ಮ ಟೆಲಿಫೋನ್ ನ ರಿಸೀವರ್ ಅನ್ನು ಕುಕ್ಕಿ "ಅದ್ಯಾರೋ ಅಮೆರಿಕನ್ ಹುಡುಗಿಯಂತೆ, ವಿವೇಕನ ಆಫೀಸಲ್ಲೇ ಕೆಲ್ಸ ಮಾಡೋದಂತೆ, ಇಲ್ಲಿ ಬಂದು ನಮ್ಮ ಜೊತೆ ಒಂದು ವಾರ ನಮ್ಮ ಜೊತೆಯಲ್ಲಿ ಇರ್ತಾಳಂತೆ" ಅಂದಳು. ಅಮ್ಮನ ಮಾತುಗಳಲ್ಲಿ ಯಾಕೋ ತುಂಬಾ ಕಳವಳವಿತ್ತು. ನಾನೊಮ್ಮೆ ಅಪ್ಪನ ಮುಖ ನೋಡಿದೆ. ಅಪ್ಪ ಅಷ್ಟೊಂದೇನೂ ಗಾಬರಿ ಪಟ್ಟ ಹಾಗೆ ಕಾಣಲಿಲ್ಲ. ಬಹುಷಃ ಅಪ್ಪನಿಗೆ ಮುಂದೆ ಇನ್ನೂ ಕೆಟ್ಟದ್ದು ಸಂಭವಿಸಲಿದೆ ಅನ್ನಿಸ್ತೆನೋ.

ಈಗೊಂದು ಆರು ತಿಂಗಳಿಂದ ಅಪ್ಪ ಅಣ್ಣನಿಗೆ ಹೆಣ್ಣು ಹುಡುಕ್ತಾ ಇದ್ದರು. ಬಂದ ಬಹಳಷ್ಟು ಸಂಬಂಧಗಳನ್ನು ಅಣ್ಣ ಭಾರತಕ್ಕೆ ಬರಲು ಆಗುವುದಿಲ್ಲ ಅಂತಾನೋ, ರಜೆ ಸಿಗುವುದಿಲ್ಲ ಅಂತಾನೋ ನಾನಾ ಸಬೂಬುಗಳನ್ನು ಹೇಳಿ ತಿರಸ್ಕರಿಸುತ್ತಿದ್ದಾನೇ ಇದ್ದ. ಸಮಯ ಕಳೆದಂತೆ ಅಪ್ಪನ ಹಣೆಯ ಮೇಲಿನ ನೆರಿಗೆಗಳು ಜಾಸ್ತಿಯಾದವೇ ಹೊರತು ಅಪ್ಪ ಮಾಡಿದ ಯಾವುದೇ ಪ್ರಯತ್ನ ಫಲಕಾರಿಯಾಗುವ ಲಕ್ಷಣ ಕಾಣುತ್ತಿರಲಿಲ್ಲ. ಈಗ ನೋಡಿದರೆ ಇನ್ನೊಂದು ಬಾಂಬ್ ಸಿಡಿಸಿದ್ದಾನೆ. ನಾನು ಒಂದು ಮೂಲೆಯಲ್ಲಿ ಕುಳಿತು ಬದಲಾಗುತ್ತಿದ್ದ ಎಲ್ಲರ ಮುಖ ಲಕ್ಷಣಗಳನ್ನು ನೋಡುತ್ತಾ ಇದ್ದೆ. ಮುಂದಿನ ತಿಂಗಳೇ ನನ್ನ ಸೆಮೆಸ್ಟರ್ ಪರೀಕ್ಷೆ ಬೇರೆ. ಮನೆಯಲ್ಲಿ ನೋಡಿದರೆ ಯಾಕೋ ರಾಮಾಯಣ ನಡೆಯೋ ಹಾಗೆ ಕಾಣಿಸ್ತಿದೆ ಅಂತ ಅನ್ನಿಸಿ ಅಣ್ಣನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂತು.

ವಾರದ ನಂತರ ನಾನು, ಅಪ್ಪ, ಏರ್ ಪೋರ್ಟ್ ನ ಜಗಲಿಯಲ್ಲಿ "ಬಾರ್ಬರಾ" ಎಂದು ಬರೆದಿದ್ದ ಬೋರ್ಡ್ ಹಿಡಿದುಕೊಂಡು ಅಮೇರಿಕದಿಂದ ಬರಬಹುದಾದ ಅಣ್ಣನ ಗೆಳತಿಗಾಗಿ ಕಾಯ್ದುಕೊಂಡಿದ್ದೆವು. ಅಪ್ಪ ಅಲ್ಲಿ ಓಡಾಡುತ್ತಿದ್ದ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡುತ್ತಿರಲಿಲ್ಲ. ಸುಮಾರು ೧೧ ಗಂಟೆಯ ಹೊತ್ತಿಗೆ ಸ್ವಲ್ಪ ಧಡೂತಿ ದೇಹದ ಮಧ್ಯ ವಯಸ್ಸಿನ ಹೆಂಗಸೊಬ್ಬಳು ನಮ್ಮನ್ನು ನೋಡಿದ ಕೂಡಲೇ, ಎರಡೂ ಕೈಯನ್ನೂ ಮೇಲೆತ್ತಿ ಆಡಿಸಿದವಳೇ " ಹಾಯ್! ಮಿ.ಭಟ್, ಹೌವ್ ಆರ್ ಯೂ " ಅಂತ ಕೂಗಿಕೊಂಡಳು. ಅಲ್ಲಿದ್ದ ಎಲ್ಲರೂ ನಮ್ಮನ್ನೇ ನೋಡುತ್ತಿದ್ದರು. ಅಪ್ಪ ಸ್ತಂಭೀಭೂತರಾದ ಹಾಗೆ ಕಾಣಿಸಿತು ನನಗೆ. ದಾಪುಗಾಲನ್ನು ಇಡುತ್ತಾ ಬಂದವಳೇ ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಟ್ಟಳು. ಅವಳ ಹಿಡಿತದಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅಪ್ಪನನ್ನು ನೋಡಿ ನನಗೆ ನಗು ತಡೆದುಕೊಳ್ಳಲು ಕಷ್ಟವಾಯಿತು. ಅಪ್ಪ ಒಳಗೊಳಗೇ "ರಾಮ ರಾಮ" ಅಂದುಕೊಂಡಿದ್ದು ನನಗೆ ಅಸ್ಪಷ್ಟವಾಗಿ ಕೇಳಿಸಿತು. ಪಕ್ಕದಲ್ಲಿದ್ದ ನನ್ನನ್ನು ನೋಡಿ "ಯೂ ಮಸ್ಟ್ ಬಿ ರಜನಿ ?" ಅಂದಳು ಬಾರ್ಬರಾ. ನಾನು ಉಕ್ಕಿ ಬರುತ್ತಿದ್ದ ನಗೆಯನ್ನು ತಡೆದುಕೊಂಡು " ಯಸ್, ರಜನಿ" ಅಂದು ಅವಳ ಕೈ ಕುಲುಕಿದೆ.

