Friday, March 25, 2011

ಕೌಳಿ ಹಣ್ಣು

ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹೋಗೋದಿಕ್ಕೆ ಪ್ಲಾನ್ ಮಾಡ್ತಾ ಇದ್ದಾರೆ. ಬಸ್ಸು ಟ್ರೈನ್ ಗಳಲ್ಲಿ ಅಷ್ಟು ಸುಲಭವಾಗಿ ಟಿಕೆಟ್ ಸಿಕ್ತಾ ಇಲ್ಲ. ಸೆಖೆ ಜಾಸ್ತಿಯಾಗಿ, ರಾತ್ರಿಗಳಲ್ಲಿ ಫ್ಯಾನ್ ಇಲ್ದೆ ನಿದ್ರೆ ಬರ್ತಾ ಇಲ್ಲ. "ರಾತ್ರಿಯಲ್ಲಿ ಹೋಗೋದಿಲ್ಲ, ಹಗಲಲ್ಲಿ ಕೊಡೋದಿಲ್ಲ, ಏನು ಹೇಳಿ ನೋಡೋಣ?" ಅಂತ ಶೋಭಕ್ಕ ಆಗ್ಲೇ ಒಗಟು ಕೇಳ್ತಾ ಇದ್ದಾಳೆ. ಒಟ್ಟಿನಲ್ಲಿ ಈ ಸಲದ ಬೇಸಿಗೆ, ಕ್ರಿಕೆಟ್ ವರ್ಡ್ ಕಪ್ ಗಿಂತಲೂ ರೋಚಕವಾಗುವುದರಲ್ಲಿ ನನಗೇನೂ ಅನುಮಾನ ಕಾಣ್ತಾ ಇಲ್ಲ.

ಕಾಲಗಳನ್ನೆಲ್ಲ ತಕ್ಕಡಿಲಿಟ್ಟು ತೂಗಿದರೆ ಬೇಸಿಗೆಗಾಲದ ವ್ಯಾಲ್ಯೂನೇ ಜಾಸ್ತಿ ಅನ್ನುವುದು ನನ್ನ ಅನಿಸಿಕೆ. ಮಕ್ಕಳಿಗೆ ರಜೆ ಸೀಸನ್, ತಿರುಗೋವ್ರಿಗೆ ಮದುವೆ, ನೆಂಟರ ಮನೆ ಸೀಸನ್, ಬಾಯಲ್ಲಿ ನೀರೂರಿಸಲು ಮಾವಿನ ಹಣ್ಣಿನ ಸೀಸನ್, ನೋಡಿ ಹೀಗೆ ಸಾಲಾಗಿ ಪಟ್ಟಿ ಮಾಡ್ತಾ ಹೋಗಬಹುದು. ಉಳಿದ ಕಾಲಗಳಿಗಿಂತ ಜಾಸ್ತಿ "ಹ್ಯಾಪನಿಂಗ್" ಕಾಲ ಅಂದ್ರೆ ಬೇಸಿಗೆನೇ. ಮಳೆಗಾಲದಲ್ಲಿ ಕೆಲಸ ಒಂದೂ ಆಗಲ್ಲ. ಛಳಿಗಾಲದಲ್ಲಿ ಬೆಳಿಗ್ಗೆನೇ ಬೇಗ ಆಗಲ್ಲ. ಹಾಗಾಗಿ ನಾವು ಜಾಸ್ತಿ ಚಟುವಟಿಕೆಯಿಂದ ಇರುವ ಕಾಲ ಕೂಡ ಬೇಸಿಗೆಗಾಲವೇ. ಬಯಲುಸೀಮೆ ಜನ ಸ್ವಲ್ಪ ನನ್ನ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಬಹುದೇನೋ, ಆದರೆ ಕರಾವಳಿ, ಅರೆಮಲೆನಾಡು, ಮಲೆನಾಡು ಜನ ಅಂತೂ ತಲೆ ಹಾಕೇ ಹಾಕ್ತಾರೆ ಅನ್ನೋ ಭರವಸೆ ನನಗಿದೆ.

