Sunday, October 26, 2008

ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ......

ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ ಅಮ್ಮ ಊಟಕ್ಕೆ ಕರೆಯುವ ತನಕಾನೂ ನಾನು ಅಲ್ಲೇ ಸ್ಥಾಪಿತನಾಗಿರುತ್ತೇನೆ. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಮಾತಾಡದೇ ಪುಸ್ತಕ ಹಿಡಿದುಕೊಂಡು ಕೂಡ್ತಾನೆ ಅನ್ನೋದು ಅಮ್ಮನ ದೊಡ್ಡ ಕಂಪ್ಲೇಂಟು. ಆದರೆ ನನಗ್ಯಾಕೋ ಹಾಗೇ ಮನೆಗೆ ಹೋದಾಗಲೆಲ್ಲಾ ಮೆತ್ತಿ ಹತ್ತಿ ಒಂದೊಪ್ಪತ್ತು ಕಳೆಯದೇ ಇದ್ದರೆ ಏನೋ ಕಳೆದುಕೊಂಡ ಹಾಗೆ.

ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.

ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು.

ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು.

ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು.

ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ.

ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ.

ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ.

Sunday, September 7, 2008

ಕಚ್ಚೋ ಚಪ್ಪಲ್ಲು

"ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ ಶೂ ಒದ್ದೆಯಾಗದೇ ಇನ್ನೇನು ಸುಡುಬೇಸಿಗೇಲಿ ಒದ್ದೆ ಆಗುತ್ತಾ?" ಅಂತ ಪ್ರಶ್ನೆ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದ್ರೆ ಅವನಿದ್ದ ಮೂಡಲ್ಲಿ ಆ ಪ್ರಶ್ನೆ ಕೇಳಿದ್ರೆ ನನ್ನ ಆರೋಗ್ಯಕ್ಕೆ ಒಳ್ಳೆದಲ್ಲವೆಂದು ಮನಸ್ಸು ತಿಳಿ ಹೇಳಿದ್ದರಿಂದ, ಬಾಯಿ ತೆಪ್ಪಗಾಯ್ತು. "ಹಂ, ಯಾಕೋ ಸಿಕ್ಕಾಪಟ್ಟೆ ಮಳೆ ಇವತ್ತು. ಬೆಂಗಳೂರಲ್ಲಿ ಒಂದು ಜೋರು ಮಳೆ ಬಿದ್ರೆ, ಎಲ್ಲಾ ಅಧ್ವಾನ" ಅಂತ ಅವನ ಪಾಡಿಗೆ ಸಹಾನುಭೂತಿ ವ್ಯಕ್ತಪಡಿಸಿ, ಅವನನ್ನ ಸ್ವಲ್ಪ ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಅವನಿಗೆ ಸಮಾಧಾನವಾದ ಲಕ್ಷಣ ಕಾಣಲಿಲ್ಲ. ಅದಿನ್ನು ಒಣಗಲಿಕ್ಕೆ ೩ ದಿನವಾದ್ರೂ ಬೇಕು ಅನ್ನುವುದು ಅವನ ದೊಡ್ಡ ತಲೆನೋವಾಗಿತ್ತು. ಅವನು ಗೊಣಗುತ್ತಾ ಬಚ್ಚಲಮನೆಗೆ ಕಾಲು ತೊಳೆಯಲು ಹೋಗುತ್ತಿದಂತೆಯೇ ನನ್ನ ನೆನಪುಗಳ ಹಾಸಿಗೆ ನಿಧಾನವಾಗಿ ಬಿಚ್ಚಲಾರಂಭಿಸಿತು.

ಚಿಕ್ಕಂದಿನಲ್ಲಿ ಮಳೆಗಾಲ ನನಗೆ ಹೇಳಿಕೊಳ್ಳುವಷ್ಟು ಇಷ್ಟವೇನೂ ಆಗಿರಲಿಲ್ಲ. ಮಳೆನೀರಿನಲ್ಲಿ ಆಡಬಹುದು ಎಂಬ ಸಂತೋಷ ಒಂದನ್ನು ಬಿಟ್ಟರೆ ಮಳೆಗಾಲದಲ್ಲಿ ಎಲ್ಲವೂ ರಗಳೆಯೇ. ಈಗ ಬೆಂಗಳೂರಿಗೆ ಬಂದು ಊರ ಮಳೆಯನ್ನು ಮಿಸ್ ಮಾಡಿಕೊಂಡ ಮೇಲೆಯೇ ಮಳೆಗಾಲದ ನೆನಪುಗಳು ಬಹಳ ಅಪ್ಯಾಯಮಾನವೆನ್ನಿಸುತ್ತಿವೆ. ಮಳೆಗಾಲ ಎಂದರೆ ಮಲೆನಾಡಿನವರಿಗೆ ಒಣಗದ ಬಟ್ಟೆ, ಹಸಿಹಸಿ ಕಟ್ಟಿಗೆ ಒಲೆಯಲ್ಲಿ ಉಂಟು ಮಾಡುವ ಅಸಾಧ್ಯ ಹೊಗೆ, ಸಂಕದ ಮೇಲೆ ಹರಿಯುತ್ತಿರುವ ನೀರು, ರಸ್ತೆ ಸರಿ ಇರದೆ ಕ್ಯಾನ್ಸಲ್ ಆಗುವ ಬಸ್ಸು ಇಂಥ ಹಲವಾರು ತೊಂದರೆಗಳೇ ನೆನಪಾಗೋದು. ಕೆಲಸಗಳು ಯಾವುದೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಮೊನ್ನೆ ಜೋರು ಮಳೆ ಬಂದಾಗ, "ಆಹಾ, ಎಂಥಾ ಮಳೆ, ಈ ಮಳೆಲ್ಲಿ ಆರಾಮಾಗಿ ಕುತ್ಕಂಡು, ಬಿಸಿಬಿಸಿ ಚಾ ಕುಡ್ಯವು ನೋಡು" ಅಂತ ಅಮ್ಮನ ಹತ್ರ ಹೇಳಿದ್ರೆ, "ಎಂತಾ ಮಳೆನೆನಪಾ, ಒಂದೂ ಕೆಲ್ಸ ಮಾಡಲೇ ಬಿಡ್ತಿಲ್ಲೆ.ಎಷ್ಟೆಲ್ಲಾ ಕೆಲ್ಸ ಹಾಂಗೇ ಉಳ್ಕಂಜು ನೋಡು,ನಿಂಗೆ ಚಾ ಮಾಡ್ಕ್ಯೋತಾ ಕುಂತ್ರೆ ಅಷ್ಟೇಯಾ" ಎಂದು ನನ್ನ ಸೋಮಾರಿ ಮೂಡಿಗೆ ಛೀಮಾರಿ ಹಾಕಿದಳು. ಅವಳ ಪ್ರಕಾರ ಮಳೆಗಾಲ ನನ್ನಂಥ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ, ಅವಳ ಹಾಗೆ ಸದಾ ಚಟಿಪಿಟಿಯಿಂದ ಓಡಾಡ್ತಾ ಕೆಲಸ ಮಾಡಿಕೊಂಡು ಇರುವಂತವರಿಗೆ ಕೈಕಾಲು ಕಟ್ಟಿ ಹಾಕಿದ ಹಾಗೆಯೇ.

ಆದರೆ ಮಜ ಇರುವುದು ಮನೆಯಿಂದ ಹೊರ ಬಿದ್ದಾಗಲೇ. ನಾವು( ನಾನು ಮತ್ತು ನನ್ನಕ್ಕ) ಸಣ್ಣಕ್ಕಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಒಂತರಾ ಸಾಹಸವೇ ಆಗಿತ್ತು. ನಮಗಿಂತಾ ದೊಡ್ಡದಾದ ಕೊಡೆ ಹಿಡಿದುಕೊಂಡು,ಜೋರಾಗಿ ಗಾಳಿ ಬೀಸಿದಾಗಲೆಲ್ಲಾ ಅದು ಹಾರಿಹೋಗದಂತೆ ಅಥವಾ ಕೊಡೆಯೇ ಉಲ್ಟಾ ಆಗದಂತೆ ಹರಸಾಹಸ ಮಾಡುತ್ತಾ, ಅಚಾನಕ್ ಆಗಿ ರಸ್ತೆಯಿಂದ ಕೆಳಕ್ಕಿಳಿದು ಕೆಸರು ನೀರನ್ನು ನಮ್ಮ ಮೈಗೆ ಎರಚಲು ಹವಣಿಸುವ ಬಸ್ಸು, ಲಾರಿಗಳಿಂದ ತಪ್ಪಿಸಿಕೊಳ್ಳುತ್ತಾ, ರಸ್ತೆ ಮೇಲೆ ನೀರೆಲ್ಲಾ ಹರಿಯುತ್ತಿದ್ದರೆ ಆ ಪವಿತ್ರ ಕುಂಕುಮ ನೀರಲ್ಲೇ ನಮ್ಮ ಪಾದಗಳನ್ನು ನೆನೆಸಿಕೊಳ್ಳುತ್ತಾ ಹೋಗುತ್ತಿದ್ದೆವು. ನಮ್ಮ ಕೈಯಲ್ಲಿದ್ದ ಕೊಡೆ ಮಾತ್ರ ಅದ್ಭುತ ಸಲಕರಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲಂತೂ ಇದ್ದೇ ಇದೆಯಲ್ಲ, ಮಳೆ ಬೀಳದೇ ಇದ್ದಾಗಲೂ ಒಮ್ಮೊಮ್ಮೆ ಹೆಗಲ ಮೇಲೆ ಗದೆಯಾಗಿ, ಇನ್ನೊಮ್ಮೆ ಗಿರಿಗಿಟ್ಲಿಯಾಗಿ, ಇನ್ನೊಮ್ಮೆ ದಾರಿಬದಿಯಲ್ಲಿದ್ದ ಪಿಳ್ಳೆ ಹಣ್ಣಿನ(ನೇರಳೆ ಹಣ್ಣಿನಂತದ್ದೇ)ಟೊಂಗೆಯನ್ನು ಬಗ್ಗಿಸಲು, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್ ಆಗಿಯೂ ಉಪಯೋಗಕ್ಕೆ ಬರುತ್ತಿತ್ತು. ಇಷ್ಟೆಲ್ಲಾ ಸಂಭಾಳಿಸಿಕೊಂಡೂ ಹಾಕಿಕೊಂಡಿದ್ದ ಬಟ್ಟೆಗೆ ಒಂಚೂರು ಕೊಳೆಯಾಗದೇ ಮನೆಗೆ ಬಂದರೆ ನಮ್ಮ ವಯಸ್ಸಿಗೇ ಅವಮಾನ ಮಾಡಿದಂತಲ್ಲವೇ? ನಾವು ನೆಟ್ಟಗೆ ಮನೆಗೆ ಬರುತ್ತಿದ್ದ ಟಾರು ರಸ್ತೆಯನ್ನು ಬಿಟ್ಟು, ಪಕ್ಕದಲ್ಲಿದ್ದ ಕಾಲುವೆ ಹಾರಿ, ಧರೆಯನ್ನೆಲ್ಲ ಗುದಕಿ,ಬೆಟ್ಟ ಬೇಣವನ್ನೆಲ್ಲ ಹುಡುಕಿ, ಅಪರೂಪಕ್ಕೊಮ್ಮೆ ಜಾರಿಬಿದ್ದು ಮನೆಗೆ ತಲುಪಿದಾಗ ಅಮ್ಮನ ತಲೆನೋವು ಶುರುವಾಗುತ್ತಿತ್ತು. ಮೊದಲೇ ಬಟ್ಟೆಗಳು ಒಣಗುವುದಿಲ್ಲ.ತೊಳೆದುಹಾಕುವಂತಿಲ್ಲ.ಕೊಳೆಯಾದ ಬಟ್ಟೆಗಳನ್ನೇ ಹಾಕಿಕೊಂಡು ಹೋದರೆ ನಮಗೆ ಅವಮಾನ ಬೇರೆ. ಅಮ್ಮನ ಕಷ್ಟ ಹೇಳತೀರದು. ನಮ್ಮ ಮಂಗಾಟಗಳ ಚೆನ್ನಾಗಿ ಪರಿಚಯವಿದ್ದ ಅಮ್ಮ ಯೋಚಿಸಿ ಯೋಚಿಸಿ, ಸರಿಯಾದ ಚಪ್ಪಲ್ಲಿಗಳನ್ನು ನಾವು ಹಾಕಿಕೊಂಡರೆ ಬಟ್ಟೆ ಕೊಳೆಮಾಡಿಕೊಳ್ಳುವುದನ್ನು ಕಮ್ಮಿ ಮಾಡುತ್ತೇವೆ ಎಂದ ನಿರ್ಧಾರ ಮಾಡಿರಬೇಕು. ಹಾಗಾಗಿ ಮಳೆಗಾಲದಲ್ಲಿ ಹಾಕುವ ಬಟ್ಟೆಗಳಿಗೆ ಮನೆಯಲ್ಲಿ ಎಷ್ಟು ಮಹತ್ವ ಕೊಡುತ್ತಿದ್ದರೋ, ಅಷ್ಟೇ ಮಹತ್ವವನ್ನು ನಾವು ಹಾಕುವ ಚಪ್ಪಲ್ಲಿಗಳಿಗೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ಚಪ್ಪಲ್ಲಿ ಅಥವಾ ಶೂನಲ್ಲಿ ಇಡೀ ವರ್ಷ ಕಳೆದುಬಿಡಬಹುದೇನೋ, ಆದರೆ ನಮಗೆ ಮಾತ್ರ ವರ್ಷಕ್ಕೆ ಕಡ್ಡಾಯವಾಗಿ ಬೇಸಿಗೆಕಾಲಕ್ಕೆ ಒಂದು ಜೊತೆ, ಮಳೆಗಾಲಕ್ಕೆಂದೇ ಜಾಸ್ತಿ ಜಾರದ, ಪ್ಲಾಸ್ಟಿಕ್ ಚಪ್ಪಲ್ಲು ಬೇಕೇ ಬೇಕಾಗುತ್ತಿತ್ತು. ಛಳಿಗಾಲದಲ್ಲಿ ಸಾಮಾನ್ಯ ಹವಾಯಿ ಚಪ್ಪಲ್ಲು ಸಾಕಾಗುತ್ತಿತ್ತು.

ಮಳೆಗಾಲ ಇನ್ನೇನು ಶುರುವಾಗುತ್ತಿದೆ ಎನ್ನುವಾಗಲೇ ನಾವು ಅಪ್ಪನಿಗೆ ದಿನಾಲೂ ಚಪ್ಪಲ್ಲಿನ ನೆನಪು ಮಾಡಿಕೊಡಲು ಶುರುಮಾಡುತ್ತಿದ್ದೆವು. ನಮ್ಮ ಕಾಟ ಅತಿಯಾದಾಗ ಅಪ್ಪ ಒಂದು ಶುಭಸಂಜೆಯಲ್ಲಿ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಐದಾರು ಅಂಗಡಿಗಳಿಗೆ ತಿರುಗಿ ಸಾಕಾದಷ್ಟು ಚೌಕಾಶಿ ಮಾಡಿ, ಸಾಧ್ಯವಾದಷ್ಟು ಬಾಳಿಕೆ ಬರುವಂತಹ ಜೋಡಿಯೊಂದನ್ನು ತೆಗೆಸಿಕೊಡುತ್ತಿದ್ದರು(ಆದರೆ ಆ ಜೋಡಿಗಳಿಗೆ ಒಂದೇ ಮಳೆಗಾಲಕ್ಕಿಂತ ಹೆಚ್ಚು ಆಯಸ್ಸನ್ನು ನಾವು ದಯಪಾಲಿಸುತ್ತಲೇ ಇರಲಿಲ್ಲ!). ಅಲ್ಲಿ ನಮ್ಮ ಆಯ್ಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪನಿಗೆ ಚೆನ್ನಾಗಿದೆ ಅನ್ನಿಸಿದ್ದು ನಮ್ಮ ಪಾಲಿಗೆ ಬಂದ ಹಾಗೇ. ಅಪರೂಪಕ್ಕೊಮ್ಮೆ "ನಂಗೆ ಆ ಚಪ್ಪಲ್ಲಿನೇ ಬೇಕು" ಎಂಬ ಕ್ಷೀಣ ಸದ್ದು ಬಾಯಿ ತುದಿಯಂಚಲ್ಲಿ ಬಂದು ಇನ್ನೇನು ಬಿದ್ದೇ ಹೋಗುತ್ತದೆ ಎಂಬ ಭಯ ಹುಟ್ಟಿಸಿದರೂ, ಅಪ್ಪ "ಈ ಚಪ್ಪಲ್ಲು ಅಡ್ಡಿಲ್ಯನಾ?" ಎಂದು ಕೇಳಿದ ತಕ್ಷಣವೇ ನಾವು ಗೋಣನ್ನು ಅಡ್ಡಡ್ಡವಾಗಿ ಆಡಿಸಿ, ಮಾತು ಗಂಟಲಲ್ಲೇ ಉಳಿದುಹೋಗುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೆವು. ಚಪ್ಪಲ್ಲಿ ಎಷ್ಟು ಚೆನ್ನಾಗಿದ್ದರೂ, "ಅದರ ಬಾರ್ ಸರಿಯಿಲ್ಲೆ", "ಇನ್ನೊಂಚೂರು ದೊಡ್ಡಕೆ ಇರಕಾಯಿತ್ತು", "ಹಿಮ್ಮಡಿ ಇನ್ನೂ ಎತ್ತರಕೆ ಇರಕಾಗಿತ್ತು" ಅಂತೆಲ್ಲಾ ಕಂಪ್ಲೇಂಟುಗಳನ್ನು ಅಪ್ಪ ಇಲ್ಲದಿದ್ದಾಗ ಅಮ್ಮನ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಅಮ್ಮ ಏನು ಮಾಡಿಯಾಳು? "ಮುಂದಿನ ಮಳೆಗಾಲದಲ್ಲಿ ಛೊಲೋದು ತಗಳಕ್ಕಡಾ ಬಿಡು" ಅಂತ ಸಮಾಧಾನ ಮಾಡುತ್ತಿದ್ದರು.

ಅಸಲಿ ತೊಂದರೆಗಳು ನಾವು ಆ ಚಪ್ಪಲ್ಲನ್ನು ಶಾಲೆಗೆ ಹಾಕಿಕೊಂಡು ಹೋಗಲು ಶುರುಮಾಡಿದ ಮೇಲೆ ಶುರುವಾಗುತ್ತಿದ್ದವು. ಸ್ವಲ್ಪ ಗಟ್ಟಿ ಗಟ್ಟಿಯಾಗಿದ್ದ ಚಪ್ಪಲ್ಲಿಗಳು ನಮ್ಮ ಮೆದುವಾದ ಪಾದವನ್ನು ತಾಗಿ ತಾಗಿ ಹೆಬ್ಬೆರಳ ಸಂದಿಯಲ್ಲೋ(ಚಪ್ಪಲ್ಲಿಯ ಬಾರ್ ಬರುವಲ್ಲಿ) ಅಥವ ಹಿಮ್ಮಡಿಯಲ್ಲೋ, ಅಥವೋ ಪಾದದ ಎರಡೂ ಬದಿಯಲ್ಲೋ ಸಣ್ಣ ಗಾಯವನ್ನು ಮಾಡಿ ಬಿಡುತ್ತಿದ್ದವು. ಅದರ ಪರಿಣಾಮ ಮಾರನೆಯ ದಿನದಿಂದ ನಮಗೆ ಆ ಚಪ್ಪಲ್ಲಿಯನ್ನು ಹಾಕಿಕೊಳ್ಳಲು ಬಹಳ ತೊಂದರೆ ಆಗುತ್ತಿತ್ತು. ನಾವು ನಡೆದಂತೆಲ್ಲ ಅದೇ ಗಾಯ ಮತ್ತೆ ಚಪ್ಪಲ್ಲಿನ ಗಟ್ಟಿ ಭಾಗಕ್ಕೆ ತಾಗಿ ಇನ್ನೂ ಉರಿಯಾಗುತ್ತಿತ್ತು. ಸುಮಾರು ಒಂದು ವಾರಗಳ ತನಕ ಆ ಗಾಯ ತೊಂದರೆ ಕೊಡುತ್ತಲೇ ಇರುತ್ತಿತ್ತು. ಅದಕ್ಕೆ ನಾವು "ಚಪ್ಪಲ್ಲಿ ಕಚ್ಚುವುದು" ಎನ್ನುತ್ತಿದ್ದೆವು. ಆಗೆಲ್ಲ ಗಾಯಕ್ಕೆ ಎಣ್ಣೆ ಹಚ್ಚೋ,ಚಪ್ಪಲ್ಲಿನ ಆ ಭಾಗಕ್ಕೆ ಹತ್ತಿ ಸುತ್ತೋ ಉರಿಯ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ದಿನಗಳಾದ ಮೇಲೆ ಚಪ್ಪಲ್ಲು ಸ್ವಲ್ಪ ಮೆದುವಾಗಿಯೋ, ಅಥವ ನಮಗೆ ರೂಢಿಯಾಗಿಯೋ ಚಪ್ಪಲ್ಲು ಕಚ್ಚುವುದು ನಿಂತು ಹೋಗುತ್ತಿತ್ತು. ಆದರೆ ಆ ಸ್ವಲ್ಪ ದಿನಗಳಲ್ಲೇ ನಾವು ಅನುಭವಿಸುತ್ತಿದ್ದ ಯಮಯಾತನೆ,ಹೊಸ ಚಪ್ಪಲ್ಲಿನ ಉತ್ಸಾಹವನ್ನು ಬಹಳ ಪಾಲು ಕಮ್ಮಿಮಾಡಿಬಿಡುತ್ತಿದ್ದವು. ಹಾಗಾಗಿ ಮಳೆಗಾಲ ಎಂದ ಕೂಡಲೇ ನನಗೆ ನೆನಪಿಗೆ ಬರುವುದು, ನಾವು ಕುಂಟುತ್ತಾ ಕಾಲನೆಳೆಯುತ್ತಾ ಹೋಗುತ್ತಿರುವ ದೃಶ್ಯ. ಅಪರೂಪಕ್ಕೊಮ್ಮೆ ಅಪ್ಪ ಶೂ ಕೊಡಿಸಿಬಿಟ್ಟಾಗ(ಅದು ನಾನು ಹಿಂದಿನ ದಿನ ಅಮ್ಮನ ಹತ್ತಿರ ಹಠ ಮಾಡಿ ಅಪ್ಪನಿಗೆ ಹೇಳಿಸಿದ್ದರ ಪರಿಣಾಮ), ಪರಿಸ್ಥಿತಿ ಇನ್ನೂ ಗಂಭೀರವಾಗಿಬಿಟ್ಟಿತ್ತು. ಆ ಶೂ ಅಂತೂ ನನ್ನ ಪಾದದ ಎಲ್ಲಾ ಭಾಗಗಳಲ್ಲಿ ಕಚ್ಚಿ ಕಚ್ಚಿ. ಮಾರನೇಯ ದಿನ ನಾನು ಹವಾಯಿ ಚಪ್ಪಲನ್ನೇ ಹಾಕಿಕೊಂಡು ಹೋಗುವಂತೆ ಮಾಡಿಬಿಟ್ಟಿತ್ತು. ಆ ಮೇಲಿಂದ ನಾನಂತೂ ಯಾವತ್ತೂ ಶೂ ತೆಗೆಸಿಕೊಡಿರೆಂದು ಅಪ್ಪಿತಪ್ಪಿಯೂ ಕೇಳಲಿಲ್ಲ.