ಮದ್ಧ್ಯಾಹ್ನದ ಊಟಕ್ಕೆ ಅಮ್ಮ ಸ್ಪೆಶಲ್ಲಾಗಿ ಪಾಯಸ ಮಾಡಿದ್ದಳು. ಬಾರ್ಬರಾ ಮೊದಲು ಉಟ್ಟುಕೊಂಡಿದ್ದಕ್ಕಿಂತಲೂ ಚಿಕ್ಕದಾದ ಸ್ಕರ್ಟ ತೊಟ್ಟುಕೊಂಡಿದ್ದಳು. ಅಪ್ಪ ಅವಳ ಕಡೆ ನೋಡುವ ಯಾವುದೇ ಪ್ರಯತ್ನ ಮಾಡುತ್ತಿರಲಿಲ್ಲ. ಬಡಿಸುತ್ತಿದ್ದ ಅಮ್ಮನನ್ನು ಮಾತ್ರ, ಅವಳು ಮತ್ತು ಅಣ್ಣ ಸೇರಿ ಅಪ್ಪನಿಗೆ ಚಿತ್ರಹಿಂಸೆ ಕೊಡುತ್ತಾ ಇದ್ದಾರೆನೋ ಅನ್ನೋ ತರಹ ದುರುಗುಟ್ಟಿಕೊಂಡು ನೋಡುತ್ತಿದ್ದರು. ಬಾರ್ಬರಾ ಮಾತ್ರ ಅಮಾಯಕವಾಗಿ " ಯು ಹ್ಯಾವ್ ಒನ್ಲಿ ವೆಜಿಟೇರಿಯನ್ ಫುಡ್ ? ಆಲ್ವೇಸ್ ?" ಅಂತ ಕೇಳುತ್ತಿದ್ದಳು. " ಐ ಅಲವೇಸ್ ಲೈಕ್ ಚಿಕನ್ ವಿತ್ ಇಂಡಿಯನ್ ಫುಡ್" ಅಂತಾನೂ ಸೇರಿಸಿದಳು.ಅಪ್ಪ ಕುಳಿತಲ್ಲೆಯೇ ಚಡಪಡಿಸುತ್ತಿರುವುದು ಅವಳ ಲಕ್ಷಕ್ಕೆ ಬಂದ ಹಾಗೆ ಕಾಣಲಿಲ್ಲ. ಅಮ್ಮ ಗಂಟಲಿಗೆ ಏನೋ ಸಿಕ್ಕಿಕೊಂಡಂತೆ ಕೆಮ್ಮಿದರು.

ಊಟ ಆದ ತಕ್ಷಣ ಬಾರ್ಬರಾ ತನ್ನ ಲ್ಯಾಪ್ ಟಾಪ್ ತೆಗೆದು "ವಾಂಟ್ ಟು ಸೀ ವಿವೇಕ್’ಸ್ ಫೋಟೋಸ್ ?"ಅಂತ ನನ್ನ ಕರೆದಳು. ಅಪ್ಪ ಅಮ್ಮನೂ ಕುತೂಹಲದಿಂದ ಸೇರಿಕೊಂಡರು. ಮೊದಲನೆಯ ಫೋಟೋದಲ್ಲಿ ,ಅಣ್ಣ ಒಬ್ಬನೇ ಬೀಚಲ್ಲಿ ಚಡ್ಡಿ ಹಾಕಿಕೊಂಡು ನಿಂತಿದ್ದ. ಎರಡನೇ ಫೋಟೋದಲ್ಲಿ ಬಾರ್ಬರಾ ಬಿಕಿನಿ ತೊಟ್ಟು ಅಣ್ಣನ ಅರೆಬೆತ್ತಲೆ ದೇಹದ ತುಂಬಾ ಹರಡಿಕೊಂಡಿದ್ದಳು. ಅಪ್ಪ ಫೋಟೋ ನೋಡಿದವರೇ ಎದ್ದು ನಿಂತು, ಹೆಗಲ ಮೇಲಿದ್ದ ಟವೆಲನ್ನು ಕೊಡವಿ, ಮುಂದಿನ ಬಾಗಿಲಿನಿಂದ ಹೊರಗೆ ನಡೆದರು. ಅಪ್ಪನ ನಡುವಳಿಕೆಯ ಚೆನ್ನಾಗಿ ಅರಿವಿದ್ದ ನಮಗೆ, ಅವರಿಗೆ ತುಂಬಾ ಸಿಟ್ಟು ಬಂದಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗಲಿಲ್ಲ. ಅದನ್ನು ನೋಡಿದ ಬಾರ್ಬರಾ " ಇಟ್ ಮಸ್ಟ್ ಬಿ ವೆರಿ ಹಾರ್ಡ್ ಫಾರ್ ಮಿ. ಭಟ್, ಹಿ ಮಸ್ಟ್ ಬಿ ಮಿಸ್ಸಿಂಗ್ ಹಿಸ್ ಸನ್" ಅಂದಳು. ಪಾಪ ಅವಳಿಗೇನು ಗೊತ್ತು, ಮಗ ಎದುರು ಇದ್ದಿದ್ದರೆ ಅಪ್ಪ ಈಗ ಅವನ ಕುತ್ತಿಗೆ ಹಿಚುಕಲೂ ಹಿಂಜರಿಯುತ್ತಿರಲಿಲ್ಲ ಎನ್ನುವುದು?

ಎರಡು ದಿನ ಕಳೆಯುತ್ತಿದ್ದಂತೆಯೇ ಮನೆಯ ಹಿರಿಯಂದಿರು ಒಂದು ಅಲಿಖಿತ ನಿರ್ಧಾರಕ್ಕೆ ಬಂದ ಹಾಗೆ ಕಂಡುಬಂದರು. ವಿವೇಕ್ ಮನೆಗೆ ಬಂದಾಗ ಅವನನ್ನು ತರಾಟೆಗೆ ತೆಗೆದುಕೊಳ್ಳುವುದು, ಈಗ ಎಷ್ಟೆಂದರೂ ಬಾರ್ಬರಾ ಮನೆಯ ಅತಿಥಿ. ಪರದೇಶದವಳು ಬೇರೆ. ಅವಳ ಆತಿಥ್ಯದಲ್ಲಿ ಮಾತ್ರಾ ಯಾವುದೇ ಕುಂದು ಬರಬಾರದು ಅಂತ ನಿರ್ಧರಿಸಿದ್ದರು. ಇವೆಲ್ಲದರ ಮಧ್ಯ ಅಣ್ಣ ಫೋನ್ ಗೂ ಇ-ಮೈಲ್ ಗೂ ಸಿಗ್ತಿರಲಿಲ್ಲ. ಓಂದು ವಾರ ಅವನು ಕೆನಡಾಕ್ಕೆ ಕಾನ್ಪರೆನ್ಸಗೆ ಹೋಗುತ್ತಿರುವುದರಿಂದ ಸಂಪರ್ಕಕ್ಕೆ ಸಿಗುವುದಿಲ್ಲ ಅಂತ ಮುಂಚೆನೇ ಹೇಳಿಬಿಟ್ಟಿದ್ದ.

