Monday, May 9, 2011

ಮೊದಲ ಪುಟಕು ಕೊನೆಯ ಪುಟಕೂ

ಸಾಲಾಗಿ ಅರಳಿ ನಿಂತ ಗುಲ್ ಮೊಹರ್ ಮರಗಳ ಎಡೆಯಲ್ಲಿ, ಮುಳುಗುತ್ತಿರುವ ಸೂರ್ಯ ಆಗಾಗ ಇಣುಕಿ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಹೇಗೆ ಶುರು ಮಾಡುವುದೆಂದೇ ತಿಳಿಯದೆ ಇಬ್ಬರೂ ಬರೀ ನೆಲ ನೋಡುತ್ತ ನಡೆಯುತ್ತ ಹಾದಿ ಸವೆಸಿದ್ದೆವು. ಮದುವೆ ನಿಶ್ಚಯವಾದ ಮೇಲೆ ಮೊದಲನೇ ಬಾರಿ ಹೊರಗೆ ಭೇಟಿಯಾಗಿದ್ದು ಇವತ್ತು. ಒಂದಿಷ್ಟು ತವಕ, ಉತ್ಸಾಹ, ಉಲ್ಲಾಸ ಎಲ್ಲ ಸೇರಿ ವಾತಾವರಣದ ಬಿಸಿ ಏರಿಸಿದ್ದವು. ಅದರ ಸೂಚನೆ ಹಿಡಿದುಕೊಂಡೇ, ಗಾಳಿ ತಂಪಾಗಿ ಬೀಸುತ್ತಿದೆಯೇನೋ ಎಂದೆನಿಸಲು ಶುರುವಾಗಿತ್ತು. ಮೊದಲು ಮಾತಾಡಿದ್ದೇ ಅವಳು. "ಹೇಗಿದೆ ನನ್ನ ಡ್ರೆಸ್?" ನನ್ನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದ ಪ್ರಶ್ನೆಗೆ ನಾನು ತುಸು ಅವಾಕ್ಕಾಗಿದ್ದು ನಿಜ. "ಚೆನ್ನಾಗಿದೆ" ಎಂದಷ್ಟೇ ಉತ್ತರಿಸಲು ಸಾಧ್ಯವಾಗಿದ್ದು. ಮುಂದೆ ಮಾತಾಡಿದ್ದೆಲ್ಲ ಅವಳೇ ಜಾಸ್ತಿ. ಹೊಟೆಲ್ಲಿನಲ್ಲಿ ಊಟಕ್ಕೆ ಕುಳಿತಾಗಲೂ ಅಷ್ಟೇ. ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದ ಅವಳ ಮುಖಚರ್ಯೆ, ಯಾವುದನ್ನೋ ವಿವರಿಸುವಾಗ ಕೈ ಬೆರಳುಗಳನ್ನೆಲ್ಲ ತಿರುಗಿಸುವ ರೀತಿ, ಗಾಳಿಗೆ ಮುನ್ನುಗ್ಗಿ ಬರುತ್ತಿದ ಮುಂಗುರುಳುಗಳನ್ನೆಲ್ಲ ಹಿಂದೊತ್ತಿ ಸಿಕ್ಕಿಸುವ ಪರಿ, ಎಲ್ಲ ನೋಡುತ್ತ ನಾನು ಕಳೆದೇ ಹೋಗಿದ್ದೆ. ಮಧುರವಾದ ಅನುಭೂತಿಯೊಂದದ ಗುಂಗಿನೊಳಗೆ ಸಿಕ್ಕು ಮನಸ್ಸು, ತೇಲಿ ತೇಲಿ ಹೋಗಿತ್ತು.
- ಸುಹಾಸ್, ಜನವರಿ ೧೯

ಹನ್ನೊಂದನೇ "ಬಿ" ಕ್ರಾಸ್ ಇನ್ನೂ ದಾಟಿರಲಿಲ್ಲ, ಶುರುವಾಗಿತ್ತು ಮುಸಲಧಾರೆ. ಹೃದಯದೊಳಗೆ ಹೇಳದೇ ಕೇಳದೇ ಶುರುವಾಗುವ ಪ್ರೀತಿಯಂತೆಯೇ, ಒಂದಿನಿತೂ ಸೂಚನೆ ಕೊಡದೇ. ಕೈಯಲ್ಲಿದ್ದಿದ್ದು ಒಂದೇ ಕೊಡೆ. ಮಳೆಹನಿಗಳು ಸಂಪೂರ್ಣವಾಗಿ ತೋಯಿಸುವ ಮುಂಚೆ ಇಬ್ಬರೂ ಅದರೊಳಗೆ ತೂರಿಕೊಂಡಿದ್ದಾಗಿತ್ತು. ಸುಮ್ಮನೆ ಅವಳ ಕಣ್ಣುಗಳನ್ನೊಮ್ಮೆ ನೋಡಿದ್ದೆ, ಧೈರ್ಯ ಮಾಡಿ. ಅವುಗಳಲ್ಲಿ ಪ್ರತಿಫಲಿಸುತ್ತಿದ್ದುದು ನಾಚಿಕೆಯೋ, ಆತಂಕವೋ ಥಟ್ಟನೆ ಗುರುತಿಸಲಾಗಿರಲಿಲ್ಲ. ಕಾಲುಗಳು ಮನಸ್ಸಿನೊಳಗೆ ಬೇಯುತ್ತಿರುವ ತುಮುಲಗಳನ್ನು ಲಕ್ಷಿಸದೇ, ತಮ್ಮಷ್ಟಕ್ಕೆ ಅವರ ಕೆಲಸ ಮುಂದುವರಿಸಿದ್ದವು. ಅನಿರೀಕ್ಷಿತವಾಗಿ ಒದಗಿ ಬಂದ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಗಲಿಬಿಲಿಗೊಂಡಿದ್ದೆ. ಅವಳ ಮೈಯ್ಯ ಘಮ, ಮೊದಲ ಮಳೆ ಹೊತ್ತು ತಂದ ಮಣ್ಣ ಸುವಾಸನೆಯ ಜೊತೆ ಬೆರೆತು ಅನಿರ್ವಚನೀಯವಾದ ವಾತಾವರಣವೊಂದನ್ನು ಸೃಷ್ಟಿ ಮಾಡಿತ್ತು. ನಡೆವಾಗಲೊಮ್ಮೆ ಅವಳ ಕಿರುಬೆರಳ ತುದಿ ನನ್ನ ಕೈಯನ್ನೊಮ್ಮೆ ಸವರಿರಬೇಕು. ಮೈಯಲ್ಲೊಮ್ಮೆ ಮಿಂಚಿನ ಸಂಚಾರ!. ಅಂಥ ಮಳೆಯ ಛಳಿಯಲ್ಲೂ ಬೆವೆತುಹೋಗಿದ್ದೆ. ಸಾವರಿಸಿಕೊಳ್ಳಲು ಹಲವು ಕ್ಷಣಗಳೇ ಬೇಕಾಗಿದ್ದವು. ನನ್ನಲ್ಲಾದ ಭಾವೋದ್ವೇಗದ ಅರಿವು ಅವಳಿಗೂ ಗೊತ್ತಾಗಿರಬೇಕು. ಪುಟ್ಟದ್ದೊಂದು ತುಂಟ ನಗು ತುಟಿಯಂಚಲ್ಲಿ ಅರಳಿ ಮರೆಯಾಗಿದ್ದು, ಕೇವಲ ನನ್ನ ಭ್ರಮೆಯಾಗಿರಲಿಕ್ಕಿಲ್ಲ!. ಎಂಟು ಹತ್ತು ಹೆಜ್ಜೆ ಹಾಕುವುದರಲ್ಲಿ ಅವಳ ಮನೆ ಮುಟ್ಟಾಗಿತ್ತು. ಆದರೆ ಆ ಕ್ಷಣಗಳಲ್ಲಿ ಅನುಭವಿಸಿದ ರೋಮಾಂಚನವನ್ನು ಶಬ್ದಗಳಲ್ಲಿ ಹಿಡಿದಿಡಲು ಕಲ್ಪನಾಶಕ್ತಿ ಸಾಕಾಗಲಿಕ್ಕಿಲ್ಲ. ದೇವಲೋಕದ ಅಪ್ಸರೆಯೊಬ್ಬಳು ಇಹವ ಮರೆಸಿ ನಂದನವನದ ಸಂಚಾರ ಮಾಡಿಸಿದಂತೆ, ಜಡವ ತೊಡೆದು ಉಲ್ಲಾಸದ ಹೊಳೆ ಹರಿಸುವ ಅಮೃತ ಸಿಂಚನದಂತೆ. ಬಾಗಿಲ ತೆರೆದು, ಕೈ ಬೀಸಿ ಒಳಗೆ ನಡೆದವಳ ತುಂಬುಗಣ್ಣುಗಳಲ್ಲಿ ಸಂತಸದ ಹೊಳಹು ದಟ್ಟವಾಗಿ ಹೊಳೆಯುತ್ತಿತ್ತು.
- ಸುಹಾಸ್, ಫೆಬ್ರುವರಿ ೨೭

ಪ್ರೀತಿಯ ಕೋಮಲ ಬಾಹುಗಳಲ್ಲಿ ಸಿಲುಕಿಕೊಂಡವರಿಗೆ ಜಗತ್ತೆಲ್ಲ ಸುಂದರವಾಗಿ ಕಾಣುತ್ತದೆಂಬ ಸಂಗತಿ ಸುಳ್ಳಲ್ಲ. ಹೂವು ಅರಳುವ ಸೊಬಗು, ಹಕ್ಕಿ ಹಾಡುವ ಹಾಡು, ಹರಿವ ನದಿಯ ಸದ್ದು, ಇರುಳ ಬೆಳಗುವ ತಾರೆ, ಎಲ್ಲ ಪ್ರೀತಿಯ ಚಿರ ನೂತನತೆಯನ್ನು ಸಂಕೇತಿಸುವಂತೆ ಭಾಸವಾಗುತ್ತವೆ. ವೀಣೆಯ ತಂತಿಯನ್ನು ಮೀಟಲು ಬೆರಳುಗಳು ಹವಣಿಸುತ್ತವೆ, ಅರಿವಿಲ್ಲದೆಯೇ ಕೊರಳು ಹೊಸಹಾಡಿಗೆ ದನಿಯಾಗುತ್ತದೆ. ಕಣ್ಸನ್ನೆಗಳು ಹೊಸ ಭಾಷೆ ಕಲಿಸುತ್ತವೆ, ಕವಿತೆಗಳು ಹೊಸ ಅರ್ಥ ಹೊಳೆಯಿಸುತ್ತವೆ. ಮಾತುಗಳು ಮೆದುವಾಗುತ್ತವೆ, ಮೌನ ಎಂದಿಗಿಂತ ಹೆಚ್ಚು ಸುಂದರವೆನ್ನಿಸುತ್ತದೆ. ಅಮೃತವಾಹಿನಿಯಂತೆ ಮಾನವನ ಎದೆಯಿಂದ ಎದೆಗೆ ಸದಾ ಹರಿಯುತಿರುವ ಈ ಭಾವಕೆ ಬೇರೆ ಮಿಗಿಲುಂಟೇ? ಗೆಳತಿಯ ಸಿಹಿಮಾತಿಗಾಗಿ ಕಾತುರವಾಗಿ ಕಾಯುವ ಕ್ಷಣಗಳಲ್ಲಿ ಅನುಭವಿಸುವ ಚಡಪಡಿಕೆಗಳಿಗೆ, ನಗುವ ಹಂಚಿಕೊಂಡು ಜಗವ ಮರೆತ ಕ್ಷಣಗಳಿಗೆ ಬೆಲೆ ಕಟ್ಟಲು ಸಾಧ್ಯವಾದೀತೆ?
- ಸುಹಾಸ್, ಮಾರ್ಚ್ ೮

"ಒಲವು ದೇವರ ಹೆಸರು, ಚೆಲುವು ಹೂವಿನ ಬದುಕು". ಚೆಲುವ, ಒಲವ ಬಾಳು ನಿಮ್ಮದಾಗಲಿ, ಹಾರೈಸಿದರು ಹಿರಿಯರೊಬ್ಬರು. ಎಂಥ ಸುಂದರ ಆಶೀರ್ವಾದ!. ಹೇಳಿಕೊಳ್ಳಲಾಗದಷ್ಟು ಹಿಗ್ಗು ಎದೆಯ ಕಣಕಣದಲ್ಲೂ. ಬಾಳಿನ ಹೊಸ ಘಟ್ಟವೊಂದನ್ನು ಪ್ರವೇಶಿಸಿದ ಸಂಭ್ರಮ, ಹೊಸದಾದ ಜವಾಬ್ದಾರಿಯೊಂದ ನಿಭಾಯಿಸುವ ವಾಗ್ದಾನ, ಪರಸ್ಪರ ನಂಬಿಕೆಯ ಮೇಲೆ ಸುಖದ ಸೌಧ ಕಟ್ಟುವ ಭರವಸೆ ಎಲ್ಲ ಮಿಳಿತವಾಗಿ ಹಿತವಾದ ರಸಾನುಭೂತಿಯನ್ನು ಕಟ್ಟಿಕೊಟ್ಟಿದ್ದವು. ಎಷ್ಟೆಲ್ಲ ಹಿರಿಯರ, ಬಂಧುಗಳ, ಆಪ್ತರ ಸಂತಸದಲ್ಲಿ ಒಳಗೊಂಡು, ಅವರೆಲ್ಲರ ಶುಭ ಹಾರೈಕೆಗಳಿಗೆ ಧನ್ಯರಾದೆವು!. "ಸವಿತಾ-ಸುಹಾಸ್" ಒಳ್ಳೇ ಜೋಡಿ, ಅನುರೂಪವಾಗಿ ಬಾಳಿ. ಎಲ್ಲರೂ ಆಶೀರ್ವದಿಸಿದ್ದರು. ವೈದಿಕರ ವೇದ ಘೋಷಗಳು ಕಿವಿಯಲ್ಲಿ ಇನ್ನೂ ಗುನುಗುಣಿಸುತ್ತಲೇ ಇದ್ದಂತಿದೆ. ಹೋಮದ ಹೊಗೆಯ ಉರಿ ಕಣ್ಣಲ್ಲೇ ಸಿಕ್ಕಿಹಾಕಿಕೊಂಡಂತಿದೆ. ಧಾರೆ ಎರೆಯುವ ಹೊತ್ತಲ್ಲಿ, ಬೊಗಸೆಯಲ್ಲಿ ಅವಳ ಕೈಯನ್ನು ತುಂಬಿಕೊಂಡಾಗ, ಕೈ ನಡುಗಿದ್ದು ನೆನೆದರೆ ಈಗಲೂ ಮೈ ಝುಂ ಎನ್ನುತ್ತದೆ. ಕೊರಳಿಗೆ ಅರಿಸಿಣದ ದಾರ ಕಟ್ಟುವಾಗ, ನನ್ನ ಕೈಯ ಬಿಸುಪು ಅವಳಿಗೆ ರೋಮಾಂಚನ ತಂದಿರಬಹುದೆಂಬ ತುಂಟ ಊಹೆ ತುಟಿಯಂಚಲಿ ಕಿರುನಗೆಯೊಂದನ್ನು ಮೂಡಿಸುತ್ತದೆ. ಮುಂದೆಲ್ಲೋ ಬದುಕ ದಾರಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ, ಈ ದಿನ ಉಜ್ವಲವಾಗಿ ಹೊಳೆದು ಮನಕೆ ಸಂತಸವೀಯುವುದರಲ್ಲಿ ಸಂದೇಹವೇ ಇಲ್ಲ.
- ಸುಹಾಸ್, ಮಾರ್ಚ್ ೨೯

"ವಯಸ್ಸಿಗೆ ಮೀರಿದ ಪ್ರೌಢತೆಯಿದೆ" ಅಂದುಕೊಂಡಿದ್ದು ಇವಳಿಗೇನಾ? ಪುಟ್ಟ ಮಕ್ಕಳಾದರೂ ಇಷ್ಟೊಂದು ಹಠಮಾಡಲಿಕ್ಕಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಯಾಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಾಳೆ? ಪದೇ ಪದೇ, "ನನ್ನನ್ನು ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ" ಎಂಬ ಮೂದಲಿಕೆ ಬೇರೆ. ಇವಳಿಗೆ ನಿಜವಾಗಿ ಇದ್ದದ್ದು ಕೀಳರಿಮೆಯೋ, ಅಥವಾ ವಿಪರೀತ ಅಭದ್ರತೆಯೋ ಕಾಣೆ. ಯಾವುದು ಪ್ರೀತಿ, ಯಾವುದು ನಿಜವಾದ ಕಾಳಜಿ, ಯಾವುದು ಗದರುವಿಕೆ ಎಂದೇ ಗೊತ್ತಾಗದಷ್ಟು ಮುಗ್ಧಳೇ ಹಾಗಾದರೆ? ಯಾರ ಎದಿರು ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇರುವ ಹಾಗೆ ಕಾಣುತ್ತಿಲ್ಲ. ಇವತ್ತು ಅಪರೂಪಕ್ಕೆ ಮನೆಗೆ ಬಂದ ಅತಿಥಿಗಳ ಎದುರು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು, ಹೇಗೆ ಊಟದ ಬಟ್ಟಲನೆಸೆದು ಹೋದಳಲ್ಲ, ಎಷ್ಟು ಕೆಟ್ಟದೆನಿಸಿತ್ತು. ತಲೆ ಮೇಲೆ ಎತ್ತಲಾಗದಷ್ಟು ಅವಮಾನ. ಅವರೆಲ್ಲ ಏನು ಅಂದುಕೊಂಡಿರಬಹುದು. ಮೊನ್ನೆ ಕಾರಲ್ಲಿ ಹೋಗುತ್ತಿರುವಾಗ ಯಾವುದೋ ಅಂಗಡಿಯಲ್ಲಿ ಪ್ರದರ್ಶನಕ್ಕಿದ್ದ ಸೀರೆ ಬೇಕೇ ಬೇಕು ಎಂದೆಲ್ಲ ರಂಪ ಮಾಡಿ, ನಡು ಬೀದಿಯಲ್ಲಿ ಕಾರನ್ನು ನಿಲ್ಲಿಸುವಂತೆ ಮಾಡಿದ್ದನ್ನು ಮರೆಯಲಾದೀತೆ? ಅಥವಾ "ನೀವು ಬೇಕೆಂದೇ ಆಫೀಸಿನಿಂದ ತಡ ಮಾಡಿ ಬರುತ್ತಿದ್ದೀರಿ" ಎಂದು ಮುನಿಸಿಕೊಂಡು ಊಟ ಬಿಟ್ಟ ದಿನಗಳ ಲೆಕ್ಕ ಇಡಲಾದೀತೆ?. ಕೆಲವೊಮ್ಮೆ ನಾನು ಕೊಟ್ಟ ಸಲಿಗೆಯೇ ಜಾಸ್ತಿ ಆಗಿರಬೇಕೆಂದೆನಿಸಲು ಶುರುವಾಗಿಬಿಡುತ್ತದೆ. ಇಲ್ಲ, ಇನ್ನೂ ಚಿಕ್ಕ ವಯಸ್ಸು, ವಾತಾವರಣ ಹೊಸದು. ಸ್ವಲ್ಪ ಸಮಯ ಬೇಕು ಅವಳಿಗೂ, ಅಂದೆನಿಸಿ ಹೇಗೋ ಮರೆಯಲು ಪ್ರಯತ್ನಿಸುತ್ತೇನೆ.
- ಸುಹಾಸ್, ಮೇ ೧೬

ಪ್ರೀತಿಯಿಲ್ಲದವರ ಜೊತೆ ಹೇಗೋ ಬಾಳಬಹುದು, ನಂಬಿಕೆಯಿಲ್ಲದವರ ಮಧ್ಯೆ ಬದುಕುವುದು ಹೇಗೆ? ನಂಬಿಕೆ, ವಿಶ್ವಾಸಗಳ ತಳಹದಿಯ ಮೇಲೆ ನಿಲ್ಲ ಬೇಕಾದ ಸಂಬಂಧ, ಅಪನಂಬಿಕೆಯ ಅವಕೃಪೆಗೆ ತುತ್ತಾದರೆ ಬೆಳೆಯುವುದು ಹೇಗೆ? ಮನುಷ್ಯರು ಇಷ್ಟು ಬೇಗ ಬದಲಾಗಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ನೋಡಿದೊಡನೆಯೇ ಸಂಭ್ರಮ ಸುರಿಸುತ್ತಿದ್ದ ಕಣ್ಣುಗಳು ಈಗ ಅನುಮಾನದ ನೋಟದ ಮೊನೆಯಿಂದ ಇರಿಯುತಿವೆ. ಕಾಳಜಿ ತೋರುತ್ತಿದ್ದ ಮಾತುಗಳು, ಶುದ್ಧ ಕೃತಕವೆಂದೆನಿಸಲು ಶುರುವಾಗಿದೆ. ರೋಮಾಂಚನ ತರಿಸುತ್ತಿದ್ದ ಅಪ್ಪುಗೆಗಳಲ್ಲಿನ ಬಿಸುಪು, ತೀರ ಉಸಿರುಕಟ್ಟಿಸಲು ಶುರುವಾಗಿದೆ. ತಾನು ಹೇಳಿದ್ದನ್ನೇ ಸಾಧಿಸಬೇಕೆಂಬ ಹಠಮಾರಿತನ, ವಿವೇಚನೆಯಿಲ್ಲದೆ ಮಾಡುವ ಜಗಳಗಳು, ವಸ್ತುಗಳ ಮೇಲಿನ ಅತಿಯಾದ ವ್ಯಾಮೋಹ, ನನ್ನನ್ನು ತೀರ ಹತಾಶೆಗೆ ದೂಡಿ ಬಿಟ್ಟಿವೆ. ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲಾದೀತೆ? ನಾನು ನೋಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವವರನ್ನು ದಾರಿಗೆ ತರಲಾದೀತೆ? ಮಾತೆತ್ತಿದರೆ, "ನಾನಿರುವುದೇ ಹೀಗೆ, ಏನು ಬೇಕಾದರೂ ಮಾಡಿಕೊಳ್ಳಿ" ಎಂದು ಸಿಟ್ಟು ಮಾಡಿಕೊಳ್ಳುವವರಿಗೆ, ಹೊಂದಾಣಿಕೆಯ ಪ್ರಥಮ ಪಾಠಗಳನ್ನು ಹೇಳಿಕೊಡುವವರಾರು? ದಾಂಪತ್ಯದಲ್ಲಿ, ಸೋತೇ ಒಬ್ಬರನೊಬ್ಬರು ಗೆಲ್ಲಬೇಕೆಂಬ ಅಲಿಖಿತ ನಿಯಮವೊಂದಿದೆ ಅನ್ನುವುದರ ಅರಿವು ಸಹಜವಾಗಿಯೇ ಬರಬೇಕೇ ವಿನಹ ಯಾರೂ ಹೇಳಿಕೊಡುವದರಿಂದಲ್ಲ. ಅಲ್ಲವೇ?
- ಸುಹಾಸ್, ಆಗಸ್ಟ್ ೧೬

"ರಸವೇ ಜನನ, ವಿರಸ ಮರಣ, ಸಮರಸವೇ ಜೀವನ" ಅನ್ನುತ್ತದೆ ಕವಿವಾಣಿ. ಸಮರಸ ಸಾಧಿಸಲು ಮೂಲವಾಗಿ ಬೇಕಾದ್ದ ನಂಬಿಕೆಯನ್ನೇ ಕಳೆದುಕೊಂಡ ಮೇಲೆ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವಿದೆ? "ಹೊಂದಾಣಿಕೆ ಹೆಣ್ಣಿಗೇಕೆ ಮಾತ್ರ ಅನಿವಾರ್ಯ?" ಎಂದು ಪದೇ ಪದೇ ವಾದಿಸಿ ಪ್ರತಿರೋಧಿಸುತ್ತಿದ್ದ ಅವಳ ಮನಸ್ಸಿನಲ್ಲಿ ಇರುವುದಾದರೂ ಏನು ಅನ್ನುವುದನ್ನು ಅರಿಯಲು ಯತ್ನಿಸಿ ಸೋತುಹೋಗಿದ್ದೇನೆ. "ಹೊಂದಾಣಿಕೆ ಬರೀ ಹೆಣ್ಣಿಗೊಂದೇ ಅನಿವಾರ್ಯವಲ್ಲ. ಹೆಣ್ಣು ಗಂಡುಗಳಿಗಿಬ್ಬರಿಗೂ. ನಿನ್ನ ಸಂತೋಷಕ್ಕಾಗಿ ಈಗ ನಾನು ಎಷ್ಟೊಂದು ಬದಲಾಗಿದ್ದೇನೆ ನೋಡು" ಎಂಬ ಮಾತು ಅವಳ ಕಿವಿಯ ಮೇಲೇ ಬೀಳುತಿಲ್ಲ. "ಮಧುರವಾದ ಸಂಬಂಧದ ಸೌಧ ಕೇವಲ ಸ್ವಚ್ಚಂದ ಪ್ರೇಮದ ಬುನಾದಿಯೊಂದರಿಂದಲೇ ಕಟ್ಟಲು ಬರುವುದಿಲ್ಲ, ವಿಶ್ವಾಸ ನಂಬಿಕೆಗಳೆಂಬ ಗಟ್ಟಿ ಗೋಡೆಗಳೂ, ಸಣ್ಣ ಪುಟ್ಟ ತ್ಯಾಗಗಳೆಂಬ ಕಿಟಕಿಗಳೂ, ಬಂಧು ಬಳಗದವರೆಲ್ಲ ಜೊತೆ ನಗುತ ಬಾಳುವ ವಿಶಾಲ ಹೃದಯದ ಹೆಬ್ಬಾಗಿಲು, ಇವಿಲ್ಲದೇ ಹೋದರೆ ಎಂಥ ಮನೆಯೂ ಸುಭದ್ರವಲ್ಲ" ಎಂದೆಲ್ಲ ತಿಳಿಸಲು ಹೋಗಿ ವಿಫಲನಾಗಿದ್ದೇನೆ. ತಿಳುವಳಿಕೆಯ ಮಾತು ಹೇಳಲು ಯತ್ನಿಸಿದಾಗಲೆಲ್ಲ, ತಾಳ್ಮೆ ಕಳೆದುಕೊಂಡು ಕೂಗಿ ರಂಪವೆಬ್ಬಿಸುವ ಪರಿಗೆ ಹತಾಶನಾಗಿ ಕೈ ಚೆಲ್ಲಿದ್ದೇನೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ನನ್ನ ಮೇಲೆ ಹೊರಿಸುತ್ತಿದ್ದ ವಿಚಿತ್ರ ಆರೋಪಗಳನ್ನೆಲ್ಲ ತುಟಿ ಮುಚ್ಚಿ ಸಹಿಸಿದ್ದೇನೆ. ನನ್ನ ತಾಳ್ಮೆಯ ಕಟ್ಟೆ ಎಲ್ಲಿ ಒಡೆದುಹೋಗುತ್ತದೆಯೋ ಎಂದು ಹೆದರಿ ಕಿವಿ ಮುಚ್ಚಿಕೊಂಡ ಸಂದರ್ಭಗಳೂ ಇಲ್ಲದಿಲ್ಲ. ಮದುವೆಗೆ ಮುಂಚೆ ಕಟ್ಟಿದ್ದ ಕನಸುಗಳು, ಪ್ರೀತಿಯ ಭಾವಗಳು, ಕಣ್ಣೆದುರು ಬಂದು ಅಣಕಿಸುತ್ತ ವಿಚಿತ್ರ ತಳಮಳ, ಸಂಕಟವನ್ನು ತರಿಸುತ್ತಿವೆ. ನನ್ನೆಲ್ಲ ಪ್ರೀತಿ ವಿಶ್ವಾಸಗಳಿಗೆ ಅವಳು ಅರ್ಹಳಿರಲಿಲ್ಲವೇ, ಎಂಬ ಭಾವನೆ ಮನಸ್ಸನ್ನು ಕೊರೆದು ಘಾಸಿಮಾಡುತಿದೆ. ಹೃದಯದಲ್ಲಿ ಸುಡುತ್ತಿರುವ ದುಃಖದ ಬೇಗೆಗಳು ನನ್ನನ್ನು ಯಾವ ಮನೋಸ್ಥಿತಿಗೆ ದೂಡಿಬಿಡುತ್ತೇವೆಯೋ ಎಂಬ ಆತಂಕದಲ್ಲೇ ಬದುಕುತ್ತಿದ್ದೇನೆ.
- ಸುಹಾಸ್, ಅಕ್ಟೋಬರ್ ೧೧

ವಿಪರೀತ ಗಾಳಿ, ಮಳೆ! ದೀಪವನ್ನೂ ಹಾಕದೆ ಹಾಗೇ, ಕತ್ತಲಲ್ಲಿ ಶೂನ್ಯ ದಿಟ್ಟಿಸುತ್ತ ಕುಳಿತಿದ್ದೇನೆ. ಮಳೆಗೆ ಮಧುರ ನೆನಪ ಹೊತ್ತು ತರುವ ಜೊತೆಗೆ, ಯಾತನೆಯ ದುಃಖವನ್ನೂ ಜಾಸ್ತಿ ಮಾಡುವ ಸಾಮರ್ಥ್ಯವಿದೆಯೆಂಬುದು ಇವತ್ತೇ ಗೊತ್ತಾಗಿದ್ದು. ಉಬ್ಬರದಲ್ಲಿ ತೇಲಿ ತೇಲಿ ಬಂದು ದಡಕ್ಕಪ್ಪಳಿಸುವ ತೆರೆಗಳಂತೆ, ನೆನಪುಗಳು ಬೇಡವಂದರೂ ಮನಸ್ಸಿಗೆ ಬಂದು ಬಂದು ಅಪ್ಪಳಿಸುತ್ತಿವೆ. ಕಳೆದುದ್ದೆಲ್ಲವೂ ಕೆಟ್ಟ ಸ್ವಪ್ನದಂತೆ ಭಾವಿಸಿ ಮರೆತುಬಿಡಬೇಕೆಂಬ ಅದಮ್ಯ ಆಸೆ ಮನದಲ್ಲಿ ಹುಟ್ಟುತ್ತಿದೆಯಾದರೂ, ಹೃದಯ ಅದನ್ನು ಪ್ರತಿರೋಧಿಸುತ್ತಿದೆ. ಎಷ್ಟೆಲ್ಲ ದಿನ ಕಾಯ್ದಿದ್ದೆ? ಇಲ್ಲ, ಈಗ ಸರಿಹೋಗಬಹುದು, ಈಗ ಸರಿ ಹೋಗಬಹುದು, ಮತ್ತೆ ಹಿಂದಿನ ದಿನಗಳು ಮರಳಬಹುದು ಎಂದೆಲ್ಲ. ಎಲ್ಲ ಆಸೆಗಳು ಹುಸಿಯಾದವು! ಒಂದು ಮಾತನ್ನಾಡದೆಯೇ, ಎಲ್ಲವನ್ನೂ ಧಿಕ್ಕರಿಸಿ ನಡೆದುಬಿಟ್ಟಳಲ್ಲ! "ಮುಚ್ಚಿದ ಬಾಗಿಲ ಮುಂದೆ ನಿಂತು ಕಾದಿದ್ದು" ನನ್ನದೇ ಮೂರ್ಖತನವಿರಬೇಕು. ಅವಳ ಹುಂಬ ಧೈರ್ಯದ ನಿರ್ಧಾರಕ್ಕೂ, ಹುಚ್ಚು ಕೋಪದ ಆವೇಷಕ್ಕೂ , ಇವೆಲ್ಲ ಉಂಟು ಮಾಡಬಹುದಾದ ಪರಿಣಾಮಗಳ ಕಲ್ಪನೆ ಇರಲು ಖಂಡಿತ ಸಾಧ್ಯವಿಲ್ಲ. ಇರಲಿ. ಯಾವತ್ತೋ, ಯೌವ್ವನದ ಬಿಸಿಯೆಲ್ಲ ಆರಿದ ಮೇಲೆ ವಾಸ್ತವದ ಕಟುಸತ್ಯ ಅವಳನ್ನು ಕಾಡಬಹುದು. ಕಳೆದುಹೋದ ಪ್ರೀತಿಯ ಜಾಡನ್ನು ನೆನೆದು, ಅವಳೂ ಕೊರಗಬಹುದು.

ಮನಸ ಕಲ್ಲಾಗಿಸಬೇಕು ಈಗ. ಅವಳನ್ನು ಪ್ರೀತಿಸದಷ್ಟೇ ತೀವ್ರವಾಗಿ,ಮರೆಯಬೇಕು. ಉತ್ಕಟವಾಗಿ ಅನುಭವಿಸಿದ್ದ ಪ್ರೀತಿ, ಕಣ್ಣ ತುಂಬಿಕೊಂಡ ಕನಸುಗಳು, ಬಣ್ಣ ಬಣ್ಣದ ಸಂಭ್ರಮಗಳು, ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಬತ್ತಲಾಗಬೇಕು. ಮರಳಿ ಬದುಕ ಕಟ್ಟಬೇಕು, ಕನಸ ಹಂಬಲಿಸಬೇಕು. ಬತ್ತಿ ಹೋದ ಕಣ್ಣುಗಳಲ್ಲಿ ಹೊಸ ಆಸೆಯ ದೀಪವನ್ನು ಮತ್ತೆ ಹಚ್ಚಬೇಕು, ಘಾಸಿಗೊಂಡ ಹೃದಯಕ್ಕೆ ಮತ್ತೆ ಜೀವನಪ್ರೀತಿಯ ಅಮೃತವೆರೆಯಬೇಕು.

ಮಳೆ ನಿಂತಿರಬೇಕು ಹೊರಗೆ. ಒಂದೆರಡು ಸಣ್ಣ ಮಳೆಹನಿಗಳು ಸುರಿದು ಹೋದ ಮಳೆಯನ್ನು ಇನ್ನೂ ಜೀವಂತವಿಡುವ ವ್ಯರ್ಥ ಪ್ರಯತ್ನ ನಡೆಸಿದ್ದವು. ನಿಧಾನವಾಗಿ ಎದ್ದು ದೀಪ ಹಾಕಿದೆ. ಝಗ್ಗನೆ ಬೆಳಕು ಬೆಳಗಿ, ಕತ್ತಲೆಯನ್ನೆಲ್ಲ ಹೊರದೋಡಿಸಿತು.
- ಸುಹಾಸ್, ಡಿಸೆಂಬರ್ ೨೩


ಬರಹಕ್ಕೆ ಸುಂದರ ಶೀರ್ಷಿಕೆಯೊಂದನ್ನು ಸೂಚಿಸಿದ ಮಾನಸದೊಡತಿಗೆ ಧನ್ಯವಾದಗಳು.

12 comments:

ತೇಜಸ್ವಿನಿ ಹೆಗಡೆ said...

ಮಧು,

ನೈಜ ನಿರೂಪಣೆಯಿಂದ ಕೂಡಿದ ಕತೆ ವಾಸ್ತವಿಕವಾಗಿದ್ದು ಚೆನ್ನಾಗಿ ಮೂಡಿ ಬಂದಿದೆ. ನಗರ ಜೀವನದಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನಗಳಿಗೆ ನಾನಾಕಾರಣಗಳು. ಆದರೆ ಕಾರಣ ಕರ್ತರು ಮಾತ್ರ ಇಬ್ಬರೇ... ಅವರೇ ಪತಿ ಹಾಗೂ ಪತ್ನಿ!

ಉತ್ತಮ ಕತೆ... ಬರೆಯುತ್ತಿರು.

ಮನಸಿನ ಮಾತುಗಳು said...

very much touching article..brought tears in my eyes..

ಮನಸು said...

ತುಂಬಾ ಚೆನ್ನಾಗಿದೆ... ಮನಸ್ಸಿಗೆ ತಟ್ಟುವಂತಿದೆ...

ವಾಣಿಶ್ರೀ ಭಟ್ said...

ಪ್ರೀತಿಯಿಲ್ಲದವರ ಜೊತೆ ಹೇಗೋ ಬಾಳಬಹುದು, ನಂಬಿಕೆಯಿಲ್ಲದವರ ಮಧ್ಯೆ ಬದುಕುವುದು ಹೇಗೆ? ನಂಬಿಕೆ, ವಿಶ್ವಾಸಗಳ ತಳಹದಿಯ ಮೇಲೆ ನಿಲ್ಲ ಬೇಕಾದ ಸಂಬಂಧ, ಅಪನಂಬಿಕೆಯ ಅವಕೃಪೆಗೆ ತುತ್ತಾದರೆ ಬೆಳೆಯುವುದು ಹೇಗೆ?...

wow.. simply superb!!! title kooda modala putaku koneya pytaku naduve enitu anatara!!!!!!!

sunaath said...

ದಿನಚರಿಯ ರೂಪದ ಈ ಕತೆ ತುಂಬ ಸೊಗಸಾಗಿ ಬಂದಿದೆ.
Keep it up.

Harisha - ಹರೀಶ said...

ಚೆನ್ನಾಗಿದ್ದು.. :)

umesh desai said...

ಒಳ್ಳೆ ಕಥೆ ನಿರೂಪಣೆ ಗಮನಸೆಳೆಯುತ್ತದೆ.

Unknown said...

ತೇಜಕ್ಕಾ,
ನಿಜ ನೀವು ಹೇಳಿದ್ದು. ಕಾರಣಗಳು ಏನೇ ಇದ್ದರೂ ಹಿಂದಿನವರಲ್ಲಿದ್ದ ಹೊಂದಾಣಿಕೆ ಈಗಿನವರಿಗಿಲ್ಲ ಅನ್ನುವುದು ಸಾರ್ವತ್ರಿಕ ಅಭಿಪ್ರಾಯ ಅಲ್ಲವೇ?
ಕಾಲ ಬದಲಾದಂತೆ, ನಾವು ಸಂಬಂಧಗಳನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆಯೇ ಅನ್ನುವುದು ನನ್ನ ಸಂಶಯ.
ಥ್ಯಾಂಕ್ಸ್, ನಿಮ್ಮ ಓದಿಗೆ, ಸಲಹೆಗೆ.

ದಿವ್ಯಾ,
ನನ್ನ ಬರಹಕ್ಕೆ ಸಿಗಬಹುದಾದ ಉತ್ತಮ ಪ್ರತಿಕ್ರಿಯೆ ಇದು. ತುಂಬಾ ಧನ್ಯವಾದಗಳು, ಓದಿದ್ದಕ್ಕೆ, ಹಂಚಿಕೊಂಡಿದ್ದಕ್ಕೆ, ಕಮೆಂಟಿಸಿದ್ದಕ್ಕೆ.

ಮನಸು,
ಥ್ಯಾಂಕ್ಸ್,

ವಾಣಿಶ್ರೀ,
ನಿಮಗೆ ಸಾಲುಗಳು ಖುಷಿ ಕೊಟ್ಟಿದ್ದು ಬಹಳ ಸಂತೋಷ. ನಿಮ್ಮ ಓದಿಗೆ, ಕಾಮೆಂಟಿಗೆ ತುಂಬ ಧನ್ಯವಾದಗಳು.

Unknown said...

ಕಾಕಾ,
ನಿಮ್ಮ ಓದು, ಕಾಮೆಂಟುಗಳೇ ನಮಗೆ ಸ್ಪೂರ್ತಿ. ಧನ್ಯವಾದಗಳು
ತಾಂತ್ರಿಕ ತೊಂದರೆಯಿಂದ ಎಲ್ಲ ಕಾಮೆಂಟುಗಳು ಮಾಯವಾಗಿದ್ದವು. ಹೇಗೋ ವಾಪಾಸ್ ಬಂದಿವೆ!

ಹರೀಶ್,
ಥ್ಯಾಂಕ್ಯೂ,

ದೇಸಾಯಿಯವರೇ, ನಿಮ್ಮ ಓದಿಗೆ, ಕಾಮೆಂಟಿಗೆ ಅನಂತ ಧನ್ಯವಾದಗಳು

ಸುಧೇಶ್ ಶೆಟ್ಟಿ said...

madhu avarE...

classic aagidhe baraha... niroopane, naviraada niroopaNe... simply nice...

yeradu sala odhidhe....

inthaha kathegaLu matte matte bareyiri :)

sundhara sheershike saha :)

Pramod P T said...

nimma blog-na tumbaa dinada natra visit maadide. adesht chennaag bardiddeeri.

Unknown said...

thank u sudesh and pramod :-)