ಈಗೆಲ್ಲಾ ಮೆತ್ತ ಮೆತ್ತನೆಯ, ಸಾವಿರಾರು ರೂಪಾಯಿ ಬೆಲೆಯುಳ್ಳ ಶೂಗಳನ್ನು ಹಾಕಿಕೊಂಡು, ಅನಿರೀಕ್ಷಿತ ಮಳೆ ಬಿದ್ದಾಗ ಒದ್ದೆಯಾದರೆ ಒದ್ದಾಡುತ್ತಾ, ಅದನ್ನು ಒಣಗಿಸಲು ಹರಸಾಹಸ ಪಡುತ್ತಾ ಇರುವಾಗ ನಾವು ಎಷ್ಟೆಲ್ಲಾ ಮುಂದೆ ಬಂದುಬಿಟ್ಟಿದ್ದೇವಲ್ಲಾ ಎಂದು ಸೋಜಿಗವಾಗುತ್ತದೆ. ಚಪ್ಪಲ್ಲಿಗಳು ಕಚ್ಚುತ್ತವೆ ಎಂದು ಗೊತ್ತಿದ್ದೂ ಅವನ್ನು ಹಾಕಿಕೊಂಡು ಓಡಾಡಲು ಎಷ್ಟೆಲ್ಲಾ ಸಂಭ್ರಮ ಪಡುತ್ತಿದ್ದೆವು, ಈಗ ಎಂಥಾ ಚೆನ್ನಾಗಿರೋ ಶೂಗಳು ಮತ್ತು ಚಪ್ಪಲ್ಲಿಗಳೂ ಅಂಥಹ ರೋಮಾಂಚನವನ್ನು ತರುವುದಿಲ್ಲವೆಂದು ಬೇಜಾರೂ ಆಗುತ್ತದೆ.

Tuesday, July 1, 2008

ಹೀಗೇ ಸುಮ್ಮನೇ...

ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತರಾನೇ. ಕುಂಭಕರ್ಣನ ಸಂತತಿ. ಮಲಗಿದ್ರೆ ಜಗತ್ತಿನ ಖಬರೇ ಇಲ್ಲ. ಶನಿವಾರ, ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ "ಮಧ್ಯಾಹ್ನದ ಮೇಲೆ" ಅನ್ನೋ ಹೊತ್ತೇ ಇಲ್ಲ. ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ. ಎಲ್ಲಾದ್ರೂ ಜಾಸ್ತಿ ಹೇಳಿದ್ರೆ "ಅಮ್ಮಾ, ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ?" ಅಂತಾ ನನ್ನೇ ಕೇಳ್ತಾಳೆ. ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ. ವಾರವಿಡೀ, ಬೆಳಗ್ಗೆ ಬೇಗ ಏಳು, ಕಂಪನಿ ಬಸ್ ಹಿಡಿ, ಇಡಿ ದಿನಾ ಕೆಲಸಾ ಮಾಡು, ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ, ಇಷ್ಟರಲ್ಲೇ ಮುಗಿದೋಗತ್ತೆ. ಅದ್ಕೆ ಪಾಪ, ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ. ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ, ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ. ಅಲ್ಲಾ ಈ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು?


ನಾವೆಲ್ಲಾ ಈ ವಯಸ್ಸಲ್ಲಿ ಹೀಗಿರ್ಲಿಲ್ಲ, ಎಷ್ಟೆಲ್ಲಾ ಕೆಲ್ಸ ಮಾಡ್ತಿದ್ವಿ ಅಂದ್ರೆ ನಮ್ಮನೆಯವ್ರು ನನಗೇ ಬೈಯ್ತಾರೆ." ನಿನ್ನ ಕಾಲಕ್ಕೂ ಈ ಕಾಲಕ್ಕೂ ಯಾಕೆ ಹೋಲಿಸ್ತೀಯಾ? ಅವಳು ಹೊರಗೆ ಕೆಲ್ಸ ಮಾಡ್ತಾ ಇಲ್ವಾ? ನಿಧಾನಕ್ಕೆ ಎಲ್ಲದನ್ನೂ ಕಲೀತಾಳೆ ಬಿಡು" ಅಂತ. ಎಲ್ಲಾದಕ್ಕೂ ಇವ್ರದ್ದು ಅವ್ಳಿಗೇ ಸಪೋರ್ಟು. ಎಷ್ಟಂದ್ರೂ ಒಂದೇ ಮಗಳಲ್ವಾ? ತಲೆ ಮೇಲೆ ಹತ್ತಿಸಿಕೊಂಡು ಕುಣಿತಾರೆ. ಕುಣೀಲಿ, ಕುಣೀಲಿ, ನಾನೂ ನೋಡ್ತಿನಿ ಏಷ್ಟು ದಿನ ಅಂತಾ. ನಾನೇನಾದ್ರೂ ಬೈದ್ರೆ ಅಪ್ಪ ಮಗಳು ಒಂದೇ ಪಾರ್ಟಿ ಮಾಡ್ಕೊಂಡು ನನ್ನೇ ಅಂತಾರೆ. ನನಗೋ ಇವಳು ಮಾಡೋ ವೇಷಾನೆಲ್ಲ ಸಹಿಸಿಕೊಂಡು ಸುಮ್ಮನೆ ಇರಕಂತೂ ಆಗಲ್ಲ. ಏನೋ ಅಂದು ಹೋಗುತ್ತೆ. ಈಗಲ್ದೇ ಇನ್ಯಾವಾಗ ಮನೆ ಕೆಲ್ಸಾನೆಲ್ಲ ಕಲ್ಯೋದು ಇವ್ಳು? ನಾಳೆ ಇವಳದ್ದೂ ಒಂದು ಮದುವೆ ಅಂತ ಆಗಲ್ಲ್ವಾ? ಆಗ ಸಂಸಾರ ಸಂಭಾಳಿಸ್ಕೊಂಡು ಹೋಗಷ್ಟಾದ್ರೂ ಮನೆ ಕೆಲಸಗಳು ಗೊತ್ತಿರ್ಬೇಕು ಅಂತ ನಾನು. ನಾಳೆ ಇವಳಿಗೆ ಎಲ್ಲಾ ಕೆಲ್ಸ ಬರಲ್ಲ ಅಂದ್ರೆ ಅತ್ತೆ ಮನೆಯವರು ಏನಂತಾರೆ? "ಇವಳಮ್ಮ ಏನೂ ಕಲಿಸೇ ಇಲ್ಲ" ಅಂತ ನನ್ನ ಆಡಿಕೊಳ್ಳಲ್ವಾ? ಮೊನ್ನೆ ಇದೇ ವಿಷ್ಯದ ಮೇಲೆ ಜೋರು ವಾದ ಆಯ್ತು. ಅಪ್ಪ ಮಗಳು ಇಬ್ರೂ ಸೇರಿ ಜೋರು ಗಲಾಟೆ ಮಾಡಿ ಒಟ್ನಲ್ಲಿ ನನ್ನ ಬಾಯಿ ಮುಚ್ಚಿಸಿದ್ರು. ನಮ್ಮ ಮನೆಯವರಂತೂ ಮೊದ್ಲೇ ಹೇಳಿದ್ನಲ್ಲಾ ಯಾವಾಗ್ಲೂ ಅವಳದ್ದೇ ಪಾರ್ಟಿ. "ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ರೂ ಹೊರಗೆ ಕೆಲಸ ಮಾಡ್ತಾರೆ, ಹೇಗೋ ಮ್ಯಾನೇಜ್ ಮಾಡ್ತಾರೆ ಬಿಡೆ. ಕೆಲಸದವಳನ್ನ ಇಟ್ಕೋತಾರೆ. ಗಂಡನೂ ಬಹಳಷ್ಟು ಸಹಾಯ ಮಾಡ್ತಾನೆ. ಎಲ್ಲಾ ಕಲ್ತುಕೊಂಡು ಏನು ಮಾಡೋದಿದೆ? ಅಂತ ಉಲ್ಟಾ ನನ್ನೇ ಕೇಳ್ತಾರೆ. ಇವಳಂತೂ ಬಿಡು. ಅಪ್ಪ ಬೇರೆ ಸಪೋರ್ಟಿಗಿದ್ದಾರೆ ಅಂತಾ ಗೊತ್ತಾಯ್ತಲ್ಲಾ, ಕೂಗಿದ್ದೇ ಕೂಗಿದ್ದು. ನಾನೇನೋ ಮಹಾ ದೂರಿದ ಹಾಗೆ. "ಅಮ್ಮಾ ನಾನಂತೂ ಮೊದ್ಲೇ ಹೇಳ್ಬಿಡ್ತೀನಿ, ನನ್ನ ಮದ್ವೆಯಾಗೋವ್ನಿಗೆ. ನಂಗೆ ಅಷ್ಟೆಲ್ಲಾ ಚೆನ್ನಾಗಿ ಅಡುಗೆ-ಗಿಡಗೆ ಎಲ್ಲಾ ಮಾಡಕ್ಕೆ ಬರಲ್ಲಾ. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಮನೆ-ಕೆಲಸ ಎಲ್ಲ ಒಟ್ಟೊಟ್ಟಿಗೆ ನಾನೊಬ್ನೇ ಮಾಡ್ಕೊಂಡು ಹೋಗಕ್ಕಾಗಲ್ಲಾ. ಜಾಸ್ತಿ ಕಿರಿಕಿರಿ ಮಾಡಿದ್ರೆ ಕೆಲಸ ಬಿಟ್ಟು ಮನೆಲ್ಲೇ ಇರ್ತಿನಿ ಅಂತ. ಇನ್ನೇನು ಹೊರಗೂ ದುಡಿದು ಸಂಬಳಾನೂ ತರ್ಬೇಕು, ಮನೆಲ್ಲಿ ಚಾಕರಿ ಮಾಡಕ್ಕೂ ನಾನೇ ಬೇಕು ಅಂದ್ರೆ ನಾನೇನು ಅವನ ಆಳಾ? ಅಂತ. ಅದೆಲ್ಲಾ ಸರಿನೇ. ನಾನೂ ಒಪ್ಕೋತಿನಿ. ಕಾಲ ಬದಲಾಗಿದೆ ಅಂತ. ಆದ್ರೆ ಇವಳು ಇಷ್ಟು ನೇರ ನೇರವಾಗಿ ಹೇಳಿದ್ರೆ ಯಾರು ಇವಳನ್ನ ಮದ್ವೆ ಆಗ್ತಾರೆ ಅಂತ ಭಯ ನಂಗೆ.


ಇವ್ರಿಗೆ ಹೇಳಿದ್ರೆ ಕಿವಿ ಮೇಲೇ ಹಾಕ್ಕೊಳಲ್ಲ. "ಅವಳಿಗೆ ಇನ್ನೂ ಸಣ್ಣ ವಯಸ್ಸು, ನೀನು ಸುಮ್ನೆ ಟೆನ್ಶನ್ ಮಾಡ್ಕೋಂತೀಯಾ" ಅಂತಾರೆ. ಟೆನ್ಶನ್ ಆಗಲ್ವಾ? ಈ ಅಗಸ್ಟಿಗೆ ಅವ್ಳಿಗೆ ೨೪ ಮುಗಿಯುತ್ತೆ. ಎಂತಾ ಸಣ್ಣ ವಯಸ್ಸು? ಯಾವ ಯಾವ ವಯಸ್ಸಿಗೆ ಯಾವ್ಯಾವ್ದು ಆಗ್ಬೇಕೋ ಅದಾದ್ರೇ ಚಂದ ಅಲ್ವಾ? ಇವ್ರಿಗಂತೂ ಅದೆಲ್ಲಾ ಅರ್ಥ ಆಗಲ್ಲ. ಅವಳಂತೂ ಬಿಡು. "ಅಮ್ಮಾ ನಾನು ೨೬ ವರ್ಷದ ವರೆಗೂ ಮದುವೆ ಆಗಲ್ಲ" ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ಬಿಟ್ಟಿದ್ದಾಳೆ. ಹೆಚ್ಚಿಗೆ ಒತ್ತಾಯ ಮಾಡಿದ್ರೆ "ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ" ಅಂತ ಅಳಕ್ಕೇ ಶುರು ಮಾಡಿ ಬಿಡ್ತಾಳೆ. ನಾನೇನು ಇವಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕ್ಬೇಕು ಅಂತಾ ಇಷ್ಟೆಲ್ಲಾ ಮಾಡ್ತಿದ್ದೀನಾ? ನನಗೂ ಮಗಳನ್ನು ಒಳ್ಳೆ ಮನೆಗೇ ಕೊಡ್ಬೇಕು ಅಂತ ಇಲ್ವಾ? ನಮ್ಗಿರೋದು ಒಂದೇ ಮಗಳು. ಅವಳು ಚೆನ್ನಾಗಿರ್ಲಿ ಅಂತಾನೇ ನಾವು ಇಷ್ಟೆಲ್ಲಾ ಮಾಡ್ತಾ ಇರೋದು? ಯಾರನ್ನಾರೂ ಲವ್ವು-ಗಿವ್ವು ಅಂತಾ ಮಾಡಿದಿಯೇನೇ, ಅಂತಾನೂ ನಂಬಿಸಿ ಕೇಳಿದಿನಿ. ಹಾಗೆಲ್ಲಾ ಇದ್ರೆ ಮೊದ್ಲೇ ಹೇಳ್ಬಿಡು. ಆಮೇಲೆ ಮೂರನೆಯವರಿಂದ ಗೊತ್ತಾಗೋದು ಬೇಡ ಅಂತಾನೂ ಹೇಳಿದೀನಿ. ಹಾಗೇನೂ ಇಲ್ಲಾ ಅಂತಾಳೆ. ನನಗಂತೂ ಸಾಕಾಗಿ ಹೋಗಿದೆ. ಅಪ್ಪ ಮಗಳು ಏನು ಬೇಕಾದ್ರೂ ಮಾಡ್ಕೊಳ್ಲಿ ಅಂತ ಬಿಟ್ಟು ಬಿಟ್ಟಿದ್ದೀನಿ. ಆದ್ರೂ ಕೆಲವೊಂದು ಸಲ ತಾಯಿ ಹೃದಯ, ಕೇಳಲ್ಲ.


ಮೊನ್ನೆ ಏನಾಯ್ತು ಅಂದ್ರೆ, ನಮ್ಮ ಯಜಮಾನರ ಕೊಲೀಗು ಇದ್ದಾರಲ್ಲ ಶ್ರೀನಿವಾಸಯ್ಯ, ಅವರ ತಂಗಿ ಮಗನ ಪ್ರಪೋಸಲ್ಲು ಬಂದಿತ್ತು. ಹುಡುಗಾ ನೋಡೋಕೆ ಸುಮಾರಾಗಿದಾನೆ. ಒಳ್ಳೆ ಮನೆತನ, ಒಳ್ಳೆ ಸಂಬಂಧ. ಚೆನ್ನಾಗಿ ಓದಿದಾನೆ ಬೇರೆ. ಸ್ವಂತ ಮನೆಯಿದೆ, ಕಾರೂ ಇದೆ. ನನಗಂತೂ ಯಾವ ತೊಂದರೆನೂ ಕಾಣ್ಲಿಲ್ಲ. ಅವರ ಮನೆಯವರಿಗೂ ಬಹಳ ಇಷ್ಟವಾದ ಹಾಗೇ ಇತ್ತು. ಆದರೆ ಇವ್ಳು ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ನಮ್ಮನೆಯವರಿಗೂ ಬಹಳ ಮನಸ್ಸಿದ್ದ ಹಾಗೆ ಕಾಣ್ತು ನನಗೆ. ಇವರೂ ಏನೇನೋ ಉಪದೇಶ ಮಾಡಿದ್ರು. ಕೊನೆಗೆ ಇವಳು ಹೇಳಿದ್ದು ಏನು ಗೊತ್ತಾ? "ಆ ಹುಡುಗಾ ಸ್ವಲ್ಪ ಕಪ್ಪಗಿದಾನೆ. ನನಗೆ ಬೇಡ" ಅಂತ. ಏನು ಹೇಳೋಣ ಇಂಥವರಿಗೆ? ರೂಪ, ಬಣ್ಣ ಎಲ್ಲಾ ನೋಡಿ ಯಾರಾದ್ರೂ ಮದ್ವೆ ಆಗ್ತಾರಾ? ಗುಣ ಅಲ್ವಾ ನೋಡ್ಬೇಕಾಗಿದ್ದು? ಅವಳು ತಪ್ಪಿಸಿಕೊಳ್ಳಕೆ ಹಾಗೆ ಹೇಳಿದ್ಳೋ, ಅಥವಾ ನಿಜವಾಗ್ಲೂ ಅವಳ ಮನಸ್ಸಲ್ಲಿ ಇದೇ ಇದೆಯಾ ಅಂತ ಹೇಗೆ ಹೇಳೋದು? ಆದ್ರೆ ಒಂದು ಮಾತ್ರ ನಿಜ, ಅವನು ಕಪ್ಪಗಿದಾನೆ ಅಂತ ರಿಜೆಕ್ಟ್ ಮಾಡಿದ್ರೆ ಮಾತ್ರ ಇವಳಿಗೆ ಸೊಕ್ಕು ಅಂತಾನೇ ಅರ್ಥ! ನಾನೇನೂ ಜಾಸ್ತಿ ಹೇಳಕ್ಕೆ ಹೋಗ್ಲಿಲ್ಲ. ಆಶ್ಚರ್ಯ ಅಂದ್ರೆ ಈಗ ಎರಡು ಮೂರು ದಿನದಿಂದ ಇವರೂ ಭಾಳ ಅಪ್ ಸೆಟ್ ಆಗಿದಾರೆ. ಈಗ ಅರ್ಥ ಆಗಿರ್ಬೇಕು ಅವರಿಗೆ ಮದ್ವೆ ಮಾಡೋದು ಎಷ್ಟು ಕಷ್ಟ ಅನ್ನೋದು.


ಅದೆಲ್ಲ ಬಿಟ್ಟಾಕಿ. ಅದೇನೋ ಅಂತಾರಲ್ಲಾ, ಹಣೇಲಿ ಬರ್ದಿರ್ಬೇಕು ಅಂತಾ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ. ಕಾಯ್ಬೇಕು ಅಷ್ಟೇ. ಆದ್ರೆ ಒಂದಂತೂ ನಿಜ. ಈ ಕಂಪ್ಯೂಟರ್ರು, ಇಂಟರನೆಟ್ಟು, ಅನ್ನೋ ವಸ್ತು ಮನೆಗೆ ಬಂದಾಗಿಂದ ಈಗಿನ ಕಾಲದ ಮಕ್ಕಳ ವರ್ತನೆನೇ ಚೇಂಜ್ ಆಗಿ ಹೋಗಿದೆ. ಇವಳೂ ಏನೂ ಕಮ್ಮಿಯಿಲ್ಲ. ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳ್ತಿದ್ದು ಸಾಲ್ದು ಅಂತ ರಾತ್ರೆ ೧೧, ೧೨ ಗಂಟೆ ತನಕಾನೂ ಆ ಕೀಬೋರ್ಡು ಕುಟ್ಟತಾ ಇರ್ತಾಳೆ. ಸಾಕು ಮಲಗಮ್ಮಾ ಅಂದ್ರೆ, ಅದ್ಯಾವುದೋ ಫ್ರೆಂಡ್ ಅಂತೆ, ಅಮೆರಿಕಾದಲ್ಲಿದಾರಂತೆ, ಅವನೋ, ಅವಳೋ ಯಾರದೋ ಜೊತೆ ಅದೇನೋ ಚಾಟಿಂಗ್ ಅಂತ ಮಾಡ್ತಾ ಇರ್ತಾಳೆ. ಹೊತ್ತು ಗೊತ್ತು ಒಂದೂ ಪರಿವೆನೇ ಇಲ್ಲ. ಅದರಲ್ಲಿ ಏನು ಬ್ರಹ್ಮಾಂಡ ತೋರಿಸ್ತಾರೋ ದೇವ್ರಿಗೇ ಗೊತ್ತು. ಒಂದಂತೂ ನಿಜ, ಇವೆಲ್ಲ ಬಂದ ಮೇಲೆ ಮಕ್ಕಳು ಇನ್ನೂ ಜಾಸ್ತಿ ಆಲಸಿಗಳಾಗ್ತಿದಾರೆ ಅಷ್ಟೇ. ಇಂಟರನೆಟ್ಟಲ್ಲೇ ಫ್ರೆಂಡ್ಸ್ ಮಾಡ್ಕೋಂತಾರೆ, ಹರಟೆ ಹೊಡೀತಾರೆ, ಇನ್ನೂ ಏನೇನೋ, ನಂಗದು ಸರಿಯಾಗಿ ಗೊತ್ತಾಗೋದೂ ಇಲ್ಲ. ಮೊನ್ನೆ ಅದ್ಯಾವುದೋ ಫ್ರೆಂಡೊಬ್ಬಳು ಮನೆಗೆ ಬಂದಿದ್ಲಲ್ಲಾ, ಇವ್ಳದ್ದೇ ವಯಸ್ಸು. ನಿನ್ನ ಕ್ಲಾಸ್ ಮೇಟೇನಮ್ಮಾ ಅಂತ ಕೇಳಿದ್ರೆ, ಇಲ್ಲಾ ಇವಳು ನನ್ನ ಆರ್ಕುಟ್ ಫ್ರೆಂಡ್ ಅಂತಾ ಅಂದಳು. ಇದ್ಯಾವ ತರ ಫ್ರೆಂಡ್ ಅಂತಾನೇ ನಂಗೆ ಗೊತ್ತಾಗ್ಲಿಲ್ಲ ನೋಡಿ. ಹಾಗಂದ್ರೆ ಏನೇ? ಅಂದ್ರೆ "ಅದೇ ಅಮ್ಮಾ. ಇಂಟರನೆಟ್ಟಲ್ಲಿ ಆರ್ಕುಟ್ ಅಂತ ಕಮ್ಯುನಿಟಿ ಇದೆಯಮ್ಮಾ, ಅದರಲ್ಲಿ ಫ್ರೆಂಡ್ ಆದವಳು, ನಿಂಗೆ ಗೊತ್ತಾಗಲ್ಲ ಬಿಡು" ಅಂದಳು. ಅದವಳ ಖಾಯಂ ಡೈಲಾಗು, "ಅಮ್ಮಾ ನಿಂಗೆ ಇವೆಲ್ಲಾ ಗೊತ್ತಾಗಲ್ಲ ಬಿಡಮ್ಮ" ಅಂತ. ಅವಳು ಹೇಳಿದ್ದು ನಿಜಾನೇ. ಈ ಕಾಲದವರ ಇಂಟರ್ ನೆಟ್ಟು, ಮೊಬೈಲು, ಐಪಾಡು ಇವೆಲ್ಲಾ ನಂಗಂತೂ ಒಂದೂ ಗೊತ್ತಾಗಲ್ಲ. ಅದರಲ್ಲೂ ಆ ಮೊಬೈಲನ್ನಂತೂ ಇನ್ನೂ ಸರಿಯಾಗಿ ಬಳಸಕ್ಕೆ ನಂಗಿನ್ನೂ ಬರಲ್ಲ. ಅದೇನೋ ಹಸಿರು ಬಟನಂತೆ, ರೆಡ್ ಬಟನಂತೆ, ಮೆಸೇಜು, ಎಸ್ಸೆಮೆಸ್ಸು, ಮಿಸ್ಸಡ್ ಕಾಲ್ಸು ಅಯ್ಯೋ ನಂಗಂತೂ ಬರೀ ಕನ್ಫೂಶನ್ನು. ಇನ್ನೂ ಮೊಬೈಲ್ ಬಳಸಕ್ಕೆ ಬರಲ್ಲ ಅಂತ ಅಪ್ಪ ಮಗಳು ಸೇರಿ ಯಾವಾಗಲೂ ರೇಗಿಸ್ತಾನೇ ಇರ್ತಾರೆ. ಇವರಂತೂ ಬಿಡಿ, ಸಂದರ್ಭ ಸಿಕ್ಕಿದಾಗಲೆಲ್ಲಾ ದಡ್ಡಿ, ದಡ್ಡಿ ಅಂತಾ ಹಂಗಿಸ್ತಾನೇ ಇರ್ತಾರೆ. ನನ್ನ ಮೈಯೆಲ್ಲಾ ಉರಿದುಹೋಗತ್ತೆ. ಅದೇನು ಜಾಸ್ತಿ ಓದಿದವ್ರು ಮಾತ್ರಾ ಬುದ್ಧಿವಂತರಾ? ಅಥವಾ ಈಗಿನ ಕಾಲದ ವಸ್ತುಗಳನ್ನೆಲ್ಲಾ ಉಪಯೋಗ್ಸಕ್ಕೆ ಬರದೋವ್ರು ಎಲ್ಲಾ ದಡ್ಡರಾ? ಅಷ್ಟೆಲ್ಲ ದಡ್ಡರಾದ್ರೆ ನಾವು ಸಂಸಾರ ಹೇಗೆ ನಡೆಸ್ಕೊಂಡು ಬಂದ್ವಿ? ಜಾಸ್ತಿ ಓದಿದ ಮಾತ್ರಕ್ಕೆ ಬುದ್ಧಿವಂತರು ಅಂತೇನೂ ರೂಲ್ಸ್ ಇಲ್ಲ. ಈಗ ಇವ್ರನ್ನೇ ತಗೊಳ್ಳಿ. ಎಷ್ಟು ಮಹಾ ಬುದ್ಧಿವಂತರು ಇವ್ರು? ನಂಗೊತ್ತಿಲ್ವಾ ಇವ್ರ ಭೋಳೇ ಸ್ವಭಾವ? ಯಾರೇ ಒಂದು ಸ್ವಲ್ಪ ದುಡ್ಡು ಬೇಕು ಅಂತ ಹಲ್ಲುಗಿಂಜಿದ್ರೂ ಹಿಂದೆ ಮುಂದೆ ನೋಡ್ದೇ ಕೊಟ್ಟುಬಿಡೋರು. ಕೈಯಲ್ಲಂತೂ ಒಂಚೂರೂ ದುಡ್ಡು ನಿಲ್ತಾ ಇರ್ಲಿಲ್ಲ. ನಾನು ಸ್ವಲ್ಪ ತಲೆ ಓಡಿಸಿ, ಸಾಧ್ಯವಾದಾಗ್ಲೆಲ್ಲಾ ಇವರ ಕೈ ಹಿಡಿದು, ಅಲ್ಲಲ್ಲಿ ಉಳ್ಸಿ, ಇವರ ದುಂದು ವೆಚ್ಚಕ್ಕೆಲ್ಲಾ ಕಡಿವಾಣ ಹಾಕಿ, ಕಾಡಿ ಬೇಡಿ ಈಗೊಂದು ೧೦ ವರ್ಷದ ಹಿಂದೆನೇ ಎರಡು ೩೦-೪೦ ಸೈಟ್ ತಗೊಳ್ಳೊ ಹಾಗೆ ಮಾಡದೇ ಇದ್ದಿದ್ರೆ, ಬೆಂಗಳೂರಲ್ಲಿ ಸ್ವಂತ ಮನೆ ಅಂತ ಮಾಡಿ, ಮಗಳನ್ನು ಇಂಜಿನಿಯರ್ ಓದ್ಸಕ್ಕೆ ಆಗ್ತಿತ್ತಾ? ಅದೂ ಇವ್ರಿಗೆ ಬರೋ ಸಂಬಳದಲ್ಲಿ? ಈಗ ನೀವೇ ಹೇಳಿ ಯಾರು ದಡ್ಡರು, ಯಾರು ಬುದ್ಧಿವಂತರು ಅಂತಾ? ಇನ್ನೊಂದು ಸಲ ಹಂಗಿಸ್ಲಿ, ಸರಿಯಾಗಿ ಹೇಳ್ತಿನಿ, ಬಿಡಲ್ಲ.