ಬೇಸಿಗೆ ರಜೆಲಿ (ಈಗಿನ ಕಾಲದ ಸಮ್ಮರ್ ವೆಕೇಷನ್ನು!) ಏನ್ ಮಾಡ್ತೀರಿ ಅಂಥ ನೀವು ನಿಮ್ಮ ಪರಿಚಯದ ಯಾವುದೋ ಮಕ್ಕಳನ್ನು ಕೇಳೇ ಕೇಳಿರ್ತೀರಿ ಅಂತ ನನಗೆ ಗೊತ್ತು. ಅದಕ್ಕೆ ನಿಮಗೆ ತರೇವಾರಿ ಉತ್ತರಗಳು ಸಿಕ್ಕಿರಬಹುದು. ಊರಿಗೆ ಹೋಗ್ತೀನಿ ಅಂತಲೋ, ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗ್ತೀನಿ ಅಂತಲೋ ಇಲ್ಲ ಸಮ್ಮರ್ ಕ್ಯಾಂಪ್ ಗೆ ಹೋಗ್ತೀನಿ ಅಂತಲೋ ಇಷ್ಟೇ. ವಿಪರ್ಯಾಸ ಅಂದರೆ ನಾವು ಚಿಕ್ಕವರಿದ್ದಾಗ ಇಂಥ ಪ್ರಶ್ನೆಗಳನ್ನೆಲ್ಲ ಯಾರೂ ಜಾಸ್ತಿ ಕೇಳ್ತಿರಲಿಲ್ಲ. ಅಕಸ್ಮಾತ್ ಯಾರಾದ್ರೂ ಬಾಯಿ ತಪ್ಪಿ ಕೇಳಿದ್ರೆ ನಾವು ಅತ್ಯಂತ ಸೀರಿಯಸ್ಸಾಗಿ "ಈ ಸಲ ಚಂದ್ರಣ್ಣನ ಮನೆ ಬ್ಯಾಣದಲ್ಲಿ ರಾಶಿ ಸಂಪಿಗೆ ಹಣ್ಣು ಆಜು. ನೋಡವು" ಎಂದೋ, ಅಥವಾ "ಕೆರೆ ಏರಿ ಮೇಲೆ ಇದ್ದಲಾ, ಪುನ್ನೇರಲ ಗಿಡಾ, ಹೋದ ವರ್ಷ ಬರೀ ಎರಡು ಹೆಣೀಗೆ ಕಾಯಿ ಬಿಟ್ಟಿತ್ತು. ಈ ಸಲ ಭರ್ತಿ ಬಿಡ ಲಕ್ಷಣ ಇದ್ದು" ಎಂದೋ, ಅಥವಾ "ಗೇರು ಪೀಕ ನೋಡಿದ್ಯ ಈ ಸಲ? ಚೊಲೋ ಬಂಜು. ಹಿಂದಿನ ಬೆಟ್ಟದಲ್ಲಿ ಕೆಂಪು, ಹಳದಿ ಎರಡೂ ನಮ್ನಿ ಹಣ್ಣು ಬಂಜು. ಸುಮಾರು ಕೇ.ಜಿ ಗೇರ್ ಬೀಜಾ ಒಟ್ಟು ಮಾಡ್ಲಕ್ಕು ಈ ಸಲ" ಅಂತೆಲ್ಲಾ ಹೇಳಿ ನಮ್ಮ ಮಹದೋದ್ದೇಶಗಳ ಚಿಕ್ಕ ಪರಿಚಯವನ್ನು ಸಾದರ ಪಡಿಸುತ್ತಿದ್ದೆವು. ಪ್ರಶ್ನೆ ಕೇಳಿದವರು ನಮ್ಮ ಉತ್ತರವನ್ನು ಒಂದೋ ಮೆಚ್ಚಿ "ಜೋರಲೋ ಮಾರಾಯಾ" ಎಂದು ಬೆನ್ನು ತಟ್ಟುತ್ತಿದ್ದರು ಇಲ್ಲಾ "ಯಾಕಾದ್ರೂ ಕೇಳಿದೀನಪ್ಪಾ" ಎಂಬಂಥ ಮುಖ ಮಾಡಿ ತೆಪ್ಪಗಿರುತ್ತಿದ್ದರು.

ಬಿಸಿಲಲ್ಲಿ ಅಡ್ಡಾಡುವುದು ಬಹುಷಃ ಎಲ್ಲ ಕಾಲದಲ್ಲೂ ಮಕ್ಕಳಿಗೆ ಅತ್ಯಂತ ಪ್ರಿಯವಾದ ಕೆಲಸವೇನೋ. "ಎಂಥಾ ಬಿಸಿಲಲ್ಲಿ ತಿರಗ್ತ್ರಾ ಹುಡಗ್ರಾ, ಸುಮ್ನೆ ಮನೆಲ್ಲಿ ಇರಿ" ಅನ್ನೋ ಶಬ್ದ ಕಿವಿ ಮೇಲೆ ಬಿದ್ದರೆ ಸಾಕು ನಾವೆಲ್ಲ ಕುನ್ನಿಮರಿ ತರ ರಬ್ಬಿಕೊಂಡು, ಅಲ್ಲೇ ನುಸುಳಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದೆವೇ ಹೊರತು ಮನೆಯೊಳಗೆ ಮಾತ್ರ ಸುತಾರಾಂ ಹೋಗುತ್ತಿರಲಿಲ್ಲ. ಬೆಟ್ಟ,ಗುಡ್ಡ,ತೋಟ, ಹೊಳೆ ಇವೆಲ್ಲ ವರುಷಾನುಗಟ್ಟಲೆಯಿಂದ ನಮ್ಮ ದಿವ್ಯ ಸಾನಿಧ್ಯವನ್ನೇ ಬರಕಾಯುತ್ತಿರುವಂತೆ ಅನಿಸಿ ನಾವು ಅವುಗಳ ಮಡಿಲಲ್ಲಿ ಪುನೀತವಾಗುತ್ತಿದ್ದೆವು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹೊರಬಿದ್ದ ನಾವು ಗೊತ್ತು ಗುರಿಯಿಲ್ಲದೇ ತಿರುಗಿ ತಿರುಗಿ ಊರೆಲ್ಲ ಗಸ್ತು ಹೊಡೆದು ಇನ್ನೇನು ಕತ್ತಲಾಗಿ ಏನೂ ಕಾಣದಂಥ ಅನಿವಾರ್ಯತೆ ಉಂಟಾದಾಗ ಮಾತ್ರ ಮನೆಗೆ ತಿರುಗಿ ಬರುತ್ತಿದ್ದೆವು. ಅಷ್ಟರಲ್ಲಿ ಏನೇನು ಮಾಡಿದೆವು ಅನ್ನುವುದನ್ನು ಬರೆಯಲು ಹೊರಟರೆ ಬಹುಷಃ ಯುಡಿಯೂರಪ್ಪನವರು ಇಲ್ಲಿಯವರೆಗೆ ಭೇಟಿಕೊಟ್ಟ(ದೇಣಿಗೆ ಕೊಟ್ಟ) ದೇವಸ್ಥಾನಗಳ ಪಟ್ಟಿಗಿಂತ ಜಾಸ್ತಿಯಾಗುವುದರಿಂದ(?) ಬರೆಯುವ ಸಾಹಸ ಮಾಡುತ್ತಿಲ್ಲ,ಕ್ಷಮಿಸಿ.

ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ ಅಂದ ತಕ್ಷಣ ಅತ್ಯಂತ ಪ್ರಿಯವಾದದ್ದನ್ನು ಬರೆಯದಿರಲು ಸಾಧ್ಯವಿಲ್ಲವಲ್ಲ? ಬರೆದೇ ತೀರಬೇಕು. ನಮ್ಮನೆಯಿಂದ ಕೂಗಳತೆ ದೂರದಲ್ಲಿರುವ ಡಾಮರು ರಸ್ತೆಗೆ ತಾಗಿಗೊಂಡು ಸಾಲಾಗಿ ಬೆಳೆದ ಕೌಳಿ ಗಿಡಗಳ ಹಿಂಡು ನಮಗೆಲ್ಲ ಅತ್ಯಂತ ಪ್ರಿಯವಾದದ್ದು. ವಡಗೇರೆ ಶಂಕ್ರಣ್ಣನ ಮನೆಯಿಂದ ಶುರುವಾದದ್ದು ಹೀಪನಳ್ಳಿ ಕತ್ರಿ ಕಳೆದು ಮೆಣಸಿನಕೇರಿ ಕತ್ರಿ ದಾಟಿ ಹೆಗಡೆಕಟ್ಟೆ ಕ್ರಾಸ್ ನ ತನಕವೂ ಅವ್ಯಾಹತವಾಗಿ ರೋಡ್ ನ ಎರಡೂ ಬದಿ ಬೆಳೆದುನಿಂತಿದ್ದವು. ವರ್ಷದ ಬಹಳಷ್ಟು ಕಾಲ ಅವು ಕೇವಲ ಮುಳ್ಳಿನ ಬೇಲಿ ತರಹದ "ಮಟ್ಟಿ"ಗಳು ಅಷ್ಟೇ. ಇನ್ನೇನು ಮಾರ್ಚ ಶುರುವಾಗಬೇಕು, ಚಿಕ್ಕ ಚಿಕ್ಕ ಬಿಳಿ ಹೂವುಗಳನ್ನು ತಳೆದು, ದಾರಿಯುದ್ದಕ್ಕೂ ಹಸಿರು ಬಿಳಿ ಬಣ್ಣದ ಚಾದರವನ್ನು ಹೊದ್ದು ಹೋಗಿ ಬರುವ ಪ್ರಯಾಣಿಕರನ್ನು ಸ್ವಾಗತಿಸುವಂತೆ ತೋರುತ್ತಿದ್ದವು. ಕೌಳಿ ಒಂದು ತರಹದ ಮುಳ್ಳಿನ ಗಿಡ ಅಂತಲೇ ಹೇಳಬಹುದು. ಅಷ್ಟೇನೂ ಎತ್ತರಕ್ಕೆ ಬೆಳೆಯದೇ ಒಂದು ತರಹದ ಪೊದೆಯ ತರ ಹರಡಿಕೊಂಡು ಇರುತ್ತವೆ. ಅದರ ಮುಳ್ಳು ಅತ್ಯಂತ ಚೂಪಾಗಿದ್ದು ಚುಚ್ಚಿದರೆ ದಿನಗಟ್ಟಲೇ ನೋವು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅದರ ಕಾಯಿ ಅತೀ ಹುಳಿಯಾಗಿದ್ದು(ತಿಂದರೆ ಮುಖ ಸಿಂಡರಿಸುವಷ್ಟು), ಹಣ್ಣು ಸಿಹಿ ಮಿಶ್ರಿತ ಹುಳಿ ಹೊಂದಿರುತ್ತದೆ. ಕೌಳಿಕಾಯಿ ಉಪ್ಪಿನಕಾಯಿ ಅತ್ಯಂತ ಜನಪ್ರಿಯವಾಗಿದ್ದು, ಬಹಳ ಜನರ ಪ್ರಶಂಸೆಗೂ ಪಾತ್ರವಾಗಿದೆ.

ಮಾರ್ಚ ಮುಗಿದು ಎಪ್ರಿಲ್ ಶುರುವಾಗುತ್ತ ಇದ್ದಂತೆ ಹಸಿರು ಬಿಳಿ ಕಾಯಿಗಳು ಕಂದು ಬಣ್ಣಕ್ಕೆ ತಿರುಗಿ ನಿಧಾನಕ್ಕೆ ಹಣ್ಣಾಗಲು ಶುರುವಾಗುತ್ತದೆ. ನಮ್ಮ ಹದ್ದಿನ ಕಣ್ಣು ಅವೆಲ್ಲನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತವೆ ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಲ್ಲಿ ಸೈಕಲ್ ಸವಾರರು, ಕಾರಲ್ಲಿ ಹೋಗುವವರು ತಮ್ಮ ವಾಹನವನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ರೋಡಿಗೆ ಸ್ವಲ್ಪ ಎತ್ತರದಲ್ಲಿರುವ ದಿಬ್ಬವನ್ನು ಹತ್ತಿ ಏನನ್ನೋ ಹುಡುಕುತ್ತಿರುವುದು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಎಷ್ಟು ಜನರು ಬಂದರೂ, ನಮಗೇನೂ ಆತಂಕವಾಗುವುದಿಲ್ಲ. ಏಕೆಂದರೆ ಆಯಕಟ್ಟಿನ ಜಾಗಗಳೆಲ್ಲ ನಮಗೆ ಗೊತ್ತಿರುತ್ತಲ್ಲ! ಅವರೆಲ್ಲ ಎಷ್ಟೇ ತಿಣುಕಾಡಿದರೂ ನಮಗೆ ಗೊತ್ತಿರುವಷ್ಟು ಒಳ್ಳೆಯ ಹಣ್ಣು ಸಿಗುವುದಿಲ್ಲ. ಅನೇಕ ವರ್ಷಗಳ ಅನುಭವದಿಂದ ಗಳಿಸಿಕೊಂಡ "ಸ್ಕಿಲ್" ಅದು.

