Thursday, January 29, 2009
ಜೊತೆಯಾದವಳಿಗೆ
ಸುರಿವ ಮಳೆಯಲಿ ಕುಣಿದ ಹರುಷವ
ಮರೆವ ನೆಪದಲಿ ಕಳೆದ ನೆನಪುಗಳ
ಮರಳಿ ತರಲಿ ಶುಭದಿನದ ಘಳಿಗೆ
ಮತ್ತೆಬಂದ ನವವಸಂತ ತರಲಿ
ನಿತ್ಯ ನವಿರ ಒಲವ ಹೊಳಹು
ಸುತ್ತಮುತ್ತ ಕವಿದಕಪ್ಪ ಭೇದಿಸಿ
ಕತ್ತಲಿನ ದೀಪದಂತಿರಲಿ ಬಾಳು
ಹತ್ತುಹಲವು ನೋವುನಲಿವ
ಮೆತ್ತಗಾಗಿಸುವ ಸೋಲುಗೆಲುವ
ಬಾಳಪಥದಿ ನಗುತ ನಡೆದು
ನಾಳೆಗನಸುಗಳ ಭರವಸೆಯಾಗು
Friday, January 16, 2009
ನಿನ್ನೆ ನಾಳೆಗಳ ನಡುವೆ
ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ
ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ
ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ!
ನಡೆವ ನೆಲದಲ್ಲಿ ನೆನೆದ ನೆತ್ತರ ನೋಡಿನೋಡಿಯೂ
ಮೋಸದ ಮರೆಯಲ್ಲಿ ಮೌನಕ್ಕೆ ಮಾತಾಗಿದ್ದೀವೆ
ಸಭ್ಯತೆಯ ಸೋಗಿನ ಸೆರಗ ಸುತ್ತಿಕೊಂಡೇ ಸಾಗಿದ್ದೇವೆ
ನಾವು,ನಮಗೆ ವರ್ತಮಾನದ ತಲ್ಲಣಗಳಿಲ್ಲ!
ಕನಸ ಕಣ್ಣು ಕಸಿವ ಕೆಲಸಕೆಂದೂ ಕುಗ್ಗದೆ
ಬಸಿವ ಬೆವರ ಭಾರಕೂ ಬಸವಳಿದು ಬಿದ್ದಿಲ್ಲ
ಕಾದಿರಿಸಿದ ಕಾಮನೆಗಳ ಕತ್ತಲಲ್ಲೇ ಕಾದಿದ್ದೇವೆ
ನಾವು,ನಮಗೆ ನಾಳೆಗಳ ಹಂಗಿಲ್ಲ!
Sunday, October 26, 2008
ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ......
ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.
ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು.
ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು.
ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು.
ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ.
ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ.
ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ.
Sunday, September 7, 2008
ಕಚ್ಚೋ ಚಪ್ಪಲ್ಲು
ಚಿಕ್ಕಂದಿನಲ್ಲಿ ಮಳೆಗಾಲ ನನಗೆ ಹೇಳಿಕೊಳ್ಳುವಷ್ಟು ಇಷ್ಟವೇನೂ ಆಗಿರಲಿಲ್ಲ. ಮಳೆನೀರಿನಲ್ಲಿ ಆಡಬಹುದು ಎಂಬ ಸಂತೋಷ ಒಂದನ್ನು ಬಿಟ್ಟರೆ ಮಳೆಗಾಲದಲ್ಲಿ ಎಲ್ಲವೂ ರಗಳೆಯೇ. ಈಗ ಬೆಂಗಳೂರಿಗೆ ಬಂದು ಊರ ಮಳೆಯನ್ನು ಮಿಸ್ ಮಾಡಿಕೊಂಡ ಮೇಲೆಯೇ ಮಳೆಗಾಲದ ನೆನಪುಗಳು ಬಹಳ ಅಪ್ಯಾಯಮಾನವೆನ್ನಿಸುತ್ತಿವೆ. ಮಳೆಗಾಲ ಎಂದರೆ ಮಲೆನಾಡಿನವರಿಗೆ ಒಣಗದ ಬಟ್ಟೆ, ಹಸಿಹಸಿ ಕಟ್ಟಿಗೆ ಒಲೆಯಲ್ಲಿ ಉಂಟು ಮಾಡುವ ಅಸಾಧ್ಯ ಹೊಗೆ, ಸಂಕದ ಮೇಲೆ ಹರಿಯುತ್ತಿರುವ ನೀರು, ರಸ್ತೆ ಸರಿ ಇರದೆ ಕ್ಯಾನ್ಸಲ್ ಆಗುವ ಬಸ್ಸು ಇಂಥ ಹಲವಾರು ತೊಂದರೆಗಳೇ ನೆನಪಾಗೋದು. ಕೆಲಸಗಳು ಯಾವುದೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಮೊನ್ನೆ ಜೋರು ಮಳೆ ಬಂದಾಗ, "ಆಹಾ, ಎಂಥಾ ಮಳೆ, ಈ ಮಳೆಲ್ಲಿ ಆರಾಮಾಗಿ ಕುತ್ಕಂಡು, ಬಿಸಿಬಿಸಿ ಚಾ ಕುಡ್ಯವು ನೋಡು" ಅಂತ ಅಮ್ಮನ ಹತ್ರ ಹೇಳಿದ್ರೆ, "ಎಂತಾ ಮಳೆನೆನಪಾ, ಒಂದೂ ಕೆಲ್ಸ ಮಾಡಲೇ ಬಿಡ್ತಿಲ್ಲೆ.ಎಷ್ಟೆಲ್ಲಾ ಕೆಲ್ಸ ಹಾಂಗೇ ಉಳ್ಕಂಜು ನೋಡು,ನಿಂಗೆ ಚಾ ಮಾಡ್ಕ್ಯೋತಾ ಕುಂತ್ರೆ ಅಷ್ಟೇಯಾ" ಎಂದು ನನ್ನ ಸೋಮಾರಿ ಮೂಡಿಗೆ ಛೀಮಾರಿ ಹಾಕಿದಳು. ಅವಳ ಪ್ರಕಾರ ಮಳೆಗಾಲ ನನ್ನಂಥ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ, ಅವಳ ಹಾಗೆ ಸದಾ ಚಟಿಪಿಟಿಯಿಂದ ಓಡಾಡ್ತಾ ಕೆಲಸ ಮಾಡಿಕೊಂಡು ಇರುವಂತವರಿಗೆ ಕೈಕಾಲು ಕಟ್ಟಿ ಹಾಕಿದ ಹಾಗೆಯೇ.
ಆದರೆ ಮಜ ಇರುವುದು ಮನೆಯಿಂದ ಹೊರ ಬಿದ್ದಾಗಲೇ. ನಾವು( ನಾನು ಮತ್ತು ನನ್ನಕ್ಕ) ಸಣ್ಣಕ್ಕಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಒಂತರಾ ಸಾಹಸವೇ ಆಗಿತ್ತು. ನಮಗಿಂತಾ ದೊಡ್ಡದಾದ ಕೊಡೆ ಹಿಡಿದುಕೊಂಡು,ಜೋರಾಗಿ ಗಾಳಿ ಬೀಸಿದಾಗಲೆಲ್ಲಾ ಅದು ಹಾರಿಹೋಗದಂತೆ ಅಥವಾ ಕೊಡೆಯೇ ಉಲ್ಟಾ ಆಗದಂತೆ ಹರಸಾಹಸ ಮಾಡುತ್ತಾ, ಅಚಾನಕ್ ಆಗಿ ರಸ್ತೆಯಿಂದ ಕೆಳಕ್ಕಿಳಿದು ಕೆಸರು ನೀರನ್ನು ನಮ್ಮ ಮೈಗೆ ಎರಚಲು ಹವಣಿಸುವ ಬಸ್ಸು, ಲಾರಿಗಳಿಂದ ತಪ್ಪಿಸಿಕೊಳ್ಳುತ್ತಾ, ರಸ್ತೆ ಮೇಲೆ ನೀರೆಲ್ಲಾ ಹರಿಯುತ್ತಿದ್ದರೆ ಆ ಪವಿತ್ರ ಕುಂಕುಮ ನೀರಲ್ಲೇ ನಮ್ಮ ಪಾದಗಳನ್ನು ನೆನೆಸಿಕೊಳ್ಳುತ್ತಾ ಹೋಗುತ್ತಿದ್ದೆವು. ನಮ್ಮ ಕೈಯಲ್ಲಿದ್ದ ಕೊಡೆ ಮಾತ್ರ ಅದ್ಭುತ ಸಲಕರಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲಂತೂ ಇದ್ದೇ ಇದೆಯಲ್ಲ, ಮಳೆ ಬೀಳದೇ ಇದ್ದಾಗಲೂ ಒಮ್ಮೊಮ್ಮೆ ಹೆಗಲ ಮೇಲೆ ಗದೆಯಾಗಿ, ಇನ್ನೊಮ್ಮೆ ಗಿರಿಗಿಟ್ಲಿಯಾಗಿ, ಇನ್ನೊಮ್ಮೆ ದಾರಿಬದಿಯಲ್ಲಿದ್ದ ಪಿಳ್ಳೆ ಹಣ್ಣಿನ(ನೇರಳೆ ಹಣ್ಣಿನಂತದ್ದೇ)ಟೊಂಗೆಯನ್ನು ಬಗ್ಗಿಸಲು, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್ ಆಗಿಯೂ ಉಪಯೋಗಕ್ಕೆ ಬರುತ್ತಿತ್ತು. ಇಷ್ಟೆಲ್ಲಾ ಸಂಭಾಳಿಸಿಕೊಂಡೂ ಹಾಕಿಕೊಂಡಿದ್ದ ಬಟ್ಟೆಗೆ ಒಂಚೂರು ಕೊಳೆಯಾಗದೇ ಮನೆಗೆ ಬಂದರೆ ನಮ್ಮ ವಯಸ್ಸಿಗೇ ಅವಮಾನ ಮಾಡಿದಂತಲ್ಲವೇ? ನಾವು ನೆಟ್ಟಗೆ ಮನೆಗೆ ಬರುತ್ತಿದ್ದ ಟಾರು ರಸ್ತೆಯನ್ನು ಬಿಟ್ಟು, ಪಕ್ಕದಲ್ಲಿದ್ದ ಕಾಲುವೆ ಹಾರಿ, ಧರೆಯನ್ನೆಲ್ಲ ಗುದಕಿ,ಬೆಟ್ಟ ಬೇಣವನ್ನೆಲ್ಲ ಹುಡುಕಿ, ಅಪರೂಪಕ್ಕೊಮ್ಮೆ ಜಾರಿಬಿದ್ದು ಮನೆಗೆ ತಲುಪಿದಾಗ ಅಮ್ಮನ ತಲೆನೋವು ಶುರುವಾಗುತ್ತಿತ್ತು. ಮೊದಲೇ ಬಟ್ಟೆಗಳು ಒಣಗುವುದಿಲ್ಲ.ತೊಳೆದುಹಾಕುವಂತಿಲ್ಲ.ಕೊಳೆಯಾದ ಬಟ್ಟೆಗಳನ್ನೇ ಹಾಕಿಕೊಂಡು ಹೋದರೆ ನಮಗೆ ಅವಮಾನ ಬೇರೆ. ಅಮ್ಮನ ಕಷ್ಟ ಹೇಳತೀರದು. ನಮ್ಮ ಮಂಗಾಟಗಳ ಚೆನ್ನಾಗಿ ಪರಿಚಯವಿದ್ದ ಅಮ್ಮ ಯೋಚಿಸಿ ಯೋಚಿಸಿ, ಸರಿಯಾದ ಚಪ್ಪಲ್ಲಿಗಳನ್ನು ನಾವು ಹಾಕಿಕೊಂಡರೆ ಬಟ್ಟೆ ಕೊಳೆಮಾಡಿಕೊಳ್ಳುವುದನ್ನು ಕಮ್ಮಿ ಮಾಡುತ್ತೇವೆ ಎಂದ ನಿರ್ಧಾರ ಮಾಡಿರಬೇಕು. ಹಾಗಾಗಿ ಮಳೆಗಾಲದಲ್ಲಿ ಹಾಕುವ ಬಟ್ಟೆಗಳಿಗೆ ಮನೆಯಲ್ಲಿ ಎಷ್ಟು ಮಹತ್ವ ಕೊಡುತ್ತಿದ್ದರೋ, ಅಷ್ಟೇ ಮಹತ್ವವನ್ನು ನಾವು ಹಾಕುವ ಚಪ್ಪಲ್ಲಿಗಳಿಗೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ಚಪ್ಪಲ್ಲಿ ಅಥವಾ ಶೂನಲ್ಲಿ ಇಡೀ ವರ್ಷ ಕಳೆದುಬಿಡಬಹುದೇನೋ, ಆದರೆ ನಮಗೆ ಮಾತ್ರ ವರ್ಷಕ್ಕೆ ಕಡ್ಡಾಯವಾಗಿ ಬೇಸಿಗೆಕಾಲಕ್ಕೆ ಒಂದು ಜೊತೆ, ಮಳೆಗಾಲಕ್ಕೆಂದೇ ಜಾಸ್ತಿ ಜಾರದ, ಪ್ಲಾಸ್ಟಿಕ್ ಚಪ್ಪಲ್ಲು ಬೇಕೇ ಬೇಕಾಗುತ್ತಿತ್ತು. ಛಳಿಗಾಲದಲ್ಲಿ ಸಾಮಾನ್ಯ ಹವಾಯಿ ಚಪ್ಪಲ್ಲು ಸಾಕಾಗುತ್ತಿತ್ತು.