ಅಯ್ಯೋ, ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ. ಆಗ್ಲೇ ೪.೩೦ ಆಗೋಯ್ತು. ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ. ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ. ಅದೆಂಥದೋ "ಸಾಲ್ಸಾ" ನೋ "ಸಲ್ಸಾ"ನೋ, ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ, ಅದಕ್ಕೆ ಹೋಗ್ತಾಳೆ. ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ. ಇಂದಿರಾನಗರಕ್ಕೇ ಹೋಗ್ಬೇಕು. ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ. ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ. ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ, ಅದಕ್ಕೆ ಹೋಗಮ್ಮಾ ಅಂದ್ರೆ "ಅಮ್ಮಾ ಅವೆಲ್ಲ ಹಳೆ ಕಾಲದವು, ನಾನು ಕಲಿಯಲ್ಲ" ಅಂಥಾಳೆ. ಇನ್ನೇನು ಹೇಳೋದು? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ. ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ. ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ. ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ. ಒಬ್ಬನೇ ಮಗ, ಚೆನ್ನಾಗಿ ಓದದಾ, ಅಮೇರಿಕಕ್ಕೆ ಹೋದ. ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ. ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ. ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ. ಇವ್ರಿಗೋ ಆರೋಗ್ಯನೇ ಸರಿಯಿರಲ್ಲ. ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು,ಬಿಟ್ರೆಷ್ಟು? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ. ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ, ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ.


ಸಾಕು ಮಾಡಮ್ಮಾ ನಿನ್ನ ಪ್ರಲಾಪ, ನಮಗೇ ಹೊದೆಯಷ್ಟು ಕಷ್ಟ ಇದೆ ಅಂತೀರಾ? ಅಯ್ಯೋ, ನಿಮಗೂ ನನ್ನ ತರ ಬೆಳೆದು ನಿಂತ ಮಗಳಿದ್ರೆ ಗೊತ್ತಾಗಿರೋದು ನನ್ನ ಸಂಕಟ ಏನು ಅಂತಾ. ಹೋಗ್ಲಿ ಬಿಡಿ, ಅವರವರು ಪಡ್ಕೊಂಡು ಬಂದಿದ್ದು, ಅನುಭವಿಸ್ಬೇಕು. ಅನುಭವಿಸ್ತೀನಿ ಬಿಡಿ. ಇನ್ನೇನು ಇವರು ಬರೋ ಹೊತ್ತಾಯ್ತು. ಕಾಫಿ ಮಾಡ್ಬೇಕು. ಬಂದ ಕೂಡ್ಲೇ ಕೈಗೆ ಕಾಫಿ ಸಿಗದೇ ಹೋದ್ರೆ ಆಮೇಲೆ ಇಡೀ ದಿನ ಕೂಗ್ತಾ ಇರ್ತಾರೆ. ಇನ್ನೊಮ್ಮೆ ಯಾವಾಗಲಾದ್ರೂ ಸಿಕ್ತೀನಿ, ಸುದ್ದಿ ಹೇಳೋಕೆ ಬಹಳಷ್ಟಿದೆ. ಬರ್ಲಾ? ಅಯ್ಯೋ, ಹೇಳೊಕೇ ಮರ್ತೋಗಿತ್ತು ನೋಡಿ. ನಿಮಗೆ ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಪ್ಲೀಸ್ ಹೇಳ್ರೀ. ಯಾರಿಗೆ ಗೊತ್ತು, ಇವಳಿಗೆ ಇಷ್ಟ ಆದ್ರೂ ಆಗ್ಬಹುದು. ನಮ್ಮ ಪ್ರಯತ್ನ ಅಂತೂ ನಾವು ಮಾಡೋದು. ಮುಂದೆಲ್ಲಾ ಹಣೇಲಿ ಬರದಾಂಗೆ ಆಗತ್ತೆ. ಅಲ್ವಾ?

Monday, June 23, 2008

ಈ ಸಂಭಾಷಣೆ...

ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು

ಅರೆಪಾವು ತುಂಟತನ, ಆಗಾಗ ಥೇಟ್ ಮಗು

ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು

ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು



ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ

ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ

ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ

ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!



ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು

"ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು

ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು

ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು



ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ

ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ,

ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ

ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ

Thursday, April 24, 2008

ಈರನ ತರ್ಕವೂ... ಎಲೆಕ್ಸನ್ನೂ.....

ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ ಕಡೆ ಪುಟುಪುಟನೇ ಬರುತ್ತಿದೆ ಅಂದ್ರೆ ಅದು ಈರನೇ ಅಂತ ನಿಸ್ಸಂಶಯವಾಗಿ ಹೇಳಿ ಬಿಡಬಹುದು. ಅವನು ಹಲವಾರು ವರ್ಷಗಳಿಂದ ರಾಂಭಟ್ಟರ ಮನೆಯ ಸದಸ್ಯನಂತೇ ಖಾಯಂ ಕೆಲಸಕ್ಕೆ ಇದ್ದವನು. ಹಣ್ಣು ಹಣ್ಣು ಮುದುಕನಾಗಿ, ಬಡಕಲಾಗಿದ್ದ ಅವನನ್ನು ನೋಡಿದರೆ ಯಾರಿಗೂ ಇವನು ಕೆಲಸ ಮಾಡಬಹುದು ಎಂದೇ ಅನ್ನಿಸುತ್ತಿರಲಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಸಿಕ್ಕ ದುಡ್ಡಲ್ಲೇ ಹೇಗೋ ಅವನಿಗೆ ಬೇಕಾದಷ್ಟು ಖರ್ಚು ಮಾಡಿಕೊಂಡು ಹಾಯಾಗಿದ್ದ. ಅಪ್ಪ ಆಗಾಗ ಅವನನ್ನು ತೋಟದಲ್ಲಿದ್ದ ತೆಂಗಿನಕಾಯಿಗಳನ್ನು ಕೆಡವಲು ಕರೆಯುತ್ತಿದ್ದರು.

ಸಪೂರ ಕಾಲುಗಳ ಈರ, ತೆಂಗಿನ ಮರ ಹತ್ತಿ ಕಾಯಿ ಕಿತ್ತು ಕೆಳಗೆ ಹಾಕುವುದನ್ನು ನೋಡುವುದೇ ಒಂದು ಮಜ. ಎರಡೂ ಕಾಲುಗಳಿಗೆ ಹಗ್ಗದ ತಳೆಯೊಂದನ್ನು ಸಿಕ್ಕಿಸಿ, ವೇಗವಾಗಿ ಮರ ಹತ್ತಿ, ನೋಡು ನೋಡುತ್ತಿದಂತೆಯೇ ಕಾಯಿಗಳನ್ನು ಕಿತ್ತು ಕೆಳಕ್ಕೆ ಎಸೆದು, ಸರ್ರನೇ ಮರದಿಂದ ಜಾರಿ ನೆಲಕ್ಕಿಳಿಯುತಿದ್ದ ಪರಿಯೇ ನನಗೊಂದು ಬೆರಗು. ಎಷ್ಟು ವರ್ಷಗಳಿಂದ ಇದೇ ಕೆಲಸವನ್ನು ಮಾಡುತ್ತಿದ್ದನೋ ಅವನು? ಎಂತಾ ಎತ್ತರದ ಮರವಾದರೂ ಲೀಲಾಜಾಲವಾಗಿ ಹತ್ತಬಲ್ಲ ಚಾಕಚಕ್ಯತೆ ಅವನಲ್ಲಿತ್ತು.

ಅವನ ಮತ್ತೊಂದು ವಿಶೇಷತೆ ಅಂದರೆ ಅವನ ಬಾಯಿ. ಬಹುಷಃ ಮಲಗಿದ್ದಾಗ ಮಾತ್ರ ಅದಕ್ಕೆ ವಿಶ್ರಾಂತಿ ಕೊಡುತ್ತಿದ್ದ ಅವನು. ಯಾವುದೇ ಕೆಲಸ ಮಾಡುವಾಗಲೂ ಮಾತಾಡುತ್ತಲೇ ಇರಬೇಕು. ಅಪ್ಪ ಆಗಾಗ "ಈರಾ, ನಿಂದು ಮರದ್ದ ಬಾಯಾಗಿದ್ರೆ ಇಷ್ಟೊತ್ತಿಗೆ ವಡೆದು ಹೋಗ್ತಿತ್ತು ನೋಡು" ಅಂತ ಛೇಡಿಸುತ್ತಿದ್ದರು. ಅದಕ್ಕೆಲ್ಲಾ ಅವನು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. "ಇರಬೋದ್ರಾ" ಎಂದಂದು ಮತ್ತೆ ಅವನ ಕಾಯಕವನ್ನು ಮುಂದುವರೆಸುತ್ತಿದ್ದ. ನಮಗೆಲ್ಲ ಅವನ ವಾಚಾಳಿತನ ತಮಾಷೆಯ ವಿಷಯವಾಗಿತ್ತು. ಆಗಾಗ ಯಾವ್ಯಾವ್ದೋ ವಿಷಯಗಳನ್ನು ಎತ್ತಿ, ಅವನ ಬಾಯಿಂದ ಉದುರುವ ಅಣಿಮುತ್ತುಗಳನ್ನು ಕೇಳಿ ನಗಾಡಿಕೊಳ್ಳುತ್ತಿದ್ದೆವು.

ಹಬ್ಬದ ದಿನ ಬೆಳಿಗ್ಗೆ ಜಗಲಿಯಲ್ಲಿ ಖುರ್ಚಿ ಹಾಕಿಕೊಂಡು ಕುಳಿತು ಪೇಪರ ಓದುತ್ತಿದ್ದವನಿಗೆ ಈರ ಮನೆ ಕಡೆ ಬರುತ್ತಿರುವುದು ಕಂಡಿತು. ಸಮಯ ನೋಡಿದರೆ ಇನ್ನೂ ಎಂಟು ಗಂಟೆ. ಅವನು ಇನ್ನೂ ಸ್ವಲ್ಪ ದೂರದ್ದಲ್ಲಿದ್ದಂತೆಯೇ ನಾನು "ಎನೋ ಈರಾ, ಇಷ್ಟು ಬೇಗಾ ಬಂದು ಬಿಟ್ಟಿದ್ದೀಯಾ" ಎಂದು ಕೇಳಿದೆ. ಹತ್ತಿರಾ ಬಂದವನೇ "ಓ, ಮರಿ ಹೆಗಡೇರು....ಹಬ್ಬಕ್ಕೆ ಮನೆಗೆ ಬಂದವ್ರೆ. ಬೆಂಗ್ಳೂರಿಂದಾ ಯಾವಾಗಾ ಬಂದ್ರಾ?" ಎಂದು ಕೇಳಿದ. ನಾನು "ನಿನ್ನೆ" ಎಂದು ಹೇಳಿ ಸುಮ್ಮನಾದೆ. "ಹೆಗ್ಡೇರು ಕಾಯಿ ಕೊಯ್ಯಕ್ಕೆ ಬಾ ಅಂದಿದ್ರು. ಮುಗಸಕಂಡೇ ಭಟ್ಟರ ಮನೆಗೆ ಹೋಗವಾ ಅಂತಾ ಬೆಗ್ಗನೇ ಬಂದೆ. ಹೆಗಡ್ರಿಲ್ಲ್ರಾ? ಎಂದು ಪ್ರಶ್ನೆ ಹಾಕಿದ. ನಾನು ಒಳಗೆ ಹೋಗಿ, ಯಾವ್ಯಾವ ಮರದ್ದು ಕಾಯಿ ಕೀಳಿಸುವುದು ಎಂದು ತಿಳಿದುಕೊಂಡು, ಈರನ ಹತ್ತಿರ "ನಡ್ಯಾ, ನಾನೇ ಬರ್ತೆ ಇವತ್ತು. ನಿನ್ನ ಹತ್ರಾ ಮಾತಾಡದ್ದೇ ಬಾಳ ದಿನಾ ಆಯ್ತು" ಎಂದು ಕತ್ತಿ, ತಳೆ, ಗೋಣಿಚೀಲ ಹಿಡಿದುಕೊಂಡು ಹೊರಟೆ. "ಈ ಮುದಕನ ಹತ್ರ ಎಂತಾ ಇರ್ತದ್ರಾ ಮಾತಾಡದು? ನೀವೇ ಹೇಳ್ಬೇಕು ಬೆಂಗ್ಳೂರಲ್ಲಿದ್ದವ್ರು" ಎಂದವನೇ ಬಾಯಲ್ಲಿದ್ದ ಎಲೆಯಡಿಕೆಯನ್ನು ಉಗಿದು ನನ್ನ ಜೊತೆಗೆ ಮಾತಾಡಲು ಅನುವಾದ. ಬೆಳಿಗ್ಗೆ ಬೆಳಿಗ್ಗೆನೇ ಒಳ್ಳೆ ಟೈಮ್ ಪಾಸ್ ಆಯ್ತು ಅಂತ ನನಗೆ ಒಳಗೊಳಗೇ ಸಂತೋಷವಾಯ್ತು.

ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಈರ ಜಾಸ್ತಿ ಮಾತಾಡುವ ಇರಾದೆಯನ್ನೇನೂ ತೋರಿಸಲಿಲ್ಲ. ನಾನೇ ಯಾವ್ಯಾವ್ದೋ ವಿಷಯಗಳನ್ನು ಎತ್ತಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಎಲ್ಲದಕ್ಕೂ ಅವನದು ಚುಟುಕಾದ ಉತ್ತರ.ಇವತ್ಯಾಕೋ ಅವನ ಮೂಡ್ ಸರಿಯಿಲ್ಲದಿರಬಹುದು ಎಂದು ನಾನೂ ಜಾಸ್ತಿ ಮಾತಾಡದೇ ಅವನ ಕೆಲಸ ಮುಗಿಯುವವರೆಗೂ ಸುಮ್ಮನಿದ್ದೆ. ಕೆಡವಿದ ಕಾಯಿಗಳೆಲ್ಲವನ್ನೂ ಚೀಲಕ್ಕೆ ತುಂಬಿ ಈರನ ಬೆನ್ನಿಗೆ ಹೊರಿಸಿ ನಾನು, ಅವನು ಮನೆ ಕಡೆ ಪಾದ ಬೆಳೆಸಿದೆವು. ಕೊಟ್ಟಿಗೆ ಹತ್ತಿರ ಚೀಲವನ್ನು ಧೊಪ್ಪನೆ ಇಳಿಸಿ, ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತವನೇ ಈರ, "ಹೆಗ್ಡೇರೇ, ಎಲೆಕ್ಸನ್ನು ಬಂತಲ್ರಾ, ಈ ಸಲ ಮುಖ್ಯಮಂತ್ರಿ ಯಾರಾಗ್ತಾರ್ರಾ?" ಎಂದು ಕೇಳಿಯೇ ಬಿಟ್ಟ. ನಾನು ನಿಂತಲ್ಲಿಯೇ ಎಡವಿ ಬೀಳೋದಂದೇ ಬಾಕಿ. ಬೆಳಿಗ್ಗೆ ಬೆಳಿಗ್ಗೇನೇ ಇಂಥ ಗಹನ ಗಂಭೀರ, ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಈರನ ಬಾಯಿಂದಂತೂ ನಿರೀಕ್ಷಿಸಿರಲಿಲ್ಲ. ಏನು ಉತ್ತರ ಕೊಡಬೇಕೆಂದೇ ನನಗೆ ತೋಚಲಿಲ್ಲ. ನಾನು ನೇರವಾಗಿ ಉತ್ತರಿಸಿದರೆ, ಈ ಮುದುಕನ ತಲೆಯೊಳಗಿರಬಹುದಾದ ಅನೇಕ ಸ್ವಾರಸ್ಯಕರ ವಿಚಾರಗಳು ತಪ್ಪಿಹೋಗಬಹುದು ಎಂದೆಣಿಸಿ, ಸ್ವಲ್ಪ ನಿಧಾನಕ್ಕೆ "ನಾನೆಂತಾ ಜ್ಯೋತಿಷಿನೆನಾss ಯಾರು ಮುಖ್ಯಮಂತ್ರಿ ಆಗ್ತಾರೆ ಹೇಳಕ್ಕೆ? ನಂಗೆಂತಾ ಗೊತ್ತು? ನಿಂಗೆ ಯಾರು ಆಗ್ಬೇಕು ಅಂತದೇ?" ಎಂದು ಅವನಿಗೇ ಮರುಪ್ರಶ್ನೆ ಹಾಕಿದೆ. ಸಟ್ಟನೇ ಬಂತು ಉತ್ತರ. "ನೀವು ನನ್ನಾ ಕೇಳಿದ್ರೆ ನಮ್ಮ ಬಂಗಾರಪ್ಪನೋರು ಆಗ್ಬೇಕು ನೋಡಿ ಮತ್ತೆ ಇನ್ನೊಂದು ಸರ್ತಿ.ಚೊಲೋ ಇರ್ತದೆ" ಎಂದ. ಅದೇನೂ ನನಗೆ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಈರನ ಮನೆಯವರೆಲ್ಲರೂ ಬಂಗಾರಪ್ಪನ ಪರಮ ಭಕ್ತರು. ಬಂಗಾರಪ್ಪನೋರು ಮುಖ್ಯಮಂತ್ರಿ ಆದಾಗ ಈರನ ಮಗನಿಗೊಂದು ಅಗಸೇಬಾಗಿಲಲ್ಲಿ ಸಣ್ಣ ಪಾನ್ ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿದ್ದರು. ಅವನ ಮನೆ ನಡೆಯಲು ಆ ಪಾನ್ ಅಂಗಡಿ ಎಷ್ಟೋ ರೀತಿಯಲ್ಲಿ ಸಹಾಯ ಮಾಡಿದೆ. ಹಾಗಾಗಿ ಈರನಿಗೆ ಮತ್ತೆ ಬಂಗಾರಪ್ಪನವರೇ ಮುಖ್ಯಮಂತ್ರಿ ಆಗಲಿ ಎಂದನ್ನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ಯಾವಾಗ ಕೇಳಿದ್ದರೂ ಬಹುಷಃ ಅವನಿಂದ ಅದೇ ಉತ್ತರ ಸಿಗುತ್ತಿತ್ತು.

