Wednesday, March 5, 2008

ಎಲ್ಲೆಲ್ಲೂ ಸಂಗೀತವೇ...

ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ.

ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ "ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ.

ಎರಡನೆಯದು ವಾಣಿ ಜಯರಾಮ್ ಹಾಡಿದ "ಆನತಿ ನೀಯರಾ" ಎಂಬ ಹಾಡು. ತೆಲುಗಿನ "ಸ್ವಾತಿ ಕಿರಣಮ್" ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. "ಕಲಾ ತಪಸ್ವಿ" ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್.

ಮೂರನೆಯದು, ಮಲಯಾಳಮ್ಮಿನ "ಹಿಸ್ ಹೈನೆಸ್ ಅಬ್ದುಲ್ಲಾ" ಚಿತ್ರದ "ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.

ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ!

2 comments:

Sushrutha Dodderi said...

ಮಧು,

ನಮಸ್ಕಾರ. ಹೇಗಿದ್ದೀ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಸುಧೇಶ್ ಶೆಟ್ಟಿ said...

ಹಲೋ ನಮಸ್ಕಾರ….
ಬೇರೆಯವರ ಬ್ಲಾಗನ್ನು ನನ್ನ ಬ್ಲಾಗಿನ ಜೊತೆ ಲಿ೦ಕ್ ಮಾಡುವುದು ಹೇಗೆ ಎ೦ದು ದಯವಿಟ್ಟು ತಿಳಿಸುವಿರಾ?
ಉದಾಹರಣೆಗೆ ನೀವು ನೆರೆಹೊರೆಯವರು ಎ೦ದು ಬೇರೆಯವರ ಬ್ಲಾಗನ್ನು ನಿಮ್ಮ ಬ್ಲಾಗಿನ ಮುಖಪುಟದಲ್ಲಿ ಹಾಕಿದ್ದೀರಲ್ಲ. ಹೇಗೆ?