ಯಾವುದೋ ಒಂದು ಶುಭ ಮುಹೂರ್ತವನ್ನು ನಿರ್ಧರಿಸಿಕೊಂಡ ನಂತರ ನಾವು ಒಂದೆರಡು ಪ್ಲಾಸ್ಟಿಕ್ ಕೊಟ್ಟೆಗಳನ್ನು ಹಿಡಿದು ಅನುವಾಗುತ್ತಿದ್ದೆವು. ಎಲ್ಲ ಗಿಡಗಳ ಮೇಲೂ ಮುಗಿ ಬೀಳುತ್ತಿರಲ್ಲಿಲ್ಲ. ಮೊದಲೇ ನಿರ್ಧರಿಸಿಕೊಂಡ, ಉಳಿದವರಿಗ್ಯಾರಿಗೂ ಸುಲಭವಾಗಿ ಭೇದಿಸಲಾಗದ ಪೊದೆಗಳ ಮೇಲೆ ಮಾತ್ರ ನಮ್ಮ ಕಣ್ಣು. ಕಷ್ಟದ ಹಾದಿಯ ತುದಿಗೆ ಸಂತೋಷವಿದೆ ಎನ್ನುವುದು ಇವತ್ತಿಗೂ ಸತ್ಯವೇ ಅಲ್ಲವೆ? ಮಾಮೂಲಿ ಹಣ್ಣುಗಳ ಥರ ಮರ ಹತ್ತೋ, ಉದ್ದನೆಯ ಕೋಲು ಉಪಯೋಗಿಸೋ ಕೊಯ್ಯಬಹುದಾದ ಹಣ್ಣು ಇದು ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಮೇಲೆ ನನಗೆ ಸಂಪೂರ್ಣ ಸಹಾನುಭೂತಿಯಿದೆ. ಏಕೆಂದರೆ ಮೊದಲೇ ಹೇಳಿದಂತೆ ಗಿಡವೆಲ್ಲ ಮುಳ್ಳು ಮಯ. ಒಂಥರಾ ಪೊದೆ ಪೊದೆಗಳ ತರ ಗಿಡ ಬೇರೆ. ಮೇಲಿನಿಂದ ನೋಡಿದರೆ ಹಣ್ಣುಗಳು ಸುಲಭವಾಗಿ ಕೈಗೆಟುಕುವಂತೆ ಕಾಣುತ್ತವೆ. ಸರಿಯಾದ ವಿಧಾನವಿಲ್ಲದೇ ಕೊಯ್ಯಲು ಹೋದಿರೋ, ಎರಡು ದಿನ ನೀವು ನೋವು ಶನಿ ಅನುಭವಿಸುವುದು ನಿಶ್ಚಿತ. ಮೊದಲು ಗಿಡವನ್ನು ಅಥವಾ ಪೊದೆಯನ್ನು ನಿಧಾನವಾಗಿ ಅವಲೋಕಿಸಬೇಕು. ಗುರಿಯನ್ನು ತಲುಪಲು ಯಾವ ವಿಧಾನವನ್ನು ಅನುಸರಿಸಬೇಕೆಂಬುದರ ಸರಿಯಾದ ಉಪಾಯ ನಿಮ್ಮಲ್ಲಿರಬೇಕು. ಪೊದೆಯ ಮುಂದಿನ ಭಾಗದಿಂದಲೋ, ಹಿಂದಿನಿಂದಲೋ, ಅಥವಾ ಬದಿಯಿಂದಲೋ ನುಗ್ಗುವುದು ನಿಶ್ಚಯವಾದ ಮೇಲೆ, ನಿಧಾನಕ್ಕೆ ಮುಳ್ಳುಗಳ ಚಕ್ರವ್ಯೂಹವನ್ನು ಭೇದಿಸಬೇಕು. ಇದು ಧಾಳಿಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ನಮಗೆ ಅಥವಾ ನಮ್ಮ ಸೈನ್ಯಕ್ಕೆ ಸ್ವಲ್ಪ ನೋವು, ಹಿನ್ನಡೆ ನಿಶ್ಚಿತ. ಆದರೂ ಕುಗ್ಗದೇ, ಮುನ್ನುಗ್ಗಬೇಕು. ಚಕ್ರವ್ಯೂಹ ಭೇದಿಸಿದರೆ ನಿಮಗೆ ಒಂದು ಆಯಕಟ್ಟಿನ ಜಾಗ ಸಿಗುವುದು ಗ್ಯಾರಂಟಿ. ಇಲ್ಲಿ ಸ್ವಲ್ಪ ವಿಶ್ರಮಿಸಿ, ನಮ್ಮ ಸ್ಟ್ರಾಟಜಿ ಯನ್ನು ಪುನರ್ ಅವಲೋಕಿಸಬಹುದು. ಮುಂದಿನ ನಡೆ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ. ಮಿಲಿಟರಿ ಸೈನ್ಯದ ತರ ನಿಧಾನಕ್ಕೆ ಗುರಿಯತ್ತ ತೆವಳಿ, ಅಕ್ಕ ಪಕ್ಕದ ಮುಳ್ಳುಗಳನ್ನು ಗಮನಿಸುತ್ತಾ,ನಿಧಾನಕ್ಕೆ ಎದ್ದು, ಅದೆಲ್ಲೋ ಎರಡು ಹೆಣೆಗಳ ನಡುವೆ ಅಡಗಿಕೊಂಡು ಕೂತಿದ್ದ ಕಪ್ಪನೆಯ ಮಿರಿಮಿರಿ ಮಿಂಚುವ ಹಣ್ಣನ್ನು ಕೊಯ್ದು, ಯಾವ ವೇಗದಲ್ಲಿ ನಿಮ್ಮ ಕೈಯನ್ನು ತೂರಿದ್ದೀರೊ, ಅದೇ ವೇಗದಲ್ಲಿ ಹಿಂತೆಗೆದುಕೊಂಡು, ಇನ್ನೊಂದು ಕೈಯ್ಯಲ್ಲಿರುವ ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಣ್ಣನ್ನು ಸೇರಿಸಿದರೆ ಗೆದ್ದಂತೆ. ಇಂಥ ಹಲವಾರು ನಡೆಗಳ ಬಳಿಕ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಲವಾರು ಹಣ್ಣುಗಳು ನಗುತ್ತ ಕುಳಿತಿರುತ್ತವೆ (ಅದರ ಎರಡರಷ್ಟು ನಮ್ಮ ಹೊಟ್ಟೆಯೊಳಗೆ ಆಗಲೇ ಸೇರಿರುತ್ತವೆ, ಆ ಮಾತು ಬೇರೆ). ಧಾಳಿ ಯಶಸ್ವಿಯಾಗಿ ಮುಗಿದ ಮೇಲೆ ಮತ್ತೊಮ್ಮೆ ಚಕ್ರವ್ಯೂಹ ಭೇದಿಸಿ ಹೊರಬಂದರೆ ನಿರಾಳ. ಒಂದು ಸಾರ್ತಿ ಮೈ ಕೈಗಾದ ತರಚು, ಕಾಲಿನ ಮುಳ್ಳು ಇವನ್ನೆಲ್ಲ ಪರಿಶೀಲಿಸಿ, ಸ್ವಲ್ಪ ವಿಶ್ರಮಿಸಿ, ಇಷ್ಟೆಲ್ಲ ಪರಿಶ್ರಮ ಪಟ್ಟಿದ್ದು ನಿಜಕ್ಕೂ ಸಾರ್ಥಕ ಎಂದು ನಮ್ಮನ್ನೇ ನಂಬಿಸಲು ಮತ್ತೆರಡು ಹಣ್ಣನ್ನು ಬಾಯಿಗೆಸೆದು ಚಪ್ಪರಿಸುತ್ತಾ ಸೈನ್ಯ ಮುಂದೆ ಸಾಗುತ್ತದೆ. ಈಗ ಹೇಳಿ, ಯಾವ ಮಿಲಿಟರಿ ಕಾರ್ಯಾಚರಣೆಗಿಂತ ಭಿನ್ನ ನಮ್ಮ ಪರಾಕ್ರಮ?

ಎಂಥಾ ಹುಚ್ಚು? ಆ ಹುಳಿ ಹುಳಿ ಹಣ್ಣನ್ನು ತಿನ್ನಲು ಇಷ್ಟೊಂದು ಪರಿಶ್ರಮವೇ? ಎಂದು ನೀವು ಆಶ್ಚರ್ಯ ಪಡಬಹುದು (ಮನೆಯಲ್ಲಿ ನಮ್ಮ ಹಿರಿಯರ ಅಭಿಪ್ರಾಯ ಇದಕ್ಕಿಂತ ತೀರ ಭಿನ್ನವೇನೂ ಇರುತ್ತಿರಲಿಲ್ಲ ಎನ್ನುವುದು ವಿಪರ್ಯಾಸ). ಕೈ ಕೆಸರಾದರೆ ಬಾಯಿ ಮೊಸರು ಎಂದು ಹಿರಿಯರು ಹೇಳಿಲ್ಲವೇ?. ಹಾಂ ಮರೆತಿದ್ದೆ, ಕೌಳಿ ಕಾಯಿ ಅಥವಾ ಹಣ್ಣುಗಳನ್ನು ಕೊಯ್ದಾಗ ಅವುಗಳ ತೊಟ್ಟಲ್ಲಿ ಬಿಳಿ ಬಣ್ಣದ ಹಾಲೊಂದು ಒಸರುತ್ತದೆ. ನಮ್ಮ ಕಾರ್ಯಾಚರಣೆ ಮುಗಿದಾಗ ನಮ್ಮ ಕೈಯೆಲ್ಲ ಆ ಅಂಟಿನಿಂದ ಸಂಪೂರ್ಣ ಕೆಸರಾಗಿ ಅದನ್ನು ತೆಗೆಯಲು ನಾವು ಒಂದರ್ಧ ಎಣ್ಣೆ ತಟ್ಟೆಯನ್ನೋ, ಸಾಕಷ್ಟು ಚಿಮಣಿ ಎಣ್ಣೆಯನ್ನೋ ಖರ್ಚು ಮಾಡಬೇಕಾಗಿ ಬರುತ್ತಿತ್ತು .ಹಾಗೆ ನೋಡಿದರೆ ನಮ್ಮ ಕೈ ಅಕ್ಷರಶಃ ಕೆಸರಾಗಿರುತ್ತಿತ್ತು. ಎಷ್ಟೋ ಸಲ ಕಾಲು,ತಲೆಗೆಲ್ಲ ಮುಳ್ಳು ಚುಚ್ಚಿಸಿಕೊಂಡು ವಾರಗಟ್ಟಲೆ ತೊಂದರೆ ಪಟ್ಟಿದ್ದಿದೆ. ಮನೆಯಲ್ಲಿ ಎಷ್ಟೋ ಸಲ ಬೈಯ್ಯಿಸಿಕೊಂಡರೂ, ನೋವು ಅನುಭವಿಸಿಯೂ, ಹಣ್ಣಿನ ರುಚಿ ಪ್ರತೀ ವರ್ಷವೂ ನಮ್ಮನ್ನು ಅಲ್ಲಿ ಎಳೆಯುತ್ತಿತ್ತು. ಬೇಸಿಗೆ ರಜೆಯ ಪ್ರಮುಖ ಆಕರ್ಷಣೆ ನನಗಂತೂ ಅದೇ ಆಗಿತ್ತು.

ಮೊನ್ನೆ ಮಾರ್ಚಲ್ಲಿ ಊರಿಗೆ ಹೋದಾಗ ನೋಡುತ್ತೇನೆ ಏನಾಶ್ಚರ್ಯ? ರೋಡಿನ ಎರಡುದ್ದಕ್ಕೂ ಒಂದೇ ಒಂದು ಕೌಳಿ ಮಟ್ಟಿಯ ಕುರುಹಿಲ್ಲ. ರೋಡ್ ಅಗಲ ಮಾಡುತ್ತಾರಂತೆ, ಅದಕ್ಕೆ ಅಕ್ಕ ಪಕ್ಕದಲ್ಲಿರುವ ಗಿಡ, ಪೊದೆಗಳನ್ನೆಲ್ಲ ನಿರ್ದ್ಯಾಕ್ಷಿಣ್ಯವಾಗಿ ಸಂಪೂರ್ಣವಾಗಿ ಸವರಿಬಿಟ್ಟಿದ್ದಾರಂತೆ. ಎಂಥ ವಿಪರ್ಯಾಸ! ಒಂದು ತಲೆಮಾರಿನ ಬೇಸಿಗೆ ರಜೆಯ ಖುಷಿಯ ನೆನಪುಗಳನ್ನೆಲ್ಲ ನಿರ್ನಾಮ ಮಾಡಿದ ಪಾಪ ಅವರನ್ನು ತಟ್ಟದೇ ಬಿಟ್ಟೀತೆ? ಮನಸ್ಸೆಲ್ಲ ವಿಷಾದಮಯ!. ಎಷ್ಟೊಂದು ವರ್ಷಗಳಿಂದ ರಸ್ತೆಯಂಚಿನ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೇ, ಏನೇನೂ ಪ್ರತಿಯಾಗಿ ಬಯಸದೇ, ಎಷ್ಟೋ ಪ್ರಯಾಣಿಕರ, ನಮ್ಮಂಥ ಅನೇಕ ಜನಕೆ ಸಂತಸ ನೀಡಿದ್ದ ಗಿಡಗಳನ್ನು ನೆನೆಸಿಕೊಂಡರೆ ನಿಜವಾಗಿ ಬೇಸರವಾಗುತ್ತದೆ. ಕೌಳಿ ಮಟ್ಟಿಗಳೆಲ್ಲವನ್ನು ಕಳೆದುಕೊಂಡು ಬಿಸಿಲಲ್ಲಿ ಬೇಯುತ್ತಿರುವ ರಸ್ತೆ ಪಕ್ಕದ ದಿಬ್ಬಗಳು ಮೂಕವಾಗಿ ರೋದಿಸುತ್ತದ್ದಂತೆ ಅನಿಸಿ ಅಲ್ಲಿ ಜಾಸ್ತಿ ಹೊತ್ತು ನಿಲ್ಲಲಾಗಲಿಲ್ಲ. ಈ ಸಲದ ಬೇಸಿಗೆ, ವಾತಾವರಣವೊಂದೇ ಅಲ್ಲ, ಮನಸ್ಸನ್ನೂ ಶುಷ್ಕವಾಗಿಸುತ್ತದೆಯೋ ಎಂದು ಗಾಭರಿಯಾಯ್ತು.

Friday, March 18, 2011

ಹೊಸ ಚಿಗುರು

ಪುಟ್ಟ ಪಾದ ದಿಟ್ಟ ನೋಟ
ತೊದಲ ನುಡಿವ ಹಕ್ಕಿ ಕಂಠ
ಮುಗ್ಧ ನಯನ, ಸ್ನಿಗ್ಧ ನಗು
ಬೆರಗು ಬಿನ್ನಾಣಕೊಂದು ಹೆಸರು

ತುಟಿಯ ಬಿರಿಯೆ ತುಂಟ ಹಾಸ
ಹರಿಸಿ ಸುತ್ತ ಖುಶಿಯ ಹೊಳೆಯ
ಇಳಿಸಿ ಇಳೆಗೆ ಸ್ವರ್ಗ ಲೋಕ
ಮರೆಸಿ ಸಕಲ ದುಃಖ ದುಗುಡ

ನಲಿವು ನಗೆಯ ಹೊನಲು ನಿತ್ಯ
ಯಾಕೆ ಬೇಕು ಜಗದ ಮಿಥ್ಯ?
ಮೈಯ ಮುರಿವ ಸೊಬಗೇ ನೃತ್ಯ
ಉರಿವ ಸೂರ್ಯನಷ್ಟೆ ಸತ್ಯ

ಹೊಸದು ಆಸೆ ಹೊಸದು ಕನಸು
ಮಮತೆಯೊಡಲ ಬೆಳಗಿ ಜೀವ
ಹರುಷ ಭಾವ ತುಂಬಿ ಎದೆಯ
ಎನಿತು ಧನ್ಯ ಬಾಳ ಪಯಣ