"ಅಲ್ದಾ, ಬಂಗಾರಪ್ಪನವರಿಗೆ ವಯಸ್ಸಾಗ್ಲಿಲ್ಲೇನಾ ಈಗಾ? ಈ ವಯಸ್ಸಲ್ಲಿ ಮುಖ್ಯಮಂತ್ರಿ ಆದರೇ ಅವರ ಹತ್ರಾ ಎಂತಾ ಮಾಡಕ್ಕೇ ಆಗತ್ತಾ?" ನಾನು ಇನ್ನೂ ಕೆದಕಿದೆ. "ಹ್ವಾಯ್, ವಯಸ್ಸಾದ್ರೆ ಎಂಥಾ ಆಯ್ತು? ಎಷ್ಟು ಗಟ್ಟಿ ಅದಾರೆ ಅವ್ರು. ಈ ವಯಸ್ಸಲ್ಲು ಬೇಕಾದ್ರೆ ಡೊಳ್ಳು ಕಟ್ಕೊಂಡು ಕುಣಿತಾರೆ ಗೊತ್ತಾ? ಅಲ್ಲಾ ನನ್ನ ನೋಡಿ ಬೇಕಾರೆ. ನಾನೂ ಬೇಕಾರೆ ಡೊಳ್ಳು ಕುಣಿತೆ ಗೊತ್ತಾ ನಿಮಗೆ? ಕಾಲು ಸ್ವಲ್ಪ ತೊಂದ್ರೆ ಕೊಡ್ತದೆ ಹೇಳದು ಬಿಟ್ರೆ ಆರಾಮಾಗೇ ಇದ್ದೆ ನಾನೂವಾ. ಮನೆ ನಡ್ಸಕಂಡು ಹೋಗ್ತಾ ಇಲ್ವಾ ಈಗ? ಮನೆ ನಡೆಸ್ದಾಂಗೆಯಾ ರಾಜ್ಯ ಆಳೋದು.ವಯಸ್ಸಾಯ್ತು ಹೇಳಿ ಮನ್ಸ್ರನ್ನ ಅಸಲಗ್ಯ ಮಾಡ್ಬೇಡಿ ನೀವು ಹಾಂಗೆಲ್ಲಾ" ಎಂದು ಅವನದೇ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಅಣಕಿಸುವಂತೆ ಹೇಳಿದ. ನಾನು ಈಗ ಧಾಟಿ ಬದಲಾಯಿಸಿ "ಹೋಗ್ಲಿ ಬಂಗಾರಪ್ಪನವ್ರು ಈಗ ಯಾವ ಪಕ್ಷದಲ್ಲಿದಾರೆ ಹೇಳಾದ್ರೂ ಗೊತ್ತನಾ ನಿಂಗೆ?" ಎಂದು ಕೇಳಿದೆ. "ಅದ್ನೆಲ್ಲಾ ಕಟ್ಕಂಡು ನಮಗೆಂತಾ ಆಗ್ಬೇಕಾಗದೆ? ಅವ್ರು ಯಾವ ಪಕ್ಷದಲ್ಲಿದ್ರೆಂತಾ? ನಮ್ಮ ಮಗ ಹೇಳ್ತಾ ಯಾವ ಚಿತ್ರಕ್ಕೆ ವೋಟ್ ಹಾಕ್ಬೇಕು ಹೇಳಿ. ಅದಕ್ಕೆ ಹಾಕಿ ಬಂದ್ರಾಯ್ತು ಅಷ್ಟೇಯಾ" ಅಂದ. ಇನ್ನು ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿತು. ಆದರೂ ಇಷ್ಟಕ್ಕೆ ಬಿಟ್ಟ್ರೆ ಎಂತಾ ಚಂದ ಎನ್ನಿಸಿ "ವಯಸ್ಸಾದವ್ರೆಲ್ಲಾ ರಾಜ್ಯ ಚೊಲೋ ಆಳ್ತಾರೆ ಅಂದ್ರೆ ದೇವೇಗೌಡ್ರೇ ಮುಖ್ಯಮಂತ್ರಿ ಆಗ್ಬಹುದಲ್ಲಾ?" ಎಂಬ ಹೊಸಾ ತರ್ಕ ಮುಂದಿಟ್ಟೆ. ಈರನಿಗೆ ಯಾಕೋ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣ್ತು. "ನೀವು ಅವ್ರ ಸುದ್ದಿ ಮಾತ್ರ ಎತ್ಬೇಡಿ ನನ್ನತ್ರಾ" ಎಂದ. ಅಷ್ಟರಲ್ಲಿ ಅಮ್ಮ ಒಳಗಿಂದ ಬಾಳೆ ಎಲೆಯಲ್ಲಿ ಅವಲಕ್ಕಿ, ಒಂದು ಲೋಟ ಚಾ ಹಿಡಿದುಕೊಂಡು ಬಂದು ಕಟ್ಟೆ ಮೇಲಿಟ್ಟರು. ಈರ ಬಂದ ಸಿಟ್ಟನೆಲ್ಲ ಹಾಕಿಕೊಂಡಿದ್ದ ಎಲೆಯಡಿಕೆಯ ಮೇಲೆ ತೀರಿಸುವಂತೆ, ಅದನ್ನು ಪಕ್ಕಕ್ಕೇ ಜೋರಾಗಿ ಉಗುಳಿ, "ಈಗ ಆಸ್ರಿಗೆ ಎಲ್ಲಾ ಬ್ಯಾಡ್ರಾ ಅಮಾ, ಮನ್ಲೇ ಮಾಡ್ಕಂಡು ಬಂದೆ. ನೀವು ಒಂದೆರಡು ಅಡಿಕೆ ಇದ್ರೆ ಕೊಡಿ, ಕವಳ ಸಂಚಿ ಖಾಲಿಯಾಗೋಗದೆ" ಎಂದ. ಅಮ್ಮ ಗೊಣಗುತ್ತಾ "ನಿಂಗೆ ಅಡಿಕೆ ಕೊಟ್ಟು ಪೂರೈಸೈಕಾಗಲ್ಲಾ ನೋಡು. ದಿನಕ್ಕೆ ಸಾವ್ರ ಸಲ ಕವಳ ಹಾಕ್ತೆ. ನಂಗೆ ಬೇಕಾದಷ್ಟು ಕೆಲ್ಸ ಅದೆ. ಈಗ ಅಟ್ಟ ಹತ್ತಿ ಮತ್ತೆ ಅಡಕೆ ತರ್ಲಿಕ್ಕೆ ನನ್ನ ಕೈಯಲ್ಲಂತೂ ಆಗಲ್ಲ" ಎಂದು ಹೇಳಿ ವಾಪಸ್ ಹೋದರು. ಅಮ್ಮ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಅವನು ಹೊಸದಾಗಿ ಯಾವಾಗ ಎಲೆಯಡಿಕೆ ಹಾಕಿಕೊಂಡಿದ್ದನೋ, ನನಗಂತೂ ಗೊತ್ತೇ ಆಗಿರಲಿಲ್ಲ. ಈರನಿಗ್ಯಾಕೋ ಕೊಟ್ಟ ಅವಲಕ್ಕಿ, ಚಾ ಗಿಂತಲೂ ಅಡಿಕೆಯೇ ಮೇಲೆಯೇ ಜಾಸ್ತಿ ಒಲವಿದ್ದ ಹಾಗೇ ಕಂಡಿತು. ಅವನು ನನ್ನನ್ನು ಮತ್ತೆ ಅದರ ಅವಶ್ಯಕತೆಯ ಬಗ್ಗೆ ಕೊರೆಯುವುದಕ್ಕಿಂತ ಮುಂಚೆ ನಾನೇ ಎದ್ದು ಹೋಗಿ ಡಬ್ಬದಿಂದ ೪ ಅಡಿಕೆ ತಂದು ಅವನ ಕೈಗೆ ಹಾಕಿದೆ.

ಈರ ಅವಲಕ್ಕಿ ಖಾಲಿ ಮಾಡುತ್ತಿರುವಂತೆಯೇ ನಾನು ಮತ್ತೆ ಕೇಳಿದೆ. "ಅಲ್ವಾ, ದೇವೇಗೌಡ್ರು ಮುಖ್ಯಮಂತ್ರಿ ಆಗೋದು ಬ್ಯಾಡ ಹೇಳಿ ಎಂತಕ್ಕೆ ಹೇಳಿ ಹೇಳಿಲ್ವಲ್ಲಾ ನೀನು?". "ಅದು... ಈ ಸರಾಯಿ ಮಾರೋದು ನಿಲ್ಲಿಸ್ದವ್ರು ದೇವೇಗೌಡ್ರೇ ಅಲ್ವ್ರಾ. ಅದಕ್ಕೆ ಬೇಡ ಅಂದೆ" ಅಂದ. ಅವನ ಯೋಚನೆಗಳಿಗೆ ಇಂಥ ಆಯಾಮಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ. "ಥೋ, ಮಾರಾಯ..ಸಾರಾಯಿ ಮಾರೋದ್ನಾ ನಿಲ್ಲಿಸ್ದವ್ರು ದೇವೇಗೌಡ್ರು ಅಲ್ಲ ಮಾರಾಯ. ಬಿಜೆಪಿಯವ್ರು" ಎಂದೆ. "ಯಾರಾದ್ರೆ ಎಂತದು? ಒಟ್ನಲ್ಲಿ ದೇವೇಗೌಡ್ರ ಮಗ ಮುಖ್ಯಮಂತ್ರಿ ಆಗಿದ್ದಾಗ ಅಲ್ದಾ ನಿಲ್ಸಿದ್ದು.ಒಟ್ನಲ್ಲಿ ನಮ್ಮ ಟೈಮ್ ಸರಿಯಿರ್ಲಿಲ್ಲ.ಅದಕ್ಕೆಯಾ ಬಂಗಾರಪ್ನೋರಿಗೆ ವೋಟ್ ಹಾಕದು ನಾನು" ಎಂದ. ಪ್ಯಾಕೆಟ್ ಸರಾಯಿ ಮಾರೋದು ನಿಲ್ಲಿಸಿದಕ್ಕೂ, ಈರನ ಟೈಮ್ ಸರಿಯಿಲ್ಲದಿರದಕ್ಕೂ ರಿಲೇಟ್ ಮಾಡಲು ನನಗಂತೂ ಬಹಳ ಕಷ್ಟವಾಗಲಿಲ್ಲ. ದಿನವೂ ಸಂಜೆ ೭ ಗಂಟೆ ಆಗುತ್ತಿದಂತೆಯೇ ಈರ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಉತ್ತರಾಭಿಮುಖವಾಗಿ ನೀಲೆಕಣಿ ಕಡೆಗೆ ಹೋಗುವುದು ಯಾವ ಗನಗಂಭೀರ ಉದ್ದೇಶಕ್ಕೆ ಎನ್ನುವುದು ಇಡೀ ಊರಿಗೆ ಗೊತ್ತು.ಇಂತಿಪ್ಪ ಈರನಿಗೆ ಧಿಡೀರ್ ಎಂದು ಪ್ಯಾಕೆಟ್ ಸಾರಾಯಿ ನಿಷೇಧ ಮಾಡಿಬಿಟ್ಟರೆ ಎಷ್ಟು ಕಷ್ಟವಾಗಿರಲಿಕ್ಕಿಲ್ಲ?. ಆ ಕಾರ್ಯಕ್ಕೆ ಮುಂದಾದ ಜನರನ್ನು ಅವನು ಜೀವಮಾನದಲ್ಲಿ ಕ್ಷಮಿಸುವುದು ಸುಳ್ಳು. ಈ ವಿಷಯ ಮತ್ತೆ ಮುಂದುವರಿಸಿದರೆ ಈರನ ಮೂಡ್ ಮತ್ತೆ ಯಾವ ಕಡೆ ತಿರುಗುತ್ತದೆಯೋ ಎಂದು ಹೆದರಿ ನಾನು ಮಾತುಕತೆಯನ್ನು ಅಲ್ಲಿಯೇ ನಿಲ್ಲಿಸಿಬಿಟ್ಟೆ.

ಆದರೆ ಈರ ನಿಲ್ಲಿಸುವ ಲಕ್ಷಣವಿರಲಿಲ್ಲ." ನೀವು ಬರೀ ನನ್ನ ಕೇಳಿದ್ದೇ ಆಯ್ತು. ನೀವು ಯಾರಿಗೆ ವೋಟ್ ಹಾಕ್ತ್ರಿ? ಬಂಗಾರಪ್ಪನವ್ರಿಗೇ ಹಾಕಿ" ಎಂದ. ನಾನು ತಲೆ ಆಡಿಸಿದೆ. ಇನ್ನೇನೂ ಹೇಳಲು ಬಾಯಿತೆರೆದರೆ ನನ್ನ ಮಾತುಗಳೆಲ್ಲವೂ ನನಗೇ ತಿರುಗುಬಾಣವಾಗುವ ಸಾಧ್ಯತೆಯಿತ್ತು. "ಎಲೆಕ್ಷನ್ ದಿನಾ ನಿಮ್ಗೆ ರಜೆ ಅದ್ಯಾ? ವೋಟ್ ಹಾಕಕ್ಕೆ ಬೆಂಗ್ಳೂರಿಂದ ಬರದು ಹೌದಾ?" ಎಂದು ಕೇಳಿದ. "ಹ್ಮ್...ನೋಡಣಾ. ಬರ್ಬೇಕು ಅಂತದೆ. ಎಂತಾ ಆಗ್ತದೆ ಗೊತ್ತಿಲ್ಲ. ಈ ಎಲೆಕ್ಷನ್ ನಾಟಕಾ ಎಲ್ಲ ನೋಡಿದ್ರೆ ಯಾರಿಗೂ ವೋಟ್ ಹಾಕದೇ ಬ್ಯಾಡ ಅನ್ನಸ್ತದೆ ಮಾರಾಯಾ" ಎಂದು ತುಸು ಬೇಸರದ ಧ್ವನಿಯಲ್ಲೇ ಹೇಳಿದೆ. "ಹ್ವಾಯ್, ನೀವು ಹಿಂಗೆ ಹೇಳಿದ್ರೆ ಹೆಂಗ್ರಾ? ನಿಮ್ಮಂಥ ಹುಡುಗ್ರು, ಓದ್ದವ್ರು ವೋಟ್ ಹಾಕ್ಲೇ ಬೇಕ್ರಾ. ನಾವಾರೇ ಓದದವ್ರು, ಜಾಸ್ತಿ ತೆಳಿಯದಿಲ್ಲಾ. ನೀವು ಪ್ರಪಂಚ ಕಂಡವ್ರು. ನಿಮಗೆ ಗೊತ್ತಿರ್ತದೆ ಅಲ್ರಾ, ಯಾರಿಗೆ ವೋಟ್ ಹಾಕ್ಬೇಕು, ಯಾರಿಗೆ ಹಾಕ್ಬಾರ್ದು ಅಂತೆಲ್ಲಾ? ನೀವು ವಿದ್ಯಾವಂತರು ವೋಟ್ ಹಾಕ್ದೇ ಇದ್ದ್ರೆ ಎಂಥೆಂತದೋ ಜನ ಆರ್ಸಿ ಬರ್ತಾರೆ. ವೋಟ್ ಹಾಳು ಮಾಡ್ಬೇಡ್ರಿ ಮಾರಾಯ್ರಾ. ರಜೆ ಹಾಕಾದ್ರೂ ಬಂದು ವೋಟ್ ಮಾಡಿ ಹೋಗಿ" ಎಂದು ಕಳಕಳಿಯ ಧ್ವನಿಯಲ್ಲಿ ಹೇಳಿದ. ಈರನಿಗಿದ್ದ ಕಳಕಳಿ ಎಲ್ಲ ವಿದ್ಯಾವಂತರಲ್ಲೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ನನಗೆ ಅನ್ನಿಸಿತು. ಈರ ಮುಂದುವರಿಸಿ " ನಾನು ಭಟ್ಟರಿಗೂ ಹೇಳ್ದೆ. ಭಟ್ಟ್ರ ಮಗಳು ಕಾಲೇಜಿಗೆ ಹೋಗ್ಲಿಕ್ಕೆ ಹಣಕಿ ೩ ವರ್ಷ ಆಗ್ತಾ ಬಂತು. ಅವ್ರೂ ವೋಟ್ ಹಾಕ್ಬಹುದೇನಪಾ. ಎರಡು ತಿಂಗ್ಳ ಹಿಂದೆ ಹೀಪನಳ್ಳಿ ಶಾಲೆಲೇ ಅದೆಂತೋ ಹೆಸರು ಬರೆಸ್ಕಂಡು ಹೋದ್ರು. ನಮ್ಮ ಗೋವಿಂದಂಗೆ ಈ ವರ್ಷ ೧೮ ತುಂಬ್ತು. ಅವ್ನ ಕಳ್ಸಿಕೊಟ್ಟಿದ್ದೆ. ಈಗ ಮೊನ್ನೆ ಮೊನ್ನೆ ಅದೆಂತೋ ಮಶಿನ್ನಾಗೆ ಫೋಟೋ ತೆಗಸಿ ಒಂದು ಕಾರ್ಡ್ ಕೊಟ್ರಪ್ಪಾ. ಅವ್ನುವಾ ಈ ಸಲ ವೋಟ್ ಮಾಡ್ಬಹುದಂತೆ. ಆದ್ರೆ ಭಟ್ಟ್ರ ಮಗಳು ಹೋದಂಗೆ ಇಲ್ಲ. ಅಲ್ಲಾ ಆ ಹುಡಗಿಗಂತೂ ಬುದ್ಧಿ ಇಲ್ಲ.ಭಟ್ಟ್ರಾದ್ರೂ ಕಳ್ಸಿಕೊಡ್ಬೇಕಾ ಇಲ್ಲ್ವಾ? ನಾ ಹೇಳ್ದೆ. ಭಟ್ಟರೆಲ್ಲಿ ಕೇಳ್ತಾರೆ ನನ್ನ ಮಾತಾ? ಮುದಕಾ ವಟವಟಗುಡ್ತಾನೆ ಅಂತಾರೆ . ಹೋಗ್ಲಿ ಬಿಡಿ.ಎಂತಾ ಮಾಡಕ್ಕೆ ಆಗ್ತದೇ ಅಲ್ರಾ? ಎಂದು ತನ್ನ ಬೇಸರ ತೋಡಿಕೊಂಡ. ನಾನು ಸುಮ್ಮನೆ ಅವನನ್ನು ಸಮ್ಮತಿಸಿದೆ.

ಇನ್ನೂ ಒಂದಷ್ಟು ಹೊತ್ತು ಮಾತಾಡುತ್ತಿದ್ದನೇನೋ. ಆದರೆ ನಾನು ಸುಮ್ಮನಿದ್ದದನ್ನು ನೋಡಿ "ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹೀಂಗೆ ಮಧ್ಯಾಹ್ನ ಆಗೋಗ್ತದೆ. ಭಟ್ಟ್ರು ಆಮೇಲೆ ಕೋಲು ಹಿಡ್ಕಂಡು ಕಾಯ್ತಿರ್ತಾರೆ" ಅಂದವನೇ "ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ. ನಾನು ಸ್ವಲ್ಪ ಹೊತ್ತು ಅವನ ಹೋದ ದಾರಿಯನ್ನೇ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಮಾತ್ರ, ಯಾವುದೇ ಕಾರಣಕ್ಕೆ ತಪ್ಪಿಸದೇ ವೋಟ್ ಮಾತ್ರ ಹಾಕಲೇ ಬೇಕೆಂದು ಧೃಢವಾಗಿ ನಿರ್ಧರಿಸಿಕೊಂಡೆ. ನೀವೂ ಅಷ್ಟೇ. ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಆಯ್ತಾ? ಗೊತ್ತಾದ್ರೆ ಈರ ಬಹಳ ಬೇಜಾರು ಮಾಡ್ಕೋತಾನೆ!

Thursday, March 20, 2008

ಯಾವ ಮೋಹನ ಮುರಳಿ ಕರೆಯಿತೋ

ಕೆಲವೊಮ್ಮೆ ನನಗೆ ಹಾಗಾಗುತ್ತೆ. ಯಾವುದೋ ಹಾಡು ತುಂಬಾ ಹಿಡಿಸಿ, ಬಹಳಷ್ಟು ದಿನಗಳ ಕಾಲ ಕಾಡುತ್ತಾ ಇರತ್ತೆ. ಇಡೀ ದಿನ ಅದರದ್ದೇ ಗುಂಗು. ಈಗೊಂದು ೧೫ ದಿನಗಳಿಂದ ಈ ಹಾಡು ಕಾಡುತ್ತಾ ಇದೆ.

ಇದು ತೆಲುಗಿನ "ಸಿರಿವೆನ್ನೆಲ" ಚಿತ್ರದ್ದು. ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ. ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ, ಸಾಹಿತ್ಯದ ಅರ್ಥ ತಿಳಿದುಕೊಂಡೆ. ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ!. "ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ" ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು. ಅದಕ್ಕೆ ಒಳ್ಳೆಯ ಸಂಗೀತ ಬೇರೆ.ಈ ಹಾಡಿನಲ್ಲಿ ಕೊಳಲಿನ ಬಳಕೆ, ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ. ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಕೆ.ವಿ.ಮಹಾದೇವನ್, ಹಾಡಿದವರು ಎಸ್.ಪಿ.ಬಿ ಮತ್ತು ಪಿ.ಸುಶೀಲಾ. ಹ್ಮಾ.. ಮರೆತಿದ್ದೆ. ಈ ಚಿತ್ರದಲ್ಲಿ ನಾಯಕ ಕುರುಡ, ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ. ನಾಯಕಿ ಮೂಕಿ. ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ.

ಒಳ್ಳೆಯ ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆಯಲ್ಲಿ ತೇಲಿ ಬರುತ್ತಿರುವ ಕೊಳಲಿನ ಸದ್ದು, ಇವೆಲ್ಲಾ ಒಟ್ಟಿಗೆ ಸೇರಿದರೆ ಗಂಧರ್ವಲೋಕ ಸೃಷ್ಟಿಯಾಗದೇ ಇನ್ನೇನಾದೀತು?

Monday, March 17, 2008

ಮೂಕ ಹಕ್ಕಿಯು ಹಾಡುತಿದೆ..

ವಾರಂತ್ಯದಲ್ಲೂ ನಗರದ ಜಂಜಡದಿಂದ ಅಷ್ಟು ದೂರ ಬಂದು, ಈ ಹಸಿರು ಹಿನ್ನೆಲೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಹರವನ್ನು ದಿಟ್ಟಿಸುತ್ತಾ ಕಾಲ ಕಳೆಯುವುದು ಕೇವಲ ಅವಳ ನೆನಪನ್ನು ಮರೆಯಲೋಸ್ಕರವಾ?ಅಥವಾ ನನ್ನನ್ನೇ ನಾನು ಮರೆಯಲಾ? ಗೊತ್ತಾಗುತ್ತಿಲ್ಲ! . ಆದರೆ ಒಂದಂತೂ ನಿಜ. ಹಸಿರು ಸೆರಗು ಹೊದ್ದಿರುವ ವನದೇವತೆಯ ಮಡಿಲಲ್ಲಿ ಮೈಚಾಚಿ,ದಿವ್ಯ ಏಕಾಂತದಲ್ಲಿ ಎಲ್ಲವನ್ನೂ ಮರೆತು ಹೋಗುವುದು ಎಷ್ಟು ಆಪ್ಯಾಯಮಾನ ಗೊತ್ತಾ?