ಮಳೆಗಾಲ ಇನ್ನೇನು ಶುರುವಾಗುತ್ತಿದೆ ಎನ್ನುವಾಗಲೇ ನಾವು ಅಪ್ಪನಿಗೆ ದಿನಾಲೂ ಚಪ್ಪಲ್ಲಿನ ನೆನಪು ಮಾಡಿಕೊಡಲು ಶುರುಮಾಡುತ್ತಿದ್ದೆವು. ನಮ್ಮ ಕಾಟ ಅತಿಯಾದಾಗ ಅಪ್ಪ ಒಂದು ಶುಭಸಂಜೆಯಲ್ಲಿ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಐದಾರು ಅಂಗಡಿಗಳಿಗೆ ತಿರುಗಿ ಸಾಕಾದಷ್ಟು ಚೌಕಾಶಿ ಮಾಡಿ, ಸಾಧ್ಯವಾದಷ್ಟು ಬಾಳಿಕೆ ಬರುವಂತಹ ಜೋಡಿಯೊಂದನ್ನು ತೆಗೆಸಿಕೊಡುತ್ತಿದ್ದರು(ಆದರೆ ಆ ಜೋಡಿಗಳಿಗೆ ಒಂದೇ ಮಳೆಗಾಲಕ್ಕಿಂತ ಹೆಚ್ಚು ಆಯಸ್ಸನ್ನು ನಾವು ದಯಪಾಲಿಸುತ್ತಲೇ ಇರಲಿಲ್ಲ!). ಅಲ್ಲಿ ನಮ್ಮ ಆಯ್ಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪನಿಗೆ ಚೆನ್ನಾಗಿದೆ ಅನ್ನಿಸಿದ್ದು ನಮ್ಮ ಪಾಲಿಗೆ ಬಂದ ಹಾಗೇ. ಅಪರೂಪಕ್ಕೊಮ್ಮೆ "ನಂಗೆ ಆ ಚಪ್ಪಲ್ಲಿನೇ ಬೇಕು" ಎಂಬ ಕ್ಷೀಣ ಸದ್ದು ಬಾಯಿ ತುದಿಯಂಚಲ್ಲಿ ಬಂದು ಇನ್ನೇನು ಬಿದ್ದೇ ಹೋಗುತ್ತದೆ ಎಂಬ ಭಯ ಹುಟ್ಟಿಸಿದರೂ, ಅಪ್ಪ "ಈ ಚಪ್ಪಲ್ಲು ಅಡ್ಡಿಲ್ಯನಾ?" ಎಂದು ಕೇಳಿದ ತಕ್ಷಣವೇ ನಾವು ಗೋಣನ್ನು ಅಡ್ಡಡ್ಡವಾಗಿ ಆಡಿಸಿ, ಮಾತು ಗಂಟಲಲ್ಲೇ ಉಳಿದುಹೋಗುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೆವು. ಚಪ್ಪಲ್ಲಿ ಎಷ್ಟು ಚೆನ್ನಾಗಿದ್ದರೂ, "ಅದರ ಬಾರ್ ಸರಿಯಿಲ್ಲೆ", "ಇನ್ನೊಂಚೂರು ದೊಡ್ಡಕೆ ಇರಕಾಯಿತ್ತು", "ಹಿಮ್ಮಡಿ ಇನ್ನೂ ಎತ್ತರಕೆ ಇರಕಾಗಿತ್ತು" ಅಂತೆಲ್ಲಾ ಕಂಪ್ಲೇಂಟುಗಳನ್ನು ಅಪ್ಪ ಇಲ್ಲದಿದ್ದಾಗ ಅಮ್ಮನ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಅಮ್ಮ ಏನು ಮಾಡಿಯಾಳು? "ಮುಂದಿನ ಮಳೆಗಾಲದಲ್ಲಿ ಛೊಲೋದು ತಗಳಕ್ಕಡಾ ಬಿಡು" ಅಂತ ಸಮಾಧಾನ ಮಾಡುತ್ತಿದ್ದರು.
ಅಸಲಿ ತೊಂದರೆಗಳು ನಾವು ಆ ಚಪ್ಪಲ್ಲನ್ನು ಶಾಲೆಗೆ ಹಾಕಿಕೊಂಡು ಹೋಗಲು ಶುರುಮಾಡಿದ ಮೇಲೆ ಶುರುವಾಗುತ್ತಿದ್ದವು. ಸ್ವಲ್ಪ ಗಟ್ಟಿ ಗಟ್ಟಿಯಾಗಿದ್ದ ಚಪ್ಪಲ್ಲಿಗಳು ನಮ್ಮ ಮೆದುವಾದ ಪಾದವನ್ನು ತಾಗಿ ತಾಗಿ ಹೆಬ್ಬೆರಳ ಸಂದಿಯಲ್ಲೋ(ಚಪ್ಪಲ್ಲಿಯ ಬಾರ್ ಬರುವಲ್ಲಿ) ಅಥವ ಹಿಮ್ಮಡಿಯಲ್ಲೋ, ಅಥವೋ ಪಾದದ ಎರಡೂ ಬದಿಯಲ್ಲೋ ಸಣ್ಣ ಗಾಯವನ್ನು ಮಾಡಿ ಬಿಡುತ್ತಿದ್ದವು. ಅದರ ಪರಿಣಾಮ ಮಾರನೆಯ ದಿನದಿಂದ ನಮಗೆ ಆ ಚಪ್ಪಲ್ಲಿಯನ್ನು ಹಾಕಿಕೊಳ್ಳಲು ಬಹಳ ತೊಂದರೆ ಆಗುತ್ತಿತ್ತು. ನಾವು ನಡೆದಂತೆಲ್ಲ ಅದೇ ಗಾಯ ಮತ್ತೆ ಚಪ್ಪಲ್ಲಿನ ಗಟ್ಟಿ ಭಾಗಕ್ಕೆ ತಾಗಿ ಇನ್ನೂ ಉರಿಯಾಗುತ್ತಿತ್ತು. ಸುಮಾರು ಒಂದು ವಾರಗಳ ತನಕ ಆ ಗಾಯ ತೊಂದರೆ ಕೊಡುತ್ತಲೇ ಇರುತ್ತಿತ್ತು. ಅದಕ್ಕೆ ನಾವು "ಚಪ್ಪಲ್ಲಿ ಕಚ್ಚುವುದು" ಎನ್ನುತ್ತಿದ್ದೆವು. ಆಗೆಲ್ಲ ಗಾಯಕ್ಕೆ ಎಣ್ಣೆ ಹಚ್ಚೋ,ಚಪ್ಪಲ್ಲಿನ ಆ ಭಾಗಕ್ಕೆ ಹತ್ತಿ ಸುತ್ತೋ ಉರಿಯ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ದಿನಗಳಾದ ಮೇಲೆ ಚಪ್ಪಲ್ಲು ಸ್ವಲ್ಪ ಮೆದುವಾಗಿಯೋ, ಅಥವ ನಮಗೆ ರೂಢಿಯಾಗಿಯೋ ಚಪ್ಪಲ್ಲು ಕಚ್ಚುವುದು ನಿಂತು ಹೋಗುತ್ತಿತ್ತು. ಆದರೆ ಆ ಸ್ವಲ್ಪ ದಿನಗಳಲ್ಲೇ ನಾವು ಅನುಭವಿಸುತ್ತಿದ್ದ ಯಮಯಾತನೆ,ಹೊಸ ಚಪ್ಪಲ್ಲಿನ ಉತ್ಸಾಹವನ್ನು ಬಹಳ ಪಾಲು ಕಮ್ಮಿಮಾಡಿಬಿಡುತ್ತಿದ್ದವು. ಹಾಗಾಗಿ ಮಳೆಗಾಲ ಎಂದ ಕೂಡಲೇ ನನಗೆ ನೆನಪಿಗೆ ಬರುವುದು, ನಾವು ಕುಂಟುತ್ತಾ ಕಾಲನೆಳೆಯುತ್ತಾ ಹೋಗುತ್ತಿರುವ ದೃಶ್ಯ. ಅಪರೂಪಕ್ಕೊಮ್ಮೆ ಅಪ್ಪ ಶೂ ಕೊಡಿಸಿಬಿಟ್ಟಾಗ(ಅದು ನಾನು ಹಿಂದಿನ ದಿನ ಅಮ್ಮನ ಹತ್ತಿರ ಹಠ ಮಾಡಿ ಅಪ್ಪನಿಗೆ ಹೇಳಿಸಿದ್ದರ ಪರಿಣಾಮ), ಪರಿಸ್ಥಿತಿ ಇನ್ನೂ ಗಂಭೀರವಾಗಿಬಿಟ್ಟಿತ್ತು. ಆ ಶೂ ಅಂತೂ ನನ್ನ ಪಾದದ ಎಲ್ಲಾ ಭಾಗಗಳಲ್ಲಿ ಕಚ್ಚಿ ಕಚ್ಚಿ. ಮಾರನೇಯ ದಿನ ನಾನು ಹವಾಯಿ ಚಪ್ಪಲನ್ನೇ ಹಾಕಿಕೊಂಡು ಹೋಗುವಂತೆ ಮಾಡಿಬಿಟ್ಟಿತ್ತು. ಆ ಮೇಲಿಂದ ನಾನಂತೂ ಯಾವತ್ತೂ ಶೂ ತೆಗೆಸಿಕೊಡಿರೆಂದು ಅಪ್ಪಿತಪ್ಪಿಯೂ ಕೇಳಲಿಲ್ಲ.
ಈಗೆಲ್ಲಾ ಮೆತ್ತ ಮೆತ್ತನೆಯ, ಸಾವಿರಾರು ರೂಪಾಯಿ ಬೆಲೆಯುಳ್ಳ ಶೂಗಳನ್ನು ಹಾಕಿಕೊಂಡು, ಅನಿರೀಕ್ಷಿತ ಮಳೆ ಬಿದ್ದಾಗ ಒದ್ದೆಯಾದರೆ ಒದ್ದಾಡುತ್ತಾ, ಅದನ್ನು ಒಣಗಿಸಲು ಹರಸಾಹಸ ಪಡುತ್ತಾ ಇರುವಾಗ ನಾವು ಎಷ್ಟೆಲ್ಲಾ ಮುಂದೆ ಬಂದುಬಿಟ್ಟಿದ್ದೇವಲ್ಲಾ ಎಂದು ಸೋಜಿಗವಾಗುತ್ತದೆ. ಚಪ್ಪಲ್ಲಿಗಳು ಕಚ್ಚುತ್ತವೆ ಎಂದು ಗೊತ್ತಿದ್ದೂ ಅವನ್ನು ಹಾಕಿಕೊಂಡು ಓಡಾಡಲು ಎಷ್ಟೆಲ್ಲಾ ಸಂಭ್ರಮ ಪಡುತ್ತಿದ್ದೆವು, ಈಗ ಎಂಥಾ ಚೆನ್ನಾಗಿರೋ ಶೂಗಳು ಮತ್ತು ಚಪ್ಪಲ್ಲಿಗಳೂ ಅಂಥಹ ರೋಮಾಂಚನವನ್ನು ತರುವುದಿಲ್ಲವೆಂದು ಬೇಜಾರೂ ಆಗುತ್ತದೆ.
Tuesday, July 1, 2008
ಹೀಗೇ ಸುಮ್ಮನೇ...
ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತರಾನೇ. ಕುಂಭಕರ್ಣನ ಸಂತತಿ. ಮಲಗಿದ್ರೆ ಜಗತ್ತಿನ ಖಬರೇ ಇಲ್ಲ. ಶನಿವಾರ, ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ "ಮಧ್ಯಾಹ್ನದ ಮೇಲೆ" ಅನ್ನೋ ಹೊತ್ತೇ ಇಲ್ಲ. ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ. ಎಲ್ಲಾದ್ರೂ ಜಾಸ್ತಿ ಹೇಳಿದ್ರೆ "ಅಮ್ಮಾ, ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ?" ಅಂತಾ ನನ್ನೇ ಕೇಳ್ತಾಳೆ. ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ. ವಾರವಿಡೀ, ಬೆಳಗ್ಗೆ ಬೇಗ ಏಳು, ಕಂಪನಿ ಬಸ್ ಹಿಡಿ, ಇಡಿ ದಿನಾ ಕೆಲಸಾ ಮಾಡು, ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ, ಇಷ್ಟರಲ್ಲೇ ಮುಗಿದೋಗತ್ತೆ. ಅದ್ಕೆ ಪಾಪ, ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ. ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ, ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ. ಅಲ್ಲಾ ಈ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು?
ನಾವೆಲ್ಲಾ ಈ ವಯಸ್ಸಲ್ಲಿ ಹೀಗಿರ್ಲಿಲ್ಲ, ಎಷ್ಟೆಲ್ಲಾ ಕೆಲ್ಸ ಮಾಡ್ತಿದ್ವಿ ಅಂದ್ರೆ ನಮ್ಮನೆಯವ್ರು ನನಗೇ ಬೈಯ್ತಾರೆ." ನಿನ್ನ ಕಾಲಕ್ಕೂ ಈ ಕಾಲಕ್ಕೂ ಯಾಕೆ ಹೋಲಿಸ್ತೀಯಾ? ಅವಳು ಹೊರಗೆ ಕೆಲ್ಸ ಮಾಡ್ತಾ ಇಲ್ವಾ? ನಿಧಾನಕ್ಕೆ ಎಲ್ಲದನ್ನೂ ಕಲೀತಾಳೆ ಬಿಡು" ಅಂತ. ಎಲ್ಲಾದಕ್ಕೂ ಇವ್ರದ್ದು ಅವ್ಳಿಗೇ ಸಪೋರ್ಟು. ಎಷ್ಟಂದ್ರೂ ಒಂದೇ ಮಗಳಲ್ವಾ? ತಲೆ ಮೇಲೆ ಹತ್ತಿಸಿಕೊಂಡು ಕುಣಿತಾರೆ. ಕುಣೀಲಿ, ಕುಣೀಲಿ, ನಾನೂ ನೋಡ್ತಿನಿ ಏಷ್ಟು ದಿನ ಅಂತಾ. ನಾನೇನಾದ್ರೂ ಬೈದ್ರೆ ಅಪ್ಪ ಮಗಳು ಒಂದೇ ಪಾರ್ಟಿ ಮಾಡ್ಕೊಂಡು ನನ್ನೇ ಅಂತಾರೆ. ನನಗೋ ಇವಳು ಮಾಡೋ ವೇಷಾನೆಲ್ಲ ಸಹಿಸಿಕೊಂಡು ಸುಮ್ಮನೆ ಇರಕಂತೂ ಆಗಲ್ಲ. ಏನೋ ಅಂದು ಹೋಗುತ್ತೆ. ಈಗಲ್ದೇ ಇನ್ಯಾವಾಗ ಮನೆ ಕೆಲ್ಸಾನೆಲ್ಲ ಕಲ್ಯೋದು ಇವ್ಳು? ನಾಳೆ ಇವಳದ್ದೂ ಒಂದು ಮದುವೆ ಅಂತ ಆಗಲ್ಲ್ವಾ? ಆಗ ಸಂಸಾರ ಸಂಭಾಳಿಸ್ಕೊಂಡು ಹೋಗಷ್ಟಾದ್ರೂ ಮನೆ ಕೆಲಸಗಳು ಗೊತ್ತಿರ್ಬೇಕು ಅಂತ ನಾನು. ನಾಳೆ ಇವಳಿಗೆ ಎಲ್ಲಾ ಕೆಲ್ಸ ಬರಲ್ಲ ಅಂದ್ರೆ ಅತ್ತೆ ಮನೆಯವರು ಏನಂತಾರೆ? "ಇವಳಮ್ಮ ಏನೂ ಕಲಿಸೇ ಇಲ್ಲ" ಅಂತ ನನ್ನ ಆಡಿಕೊಳ್ಳಲ್ವಾ? ಮೊನ್ನೆ ಇದೇ ವಿಷ್ಯದ ಮೇಲೆ ಜೋರು ವಾದ ಆಯ್ತು. ಅಪ್ಪ ಮಗಳು ಇಬ್ರೂ ಸೇರಿ ಜೋರು ಗಲಾಟೆ ಮಾಡಿ ಒಟ್ನಲ್ಲಿ ನನ್ನ ಬಾಯಿ ಮುಚ್ಚಿಸಿದ್ರು. ನಮ್ಮ ಮನೆಯವರಂತೂ ಮೊದ್ಲೇ ಹೇಳಿದ್ನಲ್ಲಾ ಯಾವಾಗ್ಲೂ ಅವಳದ್ದೇ ಪಾರ್ಟಿ. "ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ರೂ ಹೊರಗೆ ಕೆಲಸ ಮಾಡ್ತಾರೆ, ಹೇಗೋ ಮ್ಯಾನೇಜ್ ಮಾಡ್ತಾರೆ ಬಿಡೆ. ಕೆಲಸದವಳನ್ನ ಇಟ್ಕೋತಾರೆ. ಗಂಡನೂ ಬಹಳಷ್ಟು ಸಹಾಯ ಮಾಡ್ತಾನೆ. ಎಲ್ಲಾ ಕಲ್ತುಕೊಂಡು ಏನು ಮಾಡೋದಿದೆ? ಅಂತ ಉಲ್ಟಾ ನನ್ನೇ ಕೇಳ್ತಾರೆ. ಇವಳಂತೂ ಬಿಡು. ಅಪ್ಪ ಬೇರೆ ಸಪೋರ್ಟಿಗಿದ್ದಾರೆ ಅಂತಾ ಗೊತ್ತಾಯ್ತಲ್ಲಾ, ಕೂಗಿದ್ದೇ ಕೂಗಿದ್ದು. ನಾನೇನೋ ಮಹಾ ದೂರಿದ ಹಾಗೆ. "ಅಮ್ಮಾ ನಾನಂತೂ ಮೊದ್ಲೇ ಹೇಳ್ಬಿಡ್ತೀನಿ, ನನ್ನ ಮದ್ವೆಯಾಗೋವ್ನಿಗೆ. ನಂಗೆ ಅಷ್ಟೆಲ್ಲಾ ಚೆನ್ನಾಗಿ ಅಡುಗೆ-ಗಿಡಗೆ ಎಲ್ಲಾ ಮಾಡಕ್ಕೆ ಬರಲ್ಲಾ. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಮನೆ-ಕೆಲಸ ಎಲ್ಲ ಒಟ್ಟೊಟ್ಟಿಗೆ ನಾನೊಬ್ನೇ ಮಾಡ್ಕೊಂಡು ಹೋಗಕ್ಕಾಗಲ್ಲಾ. ಜಾಸ್ತಿ ಕಿರಿಕಿರಿ ಮಾಡಿದ್ರೆ ಕೆಲಸ ಬಿಟ್ಟು ಮನೆಲ್ಲೇ ಇರ್ತಿನಿ ಅಂತ. ಇನ್ನೇನು ಹೊರಗೂ ದುಡಿದು ಸಂಬಳಾನೂ ತರ್ಬೇಕು, ಮನೆಲ್ಲಿ ಚಾಕರಿ ಮಾಡಕ್ಕೂ ನಾನೇ ಬೇಕು ಅಂದ್ರೆ ನಾನೇನು ಅವನ ಆಳಾ? ಅಂತ. ಅದೆಲ್ಲಾ ಸರಿನೇ. ನಾನೂ ಒಪ್ಕೋತಿನಿ. ಕಾಲ ಬದಲಾಗಿದೆ ಅಂತ. ಆದ್ರೆ ಇವಳು ಇಷ್ಟು ನೇರ ನೇರವಾಗಿ ಹೇಳಿದ್ರೆ ಯಾರು ಇವಳನ್ನ ಮದ್ವೆ ಆಗ್ತಾರೆ ಅಂತ ಭಯ ನಂಗೆ.
ಇವ್ರಿಗೆ ಹೇಳಿದ್ರೆ ಕಿವಿ ಮೇಲೇ ಹಾಕ್ಕೊಳಲ್ಲ. "ಅವಳಿಗೆ ಇನ್ನೂ ಸಣ್ಣ ವಯಸ್ಸು, ನೀನು ಸುಮ್ನೆ ಟೆನ್ಶನ್ ಮಾಡ್ಕೋಂತೀಯಾ" ಅಂತಾರೆ. ಟೆನ್ಶನ್ ಆಗಲ್ವಾ? ಈ ಅಗಸ್ಟಿಗೆ ಅವ್ಳಿಗೆ ೨೪ ಮುಗಿಯುತ್ತೆ. ಎಂತಾ ಸಣ್ಣ ವಯಸ್ಸು? ಯಾವ ಯಾವ ವಯಸ್ಸಿಗೆ ಯಾವ್ಯಾವ್ದು ಆಗ್ಬೇಕೋ ಅದಾದ್ರೇ ಚಂದ ಅಲ್ವಾ? ಇವ್ರಿಗಂತೂ ಅದೆಲ್ಲಾ ಅರ್ಥ ಆಗಲ್ಲ. ಅವಳಂತೂ ಬಿಡು. "ಅಮ್ಮಾ ನಾನು ೨೬ ವರ್ಷದ ವರೆಗೂ ಮದುವೆ ಆಗಲ್ಲ" ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ಬಿಟ್ಟಿದ್ದಾಳೆ. ಹೆಚ್ಚಿಗೆ ಒತ್ತಾಯ ಮಾಡಿದ್ರೆ "ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ" ಅಂತ ಅಳಕ್ಕೇ ಶುರು ಮಾಡಿ ಬಿಡ್ತಾಳೆ. ನಾನೇನು ಇವಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕ್ಬೇಕು ಅಂತಾ ಇಷ್ಟೆಲ್ಲಾ ಮಾಡ್ತಿದ್ದೀನಾ? ನನಗೂ ಮಗಳನ್ನು ಒಳ್ಳೆ ಮನೆಗೇ ಕೊಡ್ಬೇಕು ಅಂತ ಇಲ್ವಾ? ನಮ್ಗಿರೋದು ಒಂದೇ ಮಗಳು. ಅವಳು ಚೆನ್ನಾಗಿರ್ಲಿ ಅಂತಾನೇ ನಾವು ಇಷ್ಟೆಲ್ಲಾ ಮಾಡ್ತಾ ಇರೋದು? ಯಾರನ್ನಾರೂ ಲವ್ವು-ಗಿವ್ವು ಅಂತಾ ಮಾಡಿದಿಯೇನೇ, ಅಂತಾನೂ ನಂಬಿಸಿ ಕೇಳಿದಿನಿ. ಹಾಗೆಲ್ಲಾ ಇದ್ರೆ ಮೊದ್ಲೇ ಹೇಳ್ಬಿಡು. ಆಮೇಲೆ ಮೂರನೆಯವರಿಂದ ಗೊತ್ತಾಗೋದು ಬೇಡ ಅಂತಾನೂ ಹೇಳಿದೀನಿ. ಹಾಗೇನೂ ಇಲ್ಲಾ ಅಂತಾಳೆ. ನನಗಂತೂ ಸಾಕಾಗಿ ಹೋಗಿದೆ. ಅಪ್ಪ ಮಗಳು ಏನು ಬೇಕಾದ್ರೂ ಮಾಡ್ಕೊಳ್ಲಿ ಅಂತ ಬಿಟ್ಟು ಬಿಟ್ಟಿದ್ದೀನಿ. ಆದ್ರೂ ಕೆಲವೊಂದು ಸಲ ತಾಯಿ ಹೃದಯ, ಕೇಳಲ್ಲ.
ಮೊನ್ನೆ ಏನಾಯ್ತು ಅಂದ್ರೆ, ನಮ್ಮ ಯಜಮಾನರ ಕೊಲೀಗು ಇದ್ದಾರಲ್ಲ ಶ್ರೀನಿವಾಸಯ್ಯ, ಅವರ ತಂಗಿ ಮಗನ ಪ್ರಪೋಸಲ್ಲು ಬಂದಿತ್ತು. ಹುಡುಗಾ ನೋಡೋಕೆ ಸುಮಾರಾಗಿದಾನೆ. ಒಳ್ಳೆ ಮನೆತನ, ಒಳ್ಳೆ ಸಂಬಂಧ. ಚೆನ್ನಾಗಿ ಓದಿದಾನೆ ಬೇರೆ. ಸ್ವಂತ ಮನೆಯಿದೆ, ಕಾರೂ ಇದೆ. ನನಗಂತೂ ಯಾವ ತೊಂದರೆನೂ ಕಾಣ್ಲಿಲ್ಲ. ಅವರ ಮನೆಯವರಿಗೂ ಬಹಳ ಇಷ್ಟವಾದ ಹಾಗೇ ಇತ್ತು. ಆದರೆ ಇವ್ಳು ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ನಮ್ಮನೆಯವರಿಗೂ ಬಹಳ ಮನಸ್ಸಿದ್ದ ಹಾಗೆ ಕಾಣ್ತು ನನಗೆ. ಇವರೂ ಏನೇನೋ ಉಪದೇಶ ಮಾಡಿದ್ರು. ಕೊನೆಗೆ ಇವಳು ಹೇಳಿದ್ದು ಏನು ಗೊತ್ತಾ? "ಆ ಹುಡುಗಾ ಸ್ವಲ್ಪ ಕಪ್ಪಗಿದಾನೆ. ನನಗೆ ಬೇಡ" ಅಂತ. ಏನು ಹೇಳೋಣ ಇಂಥವರಿಗೆ? ರೂಪ, ಬಣ್ಣ ಎಲ್ಲಾ ನೋಡಿ ಯಾರಾದ್ರೂ ಮದ್ವೆ ಆಗ್ತಾರಾ? ಗುಣ ಅಲ್ವಾ ನೋಡ್ಬೇಕಾಗಿದ್ದು? ಅವಳು ತಪ್ಪಿಸಿಕೊಳ್ಳಕೆ ಹಾಗೆ ಹೇಳಿದ್ಳೋ, ಅಥವಾ ನಿಜವಾಗ್ಲೂ ಅವಳ ಮನಸ್ಸಲ್ಲಿ ಇದೇ ಇದೆಯಾ ಅಂತ ಹೇಗೆ ಹೇಳೋದು? ಆದ್ರೆ ಒಂದು ಮಾತ್ರ ನಿಜ, ಅವನು ಕಪ್ಪಗಿದಾನೆ ಅಂತ ರಿಜೆಕ್ಟ್ ಮಾಡಿದ್ರೆ ಮಾತ್ರ ಇವಳಿಗೆ ಸೊಕ್ಕು ಅಂತಾನೇ ಅರ್ಥ! ನಾನೇನೂ ಜಾಸ್ತಿ ಹೇಳಕ್ಕೆ ಹೋಗ್ಲಿಲ್ಲ. ಆಶ್ಚರ್ಯ ಅಂದ್ರೆ ಈಗ ಎರಡು ಮೂರು ದಿನದಿಂದ ಇವರೂ ಭಾಳ ಅಪ್ ಸೆಟ್ ಆಗಿದಾರೆ. ಈಗ ಅರ್ಥ ಆಗಿರ್ಬೇಕು ಅವರಿಗೆ ಮದ್ವೆ ಮಾಡೋದು ಎಷ್ಟು ಕಷ್ಟ ಅನ್ನೋದು.
ಅದೆಲ್ಲ ಬಿಟ್ಟಾಕಿ. ಅದೇನೋ ಅಂತಾರಲ್ಲಾ, ಹಣೇಲಿ ಬರ್ದಿರ್ಬೇಕು ಅಂತಾ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ. ಕಾಯ್ಬೇಕು ಅಷ್ಟೇ. ಆದ್ರೆ ಒಂದಂತೂ ನಿಜ. ಈ ಕಂಪ್ಯೂಟರ್ರು, ಇಂಟರನೆಟ್ಟು, ಅನ್ನೋ ವಸ್ತು ಮನೆಗೆ ಬಂದಾಗಿಂದ ಈಗಿನ ಕಾಲದ ಮಕ್ಕಳ ವರ್ತನೆನೇ ಚೇಂಜ್ ಆಗಿ ಹೋಗಿದೆ. ಇವಳೂ ಏನೂ ಕಮ್ಮಿಯಿಲ್ಲ. ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳ್ತಿದ್ದು ಸಾಲ್ದು ಅಂತ ರಾತ್ರೆ ೧೧, ೧೨ ಗಂಟೆ ತನಕಾನೂ ಆ ಕೀಬೋರ್ಡು ಕುಟ್ಟತಾ ಇರ್ತಾಳೆ. ಸಾಕು ಮಲಗಮ್ಮಾ ಅಂದ್ರೆ, ಅದ್ಯಾವುದೋ ಫ್ರೆಂಡ್ ಅಂತೆ, ಅಮೆರಿಕಾದಲ್ಲಿದಾರಂತೆ, ಅವನೋ, ಅವಳೋ ಯಾರದೋ ಜೊತೆ ಅದೇನೋ ಚಾಟಿಂಗ್ ಅಂತ ಮಾಡ್ತಾ ಇರ್ತಾಳೆ. ಹೊತ್ತು ಗೊತ್ತು ಒಂದೂ ಪರಿವೆನೇ ಇಲ್ಲ. ಅದರಲ್ಲಿ ಏನು ಬ್ರಹ್ಮಾಂಡ ತೋರಿಸ್ತಾರೋ ದೇವ್ರಿಗೇ ಗೊತ್ತು. ಒಂದಂತೂ ನಿಜ, ಇವೆಲ್ಲ ಬಂದ ಮೇಲೆ ಮಕ್ಕಳು ಇನ್ನೂ ಜಾಸ್ತಿ ಆಲಸಿಗಳಾಗ್ತಿದಾರೆ ಅಷ್ಟೇ. ಇಂಟರನೆಟ್ಟಲ್ಲೇ ಫ್ರೆಂಡ್ಸ್ ಮಾಡ್ಕೋಂತಾರೆ, ಹರಟೆ ಹೊಡೀತಾರೆ, ಇನ್ನೂ ಏನೇನೋ, ನಂಗದು ಸರಿಯಾಗಿ ಗೊತ್ತಾಗೋದೂ ಇಲ್ಲ. ಮೊನ್ನೆ ಅದ್ಯಾವುದೋ ಫ್ರೆಂಡೊಬ್ಬಳು ಮನೆಗೆ ಬಂದಿದ್ಲಲ್ಲಾ, ಇವ್ಳದ್ದೇ ವಯಸ್ಸು. ನಿನ್ನ ಕ್ಲಾಸ್ ಮೇಟೇನಮ್ಮಾ ಅಂತ ಕೇಳಿದ್ರೆ, ಇಲ್ಲಾ ಇವಳು ನನ್ನ ಆರ್ಕುಟ್ ಫ್ರೆಂಡ್ ಅಂತಾ ಅಂದಳು. ಇದ್ಯಾವ ತರ ಫ್ರೆಂಡ್ ಅಂತಾನೇ ನಂಗೆ ಗೊತ್ತಾಗ್ಲಿಲ್ಲ ನೋಡಿ. ಹಾಗಂದ್ರೆ ಏನೇ? ಅಂದ್ರೆ "ಅದೇ ಅಮ್ಮಾ. ಇಂಟರನೆಟ್ಟಲ್ಲಿ ಆರ್ಕುಟ್ ಅಂತ ಕಮ್ಯುನಿಟಿ ಇದೆಯಮ್ಮಾ, ಅದರಲ್ಲಿ ಫ್ರೆಂಡ್ ಆದವಳು, ನಿಂಗೆ ಗೊತ್ತಾಗಲ್ಲ ಬಿಡು" ಅಂದಳು. ಅದವಳ ಖಾಯಂ ಡೈಲಾಗು, "ಅಮ್ಮಾ ನಿಂಗೆ ಇವೆಲ್ಲಾ ಗೊತ್ತಾಗಲ್ಲ ಬಿಡಮ್ಮ" ಅಂತ. ಅವಳು ಹೇಳಿದ್ದು ನಿಜಾನೇ. ಈ ಕಾಲದವರ ಇಂಟರ್ ನೆಟ್ಟು, ಮೊಬೈಲು, ಐಪಾಡು ಇವೆಲ್ಲಾ ನಂಗಂತೂ ಒಂದೂ ಗೊತ್ತಾಗಲ್ಲ. ಅದರಲ್ಲೂ ಆ ಮೊಬೈಲನ್ನಂತೂ ಇನ್ನೂ ಸರಿಯಾಗಿ ಬಳಸಕ್ಕೆ ನಂಗಿನ್ನೂ ಬರಲ್ಲ. ಅದೇನೋ ಹಸಿರು ಬಟನಂತೆ, ರೆಡ್ ಬಟನಂತೆ, ಮೆಸೇಜು, ಎಸ್ಸೆಮೆಸ್ಸು, ಮಿಸ್ಸಡ್ ಕಾಲ್ಸು ಅಯ್ಯೋ ನಂಗಂತೂ ಬರೀ ಕನ್ಫೂಶನ್ನು. ಇನ್ನೂ ಮೊಬೈಲ್ ಬಳಸಕ್ಕೆ ಬರಲ್ಲ ಅಂತ ಅಪ್ಪ ಮಗಳು ಸೇರಿ ಯಾವಾಗಲೂ ರೇಗಿಸ್ತಾನೇ ಇರ್ತಾರೆ. ಇವರಂತೂ ಬಿಡಿ, ಸಂದರ್ಭ ಸಿಕ್ಕಿದಾಗಲೆಲ್ಲಾ ದಡ್ಡಿ, ದಡ್ಡಿ ಅಂತಾ ಹಂಗಿಸ್ತಾನೇ ಇರ್ತಾರೆ. ನನ್ನ ಮೈಯೆಲ್ಲಾ ಉರಿದುಹೋಗತ್ತೆ. ಅದೇನು ಜಾಸ್ತಿ ಓದಿದವ್ರು ಮಾತ್ರಾ ಬುದ್ಧಿವಂತರಾ? ಅಥವಾ ಈಗಿನ ಕಾಲದ ವಸ್ತುಗಳನ್ನೆಲ್ಲಾ ಉಪಯೋಗ್ಸಕ್ಕೆ ಬರದೋವ್ರು ಎಲ್ಲಾ ದಡ್ಡರಾ? ಅಷ್ಟೆಲ್ಲ ದಡ್ಡರಾದ್ರೆ ನಾವು ಸಂಸಾರ ಹೇಗೆ ನಡೆಸ್ಕೊಂಡು ಬಂದ್ವಿ? ಜಾಸ್ತಿ ಓದಿದ ಮಾತ್ರಕ್ಕೆ ಬುದ್ಧಿವಂತರು ಅಂತೇನೂ ರೂಲ್ಸ್ ಇಲ್ಲ. ಈಗ ಇವ್ರನ್ನೇ ತಗೊಳ್ಳಿ. ಎಷ್ಟು ಮಹಾ ಬುದ್ಧಿವಂತರು ಇವ್ರು? ನಂಗೊತ್ತಿಲ್ವಾ ಇವ್ರ ಭೋಳೇ ಸ್ವಭಾವ? ಯಾರೇ ಒಂದು ಸ್ವಲ್ಪ ದುಡ್ಡು ಬೇಕು ಅಂತ ಹಲ್ಲುಗಿಂಜಿದ್ರೂ ಹಿಂದೆ ಮುಂದೆ ನೋಡ್ದೇ ಕೊಟ್ಟುಬಿಡೋರು. ಕೈಯಲ್ಲಂತೂ ಒಂಚೂರೂ ದುಡ್ಡು ನಿಲ್ತಾ ಇರ್ಲಿಲ್ಲ. ನಾನು ಸ್ವಲ್ಪ ತಲೆ ಓಡಿಸಿ, ಸಾಧ್ಯವಾದಾಗ್ಲೆಲ್ಲಾ ಇವರ ಕೈ ಹಿಡಿದು, ಅಲ್ಲಲ್ಲಿ ಉಳ್ಸಿ, ಇವರ ದುಂದು ವೆಚ್ಚಕ್ಕೆಲ್ಲಾ ಕಡಿವಾಣ ಹಾಕಿ, ಕಾಡಿ ಬೇಡಿ ಈಗೊಂದು ೧೦ ವರ್ಷದ ಹಿಂದೆನೇ ಎರಡು ೩೦-೪೦ ಸೈಟ್ ತಗೊಳ್ಳೊ ಹಾಗೆ ಮಾಡದೇ ಇದ್ದಿದ್ರೆ, ಬೆಂಗಳೂರಲ್ಲಿ ಸ್ವಂತ ಮನೆ ಅಂತ ಮಾಡಿ, ಮಗಳನ್ನು ಇಂಜಿನಿಯರ್ ಓದ್ಸಕ್ಕೆ ಆಗ್ತಿತ್ತಾ? ಅದೂ ಇವ್ರಿಗೆ ಬರೋ ಸಂಬಳದಲ್ಲಿ? ಈಗ ನೀವೇ ಹೇಳಿ ಯಾರು ದಡ್ಡರು, ಯಾರು ಬುದ್ಧಿವಂತರು ಅಂತಾ? ಇನ್ನೊಂದು ಸಲ ಹಂಗಿಸ್ಲಿ, ಸರಿಯಾಗಿ ಹೇಳ್ತಿನಿ, ಬಿಡಲ್ಲ.
ಅಯ್ಯೋ, ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ. ಆಗ್ಲೇ ೪.೩೦ ಆಗೋಯ್ತು. ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ. ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ. ಅದೆಂಥದೋ "ಸಾಲ್ಸಾ" ನೋ "ಸಲ್ಸಾ"ನೋ, ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ, ಅದಕ್ಕೆ ಹೋಗ್ತಾಳೆ. ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ. ಇಂದಿರಾನಗರಕ್ಕೇ ಹೋಗ್ಬೇಕು. ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ. ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ. ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ, ಅದಕ್ಕೆ ಹೋಗಮ್ಮಾ ಅಂದ್ರೆ "ಅಮ್ಮಾ ಅವೆಲ್ಲ ಹಳೆ ಕಾಲದವು, ನಾನು ಕಲಿಯಲ್ಲ" ಅಂಥಾಳೆ. ಇನ್ನೇನು ಹೇಳೋದು? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ. ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ. ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ. ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ. ಒಬ್ಬನೇ ಮಗ, ಚೆನ್ನಾಗಿ ಓದದಾ, ಅಮೇರಿಕಕ್ಕೆ ಹೋದ. ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ. ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ. ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ. ಇವ್ರಿಗೋ ಆರೋಗ್ಯನೇ ಸರಿಯಿರಲ್ಲ. ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು,ಬಿಟ್ರೆಷ್ಟು? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ. ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ, ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ.
ಸಾಕು ಮಾಡಮ್ಮಾ ನಿನ್ನ ಪ್ರಲಾಪ, ನಮಗೇ ಹೊದೆಯಷ್ಟು ಕಷ್ಟ ಇದೆ ಅಂತೀರಾ? ಅಯ್ಯೋ, ನಿಮಗೂ ನನ್ನ ತರ ಬೆಳೆದು ನಿಂತ ಮಗಳಿದ್ರೆ ಗೊತ್ತಾಗಿರೋದು ನನ್ನ ಸಂಕಟ ಏನು ಅಂತಾ. ಹೋಗ್ಲಿ ಬಿಡಿ, ಅವರವರು ಪಡ್ಕೊಂಡು ಬಂದಿದ್ದು, ಅನುಭವಿಸ್ಬೇಕು. ಅನುಭವಿಸ್ತೀನಿ ಬಿಡಿ. ಇನ್ನೇನು ಇವರು ಬರೋ ಹೊತ್ತಾಯ್ತು. ಕಾಫಿ ಮಾಡ್ಬೇಕು. ಬಂದ ಕೂಡ್ಲೇ ಕೈಗೆ ಕಾಫಿ ಸಿಗದೇ ಹೋದ್ರೆ ಆಮೇಲೆ ಇಡೀ ದಿನ ಕೂಗ್ತಾ ಇರ್ತಾರೆ. ಇನ್ನೊಮ್ಮೆ ಯಾವಾಗಲಾದ್ರೂ ಸಿಕ್ತೀನಿ, ಸುದ್ದಿ ಹೇಳೋಕೆ ಬಹಳಷ್ಟಿದೆ. ಬರ್ಲಾ? ಅಯ್ಯೋ, ಹೇಳೊಕೇ ಮರ್ತೋಗಿತ್ತು ನೋಡಿ. ನಿಮಗೆ ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಪ್ಲೀಸ್ ಹೇಳ್ರೀ. ಯಾರಿಗೆ ಗೊತ್ತು, ಇವಳಿಗೆ ಇಷ್ಟ ಆದ್ರೂ ಆಗ್ಬಹುದು. ನಮ್ಮ ಪ್ರಯತ್ನ ಅಂತೂ ನಾವು ಮಾಡೋದು. ಮುಂದೆಲ್ಲಾ ಹಣೇಲಿ ಬರದಾಂಗೆ ಆಗತ್ತೆ. ಅಲ್ವಾ?
Monday, June 23, 2008
ಈ ಸಂಭಾಷಣೆ...
ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು
ಅರೆಪಾವು ತುಂಟತನ, ಆಗಾಗ ಥೇಟ್ ಮಗು
ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು
ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು
ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ
ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ
ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ
ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!
ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು
"ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು
ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು
ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು
ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ
ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ,
ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ
ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ
Thursday, April 24, 2008
ಈರನ ತರ್ಕವೂ... ಎಲೆಕ್ಸನ್ನೂ.....
ಸಪೂರ ಕಾಲುಗಳ ಈರ, ತೆಂಗಿನ ಮರ ಹತ್ತಿ ಕಾಯಿ ಕಿತ್ತು ಕೆಳಗೆ ಹಾಕುವುದನ್ನು ನೋಡುವುದೇ ಒಂದು ಮಜ. ಎರಡೂ ಕಾಲುಗಳಿಗೆ ಹಗ್ಗದ ತಳೆಯೊಂದನ್ನು ಸಿಕ್ಕಿಸಿ, ವೇಗವಾಗಿ ಮರ ಹತ್ತಿ, ನೋಡು ನೋಡುತ್ತಿದಂತೆಯೇ ಕಾಯಿಗಳನ್ನು ಕಿತ್ತು ಕೆಳಕ್ಕೆ ಎಸೆದು, ಸರ್ರನೇ ಮರದಿಂದ ಜಾರಿ ನೆಲಕ್ಕಿಳಿಯುತಿದ್ದ ಪರಿಯೇ ನನಗೊಂದು ಬೆರಗು. ಎಷ್ಟು ವರ್ಷಗಳಿಂದ ಇದೇ ಕೆಲಸವನ್ನು ಮಾಡುತ್ತಿದ್ದನೋ ಅವನು? ಎಂತಾ ಎತ್ತರದ ಮರವಾದರೂ ಲೀಲಾಜಾಲವಾಗಿ ಹತ್ತಬಲ್ಲ ಚಾಕಚಕ್ಯತೆ ಅವನಲ್ಲಿತ್ತು.
ಅವನ ಮತ್ತೊಂದು ವಿಶೇಷತೆ ಅಂದರೆ ಅವನ ಬಾಯಿ. ಬಹುಷಃ ಮಲಗಿದ್ದಾಗ ಮಾತ್ರ ಅದಕ್ಕೆ ವಿಶ್ರಾಂತಿ ಕೊಡುತ್ತಿದ್ದ ಅವನು. ಯಾವುದೇ ಕೆಲಸ ಮಾಡುವಾಗಲೂ ಮಾತಾಡುತ್ತಲೇ ಇರಬೇಕು. ಅಪ್ಪ ಆಗಾಗ "ಈರಾ, ನಿಂದು ಮರದ್ದ ಬಾಯಾಗಿದ್ರೆ ಇಷ್ಟೊತ್ತಿಗೆ ವಡೆದು ಹೋಗ್ತಿತ್ತು ನೋಡು" ಅಂತ ಛೇಡಿಸುತ್ತಿದ್ದರು. ಅದಕ್ಕೆಲ್ಲಾ ಅವನು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. "ಇರಬೋದ್ರಾ" ಎಂದಂದು ಮತ್ತೆ ಅವನ ಕಾಯಕವನ್ನು ಮುಂದುವರೆಸುತ್ತಿದ್ದ. ನಮಗೆಲ್ಲ ಅವನ ವಾಚಾಳಿತನ ತಮಾಷೆಯ ವಿಷಯವಾಗಿತ್ತು. ಆಗಾಗ ಯಾವ್ಯಾವ್ದೋ ವಿಷಯಗಳನ್ನು ಎತ್ತಿ, ಅವನ ಬಾಯಿಂದ ಉದುರುವ ಅಣಿಮುತ್ತುಗಳನ್ನು ಕೇಳಿ ನಗಾಡಿಕೊಳ್ಳುತ್ತಿದ್ದೆವು.
ಹಬ್ಬದ ದಿನ ಬೆಳಿಗ್ಗೆ ಜಗಲಿಯಲ್ಲಿ ಖುರ್ಚಿ ಹಾಕಿಕೊಂಡು ಕುಳಿತು ಪೇಪರ ಓದುತ್ತಿದ್ದವನಿಗೆ ಈರ ಮನೆ ಕಡೆ ಬರುತ್ತಿರುವುದು ಕಂಡಿತು. ಸಮಯ ನೋಡಿದರೆ ಇನ್ನೂ ಎಂಟು ಗಂಟೆ. ಅವನು ಇನ್ನೂ ಸ್ವಲ್ಪ ದೂರದ್ದಲ್ಲಿದ್ದಂತೆಯೇ ನಾನು "ಎನೋ ಈರಾ, ಇಷ್ಟು ಬೇಗಾ ಬಂದು ಬಿಟ್ಟಿದ್ದೀಯಾ" ಎಂದು ಕೇಳಿದೆ. ಹತ್ತಿರಾ ಬಂದವನೇ "ಓ, ಮರಿ ಹೆಗಡೇರು....ಹಬ್ಬಕ್ಕೆ ಮನೆಗೆ ಬಂದವ್ರೆ. ಬೆಂಗ್ಳೂರಿಂದಾ ಯಾವಾಗಾ ಬಂದ್ರಾ?" ಎಂದು ಕೇಳಿದ. ನಾನು "ನಿನ್ನೆ" ಎಂದು ಹೇಳಿ ಸುಮ್ಮನಾದೆ. "ಹೆಗ್ಡೇರು ಕಾಯಿ ಕೊಯ್ಯಕ್ಕೆ ಬಾ ಅಂದಿದ್ರು. ಮುಗಸಕಂಡೇ ಭಟ್ಟರ ಮನೆಗೆ ಹೋಗವಾ ಅಂತಾ ಬೆಗ್ಗನೇ ಬಂದೆ. ಹೆಗಡ್ರಿಲ್ಲ್ರಾ? ಎಂದು ಪ್ರಶ್ನೆ ಹಾಕಿದ. ನಾನು ಒಳಗೆ ಹೋಗಿ, ಯಾವ್ಯಾವ ಮರದ್ದು ಕಾಯಿ ಕೀಳಿಸುವುದು ಎಂದು ತಿಳಿದುಕೊಂಡು, ಈರನ ಹತ್ತಿರ "ನಡ್ಯಾ, ನಾನೇ ಬರ್ತೆ ಇವತ್ತು. ನಿನ್ನ ಹತ್ರಾ ಮಾತಾಡದ್ದೇ ಬಾಳ ದಿನಾ ಆಯ್ತು" ಎಂದು ಕತ್ತಿ, ತಳೆ, ಗೋಣಿಚೀಲ ಹಿಡಿದುಕೊಂಡು ಹೊರಟೆ. "ಈ ಮುದಕನ ಹತ್ರ ಎಂತಾ ಇರ್ತದ್ರಾ ಮಾತಾಡದು? ನೀವೇ ಹೇಳ್ಬೇಕು ಬೆಂಗ್ಳೂರಲ್ಲಿದ್ದವ್ರು" ಎಂದವನೇ ಬಾಯಲ್ಲಿದ್ದ ಎಲೆಯಡಿಕೆಯನ್ನು ಉಗಿದು ನನ್ನ ಜೊತೆಗೆ ಮಾತಾಡಲು ಅನುವಾದ. ಬೆಳಿಗ್ಗೆ ಬೆಳಿಗ್ಗೆನೇ ಒಳ್ಳೆ ಟೈಮ್ ಪಾಸ್ ಆಯ್ತು ಅಂತ ನನಗೆ ಒಳಗೊಳಗೇ ಸಂತೋಷವಾಯ್ತು.
ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಈರ ಜಾಸ್ತಿ ಮಾತಾಡುವ ಇರಾದೆಯನ್ನೇನೂ ತೋರಿಸಲಿಲ್ಲ. ನಾನೇ ಯಾವ್ಯಾವ್ದೋ ವಿಷಯಗಳನ್ನು ಎತ್ತಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಎಲ್ಲದಕ್ಕೂ ಅವನದು ಚುಟುಕಾದ ಉತ್ತರ.ಇವತ್ಯಾಕೋ ಅವನ ಮೂಡ್ ಸರಿಯಿಲ್ಲದಿರಬಹುದು ಎಂದು ನಾನೂ ಜಾಸ್ತಿ ಮಾತಾಡದೇ ಅವನ ಕೆಲಸ ಮುಗಿಯುವವರೆಗೂ ಸುಮ್ಮನಿದ್ದೆ. ಕೆಡವಿದ ಕಾಯಿಗಳೆಲ್ಲವನ್ನೂ ಚೀಲಕ್ಕೆ ತುಂಬಿ ಈರನ ಬೆನ್ನಿಗೆ ಹೊರಿಸಿ ನಾನು, ಅವನು ಮನೆ ಕಡೆ ಪಾದ ಬೆಳೆಸಿದೆವು. ಕೊಟ್ಟಿಗೆ ಹತ್ತಿರ ಚೀಲವನ್ನು ಧೊಪ್ಪನೆ ಇಳಿಸಿ, ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತವನೇ ಈರ, "ಹೆಗ್ಡೇರೇ, ಎಲೆಕ್ಸನ್ನು ಬಂತಲ್ರಾ, ಈ ಸಲ ಮುಖ್ಯಮಂತ್ರಿ ಯಾರಾಗ್ತಾರ್ರಾ?" ಎಂದು ಕೇಳಿಯೇ ಬಿಟ್ಟ. ನಾನು ನಿಂತಲ್ಲಿಯೇ ಎಡವಿ ಬೀಳೋದಂದೇ ಬಾಕಿ. ಬೆಳಿಗ್ಗೆ ಬೆಳಿಗ್ಗೇನೇ ಇಂಥ ಗಹನ ಗಂಭೀರ, ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಈರನ ಬಾಯಿಂದಂತೂ ನಿರೀಕ್ಷಿಸಿರಲಿಲ್ಲ. ಏನು ಉತ್ತರ ಕೊಡಬೇಕೆಂದೇ ನನಗೆ ತೋಚಲಿಲ್ಲ. ನಾನು ನೇರವಾಗಿ ಉತ್ತರಿಸಿದರೆ, ಈ ಮುದುಕನ ತಲೆಯೊಳಗಿರಬಹುದಾದ ಅನೇಕ ಸ್ವಾರಸ್ಯಕರ ವಿಚಾರಗಳು ತಪ್ಪಿಹೋಗಬಹುದು ಎಂದೆಣಿಸಿ, ಸ್ವಲ್ಪ ನಿಧಾನಕ್ಕೆ "ನಾನೆಂತಾ ಜ್ಯೋತಿಷಿನೆನಾss ಯಾರು ಮುಖ್ಯಮಂತ್ರಿ ಆಗ್ತಾರೆ ಹೇಳಕ್ಕೆ? ನಂಗೆಂತಾ ಗೊತ್ತು? ನಿಂಗೆ ಯಾರು ಆಗ್ಬೇಕು ಅಂತದೇ?" ಎಂದು ಅವನಿಗೇ ಮರುಪ್ರಶ್ನೆ ಹಾಕಿದೆ. ಸಟ್ಟನೇ ಬಂತು ಉತ್ತರ. "ನೀವು ನನ್ನಾ ಕೇಳಿದ್ರೆ ನಮ್ಮ ಬಂಗಾರಪ್ಪನೋರು ಆಗ್ಬೇಕು ನೋಡಿ ಮತ್ತೆ ಇನ್ನೊಂದು ಸರ್ತಿ.ಚೊಲೋ ಇರ್ತದೆ" ಎಂದ. ಅದೇನೂ ನನಗೆ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಈರನ ಮನೆಯವರೆಲ್ಲರೂ ಬಂಗಾರಪ್ಪನ ಪರಮ ಭಕ್ತರು. ಬಂಗಾರಪ್ಪನೋರು ಮುಖ್ಯಮಂತ್ರಿ ಆದಾಗ ಈರನ ಮಗನಿಗೊಂದು ಅಗಸೇಬಾಗಿಲಲ್ಲಿ ಸಣ್ಣ ಪಾನ್ ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿದ್ದರು. ಅವನ ಮನೆ ನಡೆಯಲು ಆ ಪಾನ್ ಅಂಗಡಿ ಎಷ್ಟೋ ರೀತಿಯಲ್ಲಿ ಸಹಾಯ ಮಾಡಿದೆ. ಹಾಗಾಗಿ ಈರನಿಗೆ ಮತ್ತೆ ಬಂಗಾರಪ್ಪನವರೇ ಮುಖ್ಯಮಂತ್ರಿ ಆಗಲಿ ಎಂದನ್ನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ಯಾವಾಗ ಕೇಳಿದ್ದರೂ ಬಹುಷಃ ಅವನಿಂದ ಅದೇ ಉತ್ತರ ಸಿಗುತ್ತಿತ್ತು.
"ಅಲ್ದಾ, ಬಂಗಾರಪ್ಪನವರಿಗೆ ವಯಸ್ಸಾಗ್ಲಿಲ್ಲೇನಾ ಈಗಾ? ಈ ವಯಸ್ಸಲ್ಲಿ ಮುಖ್ಯಮಂತ್ರಿ ಆದರೇ ಅವರ ಹತ್ರಾ ಎಂತಾ ಮಾಡಕ್ಕೇ ಆಗತ್ತಾ?" ನಾನು ಇನ್ನೂ ಕೆದಕಿದೆ. "ಹ್ವಾಯ್, ವಯಸ್ಸಾದ್ರೆ ಎಂಥಾ ಆಯ್ತು? ಎಷ್ಟು ಗಟ್ಟಿ ಅದಾರೆ ಅವ್ರು. ಈ ವಯಸ್ಸಲ್ಲು ಬೇಕಾದ್ರೆ ಡೊಳ್ಳು ಕಟ್ಕೊಂಡು ಕುಣಿತಾರೆ ಗೊತ್ತಾ? ಅಲ್ಲಾ ನನ್ನ ನೋಡಿ ಬೇಕಾರೆ. ನಾನೂ ಬೇಕಾರೆ ಡೊಳ್ಳು ಕುಣಿತೆ ಗೊತ್ತಾ ನಿಮಗೆ? ಕಾಲು ಸ್ವಲ್ಪ ತೊಂದ್ರೆ ಕೊಡ್ತದೆ ಹೇಳದು ಬಿಟ್ರೆ ಆರಾಮಾಗೇ ಇದ್ದೆ ನಾನೂವಾ. ಮನೆ ನಡ್ಸಕಂಡು ಹೋಗ್ತಾ ಇಲ್ವಾ ಈಗ? ಮನೆ ನಡೆಸ್ದಾಂಗೆಯಾ ರಾಜ್ಯ ಆಳೋದು.ವಯಸ್ಸಾಯ್ತು ಹೇಳಿ ಮನ್ಸ್ರನ್ನ ಅಸಲಗ್ಯ ಮಾಡ್ಬೇಡಿ ನೀವು ಹಾಂಗೆಲ್ಲಾ" ಎಂದು ಅವನದೇ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಅಣಕಿಸುವಂತೆ ಹೇಳಿದ. ನಾನು ಈಗ ಧಾಟಿ ಬದಲಾಯಿಸಿ "ಹೋಗ್ಲಿ ಬಂಗಾರಪ್ಪನವ್ರು ಈಗ ಯಾವ ಪಕ್ಷದಲ್ಲಿದಾರೆ ಹೇಳಾದ್ರೂ ಗೊತ್ತನಾ ನಿಂಗೆ?" ಎಂದು ಕೇಳಿದೆ. "ಅದ್ನೆಲ್ಲಾ ಕಟ್ಕಂಡು ನಮಗೆಂತಾ ಆಗ್ಬೇಕಾಗದೆ? ಅವ್ರು ಯಾವ ಪಕ್ಷದಲ್ಲಿದ್ರೆಂತಾ? ನಮ್ಮ ಮಗ ಹೇಳ್ತಾ ಯಾವ ಚಿತ್ರಕ್ಕೆ ವೋಟ್ ಹಾಕ್ಬೇಕು ಹೇಳಿ. ಅದಕ್ಕೆ ಹಾಕಿ ಬಂದ್ರಾಯ್ತು ಅಷ್ಟೇಯಾ" ಅಂದ. ಇನ್ನು ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿತು. ಆದರೂ ಇಷ್ಟಕ್ಕೆ ಬಿಟ್ಟ್ರೆ ಎಂತಾ ಚಂದ ಎನ್ನಿಸಿ "ವಯಸ್ಸಾದವ್ರೆಲ್ಲಾ ರಾಜ್ಯ ಚೊಲೋ ಆಳ್ತಾರೆ ಅಂದ್ರೆ ದೇವೇಗೌಡ್ರೇ ಮುಖ್ಯಮಂತ್ರಿ ಆಗ್ಬಹುದಲ್ಲಾ?" ಎಂಬ ಹೊಸಾ ತರ್ಕ ಮುಂದಿಟ್ಟೆ. ಈರನಿಗೆ ಯಾಕೋ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣ್ತು. "ನೀವು ಅವ್ರ ಸುದ್ದಿ ಮಾತ್ರ ಎತ್ಬೇಡಿ ನನ್ನತ್ರಾ" ಎಂದ. ಅಷ್ಟರಲ್ಲಿ ಅಮ್ಮ ಒಳಗಿಂದ ಬಾಳೆ ಎಲೆಯಲ್ಲಿ ಅವಲಕ್ಕಿ, ಒಂದು ಲೋಟ ಚಾ ಹಿಡಿದುಕೊಂಡು ಬಂದು ಕಟ್ಟೆ ಮೇಲಿಟ್ಟರು. ಈರ ಬಂದ ಸಿಟ್ಟನೆಲ್ಲ ಹಾಕಿಕೊಂಡಿದ್ದ ಎಲೆಯಡಿಕೆಯ ಮೇಲೆ ತೀರಿಸುವಂತೆ, ಅದನ್ನು ಪಕ್ಕಕ್ಕೇ ಜೋರಾಗಿ ಉಗುಳಿ, "ಈಗ ಆಸ್ರಿಗೆ ಎಲ್ಲಾ ಬ್ಯಾಡ್ರಾ ಅಮಾ, ಮನ್ಲೇ ಮಾಡ್ಕಂಡು ಬಂದೆ. ನೀವು ಒಂದೆರಡು ಅಡಿಕೆ ಇದ್ರೆ ಕೊಡಿ, ಕವಳ ಸಂಚಿ ಖಾಲಿಯಾಗೋಗದೆ" ಎಂದ. ಅಮ್ಮ ಗೊಣಗುತ್ತಾ "ನಿಂಗೆ ಅಡಿಕೆ ಕೊಟ್ಟು ಪೂರೈಸೈಕಾಗಲ್ಲಾ ನೋಡು. ದಿನಕ್ಕೆ ಸಾವ್ರ ಸಲ ಕವಳ ಹಾಕ್ತೆ. ನಂಗೆ ಬೇಕಾದಷ್ಟು ಕೆಲ್ಸ ಅದೆ. ಈಗ ಅಟ್ಟ ಹತ್ತಿ ಮತ್ತೆ ಅಡಕೆ ತರ್ಲಿಕ್ಕೆ ನನ್ನ ಕೈಯಲ್ಲಂತೂ ಆಗಲ್ಲ" ಎಂದು ಹೇಳಿ ವಾಪಸ್ ಹೋದರು. ಅಮ್ಮ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಅವನು ಹೊಸದಾಗಿ ಯಾವಾಗ ಎಲೆಯಡಿಕೆ ಹಾಕಿಕೊಂಡಿದ್ದನೋ, ನನಗಂತೂ ಗೊತ್ತೇ ಆಗಿರಲಿಲ್ಲ. ಈರನಿಗ್ಯಾಕೋ ಕೊಟ್ಟ ಅವಲಕ್ಕಿ, ಚಾ ಗಿಂತಲೂ ಅಡಿಕೆಯೇ ಮೇಲೆಯೇ ಜಾಸ್ತಿ ಒಲವಿದ್ದ ಹಾಗೇ ಕಂಡಿತು. ಅವನು ನನ್ನನ್ನು ಮತ್ತೆ ಅದರ ಅವಶ್ಯಕತೆಯ ಬಗ್ಗೆ ಕೊರೆಯುವುದಕ್ಕಿಂತ ಮುಂಚೆ ನಾನೇ ಎದ್ದು ಹೋಗಿ ಡಬ್ಬದಿಂದ ೪ ಅಡಿಕೆ ತಂದು ಅವನ ಕೈಗೆ ಹಾಕಿದೆ.
ಈರ ಅವಲಕ್ಕಿ ಖಾಲಿ ಮಾಡುತ್ತಿರುವಂತೆಯೇ ನಾನು ಮತ್ತೆ ಕೇಳಿದೆ. "ಅಲ್ವಾ, ದೇವೇಗೌಡ್ರು ಮುಖ್ಯಮಂತ್ರಿ ಆಗೋದು ಬ್ಯಾಡ ಹೇಳಿ ಎಂತಕ್ಕೆ ಹೇಳಿ ಹೇಳಿಲ್ವಲ್ಲಾ ನೀನು?". "ಅದು... ಈ ಸರಾಯಿ ಮಾರೋದು ನಿಲ್ಲಿಸ್ದವ್ರು ದೇವೇಗೌಡ್ರೇ ಅಲ್ವ್ರಾ. ಅದಕ್ಕೆ ಬೇಡ ಅಂದೆ" ಅಂದ. ಅವನ ಯೋಚನೆಗಳಿಗೆ ಇಂಥ ಆಯಾಮಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ. "ಥೋ, ಮಾರಾಯ..ಸಾರಾಯಿ ಮಾರೋದ್ನಾ ನಿಲ್ಲಿಸ್ದವ್ರು ದೇವೇಗೌಡ್ರು ಅಲ್ಲ ಮಾರಾಯ. ಬಿಜೆಪಿಯವ್ರು" ಎಂದೆ. "ಯಾರಾದ್ರೆ ಎಂತದು? ಒಟ್ನಲ್ಲಿ ದೇವೇಗೌಡ್ರ ಮಗ ಮುಖ್ಯಮಂತ್ರಿ ಆಗಿದ್ದಾಗ ಅಲ್ದಾ ನಿಲ್ಸಿದ್ದು.ಒಟ್ನಲ್ಲಿ ನಮ್ಮ ಟೈಮ್ ಸರಿಯಿರ್ಲಿಲ್ಲ.ಅದಕ್ಕೆಯಾ ಬಂಗಾರಪ್ನೋರಿಗೆ ವೋಟ್ ಹಾಕದು ನಾನು" ಎಂದ. ಪ್ಯಾಕೆಟ್ ಸರಾಯಿ ಮಾರೋದು ನಿಲ್ಲಿಸಿದಕ್ಕೂ, ಈರನ ಟೈಮ್ ಸರಿಯಿಲ್ಲದಿರದಕ್ಕೂ ರಿಲೇಟ್ ಮಾಡಲು ನನಗಂತೂ ಬಹಳ ಕಷ್ಟವಾಗಲಿಲ್ಲ. ದಿನವೂ ಸಂಜೆ ೭ ಗಂಟೆ ಆಗುತ್ತಿದಂತೆಯೇ ಈರ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಉತ್ತರಾಭಿಮುಖವಾಗಿ ನೀಲೆಕಣಿ ಕಡೆಗೆ ಹೋಗುವುದು ಯಾವ ಗನಗಂಭೀರ ಉದ್ದೇಶಕ್ಕೆ ಎನ್ನುವುದು ಇಡೀ ಊರಿಗೆ ಗೊತ್ತು.ಇಂತಿಪ್ಪ ಈರನಿಗೆ ಧಿಡೀರ್ ಎಂದು ಪ್ಯಾಕೆಟ್ ಸಾರಾಯಿ ನಿಷೇಧ ಮಾಡಿಬಿಟ್ಟರೆ ಎಷ್ಟು ಕಷ್ಟವಾಗಿರಲಿಕ್ಕಿಲ್ಲ?. ಆ ಕಾರ್ಯಕ್ಕೆ ಮುಂದಾದ ಜನರನ್ನು ಅವನು ಜೀವಮಾನದಲ್ಲಿ ಕ್ಷಮಿಸುವುದು ಸುಳ್ಳು. ಈ ವಿಷಯ ಮತ್ತೆ ಮುಂದುವರಿಸಿದರೆ ಈರನ ಮೂಡ್ ಮತ್ತೆ ಯಾವ ಕಡೆ ತಿರುಗುತ್ತದೆಯೋ ಎಂದು ಹೆದರಿ ನಾನು ಮಾತುಕತೆಯನ್ನು ಅಲ್ಲಿಯೇ ನಿಲ್ಲಿಸಿಬಿಟ್ಟೆ.
ಆದರೆ ಈರ ನಿಲ್ಲಿಸುವ ಲಕ್ಷಣವಿರಲಿಲ್ಲ." ನೀವು ಬರೀ ನನ್ನ ಕೇಳಿದ್ದೇ ಆಯ್ತು. ನೀವು ಯಾರಿಗೆ ವೋಟ್ ಹಾಕ್ತ್ರಿ? ಬಂಗಾರಪ್ಪನವ್ರಿಗೇ ಹಾಕಿ" ಎಂದ. ನಾನು ತಲೆ ಆಡಿಸಿದೆ. ಇನ್ನೇನೂ ಹೇಳಲು ಬಾಯಿತೆರೆದರೆ ನನ್ನ ಮಾತುಗಳೆಲ್ಲವೂ ನನಗೇ ತಿರುಗುಬಾಣವಾಗುವ ಸಾಧ್ಯತೆಯಿತ್ತು. "ಎಲೆಕ್ಷನ್ ದಿನಾ ನಿಮ್ಗೆ ರಜೆ ಅದ್ಯಾ? ವೋಟ್ ಹಾಕಕ್ಕೆ ಬೆಂಗ್ಳೂರಿಂದ ಬರದು ಹೌದಾ?" ಎಂದು ಕೇಳಿದ. "ಹ್ಮ್...ನೋಡಣಾ. ಬರ್ಬೇಕು ಅಂತದೆ. ಎಂತಾ ಆಗ್ತದೆ ಗೊತ್ತಿಲ್ಲ. ಈ ಎಲೆಕ್ಷನ್ ನಾಟಕಾ ಎಲ್ಲ ನೋಡಿದ್ರೆ ಯಾರಿಗೂ ವೋಟ್ ಹಾಕದೇ ಬ್ಯಾಡ ಅನ್ನಸ್ತದೆ ಮಾರಾಯಾ" ಎಂದು ತುಸು ಬೇಸರದ ಧ್ವನಿಯಲ್ಲೇ ಹೇಳಿದೆ. "ಹ್ವಾಯ್, ನೀವು ಹಿಂಗೆ ಹೇಳಿದ್ರೆ ಹೆಂಗ್ರಾ? ನಿಮ್ಮಂಥ ಹುಡುಗ್ರು, ಓದ್ದವ್ರು ವೋಟ್ ಹಾಕ್ಲೇ ಬೇಕ್ರಾ. ನಾವಾರೇ ಓದದವ್ರು, ಜಾಸ್ತಿ ತೆಳಿಯದಿಲ್ಲಾ. ನೀವು ಪ್ರಪಂಚ ಕಂಡವ್ರು. ನಿಮಗೆ ಗೊತ್ತಿರ್ತದೆ ಅಲ್ರಾ, ಯಾರಿಗೆ ವೋಟ್ ಹಾಕ್ಬೇಕು, ಯಾರಿಗೆ ಹಾಕ್ಬಾರ್ದು ಅಂತೆಲ್ಲಾ? ನೀವು ವಿದ್ಯಾವಂತರು ವೋಟ್ ಹಾಕ್ದೇ ಇದ್ದ್ರೆ ಎಂಥೆಂತದೋ ಜನ ಆರ್ಸಿ ಬರ್ತಾರೆ. ವೋಟ್ ಹಾಳು ಮಾಡ್ಬೇಡ್ರಿ ಮಾರಾಯ್ರಾ. ರಜೆ ಹಾಕಾದ್ರೂ ಬಂದು ವೋಟ್ ಮಾಡಿ ಹೋಗಿ" ಎಂದು ಕಳಕಳಿಯ ಧ್ವನಿಯಲ್ಲಿ ಹೇಳಿದ. ಈರನಿಗಿದ್ದ ಕಳಕಳಿ ಎಲ್ಲ ವಿದ್ಯಾವಂತರಲ್ಲೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ನನಗೆ ಅನ್ನಿಸಿತು. ಈರ ಮುಂದುವರಿಸಿ " ನಾನು ಭಟ್ಟರಿಗೂ ಹೇಳ್ದೆ. ಭಟ್ಟ್ರ ಮಗಳು ಕಾಲೇಜಿಗೆ ಹೋಗ್ಲಿಕ್ಕೆ ಹಣಕಿ ೩ ವರ್ಷ ಆಗ್ತಾ ಬಂತು. ಅವ್ರೂ ವೋಟ್ ಹಾಕ್ಬಹುದೇನಪಾ. ಎರಡು ತಿಂಗ್ಳ ಹಿಂದೆ ಹೀಪನಳ್ಳಿ ಶಾಲೆಲೇ ಅದೆಂತೋ ಹೆಸರು ಬರೆಸ್ಕಂಡು ಹೋದ್ರು. ನಮ್ಮ ಗೋವಿಂದಂಗೆ ಈ ವರ್ಷ ೧೮ ತುಂಬ್ತು. ಅವ್ನ ಕಳ್ಸಿಕೊಟ್ಟಿದ್ದೆ. ಈಗ ಮೊನ್ನೆ ಮೊನ್ನೆ ಅದೆಂತೋ ಮಶಿನ್ನಾಗೆ ಫೋಟೋ ತೆಗಸಿ ಒಂದು ಕಾರ್ಡ್ ಕೊಟ್ರಪ್ಪಾ. ಅವ್ನುವಾ ಈ ಸಲ ವೋಟ್ ಮಾಡ್ಬಹುದಂತೆ. ಆದ್ರೆ ಭಟ್ಟ್ರ ಮಗಳು ಹೋದಂಗೆ ಇಲ್ಲ. ಅಲ್ಲಾ ಆ ಹುಡಗಿಗಂತೂ ಬುದ್ಧಿ ಇಲ್ಲ.ಭಟ್ಟ್ರಾದ್ರೂ ಕಳ್ಸಿಕೊಡ್ಬೇಕಾ ಇಲ್ಲ್ವಾ? ನಾ ಹೇಳ್ದೆ. ಭಟ್ಟರೆಲ್ಲಿ ಕೇಳ್ತಾರೆ ನನ್ನ ಮಾತಾ? ಮುದಕಾ ವಟವಟಗುಡ್ತಾನೆ ಅಂತಾರೆ . ಹೋಗ್ಲಿ ಬಿಡಿ.ಎಂತಾ ಮಾಡಕ್ಕೆ ಆಗ್ತದೇ ಅಲ್ರಾ? ಎಂದು ತನ್ನ ಬೇಸರ ತೋಡಿಕೊಂಡ. ನಾನು ಸುಮ್ಮನೆ ಅವನನ್ನು ಸಮ್ಮತಿಸಿದೆ.
ಇನ್ನೂ ಒಂದಷ್ಟು ಹೊತ್ತು ಮಾತಾಡುತ್ತಿದ್ದನೇನೋ. ಆದರೆ ನಾನು ಸುಮ್ಮನಿದ್ದದನ್ನು ನೋಡಿ "ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹೀಂಗೆ ಮಧ್ಯಾಹ್ನ ಆಗೋಗ್ತದೆ. ಭಟ್ಟ್ರು ಆಮೇಲೆ ಕೋಲು ಹಿಡ್ಕಂಡು ಕಾಯ್ತಿರ್ತಾರೆ" ಅಂದವನೇ "ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ. ನಾನು ಸ್ವಲ್ಪ ಹೊತ್ತು ಅವನ ಹೋದ ದಾರಿಯನ್ನೇ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಮಾತ್ರ, ಯಾವುದೇ ಕಾರಣಕ್ಕೆ ತಪ್ಪಿಸದೇ ವೋಟ್ ಮಾತ್ರ ಹಾಕಲೇ ಬೇಕೆಂದು ಧೃಢವಾಗಿ ನಿರ್ಧರಿಸಿಕೊಂಡೆ. ನೀವೂ ಅಷ್ಟೇ. ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಆಯ್ತಾ? ಗೊತ್ತಾದ್ರೆ ಈರ ಬಹಳ ಬೇಜಾರು ಮಾಡ್ಕೋತಾನೆ!