Tuesday, December 20, 2011

ಬದಲಾವಣೆ

ಬದಲಿಸಬೇಕಂತೆ ಹಳೆಯ ಬಚ್ಚಲಮನೆಯ
ಜಾರೋ ಕಲ್ಲು,ಮಸಿಹಿಡಿದ ಗೋಡೆ
ಕಿರ್ರೆನುವ ಬಾಗಿಲು,ಸುರಿವ ಸೂರು
ಒಂದೇ ಎರಡೇ,ನಡೆದೀತು ಎಷ್ಟು ದಿನ? ಒಂದೇ ವರಾತ

ನೋಡಿ ಆ ಹಂಡೆ,ಓಬೀರಾಯನ ಕಾಲದ್ದು
ಛೇ! ಒಂಚೂರೂ ಪ್ರಜ್ಞೆಯಿಲ್ಲ ನಿಮಗೆ
ಕರೆಂಟು ದೀಪವಿಲ್ಲ, ಬಟ್ಟೆಗೆ ಜಾಗವಿಲ್ಲ
ಕಿವಿ ಮೇಲೆ ಬಿದ್ದೀತೆ ನನ್ನ ಗೊಣಗಾಟ? ಹೇಳಿ ಪ್ರಯೋಜನವಿಲ್ಲ

ನೋಡಿದ್ದೀರಾ ಅವರ ಮನೆಯ ಬಾಥ್ರೂಮು?
ಥಳಥಳಿಸುವ ಟೈಲ್ಸುಗಳು, ದಂತದ ಹೊಳಪಿನಬೇಸಿನ್ನು,
ಝಗಮಗಿಸುವ ಲೈಟುಗಳು! ಗೊತ್ತೆ
ಈಗೆಲ್ಲ ಅವನ್ನು ನೋಡಿಯೇ ಅಳೆಯುತ್ತಾರೆ ನಿಮ್ಮ ರಸಿಕತೆಯ

ತೆಗೆಯಿರಿ ಈ ಪ್ಲಾಸ್ಟಿಕ್ ನಲ್ಲಿ, ಬರೀ ತಣ್ಣೀರು ಇದರಲ್ಲಿ
ಅದರ ಪೈಪು ಬೇರೆ, ನೋಡಿ ಗೋಡೆಯೆಲ್ಲ ಹಾಳು
ನೋಡಿಲ್ಲವೇ ಹೊಸ ಜಾಗ್ವಾರು,ಹಿಂಡ್ವೇರು?
ಎಡಕ್ಕೆ ಬಿಸಿನೀರು, ಮೇಲೆ ಶವರ್ರು,ಇದ್ದೇ ಇದೆಯಲ್ಲ ತಣ್ಣೀರು

ನಿಜ, ಬದಲಾಗಿವೆ ನಮ್ಮ ದೃಷ್ಟಿ, ಸೌಂದರ್ಯ ಪ್ರಜ್ಞೆ
ಹಳೆಯದೆ? ಛೀ! ಕಿತ್ತು ಬೀಸಾಕಿ ನಿರ್ದಾಕ್ಷಿಣ್ಯವಾಗಿ
ಮನೆ ತುಂಬಿಸಿಕೊಳ್ಳಿ ಹೊಚ್ಚ ಹೊಸದರ ಹೊಳಪ
ದುಡಿಯುವುದೆಲ್ಲ ಉಳಿಸಲೇ? ಭ್ರಾಂತು ನಿಮಗೆ, ರಾಜನಂತೆ ಬದುಕಿ

ಹೊಸದೆಂದ ಮಾತ್ರಕೆ ಬೇರೆಯಾಗಬಹುದೇ ಅನುಭೂತಿ
ಬದಲಾದೀತೆ ನೀರಿನ ಬಿಸಿ, ಹೊಗೆಯ ಹಸಿ?
ಬೇಕೆಂದಾಗ ನವೀಕರಿಸಬಹುದು ಹಳೆಯದನೆಲ್ಲ
ಅನ್ನುವರಿಗೆಲ್ಲ ಒಂದೇ ಪ್ರಶ್ನೆ, ಹೊಸತಾಗಿಸ ಬಲ್ಲಿರೇ ಹಳೆಯ ನೆನಪ?

Monday, May 9, 2011

ಮೊದಲ ಪುಟಕು ಕೊನೆಯ ಪುಟಕೂ

ಸಾಲಾಗಿ ಅರಳಿ ನಿಂತ ಗುಲ್ ಮೊಹರ್ ಮರಗಳ ಎಡೆಯಲ್ಲಿ, ಮುಳುಗುತ್ತಿರುವ ಸೂರ್ಯ ಆಗಾಗ ಇಣುಕಿ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಹೇಗೆ ಶುರು ಮಾಡುವುದೆಂದೇ ತಿಳಿಯದೆ ಇಬ್ಬರೂ ಬರೀ ನೆಲ ನೋಡುತ್ತ ನಡೆಯುತ್ತ ಹಾದಿ ಸವೆಸಿದ್ದೆವು. ಮದುವೆ ನಿಶ್ಚಯವಾದ ಮೇಲೆ ಮೊದಲನೇ ಬಾರಿ ಹೊರಗೆ ಭೇಟಿಯಾಗಿದ್ದು ಇವತ್ತು. ಒಂದಿಷ್ಟು ತವಕ, ಉತ್ಸಾಹ, ಉಲ್ಲಾಸ ಎಲ್ಲ ಸೇರಿ ವಾತಾವರಣದ ಬಿಸಿ ಏರಿಸಿದ್ದವು. ಅದರ ಸೂಚನೆ ಹಿಡಿದುಕೊಂಡೇ, ಗಾಳಿ ತಂಪಾಗಿ ಬೀಸುತ್ತಿದೆಯೇನೋ ಎಂದೆನಿಸಲು ಶುರುವಾಗಿತ್ತು. ಮೊದಲು ಮಾತಾಡಿದ್ದೇ ಅವಳು. "ಹೇಗಿದೆ ನನ್ನ ಡ್ರೆಸ್?" ನನ್ನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದ ಪ್ರಶ್ನೆಗೆ ನಾನು ತುಸು ಅವಾಕ್ಕಾಗಿದ್ದು ನಿಜ. "ಚೆನ್ನಾಗಿದೆ" ಎಂದಷ್ಟೇ ಉತ್ತರಿಸಲು ಸಾಧ್ಯವಾಗಿದ್ದು. ಮುಂದೆ ಮಾತಾಡಿದ್ದೆಲ್ಲ ಅವಳೇ ಜಾಸ್ತಿ. ಹೊಟೆಲ್ಲಿನಲ್ಲಿ ಊಟಕ್ಕೆ ಕುಳಿತಾಗಲೂ ಅಷ್ಟೇ. ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದ ಅವಳ ಮುಖಚರ್ಯೆ, ಯಾವುದನ್ನೋ ವಿವರಿಸುವಾಗ ಕೈ ಬೆರಳುಗಳನ್ನೆಲ್ಲ ತಿರುಗಿಸುವ ರೀತಿ, ಗಾಳಿಗೆ ಮುನ್ನುಗ್ಗಿ ಬರುತ್ತಿದ ಮುಂಗುರುಳುಗಳನ್ನೆಲ್ಲ ಹಿಂದೊತ್ತಿ ಸಿಕ್ಕಿಸುವ ಪರಿ, ಎಲ್ಲ ನೋಡುತ್ತ ನಾನು ಕಳೆದೇ ಹೋಗಿದ್ದೆ. ಮಧುರವಾದ ಅನುಭೂತಿಯೊಂದದ ಗುಂಗಿನೊಳಗೆ ಸಿಕ್ಕು ಮನಸ್ಸು, ತೇಲಿ ತೇಲಿ ಹೋಗಿತ್ತು.
- ಸುಹಾಸ್, ಜನವರಿ ೧೯

ಹನ್ನೊಂದನೇ "ಬಿ" ಕ್ರಾಸ್ ಇನ್ನೂ ದಾಟಿರಲಿಲ್ಲ, ಶುರುವಾಗಿತ್ತು ಮುಸಲಧಾರೆ. ಹೃದಯದೊಳಗೆ ಹೇಳದೇ ಕೇಳದೇ ಶುರುವಾಗುವ ಪ್ರೀತಿಯಂತೆಯೇ, ಒಂದಿನಿತೂ ಸೂಚನೆ ಕೊಡದೇ. ಕೈಯಲ್ಲಿದ್ದಿದ್ದು ಒಂದೇ ಕೊಡೆ. ಮಳೆಹನಿಗಳು ಸಂಪೂರ್ಣವಾಗಿ ತೋಯಿಸುವ ಮುಂಚೆ ಇಬ್ಬರೂ ಅದರೊಳಗೆ ತೂರಿಕೊಂಡಿದ್ದಾಗಿತ್ತು. ಸುಮ್ಮನೆ ಅವಳ ಕಣ್ಣುಗಳನ್ನೊಮ್ಮೆ ನೋಡಿದ್ದೆ, ಧೈರ್ಯ ಮಾಡಿ. ಅವುಗಳಲ್ಲಿ ಪ್ರತಿಫಲಿಸುತ್ತಿದ್ದುದು ನಾಚಿಕೆಯೋ, ಆತಂಕವೋ ಥಟ್ಟನೆ ಗುರುತಿಸಲಾಗಿರಲಿಲ್ಲ. ಕಾಲುಗಳು ಮನಸ್ಸಿನೊಳಗೆ ಬೇಯುತ್ತಿರುವ ತುಮುಲಗಳನ್ನು ಲಕ್ಷಿಸದೇ, ತಮ್ಮಷ್ಟಕ್ಕೆ ಅವರ ಕೆಲಸ ಮುಂದುವರಿಸಿದ್ದವು. ಅನಿರೀಕ್ಷಿತವಾಗಿ ಒದಗಿ ಬಂದ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಗಲಿಬಿಲಿಗೊಂಡಿದ್ದೆ. ಅವಳ ಮೈಯ್ಯ ಘಮ, ಮೊದಲ ಮಳೆ ಹೊತ್ತು ತಂದ ಮಣ್ಣ ಸುವಾಸನೆಯ ಜೊತೆ ಬೆರೆತು ಅನಿರ್ವಚನೀಯವಾದ ವಾತಾವರಣವೊಂದನ್ನು ಸೃಷ್ಟಿ ಮಾಡಿತ್ತು. ನಡೆವಾಗಲೊಮ್ಮೆ ಅವಳ ಕಿರುಬೆರಳ ತುದಿ ನನ್ನ ಕೈಯನ್ನೊಮ್ಮೆ ಸವರಿರಬೇಕು. ಮೈಯಲ್ಲೊಮ್ಮೆ ಮಿಂಚಿನ ಸಂಚಾರ!. ಅಂಥ ಮಳೆಯ ಛಳಿಯಲ್ಲೂ ಬೆವೆತುಹೋಗಿದ್ದೆ. ಸಾವರಿಸಿಕೊಳ್ಳಲು ಹಲವು ಕ್ಷಣಗಳೇ ಬೇಕಾಗಿದ್ದವು. ನನ್ನಲ್ಲಾದ ಭಾವೋದ್ವೇಗದ ಅರಿವು ಅವಳಿಗೂ ಗೊತ್ತಾಗಿರಬೇಕು. ಪುಟ್ಟದ್ದೊಂದು ತುಂಟ ನಗು ತುಟಿಯಂಚಲ್ಲಿ ಅರಳಿ ಮರೆಯಾಗಿದ್ದು, ಕೇವಲ ನನ್ನ ಭ್ರಮೆಯಾಗಿರಲಿಕ್ಕಿಲ್ಲ!. ಎಂಟು ಹತ್ತು ಹೆಜ್ಜೆ ಹಾಕುವುದರಲ್ಲಿ ಅವಳ ಮನೆ ಮುಟ್ಟಾಗಿತ್ತು. ಆದರೆ ಆ ಕ್ಷಣಗಳಲ್ಲಿ ಅನುಭವಿಸಿದ ರೋಮಾಂಚನವನ್ನು ಶಬ್ದಗಳಲ್ಲಿ ಹಿಡಿದಿಡಲು ಕಲ್ಪನಾಶಕ್ತಿ ಸಾಕಾಗಲಿಕ್ಕಿಲ್ಲ. ದೇವಲೋಕದ ಅಪ್ಸರೆಯೊಬ್ಬಳು ಇಹವ ಮರೆಸಿ ನಂದನವನದ ಸಂಚಾರ ಮಾಡಿಸಿದಂತೆ, ಜಡವ ತೊಡೆದು ಉಲ್ಲಾಸದ ಹೊಳೆ ಹರಿಸುವ ಅಮೃತ ಸಿಂಚನದಂತೆ. ಬಾಗಿಲ ತೆರೆದು, ಕೈ ಬೀಸಿ ಒಳಗೆ ನಡೆದವಳ ತುಂಬುಗಣ್ಣುಗಳಲ್ಲಿ ಸಂತಸದ ಹೊಳಹು ದಟ್ಟವಾಗಿ ಹೊಳೆಯುತ್ತಿತ್ತು.
- ಸುಹಾಸ್, ಫೆಬ್ರುವರಿ ೨೭

ಪ್ರೀತಿಯ ಕೋಮಲ ಬಾಹುಗಳಲ್ಲಿ ಸಿಲುಕಿಕೊಂಡವರಿಗೆ ಜಗತ್ತೆಲ್ಲ ಸುಂದರವಾಗಿ ಕಾಣುತ್ತದೆಂಬ ಸಂಗತಿ ಸುಳ್ಳಲ್ಲ. ಹೂವು ಅರಳುವ ಸೊಬಗು, ಹಕ್ಕಿ ಹಾಡುವ ಹಾಡು, ಹರಿವ ನದಿಯ ಸದ್ದು, ಇರುಳ ಬೆಳಗುವ ತಾರೆ, ಎಲ್ಲ ಪ್ರೀತಿಯ ಚಿರ ನೂತನತೆಯನ್ನು ಸಂಕೇತಿಸುವಂತೆ ಭಾಸವಾಗುತ್ತವೆ. ವೀಣೆಯ ತಂತಿಯನ್ನು ಮೀಟಲು ಬೆರಳುಗಳು ಹವಣಿಸುತ್ತವೆ, ಅರಿವಿಲ್ಲದೆಯೇ ಕೊರಳು ಹೊಸಹಾಡಿಗೆ ದನಿಯಾಗುತ್ತದೆ. ಕಣ್ಸನ್ನೆಗಳು ಹೊಸ ಭಾಷೆ ಕಲಿಸುತ್ತವೆ, ಕವಿತೆಗಳು ಹೊಸ ಅರ್ಥ ಹೊಳೆಯಿಸುತ್ತವೆ. ಮಾತುಗಳು ಮೆದುವಾಗುತ್ತವೆ, ಮೌನ ಎಂದಿಗಿಂತ ಹೆಚ್ಚು ಸುಂದರವೆನ್ನಿಸುತ್ತದೆ. ಅಮೃತವಾಹಿನಿಯಂತೆ ಮಾನವನ ಎದೆಯಿಂದ ಎದೆಗೆ ಸದಾ ಹರಿಯುತಿರುವ ಈ ಭಾವಕೆ ಬೇರೆ ಮಿಗಿಲುಂಟೇ? ಗೆಳತಿಯ ಸಿಹಿಮಾತಿಗಾಗಿ ಕಾತುರವಾಗಿ ಕಾಯುವ ಕ್ಷಣಗಳಲ್ಲಿ ಅನುಭವಿಸುವ ಚಡಪಡಿಕೆಗಳಿಗೆ, ನಗುವ ಹಂಚಿಕೊಂಡು ಜಗವ ಮರೆತ ಕ್ಷಣಗಳಿಗೆ ಬೆಲೆ ಕಟ್ಟಲು ಸಾಧ್ಯವಾದೀತೆ?
- ಸುಹಾಸ್, ಮಾರ್ಚ್ ೮

"ಒಲವು ದೇವರ ಹೆಸರು, ಚೆಲುವು ಹೂವಿನ ಬದುಕು". ಚೆಲುವ, ಒಲವ ಬಾಳು ನಿಮ್ಮದಾಗಲಿ, ಹಾರೈಸಿದರು ಹಿರಿಯರೊಬ್ಬರು. ಎಂಥ ಸುಂದರ ಆಶೀರ್ವಾದ!. ಹೇಳಿಕೊಳ್ಳಲಾಗದಷ್ಟು ಹಿಗ್ಗು ಎದೆಯ ಕಣಕಣದಲ್ಲೂ. ಬಾಳಿನ ಹೊಸ ಘಟ್ಟವೊಂದನ್ನು ಪ್ರವೇಶಿಸಿದ ಸಂಭ್ರಮ, ಹೊಸದಾದ ಜವಾಬ್ದಾರಿಯೊಂದ ನಿಭಾಯಿಸುವ ವಾಗ್ದಾನ, ಪರಸ್ಪರ ನಂಬಿಕೆಯ ಮೇಲೆ ಸುಖದ ಸೌಧ ಕಟ್ಟುವ ಭರವಸೆ ಎಲ್ಲ ಮಿಳಿತವಾಗಿ ಹಿತವಾದ ರಸಾನುಭೂತಿಯನ್ನು ಕಟ್ಟಿಕೊಟ್ಟಿದ್ದವು. ಎಷ್ಟೆಲ್ಲ ಹಿರಿಯರ, ಬಂಧುಗಳ, ಆಪ್ತರ ಸಂತಸದಲ್ಲಿ ಒಳಗೊಂಡು, ಅವರೆಲ್ಲರ ಶುಭ ಹಾರೈಕೆಗಳಿಗೆ ಧನ್ಯರಾದೆವು!. "ಸವಿತಾ-ಸುಹಾಸ್" ಒಳ್ಳೇ ಜೋಡಿ, ಅನುರೂಪವಾಗಿ ಬಾಳಿ. ಎಲ್ಲರೂ ಆಶೀರ್ವದಿಸಿದ್ದರು. ವೈದಿಕರ ವೇದ ಘೋಷಗಳು ಕಿವಿಯಲ್ಲಿ ಇನ್ನೂ ಗುನುಗುಣಿಸುತ್ತಲೇ ಇದ್ದಂತಿದೆ. ಹೋಮದ ಹೊಗೆಯ ಉರಿ ಕಣ್ಣಲ್ಲೇ ಸಿಕ್ಕಿಹಾಕಿಕೊಂಡಂತಿದೆ. ಧಾರೆ ಎರೆಯುವ ಹೊತ್ತಲ್ಲಿ, ಬೊಗಸೆಯಲ್ಲಿ ಅವಳ ಕೈಯನ್ನು ತುಂಬಿಕೊಂಡಾಗ, ಕೈ ನಡುಗಿದ್ದು ನೆನೆದರೆ ಈಗಲೂ ಮೈ ಝುಂ ಎನ್ನುತ್ತದೆ. ಕೊರಳಿಗೆ ಅರಿಸಿಣದ ದಾರ ಕಟ್ಟುವಾಗ, ನನ್ನ ಕೈಯ ಬಿಸುಪು ಅವಳಿಗೆ ರೋಮಾಂಚನ ತಂದಿರಬಹುದೆಂಬ ತುಂಟ ಊಹೆ ತುಟಿಯಂಚಲಿ ಕಿರುನಗೆಯೊಂದನ್ನು ಮೂಡಿಸುತ್ತದೆ. ಮುಂದೆಲ್ಲೋ ಬದುಕ ದಾರಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ, ಈ ದಿನ ಉಜ್ವಲವಾಗಿ ಹೊಳೆದು ಮನಕೆ ಸಂತಸವೀಯುವುದರಲ್ಲಿ ಸಂದೇಹವೇ ಇಲ್ಲ.
- ಸುಹಾಸ್, ಮಾರ್ಚ್ ೨೯

"ವಯಸ್ಸಿಗೆ ಮೀರಿದ ಪ್ರೌಢತೆಯಿದೆ" ಅಂದುಕೊಂಡಿದ್ದು ಇವಳಿಗೇನಾ? ಪುಟ್ಟ ಮಕ್ಕಳಾದರೂ ಇಷ್ಟೊಂದು ಹಠಮಾಡಲಿಕ್ಕಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಯಾಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಾಳೆ? ಪದೇ ಪದೇ, "ನನ್ನನ್ನು ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ" ಎಂಬ ಮೂದಲಿಕೆ ಬೇರೆ. ಇವಳಿಗೆ ನಿಜವಾಗಿ ಇದ್ದದ್ದು ಕೀಳರಿಮೆಯೋ, ಅಥವಾ ವಿಪರೀತ ಅಭದ್ರತೆಯೋ ಕಾಣೆ. ಯಾವುದು ಪ್ರೀತಿ, ಯಾವುದು ನಿಜವಾದ ಕಾಳಜಿ, ಯಾವುದು ಗದರುವಿಕೆ ಎಂದೇ ಗೊತ್ತಾಗದಷ್ಟು ಮುಗ್ಧಳೇ ಹಾಗಾದರೆ? ಯಾರ ಎದಿರು ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇರುವ ಹಾಗೆ ಕಾಣುತ್ತಿಲ್ಲ. ಇವತ್ತು ಅಪರೂಪಕ್ಕೆ ಮನೆಗೆ ಬಂದ ಅತಿಥಿಗಳ ಎದುರು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು, ಹೇಗೆ ಊಟದ ಬಟ್ಟಲನೆಸೆದು ಹೋದಳಲ್ಲ, ಎಷ್ಟು ಕೆಟ್ಟದೆನಿಸಿತ್ತು. ತಲೆ ಮೇಲೆ ಎತ್ತಲಾಗದಷ್ಟು ಅವಮಾನ. ಅವರೆಲ್ಲ ಏನು ಅಂದುಕೊಂಡಿರಬಹುದು. ಮೊನ್ನೆ ಕಾರಲ್ಲಿ ಹೋಗುತ್ತಿರುವಾಗ ಯಾವುದೋ ಅಂಗಡಿಯಲ್ಲಿ ಪ್ರದರ್ಶನಕ್ಕಿದ್ದ ಸೀರೆ ಬೇಕೇ ಬೇಕು ಎಂದೆಲ್ಲ ರಂಪ ಮಾಡಿ, ನಡು ಬೀದಿಯಲ್ಲಿ ಕಾರನ್ನು ನಿಲ್ಲಿಸುವಂತೆ ಮಾಡಿದ್ದನ್ನು ಮರೆಯಲಾದೀತೆ? ಅಥವಾ "ನೀವು ಬೇಕೆಂದೇ ಆಫೀಸಿನಿಂದ ತಡ ಮಾಡಿ ಬರುತ್ತಿದ್ದೀರಿ" ಎಂದು ಮುನಿಸಿಕೊಂಡು ಊಟ ಬಿಟ್ಟ ದಿನಗಳ ಲೆಕ್ಕ ಇಡಲಾದೀತೆ?. ಕೆಲವೊಮ್ಮೆ ನಾನು ಕೊಟ್ಟ ಸಲಿಗೆಯೇ ಜಾಸ್ತಿ ಆಗಿರಬೇಕೆಂದೆನಿಸಲು ಶುರುವಾಗಿಬಿಡುತ್ತದೆ. ಇಲ್ಲ, ಇನ್ನೂ ಚಿಕ್ಕ ವಯಸ್ಸು, ವಾತಾವರಣ ಹೊಸದು. ಸ್ವಲ್ಪ ಸಮಯ ಬೇಕು ಅವಳಿಗೂ, ಅಂದೆನಿಸಿ ಹೇಗೋ ಮರೆಯಲು ಪ್ರಯತ್ನಿಸುತ್ತೇನೆ.
- ಸುಹಾಸ್, ಮೇ ೧೬

ಪ್ರೀತಿಯಿಲ್ಲದವರ ಜೊತೆ ಹೇಗೋ ಬಾಳಬಹುದು, ನಂಬಿಕೆಯಿಲ್ಲದವರ ಮಧ್ಯೆ ಬದುಕುವುದು ಹೇಗೆ? ನಂಬಿಕೆ, ವಿಶ್ವಾಸಗಳ ತಳಹದಿಯ ಮೇಲೆ ನಿಲ್ಲ ಬೇಕಾದ ಸಂಬಂಧ, ಅಪನಂಬಿಕೆಯ ಅವಕೃಪೆಗೆ ತುತ್ತಾದರೆ ಬೆಳೆಯುವುದು ಹೇಗೆ? ಮನುಷ್ಯರು ಇಷ್ಟು ಬೇಗ ಬದಲಾಗಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ನೋಡಿದೊಡನೆಯೇ ಸಂಭ್ರಮ ಸುರಿಸುತ್ತಿದ್ದ ಕಣ್ಣುಗಳು ಈಗ ಅನುಮಾನದ ನೋಟದ ಮೊನೆಯಿಂದ ಇರಿಯುತಿವೆ. ಕಾಳಜಿ ತೋರುತ್ತಿದ್ದ ಮಾತುಗಳು, ಶುದ್ಧ ಕೃತಕವೆಂದೆನಿಸಲು ಶುರುವಾಗಿದೆ. ರೋಮಾಂಚನ ತರಿಸುತ್ತಿದ್ದ ಅಪ್ಪುಗೆಗಳಲ್ಲಿನ ಬಿಸುಪು, ತೀರ ಉಸಿರುಕಟ್ಟಿಸಲು ಶುರುವಾಗಿದೆ. ತಾನು ಹೇಳಿದ್ದನ್ನೇ ಸಾಧಿಸಬೇಕೆಂಬ ಹಠಮಾರಿತನ, ವಿವೇಚನೆಯಿಲ್ಲದೆ ಮಾಡುವ ಜಗಳಗಳು, ವಸ್ತುಗಳ ಮೇಲಿನ ಅತಿಯಾದ ವ್ಯಾಮೋಹ, ನನ್ನನ್ನು ತೀರ ಹತಾಶೆಗೆ ದೂಡಿ ಬಿಟ್ಟಿವೆ. ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲಾದೀತೆ? ನಾನು ನೋಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವವರನ್ನು ದಾರಿಗೆ ತರಲಾದೀತೆ? ಮಾತೆತ್ತಿದರೆ, "ನಾನಿರುವುದೇ ಹೀಗೆ, ಏನು ಬೇಕಾದರೂ ಮಾಡಿಕೊಳ್ಳಿ" ಎಂದು ಸಿಟ್ಟು ಮಾಡಿಕೊಳ್ಳುವವರಿಗೆ, ಹೊಂದಾಣಿಕೆಯ ಪ್ರಥಮ ಪಾಠಗಳನ್ನು ಹೇಳಿಕೊಡುವವರಾರು? ದಾಂಪತ್ಯದಲ್ಲಿ, ಸೋತೇ ಒಬ್ಬರನೊಬ್ಬರು ಗೆಲ್ಲಬೇಕೆಂಬ ಅಲಿಖಿತ ನಿಯಮವೊಂದಿದೆ ಅನ್ನುವುದರ ಅರಿವು ಸಹಜವಾಗಿಯೇ ಬರಬೇಕೇ ವಿನಹ ಯಾರೂ ಹೇಳಿಕೊಡುವದರಿಂದಲ್ಲ. ಅಲ್ಲವೇ?
- ಸುಹಾಸ್, ಆಗಸ್ಟ್ ೧೬

"ರಸವೇ ಜನನ, ವಿರಸ ಮರಣ, ಸಮರಸವೇ ಜೀವನ" ಅನ್ನುತ್ತದೆ ಕವಿವಾಣಿ. ಸಮರಸ ಸಾಧಿಸಲು ಮೂಲವಾಗಿ ಬೇಕಾದ್ದ ನಂಬಿಕೆಯನ್ನೇ ಕಳೆದುಕೊಂಡ ಮೇಲೆ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವಿದೆ? "ಹೊಂದಾಣಿಕೆ ಹೆಣ್ಣಿಗೇಕೆ ಮಾತ್ರ ಅನಿವಾರ್ಯ?" ಎಂದು ಪದೇ ಪದೇ ವಾದಿಸಿ ಪ್ರತಿರೋಧಿಸುತ್ತಿದ್ದ ಅವಳ ಮನಸ್ಸಿನಲ್ಲಿ ಇರುವುದಾದರೂ ಏನು ಅನ್ನುವುದನ್ನು ಅರಿಯಲು ಯತ್ನಿಸಿ ಸೋತುಹೋಗಿದ್ದೇನೆ. "ಹೊಂದಾಣಿಕೆ ಬರೀ ಹೆಣ್ಣಿಗೊಂದೇ ಅನಿವಾರ್ಯವಲ್ಲ. ಹೆಣ್ಣು ಗಂಡುಗಳಿಗಿಬ್ಬರಿಗೂ. ನಿನ್ನ ಸಂತೋಷಕ್ಕಾಗಿ ಈಗ ನಾನು ಎಷ್ಟೊಂದು ಬದಲಾಗಿದ್ದೇನೆ ನೋಡು" ಎಂಬ ಮಾತು ಅವಳ ಕಿವಿಯ ಮೇಲೇ ಬೀಳುತಿಲ್ಲ. "ಮಧುರವಾದ ಸಂಬಂಧದ ಸೌಧ ಕೇವಲ ಸ್ವಚ್ಚಂದ ಪ್ರೇಮದ ಬುನಾದಿಯೊಂದರಿಂದಲೇ ಕಟ್ಟಲು ಬರುವುದಿಲ್ಲ, ವಿಶ್ವಾಸ ನಂಬಿಕೆಗಳೆಂಬ ಗಟ್ಟಿ ಗೋಡೆಗಳೂ, ಸಣ್ಣ ಪುಟ್ಟ ತ್ಯಾಗಗಳೆಂಬ ಕಿಟಕಿಗಳೂ, ಬಂಧು ಬಳಗದವರೆಲ್ಲ ಜೊತೆ ನಗುತ ಬಾಳುವ ವಿಶಾಲ ಹೃದಯದ ಹೆಬ್ಬಾಗಿಲು, ಇವಿಲ್ಲದೇ ಹೋದರೆ ಎಂಥ ಮನೆಯೂ ಸುಭದ್ರವಲ್ಲ" ಎಂದೆಲ್ಲ ತಿಳಿಸಲು ಹೋಗಿ ವಿಫಲನಾಗಿದ್ದೇನೆ. ತಿಳುವಳಿಕೆಯ ಮಾತು ಹೇಳಲು ಯತ್ನಿಸಿದಾಗಲೆಲ್ಲ, ತಾಳ್ಮೆ ಕಳೆದುಕೊಂಡು ಕೂಗಿ ರಂಪವೆಬ್ಬಿಸುವ ಪರಿಗೆ ಹತಾಶನಾಗಿ ಕೈ ಚೆಲ್ಲಿದ್ದೇನೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ನನ್ನ ಮೇಲೆ ಹೊರಿಸುತ್ತಿದ್ದ ವಿಚಿತ್ರ ಆರೋಪಗಳನ್ನೆಲ್ಲ ತುಟಿ ಮುಚ್ಚಿ ಸಹಿಸಿದ್ದೇನೆ. ನನ್ನ ತಾಳ್ಮೆಯ ಕಟ್ಟೆ ಎಲ್ಲಿ ಒಡೆದುಹೋಗುತ್ತದೆಯೋ ಎಂದು ಹೆದರಿ ಕಿವಿ ಮುಚ್ಚಿಕೊಂಡ ಸಂದರ್ಭಗಳೂ ಇಲ್ಲದಿಲ್ಲ. ಮದುವೆಗೆ ಮುಂಚೆ ಕಟ್ಟಿದ್ದ ಕನಸುಗಳು, ಪ್ರೀತಿಯ ಭಾವಗಳು, ಕಣ್ಣೆದುರು ಬಂದು ಅಣಕಿಸುತ್ತ ವಿಚಿತ್ರ ತಳಮಳ, ಸಂಕಟವನ್ನು ತರಿಸುತ್ತಿವೆ. ನನ್ನೆಲ್ಲ ಪ್ರೀತಿ ವಿಶ್ವಾಸಗಳಿಗೆ ಅವಳು ಅರ್ಹಳಿರಲಿಲ್ಲವೇ, ಎಂಬ ಭಾವನೆ ಮನಸ್ಸನ್ನು ಕೊರೆದು ಘಾಸಿಮಾಡುತಿದೆ. ಹೃದಯದಲ್ಲಿ ಸುಡುತ್ತಿರುವ ದುಃಖದ ಬೇಗೆಗಳು ನನ್ನನ್ನು ಯಾವ ಮನೋಸ್ಥಿತಿಗೆ ದೂಡಿಬಿಡುತ್ತೇವೆಯೋ ಎಂಬ ಆತಂಕದಲ್ಲೇ ಬದುಕುತ್ತಿದ್ದೇನೆ.
- ಸುಹಾಸ್, ಅಕ್ಟೋಬರ್ ೧೧

ವಿಪರೀತ ಗಾಳಿ, ಮಳೆ! ದೀಪವನ್ನೂ ಹಾಕದೆ ಹಾಗೇ, ಕತ್ತಲಲ್ಲಿ ಶೂನ್ಯ ದಿಟ್ಟಿಸುತ್ತ ಕುಳಿತಿದ್ದೇನೆ. ಮಳೆಗೆ ಮಧುರ ನೆನಪ ಹೊತ್ತು ತರುವ ಜೊತೆಗೆ, ಯಾತನೆಯ ದುಃಖವನ್ನೂ ಜಾಸ್ತಿ ಮಾಡುವ ಸಾಮರ್ಥ್ಯವಿದೆಯೆಂಬುದು ಇವತ್ತೇ ಗೊತ್ತಾಗಿದ್ದು. ಉಬ್ಬರದಲ್ಲಿ ತೇಲಿ ತೇಲಿ ಬಂದು ದಡಕ್ಕಪ್ಪಳಿಸುವ ತೆರೆಗಳಂತೆ, ನೆನಪುಗಳು ಬೇಡವಂದರೂ ಮನಸ್ಸಿಗೆ ಬಂದು ಬಂದು ಅಪ್ಪಳಿಸುತ್ತಿವೆ. ಕಳೆದುದ್ದೆಲ್ಲವೂ ಕೆಟ್ಟ ಸ್ವಪ್ನದಂತೆ ಭಾವಿಸಿ ಮರೆತುಬಿಡಬೇಕೆಂಬ ಅದಮ್ಯ ಆಸೆ ಮನದಲ್ಲಿ ಹುಟ್ಟುತ್ತಿದೆಯಾದರೂ, ಹೃದಯ ಅದನ್ನು ಪ್ರತಿರೋಧಿಸುತ್ತಿದೆ. ಎಷ್ಟೆಲ್ಲ ದಿನ ಕಾಯ್ದಿದ್ದೆ? ಇಲ್ಲ, ಈಗ ಸರಿಹೋಗಬಹುದು, ಈಗ ಸರಿ ಹೋಗಬಹುದು, ಮತ್ತೆ ಹಿಂದಿನ ದಿನಗಳು ಮರಳಬಹುದು ಎಂದೆಲ್ಲ. ಎಲ್ಲ ಆಸೆಗಳು ಹುಸಿಯಾದವು! ಒಂದು ಮಾತನ್ನಾಡದೆಯೇ, ಎಲ್ಲವನ್ನೂ ಧಿಕ್ಕರಿಸಿ ನಡೆದುಬಿಟ್ಟಳಲ್ಲ! "ಮುಚ್ಚಿದ ಬಾಗಿಲ ಮುಂದೆ ನಿಂತು ಕಾದಿದ್ದು" ನನ್ನದೇ ಮೂರ್ಖತನವಿರಬೇಕು. ಅವಳ ಹುಂಬ ಧೈರ್ಯದ ನಿರ್ಧಾರಕ್ಕೂ, ಹುಚ್ಚು ಕೋಪದ ಆವೇಷಕ್ಕೂ , ಇವೆಲ್ಲ ಉಂಟು ಮಾಡಬಹುದಾದ ಪರಿಣಾಮಗಳ ಕಲ್ಪನೆ ಇರಲು ಖಂಡಿತ ಸಾಧ್ಯವಿಲ್ಲ. ಇರಲಿ. ಯಾವತ್ತೋ, ಯೌವ್ವನದ ಬಿಸಿಯೆಲ್ಲ ಆರಿದ ಮೇಲೆ ವಾಸ್ತವದ ಕಟುಸತ್ಯ ಅವಳನ್ನು ಕಾಡಬಹುದು. ಕಳೆದುಹೋದ ಪ್ರೀತಿಯ ಜಾಡನ್ನು ನೆನೆದು, ಅವಳೂ ಕೊರಗಬಹುದು.

ಮನಸ ಕಲ್ಲಾಗಿಸಬೇಕು ಈಗ. ಅವಳನ್ನು ಪ್ರೀತಿಸದಷ್ಟೇ ತೀವ್ರವಾಗಿ,ಮರೆಯಬೇಕು. ಉತ್ಕಟವಾಗಿ ಅನುಭವಿಸಿದ್ದ ಪ್ರೀತಿ, ಕಣ್ಣ ತುಂಬಿಕೊಂಡ ಕನಸುಗಳು, ಬಣ್ಣ ಬಣ್ಣದ ಸಂಭ್ರಮಗಳು, ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಬತ್ತಲಾಗಬೇಕು. ಮರಳಿ ಬದುಕ ಕಟ್ಟಬೇಕು, ಕನಸ ಹಂಬಲಿಸಬೇಕು. ಬತ್ತಿ ಹೋದ ಕಣ್ಣುಗಳಲ್ಲಿ ಹೊಸ ಆಸೆಯ ದೀಪವನ್ನು ಮತ್ತೆ ಹಚ್ಚಬೇಕು, ಘಾಸಿಗೊಂಡ ಹೃದಯಕ್ಕೆ ಮತ್ತೆ ಜೀವನಪ್ರೀತಿಯ ಅಮೃತವೆರೆಯಬೇಕು.

ಮಳೆ ನಿಂತಿರಬೇಕು ಹೊರಗೆ. ಒಂದೆರಡು ಸಣ್ಣ ಮಳೆಹನಿಗಳು ಸುರಿದು ಹೋದ ಮಳೆಯನ್ನು ಇನ್ನೂ ಜೀವಂತವಿಡುವ ವ್ಯರ್ಥ ಪ್ರಯತ್ನ ನಡೆಸಿದ್ದವು. ನಿಧಾನವಾಗಿ ಎದ್ದು ದೀಪ ಹಾಕಿದೆ. ಝಗ್ಗನೆ ಬೆಳಕು ಬೆಳಗಿ, ಕತ್ತಲೆಯನ್ನೆಲ್ಲ ಹೊರದೋಡಿಸಿತು.
- ಸುಹಾಸ್, ಡಿಸೆಂಬರ್ ೨೩


ಬರಹಕ್ಕೆ ಸುಂದರ ಶೀರ್ಷಿಕೆಯೊಂದನ್ನು ಸೂಚಿಸಿದ ಮಾನಸದೊಡತಿಗೆ ಧನ್ಯವಾದಗಳು.

Friday, March 25, 2011

ಕೌಳಿ ಹಣ್ಣು

ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹೋಗೋದಿಕ್ಕೆ ಪ್ಲಾನ್ ಮಾಡ್ತಾ ಇದ್ದಾರೆ. ಬಸ್ಸು ಟ್ರೈನ್ ಗಳಲ್ಲಿ ಅಷ್ಟು ಸುಲಭವಾಗಿ ಟಿಕೆಟ್ ಸಿಕ್ತಾ ಇಲ್ಲ. ಸೆಖೆ ಜಾಸ್ತಿಯಾಗಿ, ರಾತ್ರಿಗಳಲ್ಲಿ ಫ್ಯಾನ್ ಇಲ್ದೆ ನಿದ್ರೆ ಬರ್ತಾ ಇಲ್ಲ. "ರಾತ್ರಿಯಲ್ಲಿ ಹೋಗೋದಿಲ್ಲ, ಹಗಲಲ್ಲಿ ಕೊಡೋದಿಲ್ಲ, ಏನು ಹೇಳಿ ನೋಡೋಣ?" ಅಂತ ಶೋಭಕ್ಕ ಆಗ್ಲೇ ಒಗಟು ಕೇಳ್ತಾ ಇದ್ದಾಳೆ. ಒಟ್ಟಿನಲ್ಲಿ ಈ ಸಲದ ಬೇಸಿಗೆ, ಕ್ರಿಕೆಟ್ ವರ್ಡ್ ಕಪ್ ಗಿಂತಲೂ ರೋಚಕವಾಗುವುದರಲ್ಲಿ ನನಗೇನೂ ಅನುಮಾನ ಕಾಣ್ತಾ ಇಲ್ಲ.

ಕಾಲಗಳನ್ನೆಲ್ಲ ತಕ್ಕಡಿಲಿಟ್ಟು ತೂಗಿದರೆ ಬೇಸಿಗೆಗಾಲದ ವ್ಯಾಲ್ಯೂನೇ ಜಾಸ್ತಿ ಅನ್ನುವುದು ನನ್ನ ಅನಿಸಿಕೆ. ಮಕ್ಕಳಿಗೆ ರಜೆ ಸೀಸನ್, ತಿರುಗೋವ್ರಿಗೆ ಮದುವೆ, ನೆಂಟರ ಮನೆ ಸೀಸನ್, ಬಾಯಲ್ಲಿ ನೀರೂರಿಸಲು ಮಾವಿನ ಹಣ್ಣಿನ ಸೀಸನ್, ನೋಡಿ ಹೀಗೆ ಸಾಲಾಗಿ ಪಟ್ಟಿ ಮಾಡ್ತಾ ಹೋಗಬಹುದು. ಉಳಿದ ಕಾಲಗಳಿಗಿಂತ ಜಾಸ್ತಿ "ಹ್ಯಾಪನಿಂಗ್" ಕಾಲ ಅಂದ್ರೆ ಬೇಸಿಗೆನೇ. ಮಳೆಗಾಲದಲ್ಲಿ ಕೆಲಸ ಒಂದೂ ಆಗಲ್ಲ. ಛಳಿಗಾಲದಲ್ಲಿ ಬೆಳಿಗ್ಗೆನೇ ಬೇಗ ಆಗಲ್ಲ. ಹಾಗಾಗಿ ನಾವು ಜಾಸ್ತಿ ಚಟುವಟಿಕೆಯಿಂದ ಇರುವ ಕಾಲ ಕೂಡ ಬೇಸಿಗೆಗಾಲವೇ. ಬಯಲುಸೀಮೆ ಜನ ಸ್ವಲ್ಪ ನನ್ನ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಬಹುದೇನೋ, ಆದರೆ ಕರಾವಳಿ, ಅರೆಮಲೆನಾಡು, ಮಲೆನಾಡು ಜನ ಅಂತೂ ತಲೆ ಹಾಕೇ ಹಾಕ್ತಾರೆ ಅನ್ನೋ ಭರವಸೆ ನನಗಿದೆ.

ಬೇಸಿಗೆ ರಜೆಲಿ (ಈಗಿನ ಕಾಲದ ಸಮ್ಮರ್ ವೆಕೇಷನ್ನು!) ಏನ್ ಮಾಡ್ತೀರಿ ಅಂಥ ನೀವು ನಿಮ್ಮ ಪರಿಚಯದ ಯಾವುದೋ ಮಕ್ಕಳನ್ನು ಕೇಳೇ ಕೇಳಿರ್ತೀರಿ ಅಂತ ನನಗೆ ಗೊತ್ತು. ಅದಕ್ಕೆ ನಿಮಗೆ ತರೇವಾರಿ ಉತ್ತರಗಳು ಸಿಕ್ಕಿರಬಹುದು. ಊರಿಗೆ ಹೋಗ್ತೀನಿ ಅಂತಲೋ, ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗ್ತೀನಿ ಅಂತಲೋ ಇಲ್ಲ ಸಮ್ಮರ್ ಕ್ಯಾಂಪ್ ಗೆ ಹೋಗ್ತೀನಿ ಅಂತಲೋ ಇಷ್ಟೇ. ವಿಪರ್ಯಾಸ ಅಂದರೆ ನಾವು ಚಿಕ್ಕವರಿದ್ದಾಗ ಇಂಥ ಪ್ರಶ್ನೆಗಳನ್ನೆಲ್ಲ ಯಾರೂ ಜಾಸ್ತಿ ಕೇಳ್ತಿರಲಿಲ್ಲ. ಅಕಸ್ಮಾತ್ ಯಾರಾದ್ರೂ ಬಾಯಿ ತಪ್ಪಿ ಕೇಳಿದ್ರೆ ನಾವು ಅತ್ಯಂತ ಸೀರಿಯಸ್ಸಾಗಿ "ಈ ಸಲ ಚಂದ್ರಣ್ಣನ ಮನೆ ಬ್ಯಾಣದಲ್ಲಿ ರಾಶಿ ಸಂಪಿಗೆ ಹಣ್ಣು ಆಜು. ನೋಡವು" ಎಂದೋ, ಅಥವಾ "ಕೆರೆ ಏರಿ ಮೇಲೆ ಇದ್ದಲಾ, ಪುನ್ನೇರಲ ಗಿಡಾ, ಹೋದ ವರ್ಷ ಬರೀ ಎರಡು ಹೆಣೀಗೆ ಕಾಯಿ ಬಿಟ್ಟಿತ್ತು. ಈ ಸಲ ಭರ್ತಿ ಬಿಡ ಲಕ್ಷಣ ಇದ್ದು" ಎಂದೋ, ಅಥವಾ "ಗೇರು ಪೀಕ ನೋಡಿದ್ಯ ಈ ಸಲ? ಚೊಲೋ ಬಂಜು. ಹಿಂದಿನ ಬೆಟ್ಟದಲ್ಲಿ ಕೆಂಪು, ಹಳದಿ ಎರಡೂ ನಮ್ನಿ ಹಣ್ಣು ಬಂಜು. ಸುಮಾರು ಕೇ.ಜಿ ಗೇರ್ ಬೀಜಾ ಒಟ್ಟು ಮಾಡ್ಲಕ್ಕು ಈ ಸಲ" ಅಂತೆಲ್ಲಾ ಹೇಳಿ ನಮ್ಮ ಮಹದೋದ್ದೇಶಗಳ ಚಿಕ್ಕ ಪರಿಚಯವನ್ನು ಸಾದರ ಪಡಿಸುತ್ತಿದ್ದೆವು. ಪ್ರಶ್ನೆ ಕೇಳಿದವರು ನಮ್ಮ ಉತ್ತರವನ್ನು ಒಂದೋ ಮೆಚ್ಚಿ "ಜೋರಲೋ ಮಾರಾಯಾ" ಎಂದು ಬೆನ್ನು ತಟ್ಟುತ್ತಿದ್ದರು ಇಲ್ಲಾ "ಯಾಕಾದ್ರೂ ಕೇಳಿದೀನಪ್ಪಾ" ಎಂಬಂಥ ಮುಖ ಮಾಡಿ ತೆಪ್ಪಗಿರುತ್ತಿದ್ದರು.

ಬಿಸಿಲಲ್ಲಿ ಅಡ್ಡಾಡುವುದು ಬಹುಷಃ ಎಲ್ಲ ಕಾಲದಲ್ಲೂ ಮಕ್ಕಳಿಗೆ ಅತ್ಯಂತ ಪ್ರಿಯವಾದ ಕೆಲಸವೇನೋ. "ಎಂಥಾ ಬಿಸಿಲಲ್ಲಿ ತಿರಗ್ತ್ರಾ ಹುಡಗ್ರಾ, ಸುಮ್ನೆ ಮನೆಲ್ಲಿ ಇರಿ" ಅನ್ನೋ ಶಬ್ದ ಕಿವಿ ಮೇಲೆ ಬಿದ್ದರೆ ಸಾಕು ನಾವೆಲ್ಲ ಕುನ್ನಿಮರಿ ತರ ರಬ್ಬಿಕೊಂಡು, ಅಲ್ಲೇ ನುಸುಳಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದೆವೇ ಹೊರತು ಮನೆಯೊಳಗೆ ಮಾತ್ರ ಸುತಾರಾಂ ಹೋಗುತ್ತಿರಲಿಲ್ಲ. ಬೆಟ್ಟ,ಗುಡ್ಡ,ತೋಟ, ಹೊಳೆ ಇವೆಲ್ಲ ವರುಷಾನುಗಟ್ಟಲೆಯಿಂದ ನಮ್ಮ ದಿವ್ಯ ಸಾನಿಧ್ಯವನ್ನೇ ಬರಕಾಯುತ್ತಿರುವಂತೆ ಅನಿಸಿ ನಾವು ಅವುಗಳ ಮಡಿಲಲ್ಲಿ ಪುನೀತವಾಗುತ್ತಿದ್ದೆವು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹೊರಬಿದ್ದ ನಾವು ಗೊತ್ತು ಗುರಿಯಿಲ್ಲದೇ ತಿರುಗಿ ತಿರುಗಿ ಊರೆಲ್ಲ ಗಸ್ತು ಹೊಡೆದು ಇನ್ನೇನು ಕತ್ತಲಾಗಿ ಏನೂ ಕಾಣದಂಥ ಅನಿವಾರ್ಯತೆ ಉಂಟಾದಾಗ ಮಾತ್ರ ಮನೆಗೆ ತಿರುಗಿ ಬರುತ್ತಿದ್ದೆವು. ಅಷ್ಟರಲ್ಲಿ ಏನೇನು ಮಾಡಿದೆವು ಅನ್ನುವುದನ್ನು ಬರೆಯಲು ಹೊರಟರೆ ಬಹುಷಃ ಯುಡಿಯೂರಪ್ಪನವರು ಇಲ್ಲಿಯವರೆಗೆ ಭೇಟಿಕೊಟ್ಟ(ದೇಣಿಗೆ ಕೊಟ್ಟ) ದೇವಸ್ಥಾನಗಳ ಪಟ್ಟಿಗಿಂತ ಜಾಸ್ತಿಯಾಗುವುದರಿಂದ(?) ಬರೆಯುವ ಸಾಹಸ ಮಾಡುತ್ತಿಲ್ಲ,ಕ್ಷಮಿಸಿ.

ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ ಅಂದ ತಕ್ಷಣ ಅತ್ಯಂತ ಪ್ರಿಯವಾದದ್ದನ್ನು ಬರೆಯದಿರಲು ಸಾಧ್ಯವಿಲ್ಲವಲ್ಲ? ಬರೆದೇ ತೀರಬೇಕು. ನಮ್ಮನೆಯಿಂದ ಕೂಗಳತೆ ದೂರದಲ್ಲಿರುವ ಡಾಮರು ರಸ್ತೆಗೆ ತಾಗಿಗೊಂಡು ಸಾಲಾಗಿ ಬೆಳೆದ ಕೌಳಿ ಗಿಡಗಳ ಹಿಂಡು ನಮಗೆಲ್ಲ ಅತ್ಯಂತ ಪ್ರಿಯವಾದದ್ದು. ವಡಗೇರೆ ಶಂಕ್ರಣ್ಣನ ಮನೆಯಿಂದ ಶುರುವಾದದ್ದು ಹೀಪನಳ್ಳಿ ಕತ್ರಿ ಕಳೆದು ಮೆಣಸಿನಕೇರಿ ಕತ್ರಿ ದಾಟಿ ಹೆಗಡೆಕಟ್ಟೆ ಕ್ರಾಸ್ ನ ತನಕವೂ ಅವ್ಯಾಹತವಾಗಿ ರೋಡ್ ನ ಎರಡೂ ಬದಿ ಬೆಳೆದುನಿಂತಿದ್ದವು. ವರ್ಷದ ಬಹಳಷ್ಟು ಕಾಲ ಅವು ಕೇವಲ ಮುಳ್ಳಿನ ಬೇಲಿ ತರಹದ "ಮಟ್ಟಿ"ಗಳು ಅಷ್ಟೇ. ಇನ್ನೇನು ಮಾರ್ಚ ಶುರುವಾಗಬೇಕು, ಚಿಕ್ಕ ಚಿಕ್ಕ ಬಿಳಿ ಹೂವುಗಳನ್ನು ತಳೆದು, ದಾರಿಯುದ್ದಕ್ಕೂ ಹಸಿರು ಬಿಳಿ ಬಣ್ಣದ ಚಾದರವನ್ನು ಹೊದ್ದು ಹೋಗಿ ಬರುವ ಪ್ರಯಾಣಿಕರನ್ನು ಸ್ವಾಗತಿಸುವಂತೆ ತೋರುತ್ತಿದ್ದವು. ಕೌಳಿ ಒಂದು ತರಹದ ಮುಳ್ಳಿನ ಗಿಡ ಅಂತಲೇ ಹೇಳಬಹುದು. ಅಷ್ಟೇನೂ ಎತ್ತರಕ್ಕೆ ಬೆಳೆಯದೇ ಒಂದು ತರಹದ ಪೊದೆಯ ತರ ಹರಡಿಕೊಂಡು ಇರುತ್ತವೆ. ಅದರ ಮುಳ್ಳು ಅತ್ಯಂತ ಚೂಪಾಗಿದ್ದು ಚುಚ್ಚಿದರೆ ದಿನಗಟ್ಟಲೇ ನೋವು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅದರ ಕಾಯಿ ಅತೀ ಹುಳಿಯಾಗಿದ್ದು(ತಿಂದರೆ ಮುಖ ಸಿಂಡರಿಸುವಷ್ಟು), ಹಣ್ಣು ಸಿಹಿ ಮಿಶ್ರಿತ ಹುಳಿ ಹೊಂದಿರುತ್ತದೆ. ಕೌಳಿಕಾಯಿ ಉಪ್ಪಿನಕಾಯಿ ಅತ್ಯಂತ ಜನಪ್ರಿಯವಾಗಿದ್ದು, ಬಹಳ ಜನರ ಪ್ರಶಂಸೆಗೂ ಪಾತ್ರವಾಗಿದೆ.

ಮಾರ್ಚ ಮುಗಿದು ಎಪ್ರಿಲ್ ಶುರುವಾಗುತ್ತ ಇದ್ದಂತೆ ಹಸಿರು ಬಿಳಿ ಕಾಯಿಗಳು ಕಂದು ಬಣ್ಣಕ್ಕೆ ತಿರುಗಿ ನಿಧಾನಕ್ಕೆ ಹಣ್ಣಾಗಲು ಶುರುವಾಗುತ್ತದೆ. ನಮ್ಮ ಹದ್ದಿನ ಕಣ್ಣು ಅವೆಲ್ಲನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತವೆ ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಲ್ಲಿ ಸೈಕಲ್ ಸವಾರರು, ಕಾರಲ್ಲಿ ಹೋಗುವವರು ತಮ್ಮ ವಾಹನವನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ರೋಡಿಗೆ ಸ್ವಲ್ಪ ಎತ್ತರದಲ್ಲಿರುವ ದಿಬ್ಬವನ್ನು ಹತ್ತಿ ಏನನ್ನೋ ಹುಡುಕುತ್ತಿರುವುದು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಎಷ್ಟು ಜನರು ಬಂದರೂ, ನಮಗೇನೂ ಆತಂಕವಾಗುವುದಿಲ್ಲ. ಏಕೆಂದರೆ ಆಯಕಟ್ಟಿನ ಜಾಗಗಳೆಲ್ಲ ನಮಗೆ ಗೊತ್ತಿರುತ್ತಲ್ಲ! ಅವರೆಲ್ಲ ಎಷ್ಟೇ ತಿಣುಕಾಡಿದರೂ ನಮಗೆ ಗೊತ್ತಿರುವಷ್ಟು ಒಳ್ಳೆಯ ಹಣ್ಣು ಸಿಗುವುದಿಲ್ಲ. ಅನೇಕ ವರ್ಷಗಳ ಅನುಭವದಿಂದ ಗಳಿಸಿಕೊಂಡ "ಸ್ಕಿಲ್" ಅದು.

ಯಾವುದೋ ಒಂದು ಶುಭ ಮುಹೂರ್ತವನ್ನು ನಿರ್ಧರಿಸಿಕೊಂಡ ನಂತರ ನಾವು ಒಂದೆರಡು ಪ್ಲಾಸ್ಟಿಕ್ ಕೊಟ್ಟೆಗಳನ್ನು ಹಿಡಿದು ಅನುವಾಗುತ್ತಿದ್ದೆವು. ಎಲ್ಲ ಗಿಡಗಳ ಮೇಲೂ ಮುಗಿ ಬೀಳುತ್ತಿರಲ್ಲಿಲ್ಲ. ಮೊದಲೇ ನಿರ್ಧರಿಸಿಕೊಂಡ, ಉಳಿದವರಿಗ್ಯಾರಿಗೂ ಸುಲಭವಾಗಿ ಭೇದಿಸಲಾಗದ ಪೊದೆಗಳ ಮೇಲೆ ಮಾತ್ರ ನಮ್ಮ ಕಣ್ಣು. ಕಷ್ಟದ ಹಾದಿಯ ತುದಿಗೆ ಸಂತೋಷವಿದೆ ಎನ್ನುವುದು ಇವತ್ತಿಗೂ ಸತ್ಯವೇ ಅಲ್ಲವೆ? ಮಾಮೂಲಿ ಹಣ್ಣುಗಳ ಥರ ಮರ ಹತ್ತೋ, ಉದ್ದನೆಯ ಕೋಲು ಉಪಯೋಗಿಸೋ ಕೊಯ್ಯಬಹುದಾದ ಹಣ್ಣು ಇದು ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಮೇಲೆ ನನಗೆ ಸಂಪೂರ್ಣ ಸಹಾನುಭೂತಿಯಿದೆ. ಏಕೆಂದರೆ ಮೊದಲೇ ಹೇಳಿದಂತೆ ಗಿಡವೆಲ್ಲ ಮುಳ್ಳು ಮಯ. ಒಂಥರಾ ಪೊದೆ ಪೊದೆಗಳ ತರ ಗಿಡ ಬೇರೆ. ಮೇಲಿನಿಂದ ನೋಡಿದರೆ ಹಣ್ಣುಗಳು ಸುಲಭವಾಗಿ ಕೈಗೆಟುಕುವಂತೆ ಕಾಣುತ್ತವೆ. ಸರಿಯಾದ ವಿಧಾನವಿಲ್ಲದೇ ಕೊಯ್ಯಲು ಹೋದಿರೋ, ಎರಡು ದಿನ ನೀವು ನೋವು ಶನಿ ಅನುಭವಿಸುವುದು ನಿಶ್ಚಿತ. ಮೊದಲು ಗಿಡವನ್ನು ಅಥವಾ ಪೊದೆಯನ್ನು ನಿಧಾನವಾಗಿ ಅವಲೋಕಿಸಬೇಕು. ಗುರಿಯನ್ನು ತಲುಪಲು ಯಾವ ವಿಧಾನವನ್ನು ಅನುಸರಿಸಬೇಕೆಂಬುದರ ಸರಿಯಾದ ಉಪಾಯ ನಿಮ್ಮಲ್ಲಿರಬೇಕು. ಪೊದೆಯ ಮುಂದಿನ ಭಾಗದಿಂದಲೋ, ಹಿಂದಿನಿಂದಲೋ, ಅಥವಾ ಬದಿಯಿಂದಲೋ ನುಗ್ಗುವುದು ನಿಶ್ಚಯವಾದ ಮೇಲೆ, ನಿಧಾನಕ್ಕೆ ಮುಳ್ಳುಗಳ ಚಕ್ರವ್ಯೂಹವನ್ನು ಭೇದಿಸಬೇಕು. ಇದು ಧಾಳಿಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ನಮಗೆ ಅಥವಾ ನಮ್ಮ ಸೈನ್ಯಕ್ಕೆ ಸ್ವಲ್ಪ ನೋವು, ಹಿನ್ನಡೆ ನಿಶ್ಚಿತ. ಆದರೂ ಕುಗ್ಗದೇ, ಮುನ್ನುಗ್ಗಬೇಕು. ಚಕ್ರವ್ಯೂಹ ಭೇದಿಸಿದರೆ ನಿಮಗೆ ಒಂದು ಆಯಕಟ್ಟಿನ ಜಾಗ ಸಿಗುವುದು ಗ್ಯಾರಂಟಿ. ಇಲ್ಲಿ ಸ್ವಲ್ಪ ವಿಶ್ರಮಿಸಿ, ನಮ್ಮ ಸ್ಟ್ರಾಟಜಿ ಯನ್ನು ಪುನರ್ ಅವಲೋಕಿಸಬಹುದು. ಮುಂದಿನ ನಡೆ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ. ಮಿಲಿಟರಿ ಸೈನ್ಯದ ತರ ನಿಧಾನಕ್ಕೆ ಗುರಿಯತ್ತ ತೆವಳಿ, ಅಕ್ಕ ಪಕ್ಕದ ಮುಳ್ಳುಗಳನ್ನು ಗಮನಿಸುತ್ತಾ,ನಿಧಾನಕ್ಕೆ ಎದ್ದು, ಅದೆಲ್ಲೋ ಎರಡು ಹೆಣೆಗಳ ನಡುವೆ ಅಡಗಿಕೊಂಡು ಕೂತಿದ್ದ ಕಪ್ಪನೆಯ ಮಿರಿಮಿರಿ ಮಿಂಚುವ ಹಣ್ಣನ್ನು ಕೊಯ್ದು, ಯಾವ ವೇಗದಲ್ಲಿ ನಿಮ್ಮ ಕೈಯನ್ನು ತೂರಿದ್ದೀರೊ, ಅದೇ ವೇಗದಲ್ಲಿ ಹಿಂತೆಗೆದುಕೊಂಡು, ಇನ್ನೊಂದು ಕೈಯ್ಯಲ್ಲಿರುವ ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಣ್ಣನ್ನು ಸೇರಿಸಿದರೆ ಗೆದ್ದಂತೆ. ಇಂಥ ಹಲವಾರು ನಡೆಗಳ ಬಳಿಕ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಲವಾರು ಹಣ್ಣುಗಳು ನಗುತ್ತ ಕುಳಿತಿರುತ್ತವೆ (ಅದರ ಎರಡರಷ್ಟು ನಮ್ಮ ಹೊಟ್ಟೆಯೊಳಗೆ ಆಗಲೇ ಸೇರಿರುತ್ತವೆ, ಆ ಮಾತು ಬೇರೆ). ಧಾಳಿ ಯಶಸ್ವಿಯಾಗಿ ಮುಗಿದ ಮೇಲೆ ಮತ್ತೊಮ್ಮೆ ಚಕ್ರವ್ಯೂಹ ಭೇದಿಸಿ ಹೊರಬಂದರೆ ನಿರಾಳ. ಒಂದು ಸಾರ್ತಿ ಮೈ ಕೈಗಾದ ತರಚು, ಕಾಲಿನ ಮುಳ್ಳು ಇವನ್ನೆಲ್ಲ ಪರಿಶೀಲಿಸಿ, ಸ್ವಲ್ಪ ವಿಶ್ರಮಿಸಿ, ಇಷ್ಟೆಲ್ಲ ಪರಿಶ್ರಮ ಪಟ್ಟಿದ್ದು ನಿಜಕ್ಕೂ ಸಾರ್ಥಕ ಎಂದು ನಮ್ಮನ್ನೇ ನಂಬಿಸಲು ಮತ್ತೆರಡು ಹಣ್ಣನ್ನು ಬಾಯಿಗೆಸೆದು ಚಪ್ಪರಿಸುತ್ತಾ ಸೈನ್ಯ ಮುಂದೆ ಸಾಗುತ್ತದೆ. ಈಗ ಹೇಳಿ, ಯಾವ ಮಿಲಿಟರಿ ಕಾರ್ಯಾಚರಣೆಗಿಂತ ಭಿನ್ನ ನಮ್ಮ ಪರಾಕ್ರಮ?

ಎಂಥಾ ಹುಚ್ಚು? ಆ ಹುಳಿ ಹುಳಿ ಹಣ್ಣನ್ನು ತಿನ್ನಲು ಇಷ್ಟೊಂದು ಪರಿಶ್ರಮವೇ? ಎಂದು ನೀವು ಆಶ್ಚರ್ಯ ಪಡಬಹುದು (ಮನೆಯಲ್ಲಿ ನಮ್ಮ ಹಿರಿಯರ ಅಭಿಪ್ರಾಯ ಇದಕ್ಕಿಂತ ತೀರ ಭಿನ್ನವೇನೂ ಇರುತ್ತಿರಲಿಲ್ಲ ಎನ್ನುವುದು ವಿಪರ್ಯಾಸ). ಕೈ ಕೆಸರಾದರೆ ಬಾಯಿ ಮೊಸರು ಎಂದು ಹಿರಿಯರು ಹೇಳಿಲ್ಲವೇ?. ಹಾಂ ಮರೆತಿದ್ದೆ, ಕೌಳಿ ಕಾಯಿ ಅಥವಾ ಹಣ್ಣುಗಳನ್ನು ಕೊಯ್ದಾಗ ಅವುಗಳ ತೊಟ್ಟಲ್ಲಿ ಬಿಳಿ ಬಣ್ಣದ ಹಾಲೊಂದು ಒಸರುತ್ತದೆ. ನಮ್ಮ ಕಾರ್ಯಾಚರಣೆ ಮುಗಿದಾಗ ನಮ್ಮ ಕೈಯೆಲ್ಲ ಆ ಅಂಟಿನಿಂದ ಸಂಪೂರ್ಣ ಕೆಸರಾಗಿ ಅದನ್ನು ತೆಗೆಯಲು ನಾವು ಒಂದರ್ಧ ಎಣ್ಣೆ ತಟ್ಟೆಯನ್ನೋ, ಸಾಕಷ್ಟು ಚಿಮಣಿ ಎಣ್ಣೆಯನ್ನೋ ಖರ್ಚು ಮಾಡಬೇಕಾಗಿ ಬರುತ್ತಿತ್ತು .ಹಾಗೆ ನೋಡಿದರೆ ನಮ್ಮ ಕೈ ಅಕ್ಷರಶಃ ಕೆಸರಾಗಿರುತ್ತಿತ್ತು. ಎಷ್ಟೋ ಸಲ ಕಾಲು,ತಲೆಗೆಲ್ಲ ಮುಳ್ಳು ಚುಚ್ಚಿಸಿಕೊಂಡು ವಾರಗಟ್ಟಲೆ ತೊಂದರೆ ಪಟ್ಟಿದ್ದಿದೆ. ಮನೆಯಲ್ಲಿ ಎಷ್ಟೋ ಸಲ ಬೈಯ್ಯಿಸಿಕೊಂಡರೂ, ನೋವು ಅನುಭವಿಸಿಯೂ, ಹಣ್ಣಿನ ರುಚಿ ಪ್ರತೀ ವರ್ಷವೂ ನಮ್ಮನ್ನು ಅಲ್ಲಿ ಎಳೆಯುತ್ತಿತ್ತು. ಬೇಸಿಗೆ ರಜೆಯ ಪ್ರಮುಖ ಆಕರ್ಷಣೆ ನನಗಂತೂ ಅದೇ ಆಗಿತ್ತು.

ಮೊನ್ನೆ ಮಾರ್ಚಲ್ಲಿ ಊರಿಗೆ ಹೋದಾಗ ನೋಡುತ್ತೇನೆ ಏನಾಶ್ಚರ್ಯ? ರೋಡಿನ ಎರಡುದ್ದಕ್ಕೂ ಒಂದೇ ಒಂದು ಕೌಳಿ ಮಟ್ಟಿಯ ಕುರುಹಿಲ್ಲ. ರೋಡ್ ಅಗಲ ಮಾಡುತ್ತಾರಂತೆ, ಅದಕ್ಕೆ ಅಕ್ಕ ಪಕ್ಕದಲ್ಲಿರುವ ಗಿಡ, ಪೊದೆಗಳನ್ನೆಲ್ಲ ನಿರ್ದ್ಯಾಕ್ಷಿಣ್ಯವಾಗಿ ಸಂಪೂರ್ಣವಾಗಿ ಸವರಿಬಿಟ್ಟಿದ್ದಾರಂತೆ. ಎಂಥ ವಿಪರ್ಯಾಸ! ಒಂದು ತಲೆಮಾರಿನ ಬೇಸಿಗೆ ರಜೆಯ ಖುಷಿಯ ನೆನಪುಗಳನ್ನೆಲ್ಲ ನಿರ್ನಾಮ ಮಾಡಿದ ಪಾಪ ಅವರನ್ನು ತಟ್ಟದೇ ಬಿಟ್ಟೀತೆ? ಮನಸ್ಸೆಲ್ಲ ವಿಷಾದಮಯ!. ಎಷ್ಟೊಂದು ವರ್ಷಗಳಿಂದ ರಸ್ತೆಯಂಚಿನ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೇ, ಏನೇನೂ ಪ್ರತಿಯಾಗಿ ಬಯಸದೇ, ಎಷ್ಟೋ ಪ್ರಯಾಣಿಕರ, ನಮ್ಮಂಥ ಅನೇಕ ಜನಕೆ ಸಂತಸ ನೀಡಿದ್ದ ಗಿಡಗಳನ್ನು ನೆನೆಸಿಕೊಂಡರೆ ನಿಜವಾಗಿ ಬೇಸರವಾಗುತ್ತದೆ. ಕೌಳಿ ಮಟ್ಟಿಗಳೆಲ್ಲವನ್ನು ಕಳೆದುಕೊಂಡು ಬಿಸಿಲಲ್ಲಿ ಬೇಯುತ್ತಿರುವ ರಸ್ತೆ ಪಕ್ಕದ ದಿಬ್ಬಗಳು ಮೂಕವಾಗಿ ರೋದಿಸುತ್ತದ್ದಂತೆ ಅನಿಸಿ ಅಲ್ಲಿ ಜಾಸ್ತಿ ಹೊತ್ತು ನಿಲ್ಲಲಾಗಲಿಲ್ಲ. ಈ ಸಲದ ಬೇಸಿಗೆ, ವಾತಾವರಣವೊಂದೇ ಅಲ್ಲ, ಮನಸ್ಸನ್ನೂ ಶುಷ್ಕವಾಗಿಸುತ್ತದೆಯೋ ಎಂದು ಗಾಭರಿಯಾಯ್ತು.

Friday, March 18, 2011

ಹೊಸ ಚಿಗುರು

ಪುಟ್ಟ ಪಾದ ದಿಟ್ಟ ನೋಟ
ತೊದಲ ನುಡಿವ ಹಕ್ಕಿ ಕಂಠ
ಮುಗ್ಧ ನಯನ, ಸ್ನಿಗ್ಧ ನಗು
ಬೆರಗು ಬಿನ್ನಾಣಕೊಂದು ಹೆಸರು

ತುಟಿಯ ಬಿರಿಯೆ ತುಂಟ ಹಾಸ
ಹರಿಸಿ ಸುತ್ತ ಖುಶಿಯ ಹೊಳೆಯ
ಇಳಿಸಿ ಇಳೆಗೆ ಸ್ವರ್ಗ ಲೋಕ
ಮರೆಸಿ ಸಕಲ ದುಃಖ ದುಗುಡ

ನಲಿವು ನಗೆಯ ಹೊನಲು ನಿತ್ಯ
ಯಾಕೆ ಬೇಕು ಜಗದ ಮಿಥ್ಯ?
ಮೈಯ ಮುರಿವ ಸೊಬಗೇ ನೃತ್ಯ
ಉರಿವ ಸೂರ್ಯನಷ್ಟೆ ಸತ್ಯ

ಹೊಸದು ಆಸೆ ಹೊಸದು ಕನಸು
ಮಮತೆಯೊಡಲ ಬೆಳಗಿ ಜೀವ
ಹರುಷ ಭಾವ ತುಂಬಿ ಎದೆಯ
ಎನಿತು ಧನ್ಯ ಬಾಳ ಪಯಣ