ಅವಳೂ ನನ್ನ ಪಕ್ಕದಲ್ಲೇ ಕುಳಿತು ಮೌನದೊಳಕ್ಕೇ ಪಿಸುಗುಟ್ಟಿದ್ದರೆ ಇನ್ನೂ ಹಿತವಾಗಿರುತ್ತಿತ್ತೆಂದು ಒಮ್ಮೊಮ್ಮೆ ಅನಿಸುವುದಿದೆ.ಆದರೆ ಆಗ ಏಕಾಂತದ ರಸಘಳಿಗೆಯನ್ನು ಸವಿಯುವ ಭಾಗ್ಯ ತಪ್ಪಿಹೋಗುತ್ತಿತ್ತೇನೋ. ಏಕಾಂತದ ರಂಗಸ್ಥಳದಲ್ಲಿ ಕೇವಲ ನನ್ನೆದೆಯ ಪಿಸುಮಾತುಗಳ ಧ್ವನಿಗಳಿಗೆ ಜಾಗವಿದೆ.ಮಾತು ಮೂಕವಾಗಿ, ಮೌನ ಧ್ವನಿಯಾಗಿ, ಒಂಟಿ ಹಕ್ಕಿ ಗರಿಗೆದರಿ ಅಲ್ಲಿ ಕುಣಿಯಬೇಕು. ನನ್ನ ದುಃಖ ದುಮ್ಮಾನಗಳು ಸದ್ದಿಲ್ಲದೇ ಬಂದು ರಂಗಸ್ಥಳದಲ್ಲಿ ಗಿರಿಗಿಟ್ಲಿಯಾಗಿ ಕುಣಿದು ಸುಸ್ತಾಗಿ, ನೇಪಥ್ಯಕ್ಕೆ ಸರಿದು ಅನಿರ್ವಚನೀಯವಾದ ಭಾವವೊಂದಕ್ಕೆ ಎಡೆ ಮಾಡಿಕೊಡಬೇಕು. ಆ ಸುಖಕ್ಕಾಗಿಯೇ ಅಲ್ಲವೇ ನಾನು, ಕುಣಿಕೆ ಬಿಚ್ಚಿದೊಡನೆಯೇ ಅಮ್ಮನ ಬಳಿ ಓಡಿ ಬರುವ ಪುಟ್ಟ ಕರುವಿನ ತರ ಪದೇ ಪದೇ ಇಲ್ಲಿಗೆ ಓಡಿ ಬರುತ್ತಿರುವುದು?

ಅವಳು ಬಿಟ್ಟು ಹೋದಾಗ ನನ್ನನಾವರಿಸಿಕೊಂಡ ಭಾವ ಎಂತಹುದೆಂಬುದು ಹೇಳುವುದು ಕಷ್ಟ. ಅನಾಥ ಭಾವ ರಪ್ಪನೇ ಮುಖಕ್ಕೆ ರಾಚಿತ್ತು. ದುಃಖವೇ ಹಾಗಲ್ಲವೇ ? ಸದಾ ಸುಖದ ನೆರಳಿನಲ್ಲೇ ಇದ್ದು, ಸಮಯಸಾಧಕನಂತೆ ಹೊಂಚು ಹಾಕಿ ಇದ್ದಕ್ಕಿದ್ದ ಹಾಗೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಪೋಶನ ತೆಗೆದುಕೊಂಡುಬಿಡುತ್ತದೆ.ಅದಕ್ಕೆ ನಿಧಾನವೆಂಬುದೇ ಗೊತ್ತಿಲ್ಲ. ಅಮಾವಾಸ್ಯೆಯ ಕತ್ತಲಿನಂತೆ ಗಾಢವಾಗಿ ಕವಿದು ಒಂದೇ ಕ್ಷಣದಲ್ಲಿ ಎಲ್ಲಾವನ್ನೂ ಆವರಿಸಿಕೊಂಡು ಬಿಡುತ್ತದೆ. ನನಗೂ ಹಾಗೇ ಆಗಿತ್ತು. ದೀಪದ ದಾರಿಯಲ್ಲಿ ನಡೆಯುತ್ತಿದ್ದವನಿಗೆ ಇದ್ದಕಿದ್ದ ಹಾಗೆ ಕಣ್ಣುಗಳು ಕುರುಡಾದ ಹಾಗೆ. ಹಲವು ದಿನಗಳಲ್ಲೇ ನಾನು ಒಂಟಿತನದ ದಾಸನಾಗಿಬಿಟ್ಟಿದ್ದೆ. ಆದರೆ ಒಂಟಿತನ ದುಃಖದಂತಲ್ಲ. ಅದು ನಿಧಾನವಾಗಿ ನನ್ನನ್ನು ತನ್ನ ಪರಿಧಿಯೊಳಕ್ಕೆ ಸೆಳೆದುಕೊಂಡಿತು. ಮೊದ ಮೊದಲು ಒಂಟಿತನದ ಮೌನ, ಕತ್ತಲು ಎಲ್ಲವೂ ಆಪ್ಯಾಯಮಾನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಗೊತ್ತಾಗುತ್ತಾ ಹೋಯಿತು. ಬೆಳಕು ಬೇಕೆಂದರೆ ಒಂಟಿತನದ ಕತ್ತಲ ಮನೆಗೆ ಕಿಟಕಿಗಳೇ ಇಲ್ಲ!.

ಒಂಟಿತನದ ಲೋಕದಲ್ಲಿ ಬಾಳು ಬಹಳ ದುರ್ಭರವಾಗಿತ್ತು. ಕತ್ತಲು ದಿಗಿಲುಕ್ಕಿಸುತ್ತಿತ್ತು. ಅವ್ಯಕ್ತ ಮೌನ ಮೂಗಿಗೆ ಅಡರಿ ಉಸಿರುಗಟ್ಟಿಸುವ ವಾತಾವರಣ. ಎಲ್ಲೋ ಗೋಚರಿಸಿಬಹುದಾದ ಪುಟ್ಟ ಬೆಳಕಿನ ಕಿರಣವನ್ನು ಹುಡುಕಿ,ದುಃಖದ ವ್ಯಾಪ್ತಿಯಿಂದ ಹೊರಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ದಿನ ಆ ಕತ್ತಲಲ್ಲೇ ಅಂಬೆಗಾಲಿಟ್ಟು ತೆವಳಿ ಹುಡುಕಿದ ಮೇಲೆಯೇ ಕಂಡಿದ್ದು ನನಗೆ ಈ ಏಕಾಂತದ ಪುಟ್ಟ ಬೆಳಕಿಂಡಿ. ಅವತ್ತು ಎಷ್ಟು ಸಂತೋಷವಾಗಿತ್ತು ಗೊತ್ತಾ?ಮೊದಲ ಬಾರಿ ನನ್ನೆದೆಯ ಹಕ್ಕಿ ರೆಕ್ಕೆ ಬಿಚ್ಚಿ ಗರಿಗೆದರಿ ಹಾಡಿತ್ತು.

ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸ ದಿನಕಳೆದಂತೆ ಅನುಭವಕ್ಕೆ ಬರತೊಡಗಿತು. ಏಕಾಂತದಲ್ಲಿ ಮನಸ್ಸು ಮತ್ತೆ ಹಗುರ. ಏಕಾಂತದಲ್ಲಿ ನಾನು ಕೇವಲ ನಾನಾಗುತ್ತೇನೆ. ನನ್ನೊಳಗಿನ ಮೌನ ನನ್ನೊಡನೇ ಮಾತನಾಡಲು ಶುರು ಮಾಡಿಬಿಡುತ್ತದೆ!. ನೆನಪುಗಳು ಅಲ್ಲಿ ಕಾಡುವುದಿಲ್ಲ, ಬದಲು ದುಃಖಗಳಿಗೆ ಸಾಂತ್ವನ ಕೊಡುವ ಸಂಜೀವಿನಿಗಳಾಗುತ್ತವೆ. ನಮ್ಮ ತಪ್ಪನ್ನು ಎತ್ತಿ ತೋರಿಸಿ ತಿಳಿ ಹೇಳುವ ವೇದಾಂತಿಗಳಾಗುತ್ತವೆ. ಎಂಥ ಸೋಜಿಗವಲ್ಲವೇ?

ಹಸಿರು ಮುಂಚಿನಿಂದಲೂ ನನ್ನ ಇಷ್ಟವಾದ ಬಣ್ಣ. ಏಕಾಂತವನ್ನು ಅನುಭವಿಸಲು ಹಸಿರು ಹಿನ್ನೆಲೆ ಇದ್ದರೆಷ್ಟು ಚೆನ್ನ ಎಂದು ಯೋಚನೆ ಮನಸ್ಸಿನಲ್ಲಿ ಸುಳಿದ ತಕ್ಷಣವೇ ಇಲ್ಲಿಗೆ ಹೊರಟು ಬಂದಿದ್ದೆ. ಕಾಡಿನ ದುರ್ಗಮ ದಾರಿಗಳಲ್ಲಿ ಕಳೆದುಹೋಗಿ, ದಾರಿ ಮಧ್ಯೆ ಝುಳು ಝುಳು ಹರಿಯುವ ನೀರಿಗೆ ತಲೆಯೊಡ್ಡಿ, ಅಲ್ಲಲ್ಲಿ ಮರಗಳಲ್ಲಿ ಅಡಗಿ ಕುಳಿತು ಚೀರುತ್ತಿರುವ ಜೀರುಂಡೆಗಳ ಹಾಡಿಗೆ ತಲೆದೂಗುತ್ತಾ, ನಮ್ಮನ್ನು ನಾವೇ ಮರೆಯುವುದಿದೆಯಲ್ಲಾ ಅದರ ರೋಮಾಂಚನವನ್ನು ಶಬ್ಧಗಳಲ್ಲಿ ಹಿಡಿಯಲು ಆಗದು. ಏನಿದ್ದರೂ ಅನುಭವಿಸಿಯೇ ತೀರಬೇಕು. "ಸದ್ದಿರದ ಪಸರುಡೆಯ ಮಲೆನಾಡ ಬನಗಳಲ್ಲಿ, ಹರಿವ ತೊರೆಯಂಚಿನಲಿ ಗುಡಿಸಲೊಂದಿರಲಿ"ಎಂದು ಕುವೆಂಪು ಆಸೆಪಟ್ಟಿದ್ದು ಇದಕ್ಕಾಗಿಯೇ ಅಲ್ಲವೇ? ಸೂರ್ಯನನ್ನೇ ಚುಂಬಿಸಲು ನಿಂತಿರುವಂತೆ ಮುಗಿಲೆತ್ತರಕ್ಕೆ ನಿಂತಿರುವ ಗಿರಿಶಿಖರಗಳನ್ನು ನೋಡುತ್ತಾ ನನ್ನೆಲ್ಲಾ ಅಹಂಕಾರ ಬೆಳಗ್ಗಿನ ಇಬ್ಬನಿಯಂತೆ ಕ್ಷಣಾರ್ಧದಲ್ಲಿ ಮರೆಮಾಯ. ಎದುರಾದ ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ ಮುನ್ನುಗಿ ಹರಿಯುವ ನದಿ ನನಗೆ ಸ್ಪೂರ್ತಿ. ಪ್ರಕೃತಿಯೆದುರು ಮಾನವ ಎಷ್ಟೊಂದು ಕುಬ್ಜ ಅಲ್ಲವೇ?

ಮತ್ತೆ ಹಿಂದಿರುಗಿ ಹೋಗಲು ಇಷ್ಟವಿಲ್ಲ.ಆದರೇನು ಮಾಡಲಿ ?ಹೋಗುವುದು ಅನಿವಾರ್ಯ. ಹಿಂದೆ ಋಷಿಮುನಿಗಳು ಇಂಥ ಕಾಡುಗಳ ಮಧ್ಯೆ ಆಶ್ರಮ ಮಾಡಿಕೊಂಡು ದೇವರನ್ನು ಹುಡುಕುತ್ತಿದ್ದರಂತೆ. ಎಂಥಾ ಪುಣ್ಯವಂತರಲ್ಲವೇ ಅವರು? ಲೌಕಿಕದ ಅನುಭೂತಿಯಿಂದ ವಿಮುಕ್ತನಾಗಿ ಸರ್ವನಿಯಾಮಕನನ್ನು ಹುಡುಕಲು ಇದಕ್ಕಿಂತ ಒಳ್ಳೆಯ ಜಾಗ ಬೇರೇನಿದ್ದೀತು? ದೇವರನ್ನೇ ಹುಡುಕಬೇಕೆಂಬ ಹಠ ನನಗಿಲ್ಲ. ಆದರೆ ಇಲ್ಲಿ ಕಳೆದ ಹಲವು ಘಳಿಗೆಗಳನ್ನು ಮನತೃಪ್ತಿಯಾಗಿ ಸವಿದ ಸಾರ್ಥಕ್ಯಭಾವ ನನ್ನಲ್ಲಿದೆ.ಮತ್ತೆ ಬರುತ್ತೇನೆ. ದಣಿದ ಮನಕ್ಕೆ ಉತ್ಸಾಹದ ತಪಃಶಕ್ತಿಯನ್ನು ತುಂಬಲು!.

ಒಂಟಿತನದ ಮನೆಯಲ್ಲಿ ಬಂದಿಯಾಗಿರುವ ಎಲ್ಲರಿಗೂ ಯಾರಾದರೂ ಬಂದು ದಿವ್ಯ ಏಕಾಂತದ ಸನ್ನಿಧಿಯನ್ನು ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಅದೂ ಕಷ್ಟವಲ್ಲವೇ ? ಒಳಗಿದ್ದವರನ್ನು ಕೂಗೋಣವೆಂದರೆ ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲವಲ್ಲ? ಏಕಾಂತದ ಸನ್ನಿಧಿಯನ್ನು ಒಳಗಿದ್ದವರೇ ಹೇಗೋ ಹುಡುಕಿಕೊಳ್ಳಬೇಕು!

Sunday, March 9, 2008

ಕಾರ್ ಕಾರ್ ಎಲ್ನೋಡಿ ಕಾರ್

ಗ್ಯಾಸ್ ಸ್ಟೇಶನ್ನಿನ ಎದುರುಗಿದ್ದ ಸಿಗ್ನಲ್ಲಿನ ಮುಂದೆ ಕಾರು ನಿಲ್ಲಿಸಿಕೊಂಡಾಗ, ಮಾಧವನಿಗೆ ತಾನು ತಪ್ಪು ಲೇನಿನಲ್ಲಿ ನಿಂತಿರುವುದು ಅರಿವಾಯಿತು. ಹಿಂದೆ ಮುಂದೆ ಸಾಕಷ್ಟು ವಾಹನಗಳು ಇದ್ದುದರಿಂದ, ಸಿಗ್ನಲ್ಲು ಬಿಟ್ಟ ತಕ್ಷಣ, ಎಡಕ್ಕೆ ತಿರುಗುವುದು ಕಷ್ಟವಿತ್ತು. ಕಾರು ತಪ್ಪು ಲೇನಿನಲ್ಲಿ ನಿಂತಿದ್ದು ಅರಿವಾದ ತಕ್ಷಣ, ಅವನ ಪಕ್ಕ ಕುಳಿತಿದ್ದ "ಟೆನ್ಶನ್ ಪಾರ್ಟಿ" ಉಮಾಪತಿ ಯಾವುದೋ ದೊಡ್ಡ ತಪ್ಪು ಮಾಡಿದವರಂತೆ ಕೂಗಿಕೊಳ್ಳಲು ಶುರು ಮಾಡಿದ. ಅವನನ್ನು ಸಮಾಧಾನ ಪಡಿಸಿ, ಸಿಗ್ನಲ್ಲು ಬಿಟ್ಟ ಕೂಡಲೇ ಮಧ್ಯದ ಲೇನಿನಲ್ಲೇ ಇನ್ನೂ ಮುಂದೆ ಹೋಗಿ, ಒಂದು ಯು ಟರ್ನ ಹೊಡೆದು, ಬಲಕ್ಕೆ ತಿರುಗಿ ವಾಲ್ ಮಾರ್ಟಿನಲ್ಲಿ ಮಾಧವ ಕಾರು ಪಾರ್ಕ್ ಮಾಡಿದಾಗ, ಸೂರ್ಯ ದಿಗಂತದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಅಲ್ಲಲ್ಲಿ ವಿರಳ ಸಂಖ್ಯೆಯಲ್ಲಿ ನಿಂತಿದ್ದ ಕಾರುಗಳು, ತಮ್ಮನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕರಿಗಾಗಿ ಬರಕಾಯುತ್ತಿದ್ದವು.

ಆಫೀಸು ಮುಗಿಸಿ ಮನೆಗೆ ಬಂದವರಿಗೆ,ಮನೆಯಲ್ಲಿ ಮೊಸರು ಇಲ್ಲದಿರುವುದು ಅನುಭವಕ್ಕೆ ಬಂದ ಇಬ್ಬರೂ ಕೂಡಲೇ ಕಾರು ಹತ್ತಿ ಮನೆಗೆ ಹತ್ತಿರವೇ ಇರುವ ವಾಲ್ ಮಾರ್ಟಿಗೆ ಹೊರಟು ಬಂದಿದ್ದರು. ಮಾಧವ ತಾನು ಒಬ್ಬನೇ ಹೋಗಿ ಬರುತ್ತೇನೆಂದು ಹೇಳಿದರೂ, ಮನೆಯಲ್ಲಿ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಅರ್ಥವಾಗದೇ, ಅವನ ರೂಮ್ ಮೇಟ್ ಉಮಾಪತಿಯೂ ಹೊರಟು ಬಂದಿದ್ದ. ಈಗೊಂದು ೪ ತಿಂಗಳ ಹಿಂದೆ ಇಬ್ಬರು ಕಂಪನಿ ಕೆಲಸದ ಮೇಲೆ ಅಮೇರಿಕಕ್ಕೆ ಬಂದವರು ಸಿಂಗಲ್ ಬೆಡ್ ರೂಮಿನ ಅಪಾರ್ಟಮೆಂಟೊಂದರಲ್ಲಿ ಉಳಿದುಕೊಂಡಿದ್ದರು. ಮಾಧವ ಸ್ವಭಾವದಲ್ಲಿ ಒರಟು. ಹೆವೀ ಬಿಲ್ಟ್ ಪರ್ಸನಾಲಿಟಿ, ಹುಂಬ ಧೈರ್ಯ ಜಾಸ್ತಿ. ಎಂಥಾ ತೊಂದರೆಯಲ್ಲು ಸಿಕ್ಕಿಕೊಂಡರೂ, ಸಲೀಸಾಗಿ ಹೊರಬರಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಉಮಾಪತಿಯದು ಅವನ ತದ್ವಿರುದ್ಧ ಸ್ವಭಾವ. ಸ್ವಲ್ಪ ಪುಕ್ಕಲ ಸ್ವಭಾವ, ತೆಳ್ಳನೆಯ ಶರೀರ. ಸಣ್ಣ ಸಣ್ಣ ವಿಷಯಕ್ಕೂ ಗಾಬರಿ ಮಾಡಿಕೊಂಡು ಸ್ನೇಹಿತರ ಗ್ಯಾಂಗಿನೆಲ್ಲೆಲ್ಲಾ "ಟೆನ್ಶನ್ ಪಾರ್ಟಿ ಉಮಾಪತಿ" ಎಂದೇ ಕರೆಸಿಕೊಳ್ಳುತ್ತಿದ್ದ. ಆದರೂ ಅವರಿಬ್ಬರಾ ಜೋಡಿ ಮಾತ್ರ ಅಪೂರ್ವವಾಗಿತ್ತು. ಮಾಧವನ ಹುಂಬ ಧೈರ್ಯಕ್ಕೆ ಕಡಿವಾಣ ಹಾಕಲು ಮತ್ತು ಉಮಾಪತಿಯ ಪುಕ್ಕಲು ಸ್ವಭಾವಕ್ಕೆ ಧೈರ್ಯ ನೀಡಲು ಒಬ್ಬರಿಗೊಬ್ಬರು ಅನಿವಾರ್ಯವೆಂದು ಅವರನ್ನು ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು.
ವಾಲ್ ಮಾರ್ಟಿನಲ್ಲಿ ತಮ್ಮ ಕೆಲಸ ಮುಗಿಸಿ ಹೊರಗೆ ಬಂದಾಗ, ಹೇಗೂ ಇಲ್ಲಿತನಕ ಬಂದಾಗಿದೆ, ಹಾಗೇ ಇಂಡಿಯನ್ ಸ್ಟೋರ್ಸಿಗೂ ಹೋಗಿ ಬಂದರಾಯಿತು ಎಂದು ಉಮಾಪತಿ ಸೂಚಿಸಿದಾಗ, ಮಾಧವ ಮರುಮಾತಿಲ್ಲದೇ ಒಪ್ಪಿಕೊಂಡುಬಿಟ್ಟ. ೪ ತಿಂಗಳಿಂದ ಬರೀ ಬ್ರೆಡ್, ಜ್ಯಾಮ್, ಸೀರಿಯಲ್ಸ್ ಇವನ್ನೇ ತಿಂದು ಇಬ್ಬರಿಗೂ ನಾಲಿಗೆ ಎಕ್ಕುಟ್ಟಿ ಹೋಗಿತ್ತು. ಇಂಡಿಯನ್ ಸ್ಟೋರ್ಸಿನಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ದೋಸೆ ಹಿಟ್ಟಿನ ಆಸೆಗೆ ಅವರು ವಾರಕ್ಕೆರಡು ಸಲ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ವಾಲ್ ಮಾರ್ಟಿನಿಂದ ಹೊರಗೆ ಬರುತ್ತಿದ್ದಂತೆಯೇ, ಎಡಕ್ಕೆ ತಿರುಗಿ, ಸರ್ವೀಸ್ ರೋಡನ್ನು ಬಳಸಿಕೊಂಡು , ನಿಧಾನವಾಗಿ ಕಾರು ಐ-೩೫ ಹೈವೇಯಲ್ಲಿ ಮುನ್ನುಗತೊಡಗಿತು.