ದಿನಾಲೂ ರಾತ್ರಿ ಬಾರ್ಬರಾ ಮಾತ್ರ ಯಾರೋ ಎರಡು "ಸ್ಟೀವ್" ಮತ್ತು "ಕೀಥ್" ಅನ್ನೋ ಗಂಡಸರ ಜೊತೆ ಬಹಳ ಹೊತ್ತು ಮಾತಾಡುತ್ತಿದ್ದಳು. ನಾವೆಲ್ಲಾ ಅವಳ ಸಂಭಾಷಣೆಯನ್ನು ಕಿವಿಯ ಮೇಲೆ ಬೀಳಿಸಿಕೊಳ್ಳದೇ ಇರಲು ಪ್ರಯತ್ನಿಸಿದರೂ ಆಗಾಗ " ಲವ್ ಯು" " ಮಿಸ್ ಯು ಟೂ ಮಚ್" ಅನ್ನೋ ಪದಗುಚ್ಚಗಳು ಕೇಳಿಸುತ್ತಿದ್ದವು. ನಮ್ಮ ಜೊತೆಯಲ್ಲಿ ಮಾತಾಡುವಾಗ ಅವಳು ಮತ್ತು ವಿವೇಕ್ ಜೊತೆಯಾಗಿ ನೋಡಿದ ಸ್ಥಳಗಳ ಬಗ್ಗೆ ಪದೇ ಪದೇ ಹೇಳುತ್ತಿದ್ದಳು. ಅವಳು ಸುಳ್ಳು ಹೇಳುತ್ತಿದ್ದಾಳೆ ಅಂತಲೂ ನಮಗೆ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ಅದನೆಲ್ಲ ಸಾಬೀತು ಪಡಿಸಲು ಅವಳ ಹತ್ತಿರ ಫೋಟೊ ಗಳು ಬೇರೆ ಇರುತ್ತಿದ್ದವು. ನನಗಂತೂ ಅಣ್ಣ ಮತ್ತು ಇವಳ ಮಧ್ಯ ಏನು ನಡೀತಿದೆ ಅಂತಾನೇ ತಿಳೀತಿರಲಿಲ್ಲ.

ನಮ್ಮ ಕುಟುಂಬದಲ್ಲಿ ಇದೇನೂ ಹೊಸತಾಗಿ ನಡೆಯುತ್ತಿರುವ ನಾಟಕವಲ್ಲ. ಎರಡು ವರುಷದ ಹಿಂದೆ ನನ್ನ ಅತ್ತೆಯ ಮಗ ಒಂದು ತೆಲುಗು ಕ್ರಿಶ್ಚಿಯನ್ ಹುಡುಗಿಯ ಜೊತೆ ಓಡಿಹೊಗಿ ರಾದ್ಧಾಂತ ಸೃಷ್ಟಿಮಾಡಿದ್ದ. ಅತ್ತೆ ಅಳುತ್ತಾ ಅಳುತ್ತಾ ನಮ್ಮ ಮನೆ ಸೋಫ಼ಾದ ಮೇಲೆ ಕುಳಿತಿದ್ದು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆವಾಗ ಅಪ್ಪ ಮಾತ್ರ "ನನ್ನ ಮಗನೇನಾದ್ರೂ ಈ ತರ ಮಾಡಿದರೆ, ಇನ್ನೊಂದು ಸಲ ಮನೆ ಕಡೆ ಸುಳಿಯಲು ಬಿಡುತ್ತಿರಲಿಲ್ಲ ಅವನನ್ನ" ಅಂಥ ಹೇಳಿ ಅತ್ತೆಯ ದುಃಖ ಹೆಚ್ಚು ಮಾಡಿದ್ದರು. ಅತ್ತೆ ಸಿಟ್ಟು ಮಾಡಿಕೊಂಡು "ನಿನ್ನ ಮಗ ಹೀಗೆ ಮಾಡಿಕೊಂಡರೆ ಗೊತ್ತಾಗುತ್ತೆ ನಿನಗೆ, ಹೆತ್ತವರ ಸಂಕಟ ಏನು ಅನ್ನುವುದು " ಎಂದು ಹೇಳಿ ಹೋಗಿದ್ದರು. ಅತ್ತೆಗೇನಾದರೂ ಬಾರ್ಬರಳ ವಿಷಯ ಗೊತ್ತಾದರೆ ಅವಳು ಕೊಡ ತುಂಬಾ ಹಾಲು ಕುಡಿದಷ್ಟು ಸಂತೋಷ ಪಡುವುದರಲ್ಲಿ ಅನುಮಾನವೇ ಇಲ್ಲ.

ಐದನೇ ದಿನ ಬೆಳಿಗ್ಗೆ ಏಳುತ್ತಿದಂತೆಯೇ ಬಾತ್ ರೂಮಿನಲ್ಲಿ ಬಾರ್ಬರಾ ವಾಂತಿ ಮಾಡುತ್ತಿರುವ ಶಬ್ದ ಕೇಳಿಬಂತು. ಅಮ್ಮ ಮತ್ತು ಅಜ್ಜಿ ಒಬ್ಬರನೊಬ್ಬರ ಮುಖ ನೋಡಿಕೊಂಡರು. ಬಾರ್ಬರಾ ಹೊರಗೆ ಬಂದವಳೇ ತಲೆಸುತ್ತುತ್ತಿದೆ ಎಂದು ನೆಲದ ಮೇಲೆಯೇ ಕುಳಿತುಕೊಂಡಳು. ಹತ್ತಿರ ಹೋದ ನನಗೆ "ಡೋಂಟ್ ನೊ ವೈ, ಐ ಫ಼ೀಲ್ ಗಿಡ್ಡಿನೆಸ್ ಇನ್ ಮಾರ್ನಿಂಗ್ಸ್ ದೀಸ್ ಡೇಸ್" ಅಂದಳು. ಒಂದಿಷ್ಟು ಕನ್ನಡ ಸಿನೆಮಾಗಳನ್ನು ನೋಡಿದ್ರೆ ಬಹುಷಃ ಅವಳಿಗೆ ಯಾಕೆ ಹೀಗಾಗ್ತಿದೆ ಅನ್ನೋದು ಗೊತ್ತಾಗಿರೋದು. ಅವಳನ್ನು ನೋಡಿ ಒಂದು ಸಲ ಪಾಪ ಅನ್ನಿಸ್ತು ನನಗೆ. ಅಮ್ಮನ ಮುಖ ಯಾಕೋ ಕಪ್ಪಿಟ್ಟಿತ್ತು. ದಿನವೆಲ್ಲಾ ಎನೇನೊ ಗೊಣಗುತ್ತಾ ಇದ್ದಳು. ವಾರದ ನಂತರ ಅಣ್ಣ ಫೋನಲ್ಲಿ ಸಿಕ್ಕರೆ ಅಮ್ಮನ ಹತ್ತಿರ ಚೆನ್ನಾಗಿ ಉಗಿಸಿಕೊಳ್ಳುವುದು ಖಂಡಿತ ಎನ್ನಿಸಿತು.

ಆದರೆ ಆ ಅವಕಾಶ ಅಮ್ಮನಿಗೆ ಸಧ್ಯಕ್ಕೆ ಸಿಗುವ ಲಕ್ಷಣ ಕಾಣಲಿಲ್ಲ. ಅಣ್ಣ, ಬಾರ್ಬರಾ ವಾಪಸ್ ಹೋಗುವ ದಿನ ಇ-ಮೈಲ್ ಮಾಡಿ, ಇನ್ನೂ ಒಂದು ವಾರ ಕೆನಡಾದಲ್ಲೇ ಇರುವುದರಿಂದ ಸಧ್ಯಕ್ಕೆ ಫೋನ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದ. ಮೈಲ್ ನ ತುದಿಯಲ್ಲಿ ಮಾತ್ರ " ಹಾಂ, ಹೇಳೊಕೆ ಮರೆತಿದ್ದೆ. ನನ್ನ ಇನ್ನೊಬ್ಬಳು ಫ಼್ರೆಂಡ್, ಸಮೀರಾ ಶೇಕ್ ಅಂತ ಹೈದರಾಬಾದಿಂದ ಬರ್ತಿದ್ದಾಳೆ. ಅವಳಿಗೆ ೪ ದಿನ ಉಳಿಯೋದಿಕ್ಕೆ ಜಾಗ ಬೇಕು. ದಯವಿಟ್ಟು ನಾಳೆ ಬೆಳಿಗ್ಗೆ ೧೦ ಗಂಟೆಗೆ ಏರ್ ಪೋರ್ಟ್ ಗೆ ಹೋಗಿ ಅವಳನ್ನು ಕರೆದುಕೊಂಡು ಬನ್ನಿ" ಅಂತಾಲೂ ಸೇರಿಸಿದ್ದ. ಅಪ್ಪ ಧುಮುಗುಡುತ್ತಿದ್ದರು. "ಅವನು ಇದನ್ನೇನು ಛತ್ರ ಅನ್ಕೊಂಡಿದ್ದಾನಾ ? ಯಾರ್ಯಾರೋ ಬಂದು ಉಳಿದುಕೊಳ್ಳೋದಿಕ್ಕೆ" ಅಂತ ಹಾರಾಡಿದರು. ಅಮ್ಮ ಹೇಗೊ ಅವರನ್ನು ಸಮಾಧಾನ ಪಡಿಸಿದರು.

ಮತ್ತೆ ಮಾರನೆ ದಿನ ಬೆಳಿಗ್ಗೆ ನಾನು, ಅಪ್ಪ "ಸಮೀರಾ" ಅನ್ನೋ ಬೋರ್ಡ್ ಹಿಡಿದುಕೊಂಡು ಏರ್ ಪೋರ್ಟಲ್ಲಿ ಹಾಜರ್. ಸಮಯಕ್ಕೆ ಸರಿಯಾಗಿ, ತೆಳ್ಳಗೆ, ಬೆಳ್ಳಗೆ, ಸಲ್ವಾರ್ ಕಮೀಜ಼್ ಧರಿಸಿದ ಸುಮಾರು ೨೫ ವರ್ಷದ ಹುಡುಗಿ ನಮ್ಮ ಬಳಿಗೆ ನಿಧಾನವಾಗಿ ನಡೆದುಕೊಂಡು ಬಂದಳು. ಅವಳ ಮುಖದಲ್ಲಿ ಸಣ್ಣ ಕಿರುನಗೆ. ಅಪ್ಪನಿಗೆ ಕಣ್ಣಲ್ಲೆ ನಮಸ್ಕಾರ ಹೇಳಿದ ಬಳಿಕ ನನ್ನ ಕೈ ಹಿಡಿದು "ಹಲೋ ರಜನಿ, ನಿನ್ನ ಬಗ್ಗೆ ಬಹಳ ಕೇಳಿದ್ದೇನೆ" ಅಂದಳು. ನನಗ್ಯಾಕೋ ಮೊದಲ ನೋಟದಲ್ಲೇ ಅವಳು ಬಹಳ ಇಷ್ಟವಾಗಿ ಬಿಟ್ಟಳು. ಮನೆಗೆ ಬರುತ್ತಾ ದಾರಿಯಲ್ಲಿ ಅಪ್ಪನೂ ಕೂಡ ಅವಳ ಜೊತೆ ಮನ ಬಿಚ್ಚಿ ಮಾತಾಡಿದರು. ಅವಳು ಮೂಲ ಬಳ್ಳಾರಿಯವಳೆಂದೂ, ಒಹಿಯೊ ಯುನಿವರ್ಸಿಟಿ ಯಲ್ಲಿ ಅಣ್ಣನ ಕ್ಲಾಸ್ ಮೇಟ್ ಎಂದೂ, ಈಗ ಹೈದರಾಬಾದಲ್ಲಿ "ಚೈಲ್ಡ್ ಸೈಕೊಲೊಜಿಸ್ಟ್" ಆಗಿದ್ದಾಳೆ ಅಂತ ಗೊತ್ತಾಯಿತು.

ಹ್ಯೂಮನ್ ಸೈಕೊಲಾಜಿಯಲ್ಲೂ ಅವಳು ಪರಿಣಿತೆ ಅನ್ನುವುದು ನನಗೆ ಅವಳು ತಂದು ಕೊಟ್ಟ ಉಡುಗೊರೆಗಳನ್ನು ನೋಡಿದಾಗ ಮನದಟ್ಟಾಯಿತು. ಅಜ್ಜಿಗೊಂದು ಕಾಶ್ಮೀರಿ ಶಾಲು, ಅಪ್ಪನಿಗೊಂದು ಬಿಳಿ ಜುಬ್ಬಾ, ಅಮ್ಮನಿಗೊಂದು ಸೀರೆ ಮತ್ತು ನನಗೊಂದು ಹೈದರಾಬಾದೀ ಮುತ್ತಿನ ಸರವನ್ನು ತಂದಿದ್ದಳು. ಬೆಂಗಳೂರು ಯುನಿವರ್ಸಿಟಿ ಯಲ್ಲಿ ಪ್ರೊಫ಼ೆಸರ್ ಒಬ್ಬರನ್ನು ಭೇಟಿ ಮಾಡುವುದಿದೆ. ಮೂರು-ನಾಲ್ಕು ದಿನ ಅಷ್ಟೇ. ನಿಮ್ಮಿಂದ ತುಂಬಾ ಉಪಕಾರವಾಯಿತು ಎಂದು ಅಪ್ಪನಿಗೆ ಹೇಳುತ್ತಿದ್ದಳು. ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಿದ್ದ ಅವಳು ನಿಂತ ನೀರಾಗಿದ್ದ ನಮ್ಮೆಲ್ಲರ ಮನಸ್ಸುಗಳಲ್ಲಿ ಹೊಸ ಹುರುಪನ್ನು ತುಂಬಿದ್ದಳು. ಶಾಂತ ಸರೋವರದಂತಿದ್ದ ಅವಳ ಕಣ್ಣುಗಳು ಮನೆಯಲ್ಲಿ ಮಿಂಚಿನ ಸಂಚಾರವನ್ನು ಉಂಟು ಮಾಡಿದ್ದವು. ಅಪರೂಪಕ್ಕೆ ಅಜ್ಜಿ ಕೂಡ ನಗು ನಗುತ್ತ ಮಾತಾಡುತ್ತಿದ್ದರು.

ಮದ್ಧ್ಯಾಹ್ನ ಊಟಕ್ಕೆ ಕುಳಿತಾಗ ಸಮೀರಾ, ಅಮ್ಮನ ಹತ್ತಿರ ಹಲಸಿನಕಾಯಿಯ ಪಲ್ಯ ಮಾಡುವುದು ಹೇಗೆಂದು ಕೇಳುತ್ತಿದ್ದಳು. "ಎರಡು ದಿನಾ ಇಲ್ಲಿರು, ನಾನೇ ನಿನಗೆ ಹೇಳಿಕೊಡ್ತೀನಿ" ಅಂತ ಅಮ್ಮ ಹೇಳುತ್ತಿದ್ದರು. ನಮಗೆಲ್ಲಾ ಮಡಿ, ಮೈಲಿಗೆ ಅಂತಾ ಬೈಯ್ತಾ ಇರೋ ಅಜ್ಜಿ ಕೂಡ ಒಬ್ಬ ಮುಸ್ಲಿಮ್ ಹುಡುಗಿ ಅಡುಗೆ ಮನೆ ಪ್ರವೇಶ ಮಾಡುವುದರ ಬಗ್ಗೆ ಚಕಾರವೆತ್ತದಿರುವ ಬಗ್ಗೆ ನನಗೆ ಆಶ್ಚರ್ಯವಾಯಿತು.

ಎರಡು ದಿನ ಸಮೀರಾ ದೇವರ ಮನೆಯ ಬದಿಗೆ ಪ್ರಜ್ನಾಪೂರ್ವಕವಾಗಿ ಸುಳಿದಿರಲಿಲ್ಲ. ಮೂರನೆಯ ದಿನ ಅಪ್ಪನೇ ಸಮೀರಾಳನ್ನು ಕರೆದು ಯಾವ ಮೂರ್ತಿಗಳು ಅವನ ಮುತ್ತಾತನ ಕಾಲದಿಂದ ಬಳುವಳಿ ಬಂದವು ಅಂತ ತೋರಿಸುತ್ತಾ ಇದ್ದ. "ದೇವನೊಬ್ಬ ನಾಮ ಹಲವು" ಅಂತ ಹೇಳುವುದು ಕೇಳಿತು ನನಗೆ. ಸಮೀರಾ ಹೌದೆಂದು ತಲೆ ಆಡಿಸುತ್ತಿದ್ದಳು.

೫ ದಿನ ಆಗುವಷ್ಟರಲ್ಲಿ ಎಲ್ಲರ ಮನಸ್ಸಿನಲ್ಲೂ ಒಂದೇ ಭಾವ. ಮಗ, ತಾನೇ ಮೆಚ್ಚಿದ ಹುಡುಗಿಯನ್ನು ಮದುವೆ ಆಗುವುದಾದರೆ ಸಮೀರಾನ್ನೆ ಯಾಕೆ ಆಗಬಾರದು ? ಎಂದು. ಆರನೇ ದಿನ ಆಶ್ಚರ್ಯವೆಂಬಂತೆ ಅಣ್ಣನ ಫೋನ್ ಬಂತು. ಕೆನಡಾದಿಂದ ಸೀದಾ ಬಂದಿರುವುದಾಗಿಯೂ, ಏರ್ ಪೋರ್ಟ್ ನಿಂದ ಟ್ಯಾಕ್ಸಿ ಮಾಡಿಸಿಕೊಂಡು ಇನ್ನೊಂದು ತಾಸಿನೊಳಗೆ ಮನೆಯಲ್ಲಿರುವುದಾಗಿ ಹೇಳಿದ್ದ. ಆಗ ತಾನೆ ಸಮೀರಾ ಯುನಿವರ್ಸಿಟಿಗೆ ಹೋಗಿದ್ದಳು. ನಾವು ಅಣ್ಣನಿಗೋಸ್ಕರ ಉತ್ಸುಕತೆಯಿಂದ ಕಾಯುತ್ತಿದ್ದೆವು. ಸುಮಾರು ೧೧ ಗಂಟೆಯ ಹೊತ್ತಿಗೆ ಬಂದ ಅಣ್ಣ, ಕೈ ಕಾಲು ತೊಳೆದುಕೊಂಡು ಬಂದ ಕೂಡಲೇ ಅಮ್ಮನ ಕೇಳಿದ ಮೊದಲನೆ ಪ್ರಶ್ನೆನೇ " ಬಾರ್ಬರಾ ಬಗ್ಗೆ ನಿಂಗೇನನ್ನಿಸ್ತು ಅಮ್ಮಾ ? " ಅಂತ. ಬಿಟ್ಟ ಬಾಣದ ಹಾಗೆ ಅಮ್ಮನಿಂದ ಮರುಪ್ರಶ್ನೆ " ಅವಳು ನಿನಗೆ ಹ್ಯಾಗೆ ಗೊತ್ತು?". ಅಣ್ಣ, "ಅವಳು ನನ್ನ ಸೆಕ್ರೆಟರಿ, ತುಂಬಾ ಚೆನ್ನಾಗಿ ಕೆಲಸ ಮಾಡ್ತಾಳೆ, ನನಗೆ ಸಹಾಯ ಆಗುತ್ತೆ ಅಂದರೆ ಏನು ಬೇಕಾದರೂ ಮಾಡ್ತಾಳೆ ಪಾಪ" ಅಂತ ಹೇಳಿ, ನನ್ನ ಕಡೆ ತಿರುಗಿ ಕಣ್ಣು ಹೊಡೆದ.

ನನಗೆ ಈಗ ಅಣ್ಣನ ಉಪಾಯ ಸಂಪೂರ್ಣವಾಗಿ ಅರ್ಥವಾಯಿತು. ಇಲ್ಲಿಯ ತನಕ ನಡೆದಿದ್ದೆಲ್ಲವೂ ಕಣ್ಣ ಮುಂದೆ ಬಂದು ಅಣ್ಣನ ಬುದ್ಧಿವಂತಿಕೆಯ ಬಗ್ಗೆ ಅಬ್ಬಾ ಎನಿಸಿತು. ಅಣ್ಣನ ಮಾಸ್ಟರ್ ಪ್ಲಾನ್ ಗೆ ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಬೇಸ್ತು ಬಿದ್ದಿದ್ದರು.

ಸಮೀರಾ ವಾಪಸ್ ಯುನಿವರ್ಸಿಟಿಯಿಂದ ಬರುವಷ್ಟರಲ್ಲಿ ಅಪ್ಪ ಅಮ್ಮ, ಅಣ್ಣನ ಜೊತೆ ಎಲ್ಲ ಮಾತನಾಡಿ ಮುಗಿಸಿಬಿಟ್ಟಿದ್ದರು. ಅಪ್ಪ ಸಮೀರಾಳಿಗೆ "ನೀನೇನೂ ಹೆದರಬೇಡಮ್ಮಾ, ನಾನು ನಿನ್ನ ಅಪ್ಪ ಅಮ್ಮನ ಜೊತೆ ಮಾತಾಡ್ತೀನಿ" ಅಂತ ಹೇಳುವುದು ಕೇಳಿಸಿತು.

ಮದುವೆಯು ಹಿಂದಿನ ದಿನ ಬಾರ್ಬರಾಳಿಂದ ದೊಡ್ಡದೊಂದು ಹೂ ಬೊಕ್ಕೆ ಉಡುಗೊರೆಯಾಗಿ ಬಂತು. ಅದರ ಜೊತೆ ಸಣ್ಣದೊಂದು ಚೀಟಿ. ಅದರಲ್ಲಿ
Flight to India ---- $1500
Indian Kurta ------ $5
"Emetic" to induce vomiting ---- $1
The look on your parent's faces ---- Priceless. ಅಂತ ಬರೆದಿತ್ತು.


(2-3 ವರ್ಷಗಳ ಹಿಂದೆ ಯಾರೋ ಫಾರ್‌ವರ್ಡ್ ಮಾಡಿದ್ದ ಈ-ಮೈಲ್ ನ "ಥೀಮ್" ನ್ನು ಬಳಸಿ, ಅಲ್ಲಲ್ಲಿ ವಿಸ್ತರಿಸಿ, ಮೂಲ ಆಂಗ್ಲ ಭಾಷೆಯಲ್ಲಿದ್ದದ್ದನ್ನು ಕನ್ನಡಕ್ಕೆ ಇಳಿಸಿದ್ದೇನೆ. ಮೇಲ್ ಕಳಿಸಿದ ಅನಾಮಧೇಯ ಗೆಳೆಯನಿಗೆ ಧನ್ಯವಾದ.)

Friday, January 25, 2008

ದಾಸವಾಳ ಶಳಕೆ



ಮೊನ್ನೆ ಕ್ರಿಸ್ಮಸ್ ರಜೆಯಲ್ಲಿ ಊರಿಗೆ ಹೋದಾಗ ಮೊದಲು ಕಣ್ಣಿಗೆ ಬಿದ್ದಿದ್ದು ಮನೆಯ ಅಂಗಳದ ತುದಿ ಭಾಗದಲ್ಲಿದ್ದ ಎರಡು ಕೆಂಪು ದಾಸವಾಳ ಗಿಡಗಳು. ಯಾವತ್ತೂ ಮೈತುಂಬ ಹೂ ತಳೆದು ಬೀಗುತ್ತಿರುತ್ತಿದ್ದ ಗಿಡಗಳು ಕಂದು ಬಣ್ಣಕ್ಕೆ ತಿರುಗಿ, ಎಲೆಗಳೆಲ್ಲಾ ಉದುರಿ ಹೋಗಿ, ಇನ್ನೇನು ಸಾಯುವ ಸ್ಥಿತಿಯಲ್ಲಿ ಇದ್ದವು. ಅಮ್ಮನ್ನ ಕೇಳಿದರೆ "ಅವಕೆ ಬೇರು ಹುಳ ಬಂದು ಹೋಜು. ಇನ್ನು ಬದಕದು ಎಂತದನಪಾ" ಅಂದಳು.ಯಾಕೋ ಅಂಗಳದ ಲಕ್ಷಣವೇ ಕಳೆದುಹೋಗಿದೆ ಅಂತ ಅನಿಸಿ ಮನಸ್ಸಿಗೆ ಪಿಚ್ಚೆನಿಸಿತು.


ಹದಿನೆಂಟು ವರ್ಷದ ಹಿಂದೆ ಇಲ್ಲಿ ಮನೆ ಮಾಡಿದಾಗ ಅಂಗಳದಲ್ಲಿ ಸಣ್ಣ ಹೂದೋಟ ಮಾಡಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲೆಲ್ಲಿಂದೋ ತಂದ ಗುಲಾಬಿ, ಡೇರೆ, ಜಿನಿಯ ಮುಂತಾದ ಗಿಡಗಳು ನೆಟ್ಟು ತಿಂಗಳೊಳಗೇ, ನಾವು ಇನ್ನೇನು ಹೂ ತಳೆಯಬಹುದು ಅನ್ನೋ ಆಸೆಯಲ್ಲಿದ್ದಾಗಲೇ ಇದ್ದಕ್ಕಿದ್ದ ಹಾಗೆ ಬಾಡಿ ಸತ್ತು ಹೋಗುತ್ತಿದ್ದವು. ಹಿಂದೆ ಇದ್ದವರು ಅತಿಯಾಗಿ ಬಳಸಿದ ರಾಸಾಯನಿಕ ಗೊಬ್ಬರದ ಪರಿಣಾಮವೋ ಅಥವ ಅಂಗಳದ ಅಂಚಿನಲ್ಲಿರುವ ಅಪ್ಪೆ ಮಾವಿನ ಮರದ ಗೊಳಲಿಗೊ ಎಷ್ಟು ಮುತುವರ್ಜಿಯಿಂದ ನೋಡಿಕೊಂಡರೂ ಹೂಗಿಡಗಳು ಬಹಳ ದಿನ ಬಾಳುತ್ತಿರಲಿಲ್ಲ. ಈ ನಿರಾಶೆಯ ನಡುವೆಯೂ, ಅಜ್ಜನ ಮನೆಯಿಂದ ತಂದು ನೆಟ್ಟಿದ್ದ ಎರಡು ಕೆಂಪು ದಾಸವಾಳ ಗಿಡಗಳು ಮಾತ್ರ ಯಾವುದೇ ಆರೈಕೆಯೇ ಇಲ್ಲದೇ ಸೊಂಪಾಗಿ ಬೆಳೆದುನಿಂತು ಅಮ್ಮನ ಅಸಹನೆಯನ್ನು ಹೆಚ್ಚು ಮಾಡುತ್ತಿದ್ದವು. " ಇವು ನೋಡು, ಎಂತದೂ ವಾಗಾತಿ ಇಲ್ದೆ ಹ್ಯಾಂಗೆ ಬೆಳೆದ್ ನಿಂತಿದ್ದು ಹೇಳಿ" ಅಂತ ಆಗಾಗ ಹೇಳ್ತಾನೆ ಇರೋರು. ನಮಗೂ ಕೂಡ ಬಹುಶಃ ಗುಲಾಬಿ, ಡೇರೆ ಮುಂತಾದ ಬಣ್ಣ ಬಣ್ಣದ ಹೂಗಳ ಮುಂದೆ ದಾಸವಾಳದ ಆಕರ್ಷಣೆ ಸ್ವಲ್ಪ ಕಡಿಮೆಯೇ ಅನಿಸುತ್ತಿತ್ತು. ಆದರೆ ಬೆಳೆದಂತೆಲ್ಲ ಎರಡೂ ಗಿಡಗಳು ಎಲೆಗಳೇ ಕಾಣದಂತೆ ಮೈತುಂಬಾ ಹೂಗಳನ್ನು ತಳೆಯತೊಡಗಿದವು. ಬೆಳಿಗ್ಗೆ ಎದ್ದು ಮನೆ ಮುಂದಿನ ಬಾಗಿಲು ತೆರೆದು ನೊಡಿದರೆ ಅಂಗಳದ ತುದಿಗೆ ಕೆಂಡ ಸುರಿಯುತ್ತಿದೆಯೋ ಅನ್ನುವಂತೆ ಭಾಸವಾಗುತ್ತಿತ್ತು. ಅಂಗಳದ ತುದಿಯಲ್ಲಿ ಎರಡೂ ದಿಕ್ಕಿನಲ್ಲಿ ದೃಷ್ಟಿ ಬೊಟ್ಟಿನ ತರಹ ದಾಸವಾಳ ಗಿಡಗಳು ನಳನಳಿಸುತ್ತಿದ್ದವು. ದಿನವೂ ಬೆಳಿಗ್ಗೆ ಎದ್ದು ದೇವರ ಪೂಜೆಗೆ ಹೂ ಕೊಯ್ಯಲು ಹೋಗುತ್ತಿದ್ದ ನನಗೆ ಈ ಎರಡು ದಾಸವಾಳ ಗಿಡಗಳು ಅಕ್ಷಯ ಪಾತ್ರೆಗಳಂತೆ ಕಂಡಿದ್ದು ಸುಳ್ಳಲ್ಲ. ಎರಡು ಗಿಡಗಳಲ್ಲಿ ಒಂದನ್ನು ಆಯ್ದುಕೊಂಡು ನನ್ನ ಕೈಗೆ ಎಟುಕುತ್ತಿದ್ದ ಹೂವುಗಳನ್ನು ಕಿತ್ತು ಬುಟ್ಟಿಗೆ ಹಾಕುತ್ತಿದಂತೇ ನಿಮಿಷಾರ್ಧದಲ್ಲಿ ಹೂಬುಟ್ಟಿ ತುಂಬಿರುತಿತ್ತು. ನನ್ನ ಬೆಳಗ್ಗಿನ ಶ್ರಮವನ್ನು ಎಷ್ಟೊ ಕಡಿಮೆ ಮಾಡುತ್ತಿದ್ದ ಆ ಗಿಡಗಳ ಬಗ್ಗೆ ಸಹಜವಾಗಿ ನನಗೆ ಅಭಿಮಾನವಿತ್ತು.


ಆದರೆ ಈ ಕೆಂಪು ದಾಸವಾಳ ಗಿಡಗಳು ಅಚ್ಚಳಿಯದಂತೆ ನನ್ನ ಸ್ಮೃತಿಪಟಲದಲ್ಲಿ ದಾಖಲಾಗಲು ಇನ್ನೊಂದು ಬಲವಾದ ಕಾರಣವಿದೆ. ಚಿಕ್ಕವನಿದ್ದಾಗ ಸ್ವಲ್ಪ ಜಾಸ್ತಿನೇ ತುಂಟನಾಗಿದ್ದ ನನ್ನನ್ನು ಹೆದರಿಸಲು ಮತ್ತು ಶಿಕ್ಷಿಸಲು ಅಮ್ಮ ಉಪಯೋಗಿಸುತ್ತಿದ್ದಿದ್ದು ಆ ಕೆಂಪು ದಾಸವಾಳ ಗಿಡಗಳ ಸಣ್ಣ ರೆಂಬೆಯನ್ನು. ಇನ್ನೂ ಚಿಗುರು-ಚಿಗುರಾಗಿರುವ ಗಿಡದ ತುದಿಯನ್ನು ಒಂದು ಅಡಿಯಷ್ಟು ಮುರಿದು, ಬುಡದಲ್ಲಿರುವ ಎಲೆಗಳನ್ನು ಕಿತ್ತಿದರೆ "ಶಳಕೆ" ರೆಡಿ. ಉದ್ದಕ್ಕೆ, ಸಪೂರವಾಗಿ ಇರುತ್ತಿದ್ದ ಈ ಶಳಕೆಯಿಂದ ಕಾಲ ಮೇಲೆ ಬಿದ್ದ ಹೊಡೆತಗಳು ಅಸಾಧ್ಯ ಉರಿಯನ್ನು ಉಂಟು ಮಾಡುತ್ತಿದ್ದವು.ಆಗಾಗ ಹೋಮ್ ವರ್ಕ್ ಮಾಡಲು ನಿರಾಕರಿಸುತ್ತಿದ್ದ ಅಥವಾ ಅಕ್ಕನ ಜೊತೆ ಜಗಳ ಮಾಡುತ್ತಿದ್ದ ನಾನು, ಅಮ್ಮ "ಶಳಕೆ ಮುರ್ಕಂಡು ಬರ್ತಿ ನೋಡು" ಅಂದ ಕೂಡ್ಲೆ ನೆಟ್ಟಗಾಗಿ ಬಿಡುತ್ತಿದ್ದೆ. ಆದರೂ ಕೂಡ ಒಮ್ಮೊಮ್ಮೆ ನನ್ನ ತುಂಟತನ ಮಿತಿ ಮೀರಿದಾಗ, ಅಮ್ಮ ತಾಳ್ಮೆ ಕಳೆದುಕೊಂಡು ಶಳಕೆಯ ರುಚಿ ಮುಟ್ಟಿಸುತ್ತಿದ್ದರು. ಅಮ್ಮ ಶಳಕೆ ಮುರಿದುಕೊಂಡು ಬರಲು ದಾಸವಾಳ ಗಿಡದ ಕಡೆ ಹೋಗುತ್ತಿದ್ದಂತೆಯೇ, ಶಳಕೆ ಉಂಟು ಮಾಡಬಹುದಾದ ಉರಿಯ ಅನುಭವವಿದ್ದ ನಾನು ಅಳಲು ಶುರು ಮಾಡಿ ಬಿಡುತ್ತಿದ್ದೆ (ಬಹುಶಃ ಅದು ಜಾಸ್ತಿ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಮಾಡುತ್ತಿದ್ದ ಉಪಾಯ ಕೂಡ ಆಗಿತ್ತು ಅನ್ನಿಸುತ್ತೆ). ಆದರೆ ಅಮ್ಮ ಬಿಡುತ್ತಿರಲಿಲ್ಲ. ಛಬಕ್, ಛಬಕ್ ಅಂತ ನಾಲ್ಕು ಸಲ ಬೀಸುವುದೊರೊಳಗೆ ನನ್ನ ಸುಕೋಮಲ (?) ಚರ್ಮಕ್ಕೆ ತಾಗಿ ಶಳಕೆ ಚೂರು ಚೂರಾಗಿ ಮುರಿದು ಹೋಗುತ್ತಿತ್ತು. ಆ ಕ್ಷಣಕ್ಕೆ ತುಂಬಾ ಉರಿಯೆನಿಸಿದರೂ, ಶಳಕೆಯ ನೋವಿನ ಪ್ರಭಾವ ಬಹಳ ಹೊತ್ತು ಇರುತ್ತಿರಲಿಲ್ಲ. ಆದರೂ ಎಷ್ಟೋ ಸಲ ಸಿಟ್ಟು ಬಂದು, ದಾಸವಾಳ ಗಿಡದ ಎಳೆ ರೆಂಬೆಗಳನ್ನೆ ಮುರಿದು ಹಾಕಿ ಬಿಡುತ್ತಿದ್ದೆ ನಾನು. ಏಳೆ ರೆಂಬೆಗಳು ಇದ್ದರೆ ತಾನೆ ಅಮ್ಮನಿಗೆ ಶಳಕೆ ಮಾಡಲಿಕ್ಕೆ ಆಗೋದು ? (ಆಗೆಲ್ಲ ಕತ್ತಿ ಮುಂತಾದ ಸಲಕರಣೆಗಳು ನನ್ನ ಕೈಗೆ ಸಿಲುಕದಂತೆ ಇಟ್ಟಿರೋರು. ಇಲ್ಲದೆ ಹೋದ್ರೆ ಬಹುಶಃ ಗಿಡಗಳಿಗೆ ಇನ್ನೂ ಹೆಚ್ಚಿನ ಹಾನಿ ಮಾಡ್ತಿದ್ದೆ ಅನ್ಸುತ್ತೆ). ದಾಸವಾಳ ಗಿಡಗಳು ಮಾತ್ರ ತಮಗೇನೂ ಆಗೇ ಇಲ್ಲದ ಹಾಗೆ, ಅವೂ ಕೂಡ ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಹುನ್ನಾರದಿಂದ ಅಮ್ಮನ ಜೊತೆ ಶಾಮೀಲಾಗಿವೆ ಎನಿಸುವಂತೆ ೧೫ ದಿನಕ್ಕೆ ಮತ್ತೆ ಚಿಗುರಿ ನಿಲ್ಲುತ್ತಿದ್ದವು.


ಶಳಕೆಯ ಮಾತು ಬಂದಾಗೆಲ್ಲ ನನಗೆ ಇನ್ನೊಂದು ಅನುಭವ ನೆನಪಿಗೆ ಬರುತ್ತೆ. ಚಿಕ್ಕವರಿದ್ದಾಗ ನನಗೆ ಹಾಗು ನನ್ನ ಅಕ್ಕನಿಗೆ ಕನ್ನಡ ವರ್ಣಮಾಲೆಯ "ಆ" ಅಕ್ಷರ ಸರಿಯಾಗಿ ಬರೆಯಲು ಬರುತ್ತಿರಲಿಲ್ಲ. ಅದೇನು ಕಾರಣವೋ ಗೊತ್ತಿಲ್ಲ ಆದ್ರೆ ನಮ್ಮಿಬ್ಬರಿಗೂ ಆ ತೊಂದರೆ ಇದ್ದಿದ್ದು ಮಾತ್ರ ನಿಜ. ಅಮ್ಮ ಎಷ್ಟೊ ಸಲ ತಿದ್ದಿಸಿದರೂ, ಸರಾಸರಿಯಾಗಿ ೪ ರಲ್ಲಿ ೩ ಸಲ ನಾವು ತಪ್ಪು ಬರೆದು ಅಮ್ಮನ ಸಹನೆಯನ್ನು ಪರೀಕ್ಷಿಸುತ್ತಿದ್ದೆವು. ಅಕ್ಕನ ಜೊತೆ ಹೇಗೊ ಏಗಿ ಏಗಿ ಹೈರಾಣಾಗಿದ್ದ ಅಮ್ಮ ನಾನೂ ಅದೇ ತಪ್ಪು ಮಾಡಲು ಶುರು ಮಾಡಿದ ಕೂಡಲೆ (ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತಾರಲ್ಲ ಹಾಗೆ) ನಿಜವಾಗಿಯೂ ನಿರಾಶರಾಗಿರಬೇಕು. ಹಾಗಂತ ಬರೆಯಲು ಬರ್ತಾನೇ ಇರ್ಲಿಲ್ಲ ಅಂತೇನಿಲ್ಲ ಆದರೆ ಪದೇ ಪದೇ ತಪ್ಪು ಮಾಡುತ್ತಿದ್ವಿ. ಅಮ್ಮ ಬೇರೇನೂ ಉಪಾಯ ಕಾಣದೆ ಶಳಕೆಯ ಮೊರೆ ಹೋಗುತ್ತಿದ್ದರು. ತಮಾಶೆಯ ವಿಷಯ ಅಂದ್ರೆ ೪ ಶಳಕೆಯ ಏಟು ಬಿದ್ದ ಕೂಡಲೆ ಅಕ್ಕ ಅಳ್ತಾ ಅಳ್ತಾ ಸರಿಯಾಗಿ "ಆ" ಬರೆಯುತ್ತಿದ್ದಳಂತೆ (ಎಂಥಾ ಮಹಿಮೆ ನೋಡಿ ಶಳಕೆದು). ಸಹಜವಾಗಿ ಅವಳು ಜಾಸ್ತಿ ಶಳಕೆಯೇಟು ತಿಂದಿದ್ದಾಳೆ. ಅಮ್ಮ ಅದೇ ಪ್ರಯೋಗವನ್ನು ನನ್ನ ಮೇಲೆ ಪ್ರಯತ್ನಿಸಿದಾಗ ನಾನು ಏಟು ಬಿದ್ದಷ್ಟೂ ಅಳು ಜಾಸ್ತಿ ಮಾಡುತ್ತಿದ್ದನೆ ಹೊರತೂ "ಆ" ವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ಸರಿ, ಅಮ್ಮ "ಇದು ಉದ್ಧಾರ ಆಗೋ ಜಾತಿ ಅಲ್ಲ" ಅನ್ಕೊಂಡು ಹೊಡೆಯೋದನ್ನು ನಿಲ್ಲಿಸುತ್ತಿದ್ದರು. ಹಾಗಾಗಿ ಅಕ್ಕನಿಗೆ ಹೋಲಿಸಿದರೆ ನಾನು ಸ್ವಲ್ಪ ಜಾಸ್ತಿ ಅದೃಷ್ಟವಂತ ಅಂತಾನೇ ಅನ್ನಬಹುದು. ಈಗಲೂ ಅಕ್ಕ ಮಾತಿಗೆ ಮಾತು ಬಂದಾಗ "ಮಾಣಿ, ನಾನು ತಿಂದಿದ್ರ ಅರ್ಧದಷ್ಟು ಹೊಡ್ತಾ ನೀನು ತಿಂಜಿಲ್ಲೆ" ಅಂತಾ ಹೇಳೋದಿದೆ.


ನಮಗೆ ಹೋಲಿಸಿದರೆ, ಈಗಿನ ತಲೆಮಾರಿನ ಮಕ್ಕಳು ಸ್ವಲ್ಪ ಅದೃಷ್ಟವಂತರು ಅನ್ನಿಸುತ್ತೆ. ನಾನು ನೋಡಿರೊ ಪ್ರಕಾರ ಈಗಿನ ಕಾಲದ ಮಕ್ಕಳು ನಮ್ಮಷ್ಟು ಹೊಡೆತ ತಿನ್ನಲ್ಲ. ಬಹುಷಃ ಈಗಿನ ಪೋಷಕರಲ್ಲಿ ಜಾಸ್ತಿ ತಾಳ್ಮೆ ಇರಬೇಕು. ಅಲ್ಲದೇ ಬಹಳಷ್ಟು ಸಂಸಾರಗಳಲ್ಲಿ ಒಂದೇ ಮಗು ಇದ್ದು ಅಕ್ಕ-ತಮ್ಮ, ಅಣ್ಣ-ತಂಗಿ ಹೀಗೆ ಇದ್ದಾಗ ಸೃಷ್ಟಿಸೋ ಅಸಾಧ್ಯ ಗಲಾಟೆಗಳು, ತರಲೆಗಳು ಕಮ್ಮಿ ಆಗುತ್ತಿರಬೇಕು. ಇಷ್ಟೆಲ್ಲಾ ಏಟುಗಳನ್ನ ತಿಂದ್ರೂ ನಮಗೆ ಯಾವತ್ತೂ ನಮ್ಮಮ್ಮ ಅತಿಯಾಗಿ ಅಥವಾ ಅವಶ್ಯಕತೆ ಇಲ್ಲದೆ ದಂಡಿಸುತ್ತಿದ್ದರೆಂದು ಅನ್ನಿಸುತ್ತಿರಲ್ಲಿಲ್ಲ. ಈಗಲೂ ಅನ್ನಿಸಲ್ಲ. ನಮ್ಮ ತುಂಟಾಟಗಳನ್ನು ಮಿತಿಯಲ್ಲಿ ಇಡಲು, ಶಿಸ್ತುಬದ್ಧವಾದ ಜೀವನವನ್ನು ಮೈಗೂಡಿಸಿಕೊಳ್ಳಲು ಅದು ಆಗ ಅವಶ್ಯಕವಾಗಿತ್ತು ಅಂತಾನೆ ನನ್ನ ಅಭಿಪ್ರಾಯ.


ಇನ್ನೇನು ಸಾಯೋ ಸ್ಠಿತಿಯಲ್ಲಿರುವ ಕೆಂಪು ದಾಸವಾಳ ಗಿಡಗಳನ್ನು ನೋಡಿದ ಕೂಡಲೆ, ಹಿಂದಿನ ನೆನಪುಗಳೆಲ್ಲಾ ಒತ್ತರಿಸಿಕೊಂಡು ಬಂದವು. ಮನೆ ಅಂಗಳದಿಂದ ಶಾಶ್ವತವಾಗಿ ಕಣ್ಮರೆಯಾದರೂ ನನ್ನ ಮನಸ್ಸಿನಂಗಳದ ಮೂಲೆಯಲ್ಲೆಲ್ಲೋ ಆ ಎರಡು ದಾಸವಾಳ ಗಿಡಗಳು ಶಳಕೆಯ ಪ್ರಭಾವದಿಂದ ಹಚ್ಚ ಹಸಿರಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ.