ಗ್ಯಾಸ್ ಸ್ಟೇಶನ್ನಿನ ಎದುರುಗಿದ್ದ ಸಿಗ್ನಲ್ಲಿನ ಮುಂದೆ ಕಾರು ನಿಲ್ಲಿಸಿಕೊಂಡಾಗ, ಮಾಧವನಿಗೆ ತಾನು ತಪ್ಪು ಲೇನಿನಲ್ಲಿ ನಿಂತಿರುವುದು ಅರಿವಾಯಿತು. ಹಿಂದೆ ಮುಂದೆ ಸಾಕಷ್ಟು ವಾಹನಗಳು ಇದ್ದುದರಿಂದ, ಸಿಗ್ನಲ್ಲು ಬಿಟ್ಟ ತಕ್ಷಣ, ಎಡಕ್ಕೆ ತಿರುಗುವುದು ಕಷ್ಟವಿತ್ತು. ಕಾರು ತಪ್ಪು ಲೇನಿನಲ್ಲಿ ನಿಂತಿದ್ದು ಅರಿವಾದ ತಕ್ಷಣ, ಅವನ ಪಕ್ಕ ಕುಳಿತಿದ್ದ "ಟೆನ್ಶನ್ ಪಾರ್ಟಿ" ಉಮಾಪತಿ ಯಾವುದೋ ದೊಡ್ಡ ತಪ್ಪು ಮಾಡಿದವರಂತೆ ಕೂಗಿಕೊಳ್ಳಲು ಶುರು ಮಾಡಿದ. ಅವನನ್ನು ಸಮಾಧಾನ ಪಡಿಸಿ, ಸಿಗ್ನಲ್ಲು ಬಿಟ್ಟ ಕೂಡಲೇ ಮಧ್ಯದ ಲೇನಿನಲ್ಲೇ ಇನ್ನೂ ಮುಂದೆ ಹೋಗಿ, ಒಂದು ಯು ಟರ್ನ ಹೊಡೆದು, ಬಲಕ್ಕೆ ತಿರುಗಿ ವಾಲ್ ಮಾರ್ಟಿನಲ್ಲಿ ಮಾಧವ ಕಾರು ಪಾರ್ಕ್ ಮಾಡಿದಾಗ, ಸೂರ್ಯ ದಿಗಂತದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಅಲ್ಲಲ್ಲಿ ವಿರಳ ಸಂಖ್ಯೆಯಲ್ಲಿ ನಿಂತಿದ್ದ ಕಾರುಗಳು, ತಮ್ಮನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕರಿಗಾಗಿ ಬರಕಾಯುತ್ತಿದ್ದವು.
ಆಫೀಸು ಮುಗಿಸಿ ಮನೆಗೆ ಬಂದವರಿಗೆ,ಮನೆಯಲ್ಲಿ ಮೊಸರು ಇಲ್ಲದಿರುವುದು ಅನುಭವಕ್ಕೆ ಬಂದ ಇಬ್ಬರೂ ಕೂಡಲೇ ಕಾರು ಹತ್ತಿ ಮನೆಗೆ ಹತ್ತಿರವೇ ಇರುವ ವಾಲ್ ಮಾರ್ಟಿಗೆ ಹೊರಟು ಬಂದಿದ್ದರು. ಮಾಧವ ತಾನು ಒಬ್ಬನೇ ಹೋಗಿ ಬರುತ್ತೇನೆಂದು ಹೇಳಿದರೂ, ಮನೆಯಲ್ಲಿ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಅರ್ಥವಾಗದೇ, ಅವನ ರೂಮ್ ಮೇಟ್ ಉಮಾಪತಿಯೂ ಹೊರಟು ಬಂದಿದ್ದ. ಈಗೊಂದು ೪ ತಿಂಗಳ ಹಿಂದೆ ಇಬ್ಬರು ಕಂಪನಿ ಕೆಲಸದ ಮೇಲೆ ಅಮೇರಿಕಕ್ಕೆ ಬಂದವರು ಸಿಂಗಲ್ ಬೆಡ್ ರೂಮಿನ ಅಪಾರ್ಟಮೆಂಟೊಂದರಲ್ಲಿ ಉಳಿದುಕೊಂಡಿದ್ದರು. ಮಾಧವ ಸ್ವಭಾವದಲ್ಲಿ ಒರಟು. ಹೆವೀ ಬಿಲ್ಟ್ ಪರ್ಸನಾಲಿಟಿ, ಹುಂಬ ಧೈರ್ಯ ಜಾಸ್ತಿ. ಎಂಥಾ ತೊಂದರೆಯಲ್ಲು ಸಿಕ್ಕಿಕೊಂಡರೂ, ಸಲೀಸಾಗಿ ಹೊರಬರಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಉಮಾಪತಿಯದು ಅವನ ತದ್ವಿರುದ್ಧ ಸ್ವಭಾವ. ಸ್ವಲ್ಪ ಪುಕ್ಕಲ ಸ್ವಭಾವ, ತೆಳ್ಳನೆಯ ಶರೀರ. ಸಣ್ಣ ಸಣ್ಣ ವಿಷಯಕ್ಕೂ ಗಾಬರಿ ಮಾಡಿಕೊಂಡು ಸ್ನೇಹಿತರ ಗ್ಯಾಂಗಿನೆಲ್ಲೆಲ್ಲಾ "ಟೆನ್ಶನ್ ಪಾರ್ಟಿ ಉಮಾಪತಿ" ಎಂದೇ ಕರೆಸಿಕೊಳ್ಳುತ್ತಿದ್ದ. ಆದರೂ ಅವರಿಬ್ಬರಾ ಜೋಡಿ ಮಾತ್ರ ಅಪೂರ್ವವಾಗಿತ್ತು. ಮಾಧವನ ಹುಂಬ ಧೈರ್ಯಕ್ಕೆ ಕಡಿವಾಣ ಹಾಕಲು ಮತ್ತು ಉಮಾಪತಿಯ ಪುಕ್ಕಲು ಸ್ವಭಾವಕ್ಕೆ ಧೈರ್ಯ ನೀಡಲು ಒಬ್ಬರಿಗೊಬ್ಬರು ಅನಿವಾರ್ಯವೆಂದು ಅವರನ್ನು ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು.
ವಾಲ್ ಮಾರ್ಟಿನಲ್ಲಿ ತಮ್ಮ ಕೆಲಸ ಮುಗಿಸಿ ಹೊರಗೆ ಬಂದಾಗ, ಹೇಗೂ ಇಲ್ಲಿತನಕ ಬಂದಾಗಿದೆ, ಹಾಗೇ ಇಂಡಿಯನ್ ಸ್ಟೋರ್ಸಿಗೂ ಹೋಗಿ ಬಂದರಾಯಿತು ಎಂದು ಉಮಾಪತಿ ಸೂಚಿಸಿದಾಗ, ಮಾಧವ ಮರುಮಾತಿಲ್ಲದೇ ಒಪ್ಪಿಕೊಂಡುಬಿಟ್ಟ. ೪ ತಿಂಗಳಿಂದ ಬರೀ ಬ್ರೆಡ್, ಜ್ಯಾಮ್, ಸೀರಿಯಲ್ಸ್ ಇವನ್ನೇ ತಿಂದು ಇಬ್ಬರಿಗೂ ನಾಲಿಗೆ ಎಕ್ಕುಟ್ಟಿ ಹೋಗಿತ್ತು. ಇಂಡಿಯನ್ ಸ್ಟೋರ್ಸಿನಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ದೋಸೆ ಹಿಟ್ಟಿನ ಆಸೆಗೆ ಅವರು ವಾರಕ್ಕೆರಡು ಸಲ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ವಾಲ್ ಮಾರ್ಟಿನಿಂದ ಹೊರಗೆ ಬರುತ್ತಿದ್ದಂತೆಯೇ, ಎಡಕ್ಕೆ ತಿರುಗಿ, ಸರ್ವೀಸ್ ರೋಡನ್ನು ಬಳಸಿಕೊಂಡು , ನಿಧಾನವಾಗಿ ಕಾರು ಐ-೩೫ ಹೈವೇಯಲ್ಲಿ ಮುನ್ನುಗತೊಡಗಿತು.
ಅಮೇರಿಕನ್ ಹೈವೇಗಳಲ್ಲಿ ಡ್ರೈವ್ ಮಾಡುವುದೆಂದರೆ ಮಾಧವನಿಗೆ ಎಲ್ಲಿಲ್ಲದ ಸಂತೋಷ. ಸಿನೆಮಾ ಹಿರೋಯಿನ್ನುಗಳ ಕೆನ್ನೆಯಂತೆ ನುಣುಪಾಗಿದ್ದ ರೋಡುಗಳಲ್ಲಿ ೭೦ ಮೈಲಿ ವೇಗದಲ್ಲಿ ಕಾರನ್ನು ನುಗ್ಗಿಸಿ, ಆಗಾಗ ಲೇನ್ ಬದಲಿಸುತ್ತಾ ಝೂಮಿನಲ್ಲಿ ಒಡಾಡುವಂತಿದ್ದರೆ ಯಾರಿಗೇ ತಾನೇ ಖುಶಿಯಾಗದಿದ್ದೀತು? ಮಾಧವನಿಗೆ ಹಿಂದೆ ಕಾರ್ ಒಡಿಸಿ ಬೇರೆ ಚೆನ್ನಾಗಿ ಅನುಭವವಿತ್ತು. ಇಲ್ಲಿಗೆ ಬಂದು ಹಳೆಯ ಟೊಯೋಟಾ ಕ್ಯಾಮ್ರಿಯೊಂದನ್ನು ಖರೀದಿಸಿ, ಅದಕ್ಕೊಂದು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ, ಒಳ್ಳೆಯ ಕಂಡಿಶನ್ನಿನಲ್ಲಿ ಇಟ್ಟುಕೊಂಡಿದ್ದ. ಮಾಧವನ ಬಳಿ ಬಂದ ನಂತರ ಕಾರು ಬಹಳವೇನೂ ಓಡಿರಲಿಲ್ಲ. ಹತ್ತಿರವೇ ಇದ್ದ ಆಫೀಸಿಗೆ ದಿನಕ್ಕೆರಡು ಸಲ, ವಾರಕ್ಕೊಮ್ಮೆ ಅಥವಾ ಎರಡು ಸಾರ್ತಿ ವಾಲ್ ಮಾರ್ಟ್ ಮತ್ತು ಇಂಡಿಯನ್ ಸ್ಟೋರ್ಸಿಗೆ ಓಡಾಡುವುದಕ್ಕೇ ಕಾರಿನ ಭಾಗ್ಯ ಸೀಮಿತವಾಗಿತ್ತು. ಹೀಗೆ ಅಪರೂಪಕ್ಕೆ ಹೈವೇ ಮೇಲೆ ಒಡಿಸುವ ಸುಖಕ್ಕಾಗಿಯೇ ಮಾಧವ, ಹತ್ತಿರವೇ ಸೆಡಾರ್ ಪಾರ್ಕಿನಲ್ಲೇ ಇದ್ದ ಇಂಡಿಯನ್ ಸ್ಟೋರ್ಸಿಗೆ ಹೋಗದೇ ಸುತ್ತು ಬಳಸಿ, ದೂರದಲಿದ್ದ ಮಿನರ್ವಾ ಸ್ಟೋರ್ಸಿಗೆ ಹೋಗುತ್ತಿದ್ದುದು.
ಮೈಲುಗಟ್ಟಲೇ ಉದ್ದವಿದ್ದ ಟ್ರಕ್ ಗಳನ್ನು ಹಿಂದೆ ಹಾಕಿ, ಕೇವಲ ೫ ನಿಮಿಷಗಳಲ್ಲಿ ೨೫೬ನೇಯ ಎಕ್ಸಿಟ್ಟಿನಲಿ ಮಾಧವನ ಕೆಂಪು ಕಾರು ಬಲಕ್ಕೇ ಹೊರಳುತ್ತಿರುವಾಗ ಕತ್ತಲು ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲು ರೆಡಿಯಾಗುತ್ತಾ ಇತ್ತು. ಎಕ್ಸಿಟ್ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರುಗಳನ್ನು ಸಾವಧಾನವಾಗಿ ಚಲಿಸಿ ಎಂದು ಎಚ್ಚರಿಸಲೇ ಇದೆ ಎಂಬಂತೆ, ಧುತ್ತನೇ ಸಿಗ್ನಲ್ಲೊಂದು ಎದಿರಾಗುತ್ತಿತ್ತು. ಸಿಗ್ನಲ್ಲಿನಲ್ಲಿ ಕೆಂಪು ದೀಪ ಹೊತ್ತಿದ್ದನ್ನು ಗಮನಿಸಿದ ಮಾಧವ ವೇಗವನ್ನು ಸಾಧ್ಯವಾದಷ್ಟು ತಗ್ಗಿಸಿ,ಬಿಳಿ ಬಿ.ಎಂ.ಡಬ್ಲೂ ಕಾರೊಂದರ ಹಿಂದಕ್ಕೆ ಮಾರು ಜಾಗ ಬಿಟ್ಟು ನಿಲ್ಲಿಸಿದ. ನಮ್ಮೂರಿನಲ್ಲಿ ಕಾರಿಂದ ಕಾರಿಗೆ ಮಧ್ಯ ಇಷ್ಟೊಂದು ಜಾಗ ಬಿಟ್ಟು ಬಿಟ್ಟರೆ, ೭-೮ ದ್ವಿಚಕ್ರ ವಾಹನಗಳು ಆ ಸಂದಿಯಲ್ಲೇ ನುಗ್ಗಿಬಿಡುತ್ತವೆ ಎಂದನಿಸಿ ಮಾಧವನಿಗೆ ಸ್ವಲ್ಪ ನಗು ಬಂತು. ಪಕ್ಕದಲ್ಲಿ ಕುಳಿತ ಉಮಾಪತಿ, ಮಾಧವ ನಿಲ್ಲಿಸಿದ್ದು ಬಹಳವೇ ಹಿಂದಾಯಿತೆಂದೂ, ಅಷ್ಟೆಲ್ಲಾ ಜಾಗವನ್ನು ಕಾರಿಂದ ಕಾರಿನ ಮಧ್ಯೆ ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿದಾಗ ಮಾಧವನಿಗೂ ಹೌದೆನ್ನಿಸಿತು. ಮೆಲ್ಲಗೆ ಬ್ರೇಕ್ ಮೇಲೆ ಇಟ್ಟಿದ್ದ ಕಾಲನ್ನು ಸಡಿಲಿಸಿ ಕಾರನ್ನು ಮುಂದೆ ಚಲಿಸಲು ಅನುವುಮಾಡಿಕೊಟ್ಟ. ಇನ್ನೇನು ಬಿಳಿ ಕಾರಿನ ಹತ್ತಿರ ಬರುವಷ್ಟರಲ್ಲಿ, ಸುರೇಶನ ಕಾಲು ಸ್ವಲ್ಪ ಜಾರಿತು. ಸಟ್ಟನೇ, ಬ್ರೇಕ್ ಒತ್ತಬೇಕೆಂದು ಅಂದುಕೊಂಡವನು, ಬ್ರೇಕಿನ ಬದಲು ಎಕ್ಸಲರೇಟರನ್ನೇ ಬಲವಾಗಿ ಒತ್ತಿಬಿಟ್ಟ. ಮರುಕ್ಷಣದಲ್ಲೇ, ಮಾಧವನ ಕಾರು "ಧಡಾರ್" ಎಂಬ ಶಬ್ದದೊಂದಿಗೆ ಮುಂದಿದ್ದ ಬಿಳಿ ಕಾರಿನ ಹಿಂಭಾಗವನ್ನು ಗುದ್ದಿ, ತಾನೇನೂ ಮಾಡಿಯೇ ಇಲ್ಲವೆಂಬಂತೆ ಅಮಾಯಕ ಮುಖ ಹೊತ್ತು ನಿಂತಿತು. ಹಿಂಭಾಗಕ್ಕೆ ಗುದ್ದಿಸಿಕೊಂದ ಬಿಳಿ ಕಾರು,ಸಿಗ್ನಲ್ಲನ್ನು ದಾಟಿ ಸ್ವಲ್ಪ ದೂರದಲ್ಲಿ ರಸ್ತೆಗಡ್ಡವಾಗಿ ನಿಂತಿತು.
ಮಾಧವನಿಗೆ ಇಲ್ಲೇ ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ ಎನ್ನುವಷ್ಟು ಭಯವಾಯಿತು. ಭಯಕ್ಕೆ ಅವನ ಕೈಕಾಲುಗಳು ಒಂದೇ ಸಮ ನಡುಗುತ್ತಿದ್ದವು. ನಾಲಿಗೆ ಒಣಗಿ ಮಾತಾಡಲೂ ಆಗದೇ, ಸುಮ್ಮನೇ ಸ್ಟೇರಿಂಗ್ ಮೇಲೆ ಕೈಯಿಟ್ಟು ಕುಳಿತುಕೊಂಡ. ಪಕ್ಕದಲ್ಲಿದ್ದ ಉಮಾಪತಿಯನ್ನಂತೂ ಕೇಳುವದೇ ಬೇಡ. ಮೊದಲೇ ಟೆನ್ಶನ್ ಪಾರ್ಟಿ. ಬಿಳಿಚಿಕೊಂಡು, ಸಿಂಹದ ಬಾಯಲ್ಲಿ ಸಿಕ್ಕಿಕೊಂಡ ಚಿಗರೆ ಮರಿಯ ಹಾಗೆ ಬೆವೆತುಹೋಗಿದ್ದ. ಇಬ್ಬರಿಗೂ ಇನ್ನೂ ಆಘಾತದ ದಿಗ್ಭ್ರಮೆಯಿಂದ ಹೊರಗೆ ಬರಲೇ ಆಗಿರಲಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಂಡದ್ದರಿಂದ ಇಬ್ಬರಿಗೂ ಪೆಟ್ಟೇನೂ ಆಗಿರಲಿಲ್ಲ. ಹಿಂದೆ, ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಕಾರುಗಳಲ್ಲಿದ್ದ ಜನರೆಲ್ಲರೂ, ಇವರನ್ನೇ ನೋಡತೊಡಗಿದ್ದರು. ನಮ್ಮೂರಿನಲ್ಲಾಗಿದ್ದರೆ ಇಷ್ಟೊತ್ತಿಗೆ ಗುಂಪು ಕೂಡಿ, ತನಗೆ ಒಂದೆರಡು ಏಟುಗಳು ಖಂಡಿತ ಬೀಳುತ್ತಿತ್ತು ಎಂದು ಮಾಧವನ ಮನಸ್ಸು ಹೇಳತೊಡಗಿತು. ಇವರು ಇನ್ನೂ ಕಾರಿನಿಂದ ಹೊರಬಂದಿರಲಿಲ್ಲ, ಅಷ್ಟರಲ್ಲೇ ಗುದ್ದಿಸಿಕೊಂಡ ಕಾರಿನಲ್ಲಿದ್ದ ವಯಸ್ಸಾದ ಅಜ್ಜ ಮತ್ತು ಅಜ್ಜಿಯಿಬ್ಬರೂ ಇವರ ಬಳಿ ಓಡಿ ಬಂದರು. ಅವರು ಏನು ಬೈಯ್ಯಬಹುದು ಎಂಬ ನಿರೀಕ್ಷೇಯಲ್ಲೇ ಇದ್ದವರಿಗೆ, ಅವರು "ಆರ್ ಯೂ ಗಯ್ಸ್ ಫೈನ್? ಡೋಂಟ್ ವರಿ, ಎವೆರಿಥಿಂಗ್ ವಿಲ್ ಬಿ ಆಲ್ ರೈಟ್.." ಎಂದು ಹೇಳಿದಾಗ ಬಹಳ ಆಶ್ಚರ್ಯವಾಯಿತು. ಇಂಥ ಆಘಾತದ ಮಧ್ಯೆಯೂ ಅವರಿಗಿದ್ದ ಕಾಳಜಿ ಮತ್ತು ಸಮಯಪ್ರಜ್ನೆ ಮಾಧವನಿಗೆ ಬಹಳ ಇಷ್ಟವಾಯಿತು. ಅವನ ಮನಸ್ಸು ಈಗ ಸ್ವಲ್ಪ ತಹಬಂದಿಗೆ ಬಂತು.
ಎರಡು ನಿಮಿಷಗಳಲ್ಲೇ,ದೈತ್ಯ ದೇಹದ ಪೋಲೀಸನೊಬ್ಬ,ತಲೆಯ ಮೇಲೆ ಹೊಳೆಯುತ್ತಿದ್ದ ದೀಪಗಳುಳ್ಳ ಕಾರಿನಲ್ಲಿ ಬಂದಿಳಿದ.ಬಂದವನೇ ಇವರಿಗಿಬ್ಬರಿಗೂ ಏನಾದರೂ ಪೆಟ್ಟಾಗಿದೆಯೇ,ಅವರಿಗೆ ಎನಾದರೂ ವೈದ್ಯಕೀಯ ಸಹಾಯ ಬೇಕೇ ಎಂದು ಕೇಳಿ, ಮಾಧವನ ಲೈಸೆನ್ಸ್ ಇಸಿದುಕೊಂಡು, ಅವನ ಕಾರಿನಲ್ಲಿದ್ದ ಲಾಪ್ ಟ್ಯಾಪಿನಲ್ಲಿ ಏನೇನೋ ಫೀಡ್ ಮಾಡತೊಡಗಿದ.ಮಾಧವನ ಕಾಲುಗಳು ಇನ್ನೂ ನಡುಗುತ್ತಲೇ ಇತ್ತು. ಅಜಾನುಬಾಹು ಪೋಲೀಸಿನವನ್ನು ನೋಡಿದರೇ ಭಯ ತರಿಸುವಂತೆ ಇದ್ದ. ಉಮಾಪತಿಯ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಇನ್ನು ಮುಂದೆ ಅವನು ಯಾರ ಕಾರನ್ನೇ ಹತ್ತುವುದು ಸಂಶಯವಿತ್ತು. ನೋಡು ನೋಡುತ್ತಿರುವಂತೆಯೇ ಅಗ್ನಿ ಶಾಮಕ ವಾಹನದಂತೆ ಕಾಣುವ ದೊಡ್ಡ ಟ್ರಕ್ಕೊಂದು ಮಾಧವನ ಕಾರನ್ನೂ, ಬಿಳಿ ಬಿ.ಎಂ.ಡಬ್ಲೂ ಕಾರನ್ನೂ ಟೋ ಮಾಡಿ, ಪಕ್ಕ ಸರಿಸಿ ಮತ್ತೆ ವಾಹನಗಳ ಸುಗಮ ಸಂಚಾರಕ್ಕೆ ಎಡೆ ಮಾಡಿಕೊಟ್ಟಿತು. ಅವರ ಕೆಲಸದ ವೇಗ, ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಮಾಧವನಿಗೆ ಅಚ್ಚರಿ ತರಿಸಿತು. ಆಕ್ಸಿಡೆಂಟ್ ಆದ ಹಲವೇ ನಿಮಿಷಗಳಲ್ಲಿ ಅದರ ಕುರುಹೂ ಸಿಗದಂತೆ ಎಲ್ಲವೂ ನಡೆದುಹೋಗಿತ್ತು.
ಸಿಗ್ನಲ್ಲಿನ ಪಕ್ಕದಲ್ಲಿ ಕುರಿಮರಿಗಳ ಹಾಗೆ ನಿಂತುಕೊಂಡಿದ್ದ ಇವರ ಬಳಿ, ಬಿಳಿ ಕಾರಿನ ಅಜ್ಜ ಬಂದು "ಇನ್ಶುರೆನ್ಸ್ ಗೆ ಫೋನ್ ಮಾಡಿದ್ರಾ? ಎಂದು ಕೇಳಿದಾಗ ಮಾಧವನಿಗೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವನಿಗೆ ಹುಲ್ಲು ಕಡ್ಡಿ ಸಿಕ್ಕಿದ ಹಾಗೆ ಸಂತೋಷವಾಯಿತು. ಪೋಲಿಸನದೇ ಸಹಾಯ ತೆಗೆದುಕೊಂಡು ಇನ್ಶುರೆನ್ಸ್ ಕಂಪನಿಗೆ ಫೋನ್ ಮಾಡಿ, ಆದದ್ದೆಲ್ಲವನ್ನೂ ವಿವರಿಸಿದ. ಕಂಪನಿ ರೆಪ್ರೆಸೆಂಟಿವ್ ಒಬ್ಬನನ್ನು ಕಳಿಸಿಕೊಡುತ್ತೇನೆಂದೂ, ಜಾಸ್ತಿ ಗಾಭರಿ ಬೀಳಬೇಡಿ ಎಂದು ಆ ಕಡೆ ಇದ್ದ ಕೋಕಿಲವಾಣಿ ಉಲಿಯಿತು. ಮಾಧವನಿಗೆ ಸ್ವಲ್ಪ ಸಮಾಧಾನವಾಯಿತು. ಪಕ್ಕದಲ್ಲೇ ಇದ್ದ ಅಜ್ಜ ಅಜ್ಜಿಯ ಹತ್ತಿರ ಮಾಧವ ಪರಿಪರಿಯಾಗಿ ಕ್ಷಮೆ ಬೇಡಿದ. ಅವರಿಬ್ಬರೂ ಅತ್ಯಂತ ಸಮಾಧಾನ ಚಿತ್ತರೂ, ಕರುಣಾಮಯಿಗಳಂತೆ ತೋರುತ್ತಿದ್ದರು. ಹೀಗೆ ಆಗುವುದು ಸಹಜ ಮತ್ತು ಇದೊಂದು ಆಕ್ಸಿಡೆಂಟ್ ಅಷ್ಟೇ ಎಂದು ಅವರು ಮಾಧವನಿಗೆ ಧೈರ್ಯ ಹೇಳಿದರು. ೧೫ ನಿಮಿಷಗಳಲ್ಲಿ ಇನ್ಶುರೆನ್ಸಿನವನು ಹಾಜರಾದ. ಬಂದವನೇ ಪೋಲಿಸಿನವನ ಹತ್ತಿರವೂ, ಅಜ್ಜ ಅಜ್ಜಿಯರ ಹತ್ತಿರವೂ ಏನೇನೊ ಮಾತನಾಡಿ, ಕೊನೆಯಲ್ಲಿ ಮಾಧವನ ಹತ್ತಿರ ಬಂದು "ಡೋಂಟ್ ವರಿ ಸರ್, ಐ ವಿಲ್ ಟೇಕ್ ಕೇರ್ ಆಫ್ ಎವೆರಿಥಿಂಗ್" ಎಂದು ಹೇಳಿ, ಯಾರ್ಯಾರಿಗೋ ಹತ್ತಾರು ಕರೆ ಮಾಡಿದ.ಅದಾದ ಮೇಲೆ ಪೋಲಿಸಿನವನು ಹೋಗಿಬಿಟ್ಟ.
ಇನ್ನೊಂದು ೨೦ ನಿಮಿಷ ಕಳೆಯುವುಷ್ಟರಲ್ಲಿ ಎಲ್ಲಾ ಸರಾಗವಾಗಿ ಮುಗಿದು ಹೋಯಿತು. ಎರಡು ಕಾರುಗಳನ್ನೂ, ಯಾವುದೋ ವಾಹನ ಬಂದು ಎತ್ತಾಕಿಕೊಂಡು ಹೋಯಿತು. ತನ್ನ ಕಾರಿನಲ್ಲೆಯೇ ಅಜ್ಜ ಅಜ್ಜಿಯರನ್ನೂ, ಮಾಧವ ಮತ್ತು ಉಮಾಪತಿಯರನ್ನೂ ಮನೆಗೆ ಬಿಡುವುದಾಗಿ ಇನ್ಶುರೆನ್ಸಿನವನು ಹತ್ತಿಸಿಕೊಂಡ. ಅಜ್ಜ ಅಜ್ಜಿಯರನ್ನು ಡೌನ್ ಟೌನಿನಲ್ಲಿ ಬಿಟ್ಟು ಕಾರು ಮತ್ತೆ ಉತ್ತರದ ಹೈವೇ ಹಿಡಿಯಿತು. ಇಳಿಯುವ ಮುನ್ನ ಅಜ್ಜ ಅಜ್ಜಿಯರಲ್ಲಿ ಮತ್ತೊಮ್ಮೆ ಮಾಧವ, ಆಗಿದ್ದೆಲ್ಲದ್ದಕ್ಕೂ ಕ್ಷಮೆ ಕೇಳಿದ. ಆ ವೃದ್ಧ ದಂಪತಿಗಳಿಗೆ ತನ್ನಿಂದಾದ ತೊಂದರೆಗಳನ್ನೆಲ್ಲ ನೆನೆಸಿಕೊಂಡು ಮಾಧವನಿಗೆ ತುಂಬಾ ಕೆಟ್ಟದನಿಸಿತು. ಆದರೆ ಪರಿ ಪರಿಯಾಗಿ ಕ್ಷಮೆ ಕೇಳುವುದನ್ನು ಬಿಟ್ಟರೆ ಇನ್ನೇನೂ ಅವನು ಮಾಡಲು ಸಾಧ್ಯವಿರಲಿಲ್ಲ.
ದಾರಿಯಲ್ಲಿ ಇನ್ಶುರೆನ್ಸಿನವನು ಸುಮ್ಮನೆ ಮಾಧವನನ್ನು ಹಲವಾರು ಪ್ರಶ್ನೆ ಕೇಳಲು ಶುರು ಮಾಡಿದ.ಮಾಧವನಿಗೆ ಏನನ್ನೂ ಹೇಳಲು ಮೂಡಿರಲಿಲ್ಲ.ಆದರೂ ಅವನು ಕೇಳಿದ್ದಕ್ಕೆಲ್ಲದ್ದಕ್ಕೂ ಚುಟುಕಾಗಿ ಉತ್ತರಿಸಿದ.ಹಿಂದೆ ಕುಳಿತಿದ್ದ ಉಮಾಪತಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದ ಹಾಗಿತ್ತು. ಮಾತಾಡುತ್ತಾ ಮಾಧವನಿಗೆ ಅವನು ಚೈನಾದಿಂದಾ ಬಹಳ ಹಿಂದೆಯೇ ಬಂದು ಇಲ್ಲಿ ಸೆಟಲ್ ಆಗಿರುವುದಾಗಿಯೂ, ಈ ಕಂಪನಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ ತಿಳಿದುಬಂತು. ಕಾರನ್ನು ೨೪೯ ನೆಯ ಎಕ್ಸಿಟ್ಟಿನಲ್ಲಿ ಬಲಕ್ಕೆ ಹೊರಳಿಸಲು ಹೇಳಿ, ಮಾಧವ ಅವನಿಗೆ ತನ್ನ ಅಪಾರ್ಟಮೆಂಟಿನ ದಾರಿಯನ್ನು ನಿರ್ದೇಶಿಸಲು ತೊಡಗಿದ.ಇನ್ನೇನು ಕಾರು ಬಲಕ್ಕೆ ತಿರುಗಿ ಅಪಾರ್ಟಮೆಂಟಿನೊಳಕ್ಕೆ ತಿರುಗಬೇಕು ಅನ್ನುವುಷ್ಟರಲ್ಲಿ, ಅಪಾರ್ಟಮೆಂಟಿನಿಂದ ಹೊರಕ್ಕೆ ಬರುತ್ತಿದ್ದ ಕಾರೊಂದು ಅತೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದ್ದು ಡ್ರೈವರಿನ ಸೀಟಿನಲ್ಲಿದ್ದ ಚೀನಿಯವನಿಗೂ, ಪಕ್ಕ ಕುಳಿತಿದ್ದ ಮಾಧವನಿಗೂ ಕಂಡಿತು. ಅದನ್ನು ನೋಡಿದ ತಕ್ಷಣವೇ ಮಾಧವನ ಬಾಯಿಂದ "ಸ್ಟಾಪ್" ಎಂಬ ಸಣ್ಣ ಚೀತ್ಕಾರ ಅವನಿಗರಿವಿಲ್ಲದಂತೆಯೇ ಹೊರಬಿದ್ದಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ, ಮಾಧವನ ನಿರೀಕ್ಷೆಗೆ ತದ್ವಿರುದ್ಧವಾಗಿ, ಅವನ ಕಾರು ಭಯಂಕರ ವೇಗದಲ್ಲಿ ಮುನ್ನುಗ್ಗಿ, ಎದುರಿಗೆ ಬರುತ್ತಿದ್ದ ಕಾರನ್ನು ಸವರಿಕೊಂಡಂತೆಯೇ ಚಲಿಸಿ, ಬಲ ರಸ್ತೆಯಲ್ಲಿ ಹೋಗುವುದರ ಬದಲು ಎಡ ಬದಿಯ ರಸ್ತೆಯಲ್ಲೇ ಇನ್ನೂ ಸುಮಾರು ಮುಂದೆ ಹೋಯಿತು. ಈ ಕಾರು ಮುನ್ನುಗ್ಗಿದ ವೇಗಕ್ಕೆ ಹೆದರಿದ ಎದುರು ಬದಿ ಕಾರಿನವನು ತಕ್ಷಣವೇ ಬ್ರೇಕ್ ಹಾಕಿ ದೊಡ್ಡದಾಗಿ ಹಾರ್ನ್ ಮಾಡಿದ್ದು ಮಾಡಿದ್ದು ಮಾತ್ರ ಮೂರೂ ಜನರ ಅನುಭವಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಉಮಾಪತಿ, ಕಾರು ನುಗ್ಗಿದ ವೇಗಕ್ಕೆ ಅಪ್ರತಿಭನಾಗಿ ಕಿಟಾರನೆ ಕಿರಿಚಿಕೊಂಡ. ಆ ಕ್ಷಣದ ಒತ್ತಡದಲ್ಲಿ ಚೀನಿಯವನೂ ಕೂಡ ಮಾಧವನ ತರಾನೇ ಬ್ರೇಕ್ ಒತ್ತುವುದರ ಬದಲು ಬಲವಾಗಿ ಎಕ್ಸಲರೇಟರನ್ನು ಒತ್ತಿಬಿಟ್ಟಿದ್ದ. ಆದರೆ ಮಾಧವನಿಗೆ ತಕ್ಷಣವೇ ಚೀನೀ ಮಾಡಿದ ತಪ್ಪಿನ ಅಂದಾಜಾಗಿ ಹೋಗಿತ್ತು. ಅಸಾಧ್ಯ ಟೆನ್ಶನಿನಲ್ಲಿದ್ದ ಅವನನ್ನು ಉದ್ದೇಶಿಸಿ, ಮಾಧವ ತಣ್ಣನೆಯ ದನಿಯಲ್ಲಿ ಬ್ರೇಕ್, ಬ್ರೇಕ್ ಎಂದು ಎರಡು ಸಲ ಕೂಗಿದ. ಪುಣ್ಯಕ್ಕೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಚೀನಿಯವನಿಗೂ ಅಂತೂ ಕಾರು ಹಿಡಿತಕ್ಕೆ ಸಿಕ್ಕಿತು. ವೇಗ ತಗ್ಗಿಸಿ, ಮೆಲ್ಲಗೆ ಬ್ರೇಕ್ ಹಾಕಿ, ಪಕ್ಕಕ್ಕೆ ತಿರುಗಿಸಿ ಖಾಲಿ ಇದ್ದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ನಿಟ್ಟುಸಿರು ಬಿಟ್ಟ, ಅವನ ಕೈಕಾಲುಗಳೂ ನಡುಗುತ್ತಿದ್ದವು. ಅವನ ಪರಿಸ್ಥಿತಿಯನ್ನು ನೋಡಿ ಮಾಧವನಿಗೆ ಜೋರಾಗಿ ನಗು ಬಂತು. ಹ್ಯಾಪು ಮೋರೆ ಹಾಕಿಕೊಂಡಿದ್ದ ಚೀನಿಯವನನ್ನೂ, ಹೆದರಿ ಗುಬ್ಬಚ್ಚಿಯಂತಾದ ಉಮಾಪತಿಯನ್ನೂ ಒಮ್ಮೆ ನೋಡಿ, ಕುಳಿತಲ್ಲೆಯೇ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲು ಶುರುಮಾಡಿಬಿಟ್ಟ. ಉಮಾಪತಿಗೆ ಮಾತ್ರಾ, ಇಂಥ ಪರಿಸ್ಥಿತಿಯಲ್ಲೂ ನಗುತ್ತಿರುವ ಮಾಧವನನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ಎದುರಿಗೇ ಚೀನಿಯವನು ಕುಳಿತಿದ್ದರಿಂದ ಸಿಟ್ಟನ್ನು ಅದುಮಿಕೊಂಡು, ಏನು ಮಾಡಬೇಕೆಂದು ಗೊತ್ತಾಗದೇ ತಾನೂ ಮಾಧವನ ನಗುವಿಗೆ ದನಿಗೂಡಿಸಿದ.