ಅಮೇರಿಕನ್ ಹೈವೇಗಳಲ್ಲಿ ಡ್ರೈವ್ ಮಾಡುವುದೆಂದರೆ ಮಾಧವನಿಗೆ ಎಲ್ಲಿಲ್ಲದ ಸಂತೋಷ. ಸಿನೆಮಾ ಹಿರೋಯಿನ್ನುಗಳ ಕೆನ್ನೆಯಂತೆ ನುಣುಪಾಗಿದ್ದ ರೋಡುಗಳಲ್ಲಿ ೭೦ ಮೈಲಿ ವೇಗದಲ್ಲಿ ಕಾರನ್ನು ನುಗ್ಗಿಸಿ, ಆಗಾಗ ಲೇನ್ ಬದಲಿಸುತ್ತಾ ಝೂಮಿನಲ್ಲಿ ಒಡಾಡುವಂತಿದ್ದರೆ ಯಾರಿಗೇ ತಾನೇ ಖುಶಿಯಾಗದಿದ್ದೀತು? ಮಾಧವನಿಗೆ ಹಿಂದೆ ಕಾರ್ ಒಡಿಸಿ ಬೇರೆ ಚೆನ್ನಾಗಿ ಅನುಭವವಿತ್ತು. ಇಲ್ಲಿಗೆ ಬಂದು ಹಳೆಯ ಟೊಯೋಟಾ ಕ್ಯಾಮ್ರಿಯೊಂದನ್ನು ಖರೀದಿಸಿ, ಅದಕ್ಕೊಂದು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ, ಒಳ್ಳೆಯ ಕಂಡಿಶನ್ನಿನಲ್ಲಿ ಇಟ್ಟುಕೊಂಡಿದ್ದ. ಮಾಧವನ ಬಳಿ ಬಂದ ನಂತರ ಕಾರು ಬಹಳವೇನೂ ಓಡಿರಲಿಲ್ಲ. ಹತ್ತಿರವೇ ಇದ್ದ ಆಫೀಸಿಗೆ ದಿನಕ್ಕೆರಡು ಸಲ, ವಾರಕ್ಕೊಮ್ಮೆ ಅಥವಾ ಎರಡು ಸಾರ್ತಿ ವಾಲ್ ಮಾರ್ಟ್ ಮತ್ತು ಇಂಡಿಯನ್ ಸ್ಟೋರ್‍ಸಿಗೆ ಓಡಾಡುವುದಕ್ಕೇ ಕಾರಿನ ಭಾಗ್ಯ ಸೀಮಿತವಾಗಿತ್ತು. ಹೀಗೆ ಅಪರೂಪಕ್ಕೆ ಹೈವೇ ಮೇಲೆ ಒಡಿಸುವ ಸುಖಕ್ಕಾಗಿಯೇ ಮಾಧವ, ಹತ್ತಿರವೇ ಸೆಡಾರ್ ಪಾರ್ಕಿನಲ್ಲೇ ಇದ್ದ ಇಂಡಿಯನ್ ಸ್ಟೋರ್ಸಿಗೆ ಹೋಗದೇ ಸುತ್ತು ಬಳಸಿ, ದೂರದಲಿದ್ದ ಮಿನರ್ವಾ ಸ್ಟೋರ್ಸಿಗೆ ಹೋಗುತ್ತಿದ್ದುದು.

ಮೈಲುಗಟ್ಟಲೇ ಉದ್ದವಿದ್ದ ಟ್ರಕ್ ಗಳನ್ನು ಹಿಂದೆ ಹಾಕಿ, ಕೇವಲ ೫ ನಿಮಿಷಗಳಲ್ಲಿ ೨೫೬ನೇಯ ಎಕ್ಸಿಟ್ಟಿನಲಿ ಮಾಧವನ ಕೆಂಪು ಕಾರು ಬಲಕ್ಕೇ ಹೊರಳುತ್ತಿರುವಾಗ ಕತ್ತಲು ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲು ರೆಡಿಯಾಗುತ್ತಾ ಇತ್ತು. ಎಕ್ಸಿಟ್ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರುಗಳನ್ನು ಸಾವಧಾನವಾಗಿ ಚಲಿಸಿ ಎಂದು ಎಚ್ಚರಿಸಲೇ ಇದೆ ಎಂಬಂತೆ, ಧುತ್ತನೇ ಸಿಗ್ನಲ್ಲೊಂದು ಎದಿರಾಗುತ್ತಿತ್ತು. ಸಿಗ್ನಲ್ಲಿನಲ್ಲಿ ಕೆಂಪು ದೀಪ ಹೊತ್ತಿದ್ದನ್ನು ಗಮನಿಸಿದ ಮಾಧವ ವೇಗವನ್ನು ಸಾಧ್ಯವಾದಷ್ಟು ತಗ್ಗಿಸಿ,ಬಿಳಿ ಬಿ.ಎಂ.ಡಬ್ಲೂ ಕಾರೊಂದರ ಹಿಂದಕ್ಕೆ ಮಾರು ಜಾಗ ಬಿಟ್ಟು ನಿಲ್ಲಿಸಿದ. ನಮ್ಮೂರಿನಲ್ಲಿ ಕಾರಿಂದ ಕಾರಿಗೆ ಮಧ್ಯ ಇಷ್ಟೊಂದು ಜಾಗ ಬಿಟ್ಟು ಬಿಟ್ಟರೆ, ೭-೮ ದ್ವಿಚಕ್ರ ವಾಹನಗಳು ಆ ಸಂದಿಯಲ್ಲೇ ನುಗ್ಗಿಬಿಡುತ್ತವೆ ಎಂದನಿಸಿ ಮಾಧವನಿಗೆ ಸ್ವಲ್ಪ ನಗು ಬಂತು. ಪಕ್ಕದಲ್ಲಿ ಕುಳಿತ ಉಮಾಪತಿ, ಮಾಧವ ನಿಲ್ಲಿಸಿದ್ದು ಬಹಳವೇ ಹಿಂದಾಯಿತೆಂದೂ, ಅಷ್ಟೆಲ್ಲಾ ಜಾಗವನ್ನು ಕಾರಿಂದ ಕಾರಿನ ಮಧ್ಯೆ ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿದಾಗ ಮಾಧವನಿಗೂ ಹೌದೆನ್ನಿಸಿತು. ಮೆಲ್ಲಗೆ ಬ್ರೇಕ್ ಮೇಲೆ ಇಟ್ಟಿದ್ದ ಕಾಲನ್ನು ಸಡಿಲಿಸಿ ಕಾರನ್ನು ಮುಂದೆ ಚಲಿಸಲು ಅನುವುಮಾಡಿಕೊಟ್ಟ. ಇನ್ನೇನು ಬಿಳಿ ಕಾರಿನ ಹತ್ತಿರ ಬರುವಷ್ಟರಲ್ಲಿ, ಸುರೇಶನ ಕಾಲು ಸ್ವಲ್ಪ ಜಾರಿತು. ಸಟ್ಟನೇ, ಬ್ರೇಕ್ ಒತ್ತಬೇಕೆಂದು ಅಂದುಕೊಂಡವನು, ಬ್ರೇಕಿನ ಬದಲು ಎಕ್ಸಲರೇಟರನ್ನೇ ಬಲವಾಗಿ ಒತ್ತಿಬಿಟ್ಟ. ಮರುಕ್ಷಣದಲ್ಲೇ, ಮಾಧವನ ಕಾರು "ಧಡಾರ್" ಎಂಬ ಶಬ್ದದೊಂದಿಗೆ ಮುಂದಿದ್ದ ಬಿಳಿ ಕಾರಿನ ಹಿಂಭಾಗವನ್ನು ಗುದ್ದಿ, ತಾನೇನೂ ಮಾಡಿಯೇ ಇಲ್ಲವೆಂಬಂತೆ ಅಮಾಯಕ ಮುಖ ಹೊತ್ತು ನಿಂತಿತು. ಹಿಂಭಾಗಕ್ಕೆ ಗುದ್ದಿಸಿಕೊಂದ ಬಿಳಿ ಕಾರು,ಸಿಗ್ನಲ್ಲನ್ನು ದಾಟಿ ಸ್ವಲ್ಪ ದೂರದಲ್ಲಿ ರಸ್ತೆಗಡ್ಡವಾಗಿ ನಿಂತಿತು.

ಮಾಧವನಿಗೆ ಇಲ್ಲೇ ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ ಎನ್ನುವಷ್ಟು ಭಯವಾಯಿತು. ಭಯಕ್ಕೆ ಅವನ ಕೈಕಾಲುಗಳು ಒಂದೇ ಸಮ ನಡುಗುತ್ತಿದ್ದವು. ನಾಲಿಗೆ ಒಣಗಿ ಮಾತಾಡಲೂ ಆಗದೇ, ಸುಮ್ಮನೇ ಸ್ಟೇರಿಂಗ್ ಮೇಲೆ ಕೈಯಿಟ್ಟು ಕುಳಿತುಕೊಂಡ. ಪಕ್ಕದಲ್ಲಿದ್ದ ಉಮಾಪತಿಯನ್ನಂತೂ ಕೇಳುವದೇ ಬೇಡ. ಮೊದಲೇ ಟೆನ್ಶನ್ ಪಾರ್ಟಿ. ಬಿಳಿಚಿಕೊಂಡು, ಸಿಂಹದ ಬಾಯಲ್ಲಿ ಸಿಕ್ಕಿಕೊಂಡ ಚಿಗರೆ ಮರಿಯ ಹಾಗೆ ಬೆವೆತುಹೋಗಿದ್ದ. ಇಬ್ಬರಿಗೂ ಇನ್ನೂ ಆಘಾತದ ದಿಗ್ಭ್ರಮೆಯಿಂದ ಹೊರಗೆ ಬರಲೇ ಆಗಿರಲಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಂಡದ್ದರಿಂದ ಇಬ್ಬರಿಗೂ ಪೆಟ್ಟೇನೂ ಆಗಿರಲಿಲ್ಲ. ಹಿಂದೆ, ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಕಾರುಗಳಲ್ಲಿದ್ದ ಜನರೆಲ್ಲರೂ, ಇವರನ್ನೇ ನೋಡತೊಡಗಿದ್ದರು. ನಮ್ಮೂರಿನಲ್ಲಾಗಿದ್ದರೆ ಇಷ್ಟೊತ್ತಿಗೆ ಗುಂಪು ಕೂಡಿ, ತನಗೆ ಒಂದೆರಡು ಏಟುಗಳು ಖಂಡಿತ ಬೀಳುತ್ತಿತ್ತು ಎಂದು ಮಾಧವನ ಮನಸ್ಸು ಹೇಳತೊಡಗಿತು. ಇವರು ಇನ್ನೂ ಕಾರಿನಿಂದ ಹೊರಬಂದಿರಲಿಲ್ಲ, ಅಷ್ಟರಲ್ಲೇ ಗುದ್ದಿಸಿಕೊಂಡ ಕಾರಿನಲ್ಲಿದ್ದ ವಯಸ್ಸಾದ ಅಜ್ಜ ಮತ್ತು ಅಜ್ಜಿಯಿಬ್ಬರೂ ಇವರ ಬಳಿ ಓಡಿ ಬಂದರು. ಅವರು ಏನು ಬೈಯ್ಯಬಹುದು ಎಂಬ ನಿರೀಕ್ಷೇಯಲ್ಲೇ ಇದ್ದವರಿಗೆ, ಅವರು "ಆರ್ ಯೂ ಗಯ್ಸ್ ಫೈನ್? ಡೋಂಟ್ ವರಿ, ಎವೆರಿಥಿಂಗ್ ವಿಲ್ ಬಿ ಆಲ್ ರೈಟ್.." ಎಂದು ಹೇಳಿದಾಗ ಬಹಳ ಆಶ್ಚರ್ಯವಾಯಿತು. ಇಂಥ ಆಘಾತದ ಮಧ್ಯೆಯೂ ಅವರಿಗಿದ್ದ ಕಾಳಜಿ ಮತ್ತು ಸಮಯಪ್ರಜ್ನೆ ಮಾಧವನಿಗೆ ಬಹಳ ಇಷ್ಟವಾಯಿತು. ಅವನ ಮನಸ್ಸು ಈಗ ಸ್ವಲ್ಪ ತಹಬಂದಿಗೆ ಬಂತು.

ಎರಡು ನಿಮಿಷಗಳಲ್ಲೇ,ದೈತ್ಯ ದೇಹದ ಪೋಲೀಸನೊಬ್ಬ,ತಲೆಯ ಮೇಲೆ ಹೊಳೆಯುತ್ತಿದ್ದ ದೀಪಗಳುಳ್ಳ ಕಾರಿನಲ್ಲಿ ಬಂದಿಳಿದ.ಬಂದವನೇ ಇವರಿಗಿಬ್ಬರಿಗೂ ಏನಾದರೂ ಪೆಟ್ಟಾಗಿದೆಯೇ,ಅವರಿಗೆ ಎನಾದರೂ ವೈದ್ಯಕೀಯ ಸಹಾಯ ಬೇಕೇ ಎಂದು ಕೇಳಿ, ಮಾಧವನ ಲೈಸೆನ್ಸ್ ಇಸಿದುಕೊಂಡು, ಅವನ ಕಾರಿನಲ್ಲಿದ್ದ ಲಾಪ್ ಟ್ಯಾಪಿನಲ್ಲಿ ಏನೇನೋ ಫೀಡ್ ಮಾಡತೊಡಗಿದ.ಮಾಧವನ ಕಾಲುಗಳು ಇನ್ನೂ ನಡುಗುತ್ತಲೇ ಇತ್ತು. ಅಜಾನುಬಾಹು ಪೋಲೀಸಿನವನ್ನು ನೋಡಿದರೇ ಭಯ ತರಿಸುವಂತೆ ಇದ್ದ. ಉಮಾಪತಿಯ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಇನ್ನು ಮುಂದೆ ಅವನು ಯಾರ ಕಾರನ್ನೇ ಹತ್ತುವುದು ಸಂಶಯವಿತ್ತು. ನೋಡು ನೋಡುತ್ತಿರುವಂತೆಯೇ ಅಗ್ನಿ ಶಾಮಕ ವಾಹನದಂತೆ ಕಾಣುವ ದೊಡ್ಡ ಟ್ರಕ್ಕೊಂದು ಮಾಧವನ ಕಾರನ್ನೂ, ಬಿಳಿ ಬಿ.ಎಂ.ಡಬ್ಲೂ ಕಾರನ್ನೂ ಟೋ ಮಾಡಿ, ಪಕ್ಕ ಸರಿಸಿ ಮತ್ತೆ ವಾಹನಗಳ ಸುಗಮ ಸಂಚಾರಕ್ಕೆ ಎಡೆ ಮಾಡಿಕೊಟ್ಟಿತು. ಅವರ ಕೆಲಸದ ವೇಗ, ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಮಾಧವನಿಗೆ ಅಚ್ಚರಿ ತರಿಸಿತು. ಆಕ್ಸಿಡೆಂಟ್ ಆದ ಹಲವೇ ನಿಮಿಷಗಳಲ್ಲಿ ಅದರ ಕುರುಹೂ ಸಿಗದಂತೆ ಎಲ್ಲವೂ ನಡೆದುಹೋಗಿತ್ತು.

ಸಿಗ್ನಲ್ಲಿನ ಪಕ್ಕದಲ್ಲಿ ಕುರಿಮರಿಗಳ ಹಾಗೆ ನಿಂತುಕೊಂಡಿದ್ದ ಇವರ ಬಳಿ, ಬಿಳಿ ಕಾರಿನ ಅಜ್ಜ ಬಂದು "ಇನ್ಶುರೆನ್ಸ್ ಗೆ ಫೋನ್ ಮಾಡಿದ್ರಾ? ಎಂದು ಕೇಳಿದಾಗ ಮಾಧವನಿಗೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವನಿಗೆ ಹುಲ್ಲು ಕಡ್ಡಿ ಸಿಕ್ಕಿದ ಹಾಗೆ ಸಂತೋಷವಾಯಿತು. ಪೋಲಿಸನದೇ ಸಹಾಯ ತೆಗೆದುಕೊಂಡು ಇನ್ಶುರೆನ್ಸ್ ಕಂಪನಿಗೆ ಫೋನ್ ಮಾಡಿ, ಆದದ್ದೆಲ್ಲವನ್ನೂ ವಿವರಿಸಿದ. ಕಂಪನಿ ರೆಪ್ರೆಸೆಂಟಿವ್ ಒಬ್ಬನನ್ನು ಕಳಿಸಿಕೊಡುತ್ತೇನೆಂದೂ, ಜಾಸ್ತಿ ಗಾಭರಿ ಬೀಳಬೇಡಿ ಎಂದು ಆ ಕಡೆ ಇದ್ದ ಕೋಕಿಲವಾಣಿ ಉಲಿಯಿತು. ಮಾಧವನಿಗೆ ಸ್ವಲ್ಪ ಸಮಾಧಾನವಾಯಿತು. ಪಕ್ಕದಲ್ಲೇ ಇದ್ದ ಅಜ್ಜ ಅಜ್ಜಿಯ ಹತ್ತಿರ ಮಾಧವ ಪರಿಪರಿಯಾಗಿ ಕ್ಷಮೆ ಬೇಡಿದ. ಅವರಿಬ್ಬರೂ ಅತ್ಯಂತ ಸಮಾಧಾನ ಚಿತ್ತರೂ, ಕರುಣಾಮಯಿಗಳಂತೆ ತೋರುತ್ತಿದ್ದರು. ಹೀಗೆ ಆಗುವುದು ಸಹಜ ಮತ್ತು ಇದೊಂದು ಆಕ್ಸಿಡೆಂಟ್ ಅಷ್ಟೇ ಎಂದು ಅವರು ಮಾಧವನಿಗೆ ಧೈರ್ಯ ಹೇಳಿದರು. ೧೫ ನಿಮಿಷಗಳಲ್ಲಿ ಇನ್ಶುರೆನ್ಸಿನವನು ಹಾಜರಾದ. ಬಂದವನೇ ಪೋಲಿಸಿನವನ ಹತ್ತಿರವೂ, ಅಜ್ಜ ಅಜ್ಜಿಯರ ಹತ್ತಿರವೂ ಏನೇನೊ ಮಾತನಾಡಿ, ಕೊನೆಯಲ್ಲಿ ಮಾಧವನ ಹತ್ತಿರ ಬಂದು "ಡೋಂಟ್ ವರಿ ಸರ್, ಐ ವಿಲ್ ಟೇಕ್ ಕೇರ್ ಆಫ್ ಎವೆರಿಥಿಂಗ್" ಎಂದು ಹೇಳಿ, ಯಾರ್ಯಾರಿಗೋ ಹತ್ತಾರು ಕರೆ ಮಾಡಿದ.ಅದಾದ ಮೇಲೆ ಪೋಲಿಸಿನವನು ಹೋಗಿಬಿಟ್ಟ.

ಇನ್ನೊಂದು ೨೦ ನಿಮಿಷ ಕಳೆಯುವುಷ್ಟರಲ್ಲಿ ಎಲ್ಲಾ ಸರಾಗವಾಗಿ ಮುಗಿದು ಹೋಯಿತು. ಎರಡು ಕಾರುಗಳನ್ನೂ, ಯಾವುದೋ ವಾಹನ ಬಂದು ಎತ್ತಾಕಿಕೊಂಡು ಹೋಯಿತು. ತನ್ನ ಕಾರಿನಲ್ಲೆಯೇ ಅಜ್ಜ ಅಜ್ಜಿಯರನ್ನೂ, ಮಾಧವ ಮತ್ತು ಉಮಾಪತಿಯರನ್ನೂ ಮನೆಗೆ ಬಿಡುವುದಾಗಿ ಇನ್ಶುರೆನ್ಸಿನವನು ಹತ್ತಿಸಿಕೊಂಡ. ಅಜ್ಜ ಅಜ್ಜಿಯರನ್ನು ಡೌನ್ ಟೌನಿನಲ್ಲಿ ಬಿಟ್ಟು ಕಾರು ಮತ್ತೆ ಉತ್ತರದ ಹೈವೇ ಹಿಡಿಯಿತು. ಇಳಿಯುವ ಮುನ್ನ ಅಜ್ಜ ಅಜ್ಜಿಯರಲ್ಲಿ ಮತ್ತೊಮ್ಮೆ ಮಾಧವ, ಆಗಿದ್ದೆಲ್ಲದ್ದಕ್ಕೂ ಕ್ಷಮೆ ಕೇಳಿದ. ಆ ವೃದ್ಧ ದಂಪತಿಗಳಿಗೆ ತನ್ನಿಂದಾದ ತೊಂದರೆಗಳನ್ನೆಲ್ಲ ನೆನೆಸಿಕೊಂಡು ಮಾಧವನಿಗೆ ತುಂಬಾ ಕೆಟ್ಟದನಿಸಿತು. ಆದರೆ ಪರಿ ಪರಿಯಾಗಿ ಕ್ಷಮೆ ಕೇಳುವುದನ್ನು ಬಿಟ್ಟರೆ ಇನ್ನೇನೂ ಅವನು ಮಾಡಲು ಸಾಧ್ಯವಿರಲಿಲ್ಲ.

ದಾರಿಯಲ್ಲಿ ಇನ್ಶುರೆನ್ಸಿನವನು ಸುಮ್ಮನೆ ಮಾಧವನನ್ನು ಹಲವಾರು ಪ್ರಶ್ನೆ ಕೇಳಲು ಶುರು ಮಾಡಿದ.ಮಾಧವನಿಗೆ ಏನನ್ನೂ ಹೇಳಲು ಮೂಡಿರಲಿಲ್ಲ.ಆದರೂ ಅವನು ಕೇಳಿದ್ದಕ್ಕೆಲ್ಲದ್ದಕ್ಕೂ ಚುಟುಕಾಗಿ ಉತ್ತರಿಸಿದ.ಹಿಂದೆ ಕುಳಿತಿದ್ದ ಉಮಾಪತಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದ ಹಾಗಿತ್ತು. ಮಾತಾಡುತ್ತಾ ಮಾಧವನಿಗೆ ಅವನು ಚೈನಾದಿಂದಾ ಬಹಳ ಹಿಂದೆಯೇ ಬಂದು ಇಲ್ಲಿ ಸೆಟಲ್ ಆಗಿರುವುದಾಗಿಯೂ, ಈ ಕಂಪನಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ ತಿಳಿದುಬಂತು. ಕಾರನ್ನು ೨೪೯ ನೆಯ ಎಕ್ಸಿಟ್ಟಿನಲ್ಲಿ ಬಲಕ್ಕೆ ಹೊರಳಿಸಲು ಹೇಳಿ, ಮಾಧವ ಅವನಿಗೆ ತನ್ನ ಅಪಾರ್ಟಮೆಂಟಿನ ದಾರಿಯನ್ನು ನಿರ್ದೇಶಿಸಲು ತೊಡಗಿದ.ಇನ್ನೇನು ಕಾರು ಬಲಕ್ಕೆ ತಿರುಗಿ ಅಪಾರ್ಟಮೆಂಟಿನೊಳಕ್ಕೆ ತಿರುಗಬೇಕು ಅನ್ನುವುಷ್ಟರಲ್ಲಿ, ಅಪಾರ್ಟಮೆಂಟಿನಿಂದ ಹೊರಕ್ಕೆ ಬರುತ್ತಿದ್ದ ಕಾರೊಂದು ಅತೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದ್ದು ಡ್ರೈವರಿನ ಸೀಟಿನಲ್ಲಿದ್ದ ಚೀನಿಯವನಿಗೂ, ಪಕ್ಕ ಕುಳಿತಿದ್ದ ಮಾಧವನಿಗೂ ಕಂಡಿತು. ಅದನ್ನು ನೋಡಿದ ತಕ್ಷಣವೇ ಮಾಧವನ ಬಾಯಿಂದ "ಸ್ಟಾಪ್" ಎಂಬ ಸಣ್ಣ ಚೀತ್ಕಾರ ಅವನಿಗರಿವಿಲ್ಲದಂತೆಯೇ ಹೊರಬಿದ್ದಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ, ಮಾಧವನ ನಿರೀಕ್ಷೆಗೆ ತದ್ವಿರುದ್ಧವಾಗಿ, ಅವನ ಕಾರು ಭಯಂಕರ ವೇಗದಲ್ಲಿ ಮುನ್ನುಗ್ಗಿ, ಎದುರಿಗೆ ಬರುತ್ತಿದ್ದ ಕಾರನ್ನು ಸವರಿಕೊಂಡಂತೆಯೇ ಚಲಿಸಿ, ಬಲ ರಸ್ತೆಯಲ್ಲಿ ಹೋಗುವುದರ ಬದಲು ಎಡ ಬದಿಯ ರಸ್ತೆಯಲ್ಲೇ ಇನ್ನೂ ಸುಮಾರು ಮುಂದೆ ಹೋಯಿತು. ಈ ಕಾರು ಮುನ್ನುಗ್ಗಿದ ವೇಗಕ್ಕೆ ಹೆದರಿದ ಎದುರು ಬದಿ ಕಾರಿನವನು ತಕ್ಷಣವೇ ಬ್ರೇಕ್ ಹಾಕಿ ದೊಡ್ಡದಾಗಿ ಹಾರ್ನ್ ಮಾಡಿದ್ದು ಮಾಡಿದ್ದು ಮಾತ್ರ ಮೂರೂ ಜನರ ಅನುಭವಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಉಮಾಪತಿ, ಕಾರು ನುಗ್ಗಿದ ವೇಗಕ್ಕೆ ಅಪ್ರತಿಭನಾಗಿ ಕಿಟಾರನೆ ಕಿರಿಚಿಕೊಂಡ. ಆ ಕ್ಷಣದ ಒತ್ತಡದಲ್ಲಿ ಚೀನಿಯವನೂ ಕೂಡ ಮಾಧವನ ತರಾನೇ ಬ್ರೇಕ್ ಒತ್ತುವುದರ ಬದಲು ಬಲವಾಗಿ ಎಕ್ಸಲರೇಟರನ್ನು ಒತ್ತಿಬಿಟ್ಟಿದ್ದ. ಆದರೆ ಮಾಧವನಿಗೆ ತಕ್ಷಣವೇ ಚೀನೀ ಮಾಡಿದ ತಪ್ಪಿನ ಅಂದಾಜಾಗಿ ಹೋಗಿತ್ತು. ಅಸಾಧ್ಯ ಟೆನ್ಶನಿನಲ್ಲಿದ್ದ ಅವನನ್ನು ಉದ್ದೇಶಿಸಿ, ಮಾಧವ ತಣ್ಣನೆಯ ದನಿಯಲ್ಲಿ ಬ್ರೇಕ್, ಬ್ರೇಕ್ ಎಂದು ಎರಡು ಸಲ ಕೂಗಿದ. ಪುಣ್ಯಕ್ಕೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಚೀನಿಯವನಿಗೂ ಅಂತೂ ಕಾರು ಹಿಡಿತಕ್ಕೆ ಸಿಕ್ಕಿತು. ವೇಗ ತಗ್ಗಿಸಿ, ಮೆಲ್ಲಗೆ ಬ್ರೇಕ್ ಹಾಕಿ, ಪಕ್ಕಕ್ಕೆ ತಿರುಗಿಸಿ ಖಾಲಿ ಇದ್ದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ನಿಟ್ಟುಸಿರು ಬಿಟ್ಟ, ಅವನ ಕೈಕಾಲುಗಳೂ ನಡುಗುತ್ತಿದ್ದವು. ಅವನ ಪರಿಸ್ಥಿತಿಯನ್ನು ನೋಡಿ ಮಾಧವನಿಗೆ ಜೋರಾಗಿ ನಗು ಬಂತು. ಹ್ಯಾಪು ಮೋರೆ ಹಾಕಿಕೊಂಡಿದ್ದ ಚೀನಿಯವನನ್ನೂ, ಹೆದರಿ ಗುಬ್ಬಚ್ಚಿಯಂತಾದ ಉಮಾಪತಿಯನ್ನೂ ಒಮ್ಮೆ ನೋಡಿ, ಕುಳಿತಲ್ಲೆಯೇ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲು ಶುರುಮಾಡಿಬಿಟ್ಟ. ಉಮಾಪತಿಗೆ ಮಾತ್ರಾ, ಇಂಥ ಪರಿಸ್ಥಿತಿಯಲ್ಲೂ ನಗುತ್ತಿರುವ ಮಾಧವನನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ಎದುರಿಗೇ ಚೀನಿಯವನು ಕುಳಿತಿದ್ದರಿಂದ ಸಿಟ್ಟನ್ನು ಅದುಮಿಕೊಂಡು, ಏನು ಮಾಡಬೇಕೆಂದು ಗೊತ್ತಾಗದೇ ತಾನೂ ಮಾಧವನ ನಗುವಿಗೆ ದನಿಗೂಡಿಸಿದ.

Wednesday, March 5, 2008

ಎಲ್ಲೆಲ್ಲೂ ಸಂಗೀತವೇ...

ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ.

ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ "ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ.

ಎರಡನೆಯದು ವಾಣಿ ಜಯರಾಮ್ ಹಾಡಿದ "ಆನತಿ ನೀಯರಾ" ಎಂಬ ಹಾಡು. ತೆಲುಗಿನ "ಸ್ವಾತಿ ಕಿರಣಮ್" ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. "ಕಲಾ ತಪಸ್ವಿ" ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್.

ಮೂರನೆಯದು, ಮಲಯಾಳಮ್ಮಿನ "ಹಿಸ್ ಹೈನೆಸ್ ಅಬ್ದುಲ್ಲಾ" ಚಿತ್ರದ "ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.

ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ!

Saturday, March 1, 2008

ನೀನಿಲ್ಲದೇ ಬಾಳೊಂದು ಬಾಳೇ..

ಹಿಂದೊಮ್ಮೆ ಇದೇ ಲೇಖನವನ್ನು ಹಾಕಿದ್ದೆ. ಎರಡು ಮೂರು ವರುಷಗಳ ಹಿಂದೆ ಯಾರೋ ಕಳಿಸಿದ್ದ ಇ-ಮೈಲ್(ಆಂಗ್ಲ ಭಾಷೆಯಲ್ಲಿದ್ದ) ಅನ್ನು ಸ್ವಲ್ಪ ನೇಟಿವಿಟಿ ಬದಲಿಸಿ, ಕನ್ನಡಕ್ಕೆ ತರ್ಜುಮೆ ಮಾಡಿ ಬರೆದಿದ್ದೆ. ಆಂಗ್ಲ ಭಾಷೆಯಲ್ಲಿದ್ದ ಕಥೆಯ ಮೂಲ ಲೇಖಕರು ಯಾರು ಎಂಬುದು ನನಗೆ ಗೊತ್ತಿಲ್ಲ. ಬಹುಷ: ಮೇಲ್ ಬಾಕ್ಸಿಂದ ಮೇಲ್ ಬಾಕ್ಸಿಗೆ ಹರಿದಾಡುವ ಈ ಮೇಲ್ ಗಳನ್ನು ಟ್ರಾಕ್ ಮಾಡುವುದು ಸಾಧ್ಯವಿಲ್ಲವೇನೋ. ಇದರ ಆಂಗ್ಲ ಮೂಲ ಲೇಖಕರು ಯಾರೆಂದು ನಿಮಗೆ ತಿಳಿದಿದ್ದರೆ, ದಯವಿಟ್ಟು ತಿಳಿಸಿ.

-ಮಧು

ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು. ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು. ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು. ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ. ಅತ್ಯಂತ ವಿನಯದಿಂದ, ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು.

ಎಂಗೇಜಮೆಂಟ್ ಏನೂ ನಡೆದಿರಲಿಲ್ಲ. ಮದುವೆ ೧೫ ದಿನಗಳ ಒಳಗೇ ಎಂದು ನಿರ್ಧಾರವಾಗಿತ್ತು. ನನಗೆ ರಜೆ ಸಿಗುವುದು ಬಹಳ ಕಷ್ಟವಾಗಿತ್ತು. ಹೇಗೋ ಒಂದು ೧೦ ದಿನಾ ರಜೆ ಹೊಂದಿಸಿ ಮದುವೆಗೆ ಹೋಗಿ ಬಂದಿದ್ದೆ. ಮದುವೆಯಾದ ನಾಲ್ಕನೆಯ ದಿನವೇ ನಾನು ಅವಳನ್ನು ಕರೆದುಕೊಂಡು ವಾಪಸ್ ಬಂದೂ ಇದ್ದೆ. ಪ್ಲೇನಿನಲ್ಲಿ ಇವಳು ನನ್ನ ಜೊತೆ ಜಾಸ್ತಿ ಮಾತಾಡಿರಲಿಲ್ಲ. ಮದುವೆಯಾದ ಇಷ್ಟು ಬೇಗನೇ ಅಪ್ಪ,ಅಮ್ಮ ಎಲ್ಲರನ್ನೂ ಬಿಟ್ಟು ಬಂದು ಬೇಸರವಾಗಿರಬಹುದೆಂದೆಣಿಸಿ ನಾನೂ ಅವಳನ್ನು ಜಾಸ್ತಿ ಮಾತಾಡಿಸಲು ಹೋಗಿರಲಿಲ್ಲ. ಆದರೇ ಇಲ್ಲಿಗೆ ಬಂದ ಎರಡು ದಿನವಾದರೂ ಅವಳ ಮೂಡ್ ಇನ್ನೂ ಹಾಗೇ ಇತ್ತು. ಆ ಎರಡು ದಿನ ನನಗೆ ಆಫ಼ೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ಅವಳ ಬಗ್ಗೆ ಜಾಸ್ತಿ ಗಮನವಹಿಸಲೂ ಆಗಿರಲಿಲ್ಲ. ಹೋಮ್ ಸಿಕ್ ನಿಂದ ಹೊರಬರಲು ಯಾರಿಗಾದರೂ ಸ್ವಲ್ಪ ದಿನ ಬೇಕಾಗುತ್ತೆ ಎಂದನಿಸಿ ಸುಮ್ಮನಿದ್ದೆ.
ಮಾರನೇ ದಿನ ಅವಳ ಪಕ್ಕ ಕುಳಿತುಕೊಂಡು ಕೇಳಿದೆ
"ಏನಾಯ್ತು ? ಅಮ್ಮಾವ್ರು ತುಂಬಾ ಬೇಜಾರಲ್ಲಿದೀರಾ ?"
"ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದ್ರಿ ?". ಇದೊಳ್ಳೇ ತಮಾಷೆಯಾಯಿತಲ್ಲಪ್ಪಾ ಎಂದನಿಸಿ ಕೇಳಿದೆ
"ಅಂದ್ರೆ ? ಏನಾಯ್ತು ಈಗ ?"
"ನಾನು ಮನೆಗೆ ಹೋಗಬೇಕು "
"ಇದೇ ನಿನ್ನ ಮನೆ""ಇಲ್ಲಾ, ಇದು ನನ್ನ ಮನೆಯಲ್ಲಾ. ನನ್ನ ಮನೆ ಬೆಂಗಳೂರಿನಲ್ಲಿದೆ. ಪ್ಲೀಸ್, ನನ್ನ ಕಳಿಸಿಕೊಡಿ"
"ನೋಡು, ನೀನು ಹೋಮ್ ಸಿಕ್ ಆಗಿದೀಯಾ. ಒಂದು ಎರಡು ದಿನ ಅಷ್ಟೇ, ಆಮೇಲೆ ಎಲ್ಲಾ ಸರಿಹೋಗುತ್ತೆ. ನಾನು ಮೊದಲು ಇಲ್ಲಿಗೆ ಬಂದಾಗ ನನಗೂ ಹೀಗೆ ಆಗಿತ್ತು. ನನಗೆ ಈ ವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು. ಅದಕ್ಕೆ ನಿನ್ನ ಜೊತೆ ಕಾಲ ಕಳೆಯಕ್ಕೆ ಆಗ್ಲಿಲ್ಲ. ಈ ವೀಕೇಂಡ್ ನನ್ನ ಫ್ರೆಂಡ್ಸ್ ಮನೆಗೆ ಕರ್ಕೊಂಡು ಹೋಗ್ತಿನಿ. ಅವರ ಜೊತೆ ಇದ್ದರೆ ನಿಂಗೆ ಸ್ವಲ್ಪ ಬೋರ್ ಕಮ್ಮಿ ಆಗುತ್ತೆ"
"ಇಲ್ಲಾ, ನಂಗೆ ಈ ಜಾಗ ಇಷ್ಟನೇ ಆಗ್ಲಿಲ್ಲ. ಅಪ್ಪ, ಅಮ್ಮ, ಕಾಲೇಜು ಎಲ್ಲಾದನ್ನೂ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ನಾನು. ನಾನು ವಾಪಸ್ ಹೋಗ್ತಿನಿ"
"ನೋಡು, ಸ್ವಲ್ಪ ತಣ್ಣಗೆ ಕುಳಿತುಕೊಂಡು ಯೋಚನೆ ಮಾಡು. ಏನನ್ಕೊಂಡಿದೀಯಾ ನೀನು ? ಏನು ನಿನ್ನ ಪ್ಲಾನು ? ಈಗ ಹೋಗ್ತಿನಿ ಅಂತಿದೀಯಾ,ಮತ್ತೆ ವಾಪಸ್ ಯಾವಾಗ ಬರ್ತಿದೀಯಾ ?"
"ನಾನು ವಾಪಸ್ ಬರಲ್ಲ"
ನನಗೆ ರೇಗಿ ಹೋಯಿತು. ನನಗೆ ಗೊತ್ತಿಲ್ಲದಂತೆಯೇ, ನನ್ನ ಧ್ವನಿ ದೊಡ್ಡದಾಯಿತು.
"ನಿಂಗೆ ತಲೆ ಕೆಟ್ಟಿದೆಯಾ?"
"ನೀವು ಹಾಗನ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ". ನನಗೆ ಈಗ ತಲೆ ಸಂಪೂರ್ಣವಾಗಿ ಕೆಟ್ಟು ಹೋಯಿತು. ನಿಧಾನಕ್ಕೆ ಕೇಳಿದೆ.
"ಹೋಗ್ಲಿ, ನಿನ್ನ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ?"
"ಇಲ್ಲ. ನಂಗೆ ವಾಪಸ್ ಹೋಗಬೇಕು. ನೀವು ಕಳಿಸ್ಲಿಲ್ಲಾ ಅಂದ್ರೆ ನಾನು ೯೧೧ ಗೆ ಕಾಲ್ ಮಾಡ್ತಿನಿ"

ನಂಗ್ಯಾಕೋ ಇದು ಹುಚ್ಚರ ಸಹವಾಸ ಎಂದೆನಿಸಿತು. ಹಾಗೆ ಸ್ವಲ್ಪ ಸಿಟ್ಟೂ ಬಂತು.
" ಮದುವೆ ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀಯಾ ನೀನು? ನಿನ್ನ ಅಪ್ಪ ಅಮ್ಮ, ನನ್ನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡು. ಮದುವೆಯಾಗಿ ಇನ್ನು ೧೦ ದಿನ ಆಗಿಲ್ಲಾ. ಆವಾಗ್ಲೇ ವಾಪಸ್ ಹೋಗ್ತಿನಿ ಅಂತಿದಿಯಲ್ಲಾ, ಮದುವೆಯಾಗಬೇಕಾದ್ರೆ ಇಲ್ಲಿಗೆ ಬರಬೇಕು ಅಂತ ಗೊತ್ತಿರಲಿಲ್ವಾ ನಿನಗೆ ? ವಾಪಸ್ ಬರಲ್ಲಾ ಅಂತಿದೀಯ. ನಮ್ಮ ಮದುವೆ ಕತೆ ಎನಾಗುತ್ತೆ ?" ಎಂದೆಲ್ಲಾ ರೇಗಿದೆ.
"ನಾನು ನಿಮ್ಮ ಮೇಲೆ ತಪ್ಪು ಹೊರಿಸ್ತಾ ಇಲ್ಲ. ತಪ್ಪೆಲ್ಲಾ ನಂದೇ. ನಾನು ಅಪ್ಪ ಅಮ್ಮನ್ನ ಬಿಟ್ಟು ಇಷ್ಟು ದೂರದ ಊರಲ್ಲಿ ಒಬ್ಬನೇ ಇರಲಾರೆ. ನಿಮಗೆ ಮದುವೆ ಉಳಿಸಿಕೋಬೇಕಿದ್ರೆ, ನೀವೇ ಬೆಂಗಳೂರಿಗೆ ಬನ್ನಿ" ಅಂತೆಂದು ದೊಡ್ಡದಾಗಿ ಅಳುತ್ತಾ ಎದ್ದು ಹೋಗಿಬಿಟ್ಟಳು.


ನನಗೀಗ ಏನು ಮಾಡಬೇಕೆಂದೇ ತೋಚಲಿಲ್ಲ. ಅವಳು ತಮಾಷೆ ಮಾಡುತ್ತಿದ್ದಾಳೆಂದು ನನಗೆ ಅನ್ನಿಸಲಿಲ್ಲ. ಇಷ್ಟು ಸಾಲದೆಂಬಂತೆ ಇಡೀ ದಿನ ಮಕ್ಕಳ ತರಹ ಅಳುತ್ತಾನೇ ಇದ್ದಳು. ನನಗ್ಯಾಕೋ, ನಾನು ಬಹಳ ತಪ್ಪು ಮಾಡಿಬಿಟ್ಟೆ ಅನ್ನಿಸತೊಡಗಿತು. ಮನೆಗೆ ಫೋನ್ ಮಾಡಿದೆ. ಅಪ್ಪ ಅಮ್ಮ ಏನು ಹೇಳಿಯಾರು ? ಅವರಿಗೂ ತುಂಬಾ ಶಾಕ್ ಆಗಿತ್ತು. ನೀನೇನೂ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು ಅಷ್ಟೇ. ಅವಳ ಮನೆಗೂ ಫೋನ್ ಮಾಡಿದೆ. ಅತ್ತೆ, ಮಾವನೂ ಅವಳಿಗೆ ತಿಳಿಹೇಳಲು ಪ್ರಯತ್ನಿಸಿದರು. ಇವಳದ್ದು ಒಂದೇ ಹಠ. ತಾನು ವಾಪಸ್ ಬರ್ತೀನಿ ಅಂತ. ಅಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಎಲ್ಲರೂ ಸಂಪೂರ್ಣವಾಗಿ ನಿಸ್ಸಹಾಯಕರಾಗಿದ್ದರು.

ಅವಳು ಮನಸ್ಸು ಬದಲಾಯಿಸಬಹುದೆನೋ ಅಂತ ನಾನು ಇನ್ನೆರಡು ದಿನ ಕಾಯ್ದೆ. ಅಳುವುದನ್ನು ಬಿಟ್ಟು ಇನ್ನೇನೂ ಮಾಡಿರಲಿಲ್ಲ ಅವಳು, ಈ ಎರಡು ದಿನಗಳಲ್ಲಿ. ನನಗೆ ರ್‍ಓಸಿ ಹೋಗಿ, ೨೦೦೦ ಡಾಲರ್ ತೆತ್ತು ಮಾರನೆಯ ದಿನವೇ ಅವಳ ಟಿಕೆಟ್ ಬುಕ್ ಮಾಡಿ ತಂದು ಅವಳಿಗೆ ತೋರಿಸಿದೆ. ಅವಳಿಗೆ ಅಷ್ಟೊಂದೇನೂ ಸಂತಸವಾದ ಹಾಗೆ ಕಾಣಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದ್ದಳು. ಭಾರದ ಮನಸ್ಸಿನಿಂದ ಅವಳನ್ನು ಏರ್ ಪೋರ್ಟಲ್ಲಿ ಬಿಟ್ಟು, ಕೈಯಲ್ಲಿ ಟಿಕೆಟ್ ತುರುಕಿ ವಾಪಸ್ ಬಂದೆ. ತೀರ ಹೋಗುವಾಗ ಒಮ್ಮೆ ಹಿಂದಿರುಗಿ ಕೈ ಬೀಸುತ್ತಾಳೇನೋ ಅಂದುಕೊಂಡವನಿಗೆ ಅಲ್ಲೂ ನಿರಾಶೆ ಕಾದಿತ್ತು.
ಅವಳು ಹೋದ ಮೇಲೆ ನನಗೆ ಮನಸ್ಸೆಲ್ಲಾ ಖಾಲಿ ಖಾಲಿ ಅಂದೆನಿಸಲು ಶುರುವಾಯಿತು. ಅವಳು ನನ್ನ ಜೊತೆ ಹೆಚ್ಚೆಂದರೇ ೧೦ ದಿನ ಇದ್ದಳಷ್ಟೇ, ಆದರೂ ಏನೋ ಕಳೆದುಕೊಂಡ ಭಾವ ಇಡೀ ದಿನ ಕಾಡುತ್ತಲೇ ಇತ್ತು. ಎರಡು ದಿನದ ಬಳಿಕ ಅವಳ ಮನೆಗೆ ಫೋನ್ ಮಾಡಿದೆ. ಅವಳ ಅಪ್ಪ ಅಮ್ಮ ಒಂದೆ ಸಮನೇ ನನ್ನ ಹತ್ತಿರ ಕ್ಷಮೆ ಕೇಳುತ್ತಿದ್ದರು. ಇವಳು ನನ್ನ ಹತ್ತಿರ ಮಾತಾಡಲೂ ಇಲ್ಲ. ಈ ಹಠಮಾರಿಯನ್ನು ಕಟ್ಟಿಕೊಂಡು ಬಾಳು ಬಹಳ ಕಷ್ಟವೆನಿಸಿತು ನನಗೆ. ಅರೇಂಜ್ಡ್ ಮ್ಯಾರೇಜ್ ಗಳ ಬಗ್ಗೆ ನನಗೆ ಸಂಪೂರ್ಣವಾಗಿ ನಂಬಿಕೆ ಹಾರಿಹೋಯಿತು. ಹಿಂದೆ ನನ್ನ ಕ್ಲಾಸ್ ಮೇಟ್ ಆಗಿದ್ದ ಒಂದಿಬ್ಬರು ಹುಡುಗಿಯರು ನನಗೆ ಇಷ್ಟವಾಗಿದ್ದರು. ಆದರೆ ಯಾರನ್ನೂ ಮದುವೆಯಾಗಬೇಕೆಂದು ಅನ್ನಿಸಿರಲಿಲ್ಲ. ಇವಳನ್ನು ನೋಡಿದ ತಕ್ಷಣ ನಾನು ಮದುವೆಯಾಗಲು ಒಪ್ಪಿಕೊಂಡು ಬಿಟ್ಟಿದ್ದೆ. ನನ್ನ ಆಯ್ಕೆಯೇ ಸರಿಯಿಲ್ಲವೆಂದು ತೀವ್ರವಾಗಿ ಅನ್ನಿಸಲು ಶುರುವಾಯಿತು.

ಇನ್ನೊಂದು ವಾರವಾಗುತ್ತಿದಂತೆಯೇ, ನನಗೆ ಒಬ್ಬನೇ ಇರಲು ಬಹಳ ಕಷ್ಟವಾಯಿತು.ಪದೇ ಪದೇ ಅವಳ ನೆನಪು ಕಾಡುತ್ತಿತ್ತು. ನಾನೇ ಎಲ್ಲೋ ತಪ್ಪು ಮಾಡಿದೆನೆಂಬ ಗಿಲ್ಟ್ ಪದೇ ಪದೇ ಕಾಡಲು ಶುರುವಾಗಿ, ಮನಸ್ಸಿನ ನೆಮ್ಮದಿಯೇ ಹಾರಿ ಹೋಯಿತು. ಅವಳನ್ನು ಯಾವುದೇ ಕಾರಣಕ್ಕೆ ಬಿಡಬಾರದೆಂದು ನಿರ್ಧರಿಸಿ, ಕೆಲಸಕ್ಕೆ ರಾಜೀನಾಮೆ ನೀಡಿ ನಾನು ವಾಪಸ್ ಭಾರತಕ್ಕೆ ಹೋದೆ. ನಾನು ಹಿಂದಿರುಗುತ್ತಿದ್ದರ ಬಗ್ಗೆ ಯಾರಿಗೂ ಸೂಚನೆ ನೀಡಿರಲಿಲ್ಲ. ಬೆಳಿಗ್ಗೆ ಅಕ್ಕನ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಸಾಯಂಕಾಲ ೪ ಗಂಟೆಯ ಹಾಗೆ ಅವಳ ಕಾಲೇಜಿನ ಹತ್ರ ಹೋದೆ. ಕಾಲೇಜಿನೊಳಕ್ಕೇ ಹೋಗಿ ಅವಳ ಬರ ಕಾಯಬೇಕೆನಿಸಿದರೂ, ಯಾಕೋ ಮನಸ್ಸಾಗಲಿಲ್ಲ. ಕಾಲೇಜ್ ಗೇಟ್ ನ ಬಳಿಯೆ ಸುಮ್ಮನೇ ನಿಂತುಕೊಂಡೆ. ಸುಮಾರು ಅರ್ಧ ಗಂಟೆಗಳ ಬಳಿಕ ಇವಳು ಕೈಯಲ್ಲಿ ದೊಡ್ಡದೊಂದು ಪೇಪರ್ ಬಂಡಲ್ ಹಿಡಿದುಕೊಂಡು ಸುಸ್ತಾದಂತೆ ನಡೆದು ಬಂದಳು. ನನ್ನನ್ನು ಅವಳು ಗಮನಿಸಿದ್ದಂತೆ ಕಾಣಿಸಲಿಲ್ಲ. ನಾನು ಸುಮ್ಮನೇ ಅವಳನ್ನು ಬಸ್ ಸ್ಟಾಂಡಿನ ತನಕ ಹಿಂಬಾಲಿಸಿದೆ. ಬಸ್ ಸ್ಟಾಂಡಿನಲ್ಲಿ ಅವಳು ನಿಂತ ತಕ್ಷಣವೇ "ಪೇಪರ್ ಬಂಡಲನ್ನು ನಾನು ಹಿಡಿದುಕೊಳ್ಲಾ?" ಅಂತ ಮೃದುವಾಗಿ ಕೇಳಿದೆ. ಹಿಂದುರುಗಿದ ಅವಳ ಕಣ್ಣುಗಳಲ್ಲಿದ್ದಿದ್ದು ಆಶ್ಚರ್ಯವೋ ಅಥವಾ ಸಂತಸವೋ, ನನಗೆ ಸರಿಯಾಗಿ ಗುರುತಿಸಲಾಗಲಿಲ್ಲ.ನಾನು ಸುಮ್ಮನೆ ನಕ್ಕೆ. ಅವಳ ಮುಖದ ತುಂಬೆಲ್ಲಾ ಸಾವಿರ ಪ್ರಶ್ನೆಗಳು. "ಒಂದು ವಾರ ನಿನ್ನ ಜತೆಯಲ್ಲೇ ಇರ್ತಿನಿ. ಬೆಂಗಳೂರು ನಂಗೆ ಹೊಸತೇನಲ್ಲ. ಆದರೂ ನನಗೆ ಈ ವಾರದಲ್ಲಿ, ನಿಂಗೆ ಇಷ್ಟವಾದ ಎಲ್ಲಾ ಜಾಗಗಳನ್ನು ತೋರಿಸ್ತೀಯಾ?" ಎಂದೆ. ಅವಳಿಗೆ ತುಂಬಾ ಸಂತೋಷವಾದಂತೆ ತೋರಿತು.



ಆ ಇಡೀ ವಾರ ಕಳೆದಿದ್ದೇ ಗೊತ್ತಾಗಲಿಲ್ಲ. ಅತ್ತೆ ಮಾವ ತುಂಬಾ ಒತ್ತಾಯ ಮಾಡಿದ್ದರಿಂದ ಆ ವಾರ ನಾನು ಅಲ್ಲೇ ಉಳಿದಿದ್ದೆ. ದಿನಾ ಸಂಜೆ ನಾನೇ ಅವಳನ್ನು ಒಂದೆರಡು ಒಳ್ಳೆಯ ಜಾಗಗಳಿಗೆ ಕರೆದುಕೊಂಡು ಹೋದೆ. ಬಹಳ ಲವಲವಿಕೆಯಿಂದ ನನ್ನ ಜೊತೆ ಮಾತನಾಡುತ್ತಿದ್ದಳು. ಮಕ್ಕಳ ತರ ರಚ್ಚೆ ಹಿಡಿದು, ಅತ್ತು ರಂಪ ಮಾಡಿದವಳು ಇವಳೇನಾ ಅಂತ ನನಗೆ ಆಶ್ಚರ್ಯವಾಗುವಷ್ಟು. ಅವಳನ್ನು ಮನೆಯಲ್ಲಿ ಮಕ್ಕಳ ತರವೇ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ ಏಳುತ್ತಿದ್ದಂತೆಯೆ ಕಾಫಿ ಬೆಡ್ ಬಳಿಯೇ ಸರಬರಾಜಾಗುತ್ತಿತ್ತು. ಅವಳು ಇವತ್ತು ಯಾವ ಡ್ರೆಸ್ ಹಾಕಿಕೊಳ್ಳುತ್ತಾಳೆ ಅನ್ನುವುದನ್ನೂ ಅವಳ ಅಮ್ಮನೇ ನಿರ್ಧರಿಸುತ್ತಿದ್ದಳು. ಅದಕ್ಕೆ ಇಸ್ತ್ರಿಯನ್ನೂ ಅವರೇ ಮಾಡಿ, ಇವಳು ಸ್ನಾನ ಮುಗಿಸಿ ಬರುವುದರೊಳಗೇ ರೆಡಿ ಮಾಡಿಟ್ಟಿರುತ್ತಿದ್ದರು. ಅಮ್ಮ ತಿಂಡಿ ಮಾಡಿಟ್ಟ ತಿಂಡಿಯನ್ನು ತಿಂದು, ಮನೆಯ ಬಳಿಯೇ ಬರುತ್ತಿದ್ದ ಕಾಲೇಜ್ ಬಸ್ ಏರಿ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜಿನಲ್ಲಿ ದಿನಕ್ಕೆ ಮೂರೋ, ನಾಲ್ಕೋ ೪೫ ನಿಮಿಷದ ಪೀರಿಯಡ್ ಗಳನ್ನು ಮುಗಿಸಿ ಮತ್ತೆ ೪.೩೦ ರ ಹಾಗೆ ಮನೆಗೆ ವಾಪಸ್ ಬರುತ್ತಿದ್ದಳು. ಇಷ್ಟು ಮಾಡಿದ್ದಕ್ಕೇ, ಸಂಜೆ ಬರುವಷ್ಟರಲ್ಲೇ ಸುಸ್ತಾಗಿ ಬಿಡುತ್ತಿದ್ದಳು ಅವಳು. ಸಂಜೆ ಮನೆಗೆ ಬಂದ ಮೇಲೆ, ಅಮ್ಮ ಕೊಟ್ಟ ಕಾಫಿ ಕುಡಿದು, ಹರಟೆ ಹೊಡೆದು, ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನೋ, ಧಾರಾವಾಹಿಗಳನ್ನೋ ನೋಡುತ್ತಾನೋ, ಹಾಡು ಕೇಳುತ್ತಾನೋ ಅವಳ ದಿನ ಮುಗಿದು ಹೋಗುತ್ತಿತ್ತು. ರಾತ್ರಿ, ಅವಳ ಹಾಸಿಗೆಯನ್ನೂ ಅವಳ ಅಮ್ಮನೇ ತಯಾರು ಮಾಡಬೇಕಾಗಿತ್ತು.ಅಪರೂಪಕ್ಕೊಮ್ಮೆ, ಮೂಡ್ ಚೆನ್ನಾಗಿದ್ದಾಗ ಅವಳ ಎರಡು ಕ್ಲೋಸ್ ಫ್ರೆಂಡ್ಸಗಳ ಮನೆಗೆ ಭೇಟಿ ನೀಡಿ ಅಲ್ಲಿ ಹರಟೆ ಹೊಡಿಯುವುದನ್ನು ಬಿಟ್ಟರೇ ಮನೆಯಿಂದ ಅವಳು ಹೊರಗೆ ಹೋಗುತ್ತಿದ್ದಿದ್ದೇ ಕಮ್ಮಿ. ವೀಕೆಂಡಗಳಂದು ಅವಳ ದಿನಚರಿ ಇದಕ್ಕಿಂತ ಬಹಳ ಭಿನ್ನವಾಗೇನೂ ಇರಲಿಲ್ಲ. ಆ ದಿನಗಳಂದು ಅವಳು ಸ್ವಲ್ಪ ಜಾಸ್ತಿನೇ ನಿದ್ದೆ ಮಾಡುತ್ತಿದ್ದಳು. ಫೋನಿನಲ್ಲಿ ಸ್ವಲ್ಪ ಜಾಸ್ತಿನೇ ಸಮಯ ಕಳೆಯುತ್ತಿದ್ದಳು. ಸಂಜೆ ಅಮ್ಮನ ಜೊತೆ ದೇವಸ್ಥಾನಕ್ಕೆ ಒಮ್ಮೊಮ್ಮೆ ಹೋಗುತ್ತಿದ್ದಿದ್ದೂ ಇತ್ತು. ರವಿವಾರ ಬೆಳಿಗ್ಗೆ ತಪ್ಪದೇ ಸಂಗೀತ ಕ್ಲಾಸಿಗೆ ಮಾತ್ರ ಹೋಗುತ್ತಿದ್ದಳು. ಹುಟ್ಟಿದಾಗಿನಿಂದ ಒಮ್ಮೆಯೂ ಅವಳು ಅಪ್ಪ ಅಮ್ಮನ್ನ ಬಿಟ್ಟು ಹೋಗಿರಲೇ ಇಲ್ಲ.



ಅವಳ ಹಿಂದಿನ ವರ್ತನೆಗೆ, ನನಗೆ ಕಾರಣ ಸಂಪೂರ್ಣವಾಗಿ ಗೊತ್ತಾಗಿ ಹೋಯಿತು. ಅವಳ ಅಪ್ಪ ಅಮ್ಮನಿಂದ ದೂರ ಮಾಡಿ, ಅವಳ ಕಂಫರ್ಟ್ ಝೋನಿನಿಂದ ಹೊರಗೆ ಕರೆದುಕೊಂಡು ಹೋದ ನಾನು ಅವಳ ಕಣ್ಣಿಗೆ ವಿಲನ್ ತರ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವಳ ಜೊತೆ ಕುಳಿತಿಕೊಂಡು ನಾನು ನಿಧಾನವಾಗಿ ಮಾತನಾಡಿದೆ. ನಾನು ನಿನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆಂದು ಭರವಸೆ ಮೂಡಿಸಿದೆ. ನಾನು ಇಲ್ಲೇ ಮನೆ ಮಾಡಿದರೆ ನನ್ನ ಜೊತೆ ಇರಲು ಅವಳು ಸಹಮತಿಸಿದಳು. ವಾರಕ್ಕೊಮ್ಮೆ ಅಮ್ಮನ ಮನೆಗೆ ಮಾತ್ರ ತಪ್ಪದೇ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಳು. ನಾನು ಒಪ್ಪಿದೆ. ಅಲ್ಲಿಗೆ ಅರ್ಧ ಸಮಸ್ಯೆ ಕಮ್ಮಿಯಾದಂತಾಯಿತು.



ಮನೆ ಮಾಡಿ, ಹೊಸ ಕೆಲಸ ಹಿಡಿದ ಮೇಲೆ ನಿಜವಾದ ಸಮಸ್ಯೆಗಳು ಶುರುವಾದವು. ಅವಳಿಗೆ ನಿಜಕ್ಕೂ ಪ್ರಪಂಚ ಜ್ನಾನವೇ ಇರಲಿಲ್ಲ. ಅವಳಿಗೆ ಮದುವೆಯಾಗಿದೆ, ಅಲ್ಲಿಗೆ ಕೆಲವೊಂದು ಜವಾಬ್ದಾರಿಗಳಿರುತ್ತವೆ ಅನ್ನುವುದನ್ನು ನಾನು ಪದೇ ಪದೇ ನೆನಪಿಸಿಬೇಕಾಯಿತು. ಬಟ್ಟೆಗಳನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲಿ ಬೇಕೆಂದರಲ್ಲಿ ಬೀಸಾಡುತ್ತಿದ್ದಳು. ಅಪ್ಪಿ ತಪ್ಪಿ ನಾನೊಮ್ಮೆ ಆಕ್ಷೇಪಿಸಿದರೇ, ನನ್ನ ಮೇಲೇ ರೇಗುತ್ತಿದ್ದಳು ಇಲ್ಲವೇ ಅಳಲು ಶುರು ಮಾಡಿ ಬಿಡುತ್ತಿದ್ದಳು. ಒಂದು ಕಾಫಿ ಮಾಡಲೂ ಬರುತ್ತಿರಲಿಲ್ಲ. ಬೆಳಿಗ್ಗೆ ನಾನೇ ಕಾಫಿ ಮಾಡಿ ಅವಳನ್ನು ಎಬ್ಬಿಸಬೇಕಾಗಿತ್ತು. ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಅಡುಗೆಯನ್ನೇ ಕಲಿಸಬೇಕಾಯಿತು. ಅವಳೇ ನಿಯಮಗಳನ್ನು ಮಾಡುತ್ತಿದ್ದಳು, ಅವಳೇ ಅದನ್ನು ಮುರಿಯುತ್ತಿದ್ದಳು. ನನ್ನ ಬಗ್ಗೆ ಅಷ್ಟೊಂದೇನೂ ಕಾಳಜಿ ತೋರುತ್ತಿರಲಿಲ್ಲ. ಹೇಳದೇ ಕೇಳದೇ ಒಮ್ಮೊಮ್ಮೆ ಅಮ್ಮನ ಮನೆಗೆ ಹೋಗಿಬಿಡುತ್ತಿದ್ದಳು, ನನಗೊಂದು ಫೋನ್ ಕೂಡ ಮಾಡದೇ. ಮರುದಿನ ನಾನೇ ಅವಳನ್ನು ಕರೆದುಕೊಂಡು ಬರಬೇಕಾಗಿತ್ತು.



ಆದರೆ ತಿಂಗಳುಗಳು ಉರುಳುತ್ತಿದ್ದಂತೆಯೇ, ನಿಧಾನವಾಗಿ ಅವಳ ಜವಾಬ್ದಾರಿಗಳು ಅವಳಿಗೆ ಮನದಟ್ಟಾಗತೊಡಗಿದವು. ಹಿಂದಿಗಿಂತಲೂ ಜಾಸ್ತಿ ಸಹನೆ ತೋರಿಸಲು ಶುರು ಮಾಡಿದಳು. ಅಪರೂಪಕ್ಕೆ ನನಗಿಂತ ಮುಂಚೆ ಎದ್ದು ಕಾಫಿ ಮಾಡುತ್ತಿದ್ದಳು. ನಾನೇ ಅಚ್ಚರಿಪಡುವಷ್ಟು ಶಿಸ್ತನ್ನು ಮೈಗೂಡಿಸಿಕೊಂಡಳು. ರವಿವಾರದಂದು ಅಮ್ಮನ ಮನೆಗೆ ಹೋಗಿ ಹೊಸ ಅಡುಗೆಗಳನ್ನು ಕಲಿತು, ನನ್ನ ಮೇಲೆ ಪ್ರಯತ್ನಿಸುವ ಧೈರ್ಯ ತೋರಿಸುತ್ತಿದ್ದಳು. ನಾನು ಒತ್ತಾಯ ಮಾಡಿದ ಮೇಲೆ ನನ್ನ ಜೊತೆ ಸಿನೆಮಾಕ್ಕೋ, ಫ್ರೆಂಡ್ಸಗಳ ಮನೆಗೋ ಬರುತ್ತಿದ್ದಳು. ಎಫ಼್-೧ ರೇಸನ್ನು ನನ್ನ ಜೊತೆ ಕುಳಿತುಕೊಂಡು ನೋಡಿ, ಶೂಮಾಕರ್ ಗೆದ್ದಾಗ ನನ್ನಷ್ಟೇ ಸಂಭ್ರಮ ಪಡುತ್ತಿದ್ದಳು. ನನ್ನ ಸಹಚರ್ಯದಲ್ಲಿ ಅವಳು ಸಂತೋಷವಾಗಿರುವುದನ್ನು ನಾನು ಗಮನಿಸಿದೆ. ಆಗಾಗ ನನಗೆ ಅಲ್ಪ ಸ್ವಲ್ಪ ಗೊತ್ತಿದ್ದ ಕೆಮೆಷ್ಟ್ರಿಯನ್ನು ಹೇಳಿ, ರೇಗಿಸಿ, ಜಗಳವಾಡಿ ಬೈಸಿಕೊಳ್ಳುತ್ತಿದ್ದೆ. ಹಂಸಧ್ವನಿ ರಾಗದಲ್ಲಿ "ವಾತಾಪಿ ಗಣಪತೆಂಭಜೇಹಂ" ಎಂದು ಅವಳು ಭಕ್ತಿಯಿಂದ ಹಾಡುವಾಗ ಅವಳ ಪಕ್ಕ ಕುಳಿತು ಕಾಡುತ್ತಿದ್ದೆ. ನಾವಿಬ್ಬರೂ ಈಗ ಅತ್ಯಂತ ಸುಖಿಗಳು.

ಮೊನ್ನೆ ನಮ್ಮ ಪ್ರಥಮ ಆನಿವರ್ಸರಿಗೆ ಅವಳಿಗೆ ಒಂದು ಸುಂದರ ಕೆಂಪು ಗುಲಾಬಿಯನ್ನೂ, ಮೆತ್ತನೆಯ ಟೆಡ್ಡಿ ಬೇರನ್ನೂ ತಂದು ಕೊಟ್ಟೆ. ಆವತ್ತು ಅವಳು ತುಂಬಾ ಖುಶಿಯಾಗಿದ್ದಳು. ಹಿಂದೆ ನಡೆದಿದ್ದೆಲ್ಲದ್ದಕ್ಕೂ, ನನಗಾದ ತೊಂದರೆಗೂ ಅವಳು ಕ್ಷಮೆ ಕೇಳಿದಳು. ನಾನು ನಕ್ಕು ಬಿಟ್ಟೆ. ಹಿಂದಾಗಿದ್ದೆಲ್ಲವನ್ನೂ ನಾನು ಈಗ ಮರೆತು ಬಿಟ್ಟಿದ್ದೇನೆ, ನಿನ್ನನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದೆನ್ನುವಷ್ಟರಲ್ಲಿ, ಅವಳ ಕಣ್ಣಂಚಿನಲ್ಲಿ ಸಣ್ಣ ಹನಿ ತುಳುಕಿದ್ದನ್ನು ನಾನು ಗಮನಿಸಿದೆ. ಈಗಲೂ ಒಮ್ಮೊಮ್ಮೆ ಅವಳು ಯಾವುದೋ ಸಣ್ಣ ಕಾರಣಕ್ಕೆಲ್ಲಾ ಹಠ ಮಾಡುತ್ತಿರುತ್ತಾಳೆ. ಆಗೆಲ್ಲಾ ನಾನು, ಹಿಂದೆ ಅವಳು ಹೇಗೆ ೯೧೧ ಗೆ ಕಾಲ್ ಮಾಡ್ತಿನಿ ಅಂತ ಹೇಳಿ ಹೆದರಿಸಿದ್ದನ್ನು ನೆನಪಿಸಿ, ರೇಗಿಸುತ್ತಿರುತ್ತೇನೆ. ನಾನು ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬರದಿದ್ದರೆ ಏನಾಗುತ್ತಿತ್ತೋ ಅಂತ ಒಮ್ಮೊಮ್ಮೆ ಅನ್ನಿಸುವುದಿದೆ. ಆದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಮಾತ್ರಾ ಸಮಂಜಸವಾಗಿತ್ತು ಅನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ.

Thursday, February 28, 2008

ಅವಳು ಹೇಳಿದ್ದು..


ಕಣ್ದಾವರೆ ಕುಡಿನೋಟ, ಪಿಸು ಮಾತ ತುಂಟಾಟ
ಮುಂಗುರುಳ ಮೃದುಲಾಸ್ಯ,ತುಟಿಯಂಚು ಮಂದಹಾಸ
ಗಾಢಾಂಧಕಾರ ಸೀಳಿದ ಬೆಳ್ಳಿಕೋಲ ಹೊಳಹು
ಸಾರಿವೆಯಾ ನನಸಾಗುವ ಕನಸ ಸಂಭ್ರಮವನ್ನು?

ಹೆಪ್ಪುಗಟ್ಟಿದ ಮಾತು, ಮಡುಗಟ್ಟಿದ ಮೌನ
ಕಾಲದ ಬಿಂಬ ಕಣ್ರೆಪ್ಪೆಯಲೇ ಪ್ರತಿಮೆ
ಭಾವದೊರತೆ ಮೊಗದಿ ಉಕ್ಕಿದಾ ಸಾಗರ
ಹುಸಿಯೇ ನಲ್ಲನ ಬರುವಿಕೆಯ ನಿರೀಕ್ಷೆ?

ಮೈತಬ್ಬಿದಾ ವೇಲು,ಇಳಿಬಿದ್ದ ಹೆರಳು
ಹಿನ್ನೆಲೆಯ ಅವ್ಯಕ್ತಭಾವ, ಮರೆಮಾಚಿದ ಸತ್ಯ
ಕಾಲನಾಳದಿ ಸಮಾಧಿಯಾದ ಚಿದಂಬರ ರಹಸ್ಯ
ಅರಿಯದ ನಿರಾಭರಣ ನೀರೆಯ ತುಮುಲಾಟದ ಕಥೆ, ವ್ಯಥೆ

(ನನ್ನ ಪ್ರಥಮ ಪ್ರಯತ್ನ. ಅಲ್ಲಲ್ಲಿ ತಿದ್ದಿ,ಸೂಚನೆ ನೀಡಿದ ಅಕ್ಕನಿಗೆ ಧನ್ಯವಾದಗಳು)

Friday, February 22, 2008

ನಾದಮಯ..ಈ ಲೋಕವೆಲ್ಲ

ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು.
ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು.

ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, ಸುರೇಶ ಒತ್ತಾಯ ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು.

ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ" ಮತ್ತು "ಸಾ" ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ.

ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ.

ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ.

ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು.

ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ.

ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ.

ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ.

ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು.

ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು.

Saturday, February 16, 2008

ಗಣೇಶನ ಮದುವೆ

ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ.

ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ.

ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು.

ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು.

"ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ.

ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ.

ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು.

೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು.

ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು.

ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ.

ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ.

Thursday, February 14, 2008

ಮೆಜೆಸ್ಟಿಕ್ ಮಾಲಕಂಸ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ.

ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು.

ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ.

ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ.

ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ.

Saturday, February 9, 2008

ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ

ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು.

ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ.

ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ.

ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು.

ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು.

ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ.

ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ.

ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು.

ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು.

ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು.

ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.

ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು.

ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ.

ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು.

ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ.

ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ.

ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು.

Tuesday, February 5, 2008

ನಾಗರ ಹಾವೇ, ಹಾವೊಳು ಹೂವೇ...


ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ.

ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು.

ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು.

ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು.

ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು.

ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು.

ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ.

ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ.

ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು.